ಮೇಕೆದಾಟು ಪಾದಯಾತ್ರೆಯಲ್ಲಿ ಶಿವರಾಜ್ ಕುಮಾರ್ ಪಾಲ್ಗೊಳ್ಳದೇ ಇರಲು ಕಾರಣವೇನು?
ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹಲವು ಸಂಘಟನೆಗಳು ಮೇಕೆದಾಟು ಯೋಜನೆಗೆ ಒತ್ತಾಯಿಸಿ ಮೇಕೆದಾಟಿನಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿದ್ದು, ಪಾದಯಾತ್ರೆಯು ನಿನ್ನೆ (ಜನವರಿ 09) ವಿದ್ಯುಕ್ತವಾಗಿ ಚಾಲನೆಗೊಂಡಿದೆ. ಪಾದಯಾತ್ರೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹ ಪಾದಯಾತ್ರೆಗೆ ಬೆಂಬಲ ಸೂಚಿಸಿದೆ.
Recommended Video
ಕನ್ನಡ ಚಿತ್ರರಂಗದ ಮುಖಂಡ ಶಿವರಾಜ್ ಕುಮಾರ್ ಅವರು ಮೊದಲ ದಿನವೇ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಲಿದ್ದಾರೆ ಎನ್ನಲಾಗಿತ್ತು. ಆದರೆ ಶಿವರಾಜ್ ಕುಮಾರ್ ಅವರು ಪಾದಯಾತ್ರೆಯಲ್ಲಿ ಭಾಗಿ ಆಗಲಿಲ್ಲ.
ಶಿವರಾಜ್ ಕುಮಾರ್ ನಿನ್ನೆ (ಜನವರಿ 09)ರಂದು ಪಾದಯಾತ್ರೆಯಲ್ಲಿ ಭಾಗಿಯಾಗದೇ ಇರುವ ಬಗ್ಗೆ ಅವರ ಸಂಬಂಧಿ ಹಾಗೂ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಮಾಧ್ಯಮಗಳಿಗೆ ಕಾರಣ ತಿಳಿಸಿದ್ದಾರೆ.
''ಶಿವರಾಜ್ ಕುಮಾರ್ ಅವರು ಪಾದಯಾತ್ರೆಯಲ್ಲಿ ಭಾಗವಹಿಸಬೇಕಿತ್ತು. ಪಾದಯಾತ್ರೆಯಲ್ಲಿ ಭಾಗವಹಿಸುವುದಾಗಿ ಅಧ್ಯಕ್ಷರಿಗೆ (ಡಿಕೆ ಶಿವಕುಮಾರ್) ಅವರಿಗೆ ಕರೆ ಮಾಡಿ ತಿಳಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯಲ್ಲಿಯೂ ಶಿವಣ್ಣ ಭಾಗವಹಿಸಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ'' ಎಂದರು ಮಧು ಬಂಗಾರಪ್ಪ.

ಪಾದಯಾತ್ರೆಯಲ್ಲಿ ಭಾಗವಹಿಸುವ ಆಸಕ್ತಿಯಿದೆ: ಮಧು
''ಶಿವರಾಜ್ ಕುಮಾರ್ ಅವರಿಗೆ ಪಾದಯಾತ್ರೆಯಲ್ಲಿ ಭಾಗವಹಿಸುವ ಆಸಕ್ತಿ ಇತ್ತು. ಅವರು ಮನೆಯಿಂದ ಹೊರಟಿದ್ದರು. ಆದರೆ ಕನಕಪುರ ಬರುವ ವೇಳೆಗೆ ಇಲ್ಲಿ ಹೆಚ್ಚು ಜನ ಸೇರಿದ್ದರಿಂದ ಹಾಗೂ ಅವರು ಬಂದರೆ ಇನ್ನಷ್ಟು ಜನ ಸೇರುವ ಆತಂಕದಿಂದ ಶಿವರಾಜ್ ಕುಮಾರ್ ಅವರು ವಾಪಸ್ ಹೋದರು'' ಎಂದಿದ್ದಾರೆ ಮಧು ಬಂಗಾರಪ್ಪ.

ಬೆಂಬಲ ಘೋಷಿಸಿರುವ ವಾಣಿಜ್ಯ ಮಂಡಳಿ
''ಕನ್ನಡ ಚಿತ್ರರಂಗ ಒಂದೇ ಮಾತಿನಲ್ಲಿ ನಮ್ಮ ಈ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಪಕ್ಷಾತೀತವಾದ, ನಾಡಿನ ಪರವಾಗಿ ಮಾಡುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಚಿತ್ರರಂಗ ಹೇಳಿದೆ. ಅಂತೆಯೇ ಶಿವರಾಜ್ ಕುಮಾರ್ ನಿನ್ನೆ ಕಾರಣಾಂತರಗಳಿಂದ ಕಾರ್ಯಕ್ರಮಕ್ಕೆ ಬಾರದೇ ಇರಬಹುದು ಆದರೆ ಅವರ ಬೆಂಬಲವಂತೂ ಇದ್ದೇ ಇದೆ'' ಎಂದಿದ್ದಾರೆ ಮಧು ಬಂಗಾರಪ್ಪ.

ನಾನು ಉಸ್ತುವಾರಿ ವಹಿಸಿಕೊಂಡಿಲ್ಲ: ಮಧು ಬಂಗಾರಪ್ಪ
''ಕೆಲವು ಮಾಧ್ಯಮಗಳಲ್ಲಿ ನಾನು, ಶಿವರಾಜ್ ಕುಮಾರ್ ಅವರನ್ನು ಪಾದಯಾತ್ರೆಗೆ ಕರೆದುಕೊಂಡು ಬರುತ್ತಿದ್ದೇನೆ. ಅದರ ಉಸ್ತುವಾರಿಯನ್ನು ನಾನು ವಹಿಸಿಕೊಂಡಿದ್ದೇನೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅದು ಸುಳ್ಳು. ಶಿವರಾಜ್ ಕುಮಾರ್ ಅವರಿಗೆ ಸ್ವತಃ ಪಾದಯಾತ್ರೆಗೆ ಆಗಮಿಸುವ ಉದ್ದೇಶ ಇದೆ. ನಮ್ಮ ಹೋರಾಟದ ಬಗ್ಗೆ ಕಾಳಜಿ ಇದ್ದು ಬರುತ್ತಿದ್ದಾರೆ. ಅಸಲಿಗೆ ನಾನು ಈ ವರೆಗೆ ಈ ವಿಷಯವಾಗಿ ಶಿವರಾಜ್ ಕುಮಾರ್ ಬಳಿ ಮಾತನಾಡಿಯೇ ಇಲ್ಲ'' ಎಂದು ಸ್ಪಷ್ಟಪಡಿಸಿದರು.

ದುನಿಯಾ ವಿಜಯ್, ಸಾಧುಕೋಕಿಲ ಭಾಗಿ
ನಿನ್ನೆ ನಡೆದ ಪಾದಯಾತ್ರೆಯಲ್ಲಿ ನಟ ದುನಿಯಾ ವಿಜಯ್, ಸಾಧು ಕೋಕಿಲ ಹಾಗೂ ಇನ್ನಿತರ ಸಿನಿಮಾ ನಟರು ಭಾಗವಹಿಸಿದ್ದರು. ಕನ್ನಡ ಚಿತ್ರರಂಗವು ಪಾದಯಾತ್ರೆಗೆ ಬೆಂಬಲ ನೀಡಿದೆ. ಪಕ್ಷಾತೀತವಾಗಿ, ರಾಜ್ಯದ ಹಿತದೃಷ್ಟಿಗಾಗಿ ಮಾಡುವ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದು ಚಿತ್ರರಂಗ ಹೇಳಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಚಿತ್ರರಂಗದ ಸದಸ್ಯರು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.


Click it and Unblock the Notifications











