''ಯಾರನ್ನ ಕೇಳಿ ರೇಣುಕಾಸ್ವಾಮಿ ಕುಟುಂಬಕ್ಕೆ 05 ಲಕ್ಷ ಕೊಟ್ರಿ ಅಧ್ಯಕ್ಷರೇ''...?
ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು. ಇದಕ್ಕೆ ದರ್ಶನ್ ಸದ್ಯದ ಅತ್ಯುತ್ತಮ ಉದಾಹರಣೆ.
ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆಯಲ್ಲಿ ತೂರಾಡಿ .. ವಾಲಾಡಿ .. ಸದ್ಯಕ್ಕೆ ದರ್ಶನ್ ಅಕ್ಷರಶಃ ಏಕಾಂಗಿಯಾದ್ದಾನೆ. ಮನುಷ್ಯರಿಗಿಂತ ಪ್ರಾಣಿಗಳ ಮೇಲೆ ಅಪಾರವಾದ ಪ್ರೀತಿಯನ್ನೊಂದಿರುವ ಈ ವ್ಯಕ್ತಿಯ ಪರ ಅಲ್ಲೊಬ್ಬರು.. ಇಲ್ಲೊಬ್ಬರು.. ಮಾತನಾಡಿದ್ದು ಹೊರತು ಪಡಿಸಿದರೆ, ಬಹುತೇಕರು ಅಂತರ ಕಾಪಾಡಿಕೊಂಡಿದ್ದಾರೆ. ಹೀಗಿರುವಾಗ ಕಂಬಿ ಹಿಂದೆ ಇರುವ ಮೆಜೆಸ್ಟಿಕ್ ದಾಸನನ್ನ ಸಂತೃಪ್ತಿಗೊಳಿಸಲು, ಓಲೈಸಿಕೊಳ್ಳಲು .. ಕನ್ನಡ ಚಿತ್ರರಂಗದ ಮಾತೃಸಂಸ್ಥೆಯಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಅಲ್ಲಿನ ಪದಾಧಿಕಾರಿಗಳು 05 ಲಕ್ಷ ರೂಪಾಯಿಯ ಚೆಕ್ನ್ನ ಮೃತ ರೇಣುಕಾಸ್ವಾಮಿಯ ಕುಟುಂಬದ ಕೈಗೆ ಕೊಟ್ಟು ಬಂದಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಸದ್ಯದ ಚರ್ಚಿತ ವಿಷಯ

ಯಾಕೆಂದರೆ.. ಹತನಾದ ರೇಣುಕಾಸ್ವಾಮಿಯೇನು ಚಿತ್ರರಂಗಕ್ಕೆ ಸಂಬಂಧಿಸಿದವನಲ್ಲ. ಯಾರನ್ನೇ ಆಗಲಿ ಕೊಲ್ಲುವುದು ಈ ದೇಶದ ನೀತಿಯಲ್ಲ. ಹಾಗಂತ ಬಡಿಸಿಕೊಂಡು ಸತ್ತವನು ದೇಶ ಕಾಯುವ ಯೋಧನಂತೂ ಅಲ್ಲ. ಸಿಕ್ಕ ಸಿಕ್ಕ ಹೆಣ್ಣುಮಕ್ಕಳಿಗೆ ಪೋಲಿ ಮೆಸೇಜು, ಗಲೀಜು ಫೋಟೋಗಳನ್ನು ಕಳಿಸುತ್ತಿದ್ದ ಎನ್ನುವ ಆರೋಪವೂ ಇವನ ಮೇಲಿದೆ. ಇನ್ನೂ ರೇಣುಕಾ ಸ್ವಾಮಿಯ ಜೀವ ತೆಗೆದಿದ್ದು ವ್ಯೆಯಕ್ತಿಕ ದ್ವೇಷ. ರೇಣುಕಾ ಸ್ವಾಮಿ ಮತ್ತು ದರ್ಶನ್ ಗೆ ನೇರಾ ನೇರ ಸಂಬಂಧ ಇದೆ ಹೊರತು, ಕನ್ನಡ ಚಿತ್ರರಂಗದವರ ಜೊತೆ ಸಂಬಂಧ ಇಲ್ಲ.
ಹಾಗಿದ್ದ ಮೇಲೆ ಯಾರ ಅನುಮತಿ ಪಡೆದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್.ಎಂ. ಸುರೇಶ್ ಐದು ಲಕ್ಷ ರೂಪಾಯಿಗಳನ್ನು ದಾನ ಮಾಡಿದರೋ ಗೊತ್ತಿಲ್ಲ. ಒಂದು ವೇಳೆ ರೇಣುಕಾಸ್ವಾಮಿ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವುದೇ ಆಗಿದ್ದಿದ್ದರೆ, ತಮ್ಮ ಅಕೌಂಟಿಂದ ಎಷ್ಟು ಬೇಕೋ ಎತ್ತೆತ್ತಿಕೊಡಬಹುದಿತ್ತು. ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ... ಆದರೆ, ಸುರೇಶ್ ಮತ್ತು ಸಾ.ರಾ.ಗೋವಿಂದು ಗ್ಯಾಂಗ್ ತರಾತುರಿಯಲ್ಲಿ ತೆರಳಿ ಚೆಕ್ಕು ವಿತರಿಸುವ ಕಾರ್ಯಕ್ರಮ ನಡೆಸಿದೆ.

ಹೀಗಾಗಿಯೇ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಅಸಮಾಧಾನದ ಅಲೆ ಎದ್ದಿದೆ. ಚಿತ್ರರಂಗದಲ್ಲಿಯೇ ಕೆಲಸ ಮಾಡುವ ಬಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ, ಚಿತ್ರರಂಗದಲ್ಲಿ ದುಡಿಯುವವರ ಸಮಸ್ಯೆಗಳತ್ತ ಗಮನ ಕೊಡದೇ ಅಷ್ಟೇನೋ ಸಚ್ಚಾರಿತ್ರ್ಯ ಇಲ್ಲದ ಯುವಕನ ಕುಟುಂಬಕ್ಕೆ ವಾಣಿಜ್ಯ ಮಂಡಳಿ ಐದು ಲಕ್ಷ ಹಣ ನೀಡಿದ್ದು ಸರಿಯಲ್ಲ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ಅಂದ್ಹಾಗೇ ಅಗಣಿತ ಅಭಿಮಾನಿಗಳನ್ನು ಸಂಪಾದಿಸುವುದರ ಜೊತೆಗೆ ಚಿತ್ರರಂಗದಲ್ಲೇ ನೂರೆಂಟು ಜನರ ದುಶ್ಮನಿಯನ್ನೂ ಕಟ್ಟಿಕೊಂಡಿರುವ ದರ್ಶನ್ ಒಂದು ಕಾಲಕ್ಕೆ ಇದೇ ಸಾರಾ ಗೋವಿಂದು ಜೊತೆ ಭಗವಾನ್ ಎಂಬ ಸಿನಿಮಾ ಮಾಡಿದ್ದರು. ಆ ಕಾಲಕ್ಕೆ ದರ್ಶನ್ ಡೇಟ್ಸು ಪಡೆದು ಸಿನಿಮಾ ಮಾಡಿ ಹಣ ಸಂಪಾದಿಸಿದ್ದರು. ಆದರೆ ಆ ನಂತರ ದರ್ಶನ್ ಮತ್ತು ಗೋವಿಂದು ನಡುವಿನ ಸಂಬಂಧ ಹಳಸಿತ್ತು. ಇನ್ನೂ ಸದ್ಯದ ಅಧ್ಯಕ್ಷರಾದ ಎನ್.ಎಂ.ಸುರೇಶ್ ಸದ್ಯ ಕಂಬಿ ಎಣಿಸುತ್ತಿರುವ ದರ್ಶನ್ ಹೆಸರಿನಲ್ಲಿ ಹಿಂದೊಮ್ಮೆ ʻನಮ್ಮೂರ ಹುಡ್ಗʼ ಹೆಸರಿನ ಸಿನಿಮಾವೊಂದನ್ನ ಅನೌನ್ಸ್ ಮಾಡಿ, ಊರತುಂಬಾ ಕಾಸು ಎತ್ತಿದ್ದರು ಅನ್ನುವ ಮಾತು ಇದೆ. ಈ ವಿಚಾರ ಗೊತ್ತಾಗಿ ದರ್ಶನ್ ಕಾಲ್ ಶೀಟ್ ಕ್ಯಾನ್ಸಲ್ ಮಾಡಿದ್ದರು ಎಂಬ ಸುದ್ದಿ ಫಿಲ್ಮ್ ಚೇಂಬರ್ ಸುತ್ತ ಮುತ್ತನೇ ಕೇಳಿ ಬರುತ್ತೆ. ಹೀಗಾಗಿ ಮೊದಲಿಂದ ದರ್ಶನ್ ಮೇಲೆ ಮುನಿಸಿಕೊಂಡಿದ್ದ ಈ ಗುಂಪು ಈಗ ಆತ ಮಾಡಿದ ಈ ಅಚಾತುರ್ಯದ ಕೆಲಸವನ್ನೇ ಬಂಡವಾಳವಾಗಿಸಿಕೊಳ್ಳುತ್ತಿದೆ ಅನ್ನುವ ಅನುಮಾನ ಅನೇಕರಲ್ಲಿದೆ.

ಒಟ್ನಲ್ಲಿ ʻಅತ್ತೆ ಒಡವೆಯನ್ನು ಅಳಿಯ ದಾನ ಮಾಡಿದʼ ಎನ್ನುವ ಹಾಗೆ ಚಿತ್ರರಂಗದವರಿಂದ ಕಲೆಕ್ಷನ್ ಮಾಡಿದ ದೇಣಿಗೆ ಹಣವನ್ನು ಕೊಲೆಯಾಗಿ ಸತ್ತವನ ಕುಟುಂಬಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಶ್ರೀಯುತ ಎನ್.ಎಂ.ಸುರೇಶ್ ಧಾರೆ ಎರೆದುಬಂದಿದ್ದಾರೆ. ಈ ಮೂಲಕ ಸಾಮಾನ್ಯ ಸಿನಿಮಾ ಪ್ರೇಮಿಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ.


Click it and Unblock the Notifications











