70th National Film Awards: ಡಾ. ರಾಜ್, ವಿಷ್ಣುರಂತಹ ದಿಗ್ಗಜರಿಗೆ ಯಾಕೆ ರಾಷ್ಟ್ರಪ್ರಶಸ್ತಿ ಸಿಗಲಿಲ್ಲ?
'ಕಾಂತಾರ' ಚಿತ್ರದ ರಿಷಬ್ ಶೆಟ್ಟಿ ನಟನೆಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಕನ್ನಡ ನಟನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಇದರ ಬೆನ್ನಲ್ಲೇ ರಾಷ್ಟ್ರಪ್ರಶಸ್ತಿ ಹಿನ್ನೆಲೆ ಈ ಹಿಂದೆ ಪ್ರಶಸ್ತಿ ಪಡೆದವರ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕನ್ನಡದಲ್ಲಿ ಹಿಂದೆ ಕೂಡ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಸಿಕ್ಕಿದೆ.
ದಶಕಗಳ ಹಿಂದೆಯೇ ಕನ್ನಡದಲ್ಲಿ 'ಚೋಮದ ದುಡಿ' ಚಿತ್ರಕ್ಕಾಗಿ ಎಂ. ವಿ ವಾಸುದೇವ ರಾವ್, 'ತಬರನ ಕಥೆ'ಗಾಗಿ ಚಾರುಹಾಸನ್ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇನ್ನು 10 ವರ್ಷದ ಹಿಂದೆ 'ನಾನು ಅವನಲ್ಲ ಅವಳು' ಚಿತ್ರದ ನಟನೆಗಾಗಿ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಆದರೆ ಡಾ. ರಾಜ್ಕುಮಾರ್, ಸಾಹಸಸಿಂಹ ವಿಷ್ಣುವರ್ಧನ್, ಶಂಕರ್ ನಾಗ್ರಂತಹ ದಿಗ್ಗಜ ನಟರಿಗೆ ರಾಷ್ಟ್ರಪ್ರಶಸ್ತಿ ಸಿಗಲಿಲ್ಲವೇ? ಎನ್ನುವ ಪ್ರಶ್ನೆಯೂ ಕೆಲವರನ್ನು ಕಾಡುತ್ತಿದೆ.

ಬರೀ ಕನ್ನಡದ ದಿಗ್ಗಜ ನಟರಿಗೆ ಮಾತ್ರವಲ್ಲ ತೆಲುಗಿನ ಎನ್ಟಿಆರ್, ಎಎನ್ಆರ್ ಹಾಗೂ ತಮಿಳಿನ ಶಿವಾಜಿ ಗಣೇಶನ್ ಸೇರಿದಂತೆ ಇನ್ನು ಹಲವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಸಿಕ್ಕಿರಲಿಲ್ಲ ಅಂದರೆ ಅಚ್ಚರಿ ಎನಿಸುತ್ತದೆ. ಕಳೆದ ವರ್ಷ ಅಲ್ಲು ಅರ್ಜುನ್ ತೆಲುಗಿನ 'ಪುಷ್ಪ' ಚಿತ್ರದ ನಟನೆಗಾಗಿ ಪ್ರಶಸ್ತಿ ಪಡೆದಿದ್ದರು. ವಿಪರ್ಯಾಸ ಎಂದರೆ ಅತ್ಯುತ್ತಮ ನಟ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ತೆಲುಗು ನಟ ಎನ್ನುವ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.
ಚಿತ್ರರಂಗದ ಅತ್ಯುನ್ನತ ಗೌರವ ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ ಸೇರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ನಟ ಡಾ. ರಾಜ್ಕುಮಾರ್. ಇಂತಹ ಮಹಾನ್ ನಾಯಕನಿಗೆ ರಾಷ್ಟ್ರಪ್ರಶಸ್ತಿ ಯಾಕೆ ಸಿಗಲಿಲ್ಲ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಈ ಬಗ್ಗೆ ಅಣ್ಣಾವ್ರಿಗೆ ಬಹಳ ಆಪ್ತರಾಗಿದ್ದವರು, ಸಿನಿಮಾ ನಿರ್ದೇಶಕರು ಆಗಿರುವ ಪ್ರಕಾಶ್ ರಾಜ್ ಮೇಹು ಪ್ರತಿಕ್ರಿಯಿಸಿದ್ದಾರೆ.
ಫೇಸ್ಬುಕ್ನಲ್ಲಿ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ರಿಷಬ್ ಶೆಟ್ಟರೂ ಸೇರಿದಂತೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳು. 'ಚೋಮನದುಡಿ' ವಾಸುದೇವರಾವ್, ಚಾರು ಹಾಸನ್ (ತಮಿಳು ನಟರಾದರೂ ಅವರು ರಾಷ್ಟ್ರೀಯ ಪ್ರಶಸ್ತಿ ಪಡೆದದ್ದು ಗಿರೀಶ್ ಕಾಸರವಳ್ಳಿ ಅವರ ಕನ್ನಡ ಚಿತ್ರ ತಬರನಕಥೆ ಚಿತ್ರಕ್ಕೆ) ಸಂಚಾರಿ ವಿಜಯ್, ಈಗ ರಿಷಭ್.

90 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಕನ್ನಡ ಬೆಳ್ಳಿ ಪರದೆ ಕಂಡದ್ದು ಈ ಮೂರು-ನಾಲ್ಕು ಉತ್ತಮ ಕಲಾವಿದರನ್ನು ಮಾತ್ರವೆ? ಅನ್ನುವ ಪ್ರಶ್ನೆ ಮೂಡುವುದು ಸಹಜ. ಡಾ.ರಾಜಕುಮಾರ್, ಬಾಲಕೃಷ್ಣ, ನರಸಿಂಹರಾಜು, ಇವರ್ಯಾರೂ ಉತ್ತಮ ಕಲಾವಿದರಲ್ಲವೆ? ಅವರಿಗ್ಯಾಕೆ ಈ ಪ್ರಶಸ್ತಿ ಬರಲಿಲ್ಲ. ಅನ್ನುವ ಪ್ರಶ್ನೆ ಹಲವರ ಮನದಲ್ಲಿ ಮೂಡುತ್ತಿದೆ.
ಬಹಳ ಕಾಲದವರೆಗೆ ಕಮರ್ಷಿಯಲ್ ಸಿನಿಮಾಗಳನ್ನು ರಾಷ್ಟ್ರೀಯ ಪ್ರಶಸ್ತಿಗಳಿಗೆ ಪರಿಗಣಿಸುತ್ತಲೇ ಇರಲಿಲ್ಲ ಹಾಗಾಗಿ ಈ ಮೇಲಿನ ಉತ್ತಮೋತ್ತಮ ಕಲಾವಿದರು ಈ ಪ್ರಶಸ್ತಿಯಿಂದ ವಂಚಿತರಾದರು. "ಕಸ್ತೂರಿ ನಿವಾಸ" ಚಿತ್ರದ ಅಭಿನಯಕ್ಕೆ ರಾಜಕುಮಾರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಅಂತ ಆಲಿಂಡಿಯ ರೇಡಿಯೋನಲ್ಲಿ ರಾತ್ರಿ ಸುದ್ದಿ ಬರುತ್ತದೆ, ಬೆಳಿಗ್ಗೆ ಅವರ ಬದಲಾಗಿ ಎಂಜಿಆರ್ ಹೆಸರು ಅನೌನ್ಸಾಗುತ್ತದೆ. "ಸನಾದಿ ಅಪ್ಪಣ್ಣ" ಚಿತ್ರದ ಅಭಿನಯಕ್ಕೆ ಅಣ್ಣಾವ್ರ ಹೆಸರು ಫೈನಲ್ ಹಂತದವರೆಗೂ ಬಂದು ಈ ಚಿತ್ರದಲ್ಲಿ ಹಾಡುಗಳಿವೆ ಹಾಗಾಗಿ ಇದು ಕಮರ್ಷಿಯಲ್ ಸಿನಿಮಾ ಅನಿಸಿಕೊಳ್ಳುತ್ತದೆ ಆದ್ದರಿಂದ ಇದನ್ನು ಪ್ರಶಸ್ತಿಗೆ ಪರಿಗಣಿಸಬಾರದು ಅಂತ ತೀರ್ಮಾನಿಸಲಾಯ್ತಂತೆ. ಆದ್ದರಿಂದ ಇದರ ಹಿಂದಿನ ಹುನ್ನಾರಗಳನ್ನ ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು.
ಮತ್ತೊಮ್ಮೆ ಎಲ್ಲರಿಗೂ ಅಭಿನಂದಿಸುತ್ತ, ಈ ಪ್ರಶಸ್ತಿಗಳು ಬಂದಿರುವುದೇ ಹೋಮ-ಹವನಗಳಿಂದ ಅಂದುಬಿಟ್ಟು ಅವರ ಶ್ರಮಕ್ಕೆ, ಅವರ ಪ್ರತಿಭೆಗೆ ಯಾರೂ ಅವಮಾನ ಮಾಡಬೇಡಿ ಅನ್ನುವ ಮನವಿಯೊಂದಿಗೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.


Click it and Unblock the Notifications











