27 ವರ್ಷಗಳ ಹಿಂದೆ ನಮ್ಮ ಉಪೇಂದ್ರ ಹೇಳಿಬಿಟ್ಟಿದ್ರು ಒಂಟಿ ಪೆಂಗ್ವಿನ್ ಕಥೆ!
ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಚಾರ ಯಾವಾಗ ಟ್ರೆಂಡ್ ಆಗುತ್ತದೆ ಎಂದು ಹೇಳುವುದು ಕಷ್ಟ. ವರ್ಷಗಳ ಹಿಂದಿನ ಹೇಳಿಕೆ, ಫೋಟೊ, ವಿಡಿಯೋ ವೈರಲ್ ಆಗಿಬಿಡುತ್ತದೆ. ರೀಲ್ಸ್, ಮೀಮ್ಸ್ ಆಗಿ ಸದ್ದು ಮಾಡುತ್ತದೆ. ಕಳೆದ ನಾಲ್ಕೈದು ದಿನಗಳಿಂದ ಒಂಟಿ ಪೆಂಗ್ವಿನ್ ವೀಡಿಯೋ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಅದಕ್ಕೆ ಉಪೇಂದ್ರ ಸಿನಿಮಾ ದೃಶ್ಯ ಲಿಂಕ್ ಮಾಡಿ ಅಭಿಮಾನಿಗಳು ತೇಲಿಬಿಟ್ಟಿದ್ದಾರೆ.
ಒಂಟಿ ಪೆಂಗ್ವಿನ್ ಒಂದು ಹಿಂಡು ಬಿಟ್ಟು ದೂರ ತೆರಳುವ ದೃಶ್ಯ ಆ ವೀಡಿಯೋದಲ್ಲಿದೆ. ಅಂದಹಾಗೆ ಈ ವಿಡಿಯೋ ಹೊಸದೇನು ಅಲ್ಲ. ಬಹಳ ಹಳೆಯದ್ದು. 2007ರಲ್ಲಿ ವರ್ನರ್ ಹೆರ್ಜಾಗ್ ತಮ್ಮ 'ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್' ಎಂಬ ಡಾಕ್ಯುಮೆಂಟರಿಯಲ್ಲಿ ಕಟ್ಟಿಕೊಟ್ಟಿದ್ದರು. ಹಿಂಡಿನಲ್ಲಿದ್ದ ಒಂದು ಪೆಂಗ್ವಿನ್ ಮಾತ್ರ ಸಮುದ್ರಕ್ಕೆ ಹೋಗಲು ಇಷ್ಟಪಡದೇ ಏಕಾಂಗಿಯಾಗಿ ಪರ್ವತಗಳ ಕಡೆಗೆ ಸಾ ಸಾಗುತ್ತದೆ. ಈ ಪ್ರಯಾಣವನ್ನು ಹೆರ್ಜಾಗ್ ಮರಣದಂಡನೆ ಎಂದು ಹೇಳಿದ್ದರು. 15 ವರ್ಷಗಳ ಹಿಂದೆ ಈ ವಿಡಿಯೋ ಯೂಟ್ಯೂಬ್ಗೆ ಅಪ್ಲೋಡ್ ಆಗಿತ್ತು.

ಇತ್ತೀಚೆಗೆ ಬ್ರೇಕಪ್ ಎಂದು ಹಾರ್ಟ್ಬ್ರೇಕ್ ಆಗಿದೆ ಎಂದು ಒಂಟಿಯಾಗಿ ನೋವು ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಈ ಒಂಟಿ ಪೆಂಗ್ವಿನ್ ಕಥೆಯನ್ನು ಹೀಗೆ ಒಂಟಿಯಾಗಿ ನೋವು ಅನುಭವಿಸುತ್ತಿರುವವರ ಜೊತೆಗೆ ಹೋಲಿಸಿ ವೈರಲ್ ಮಾಡಲಾಗ್ತಿದೆ. ಅದೇ ಕಾರಣಕ್ಕೆ ದಿಢೀರನೆ ಇದು ಟ್ರೆಂಡ್ ಹುಟ್ಟಾಕ್ಕಿದೆ. ರೀಲ್ಸ್, ಮೀಮ್ಸ್ ರೂಪದಲ್ಲಿ ಗಮನ ಸೆಳೆಯುತ್ತಿದೆ. ಸೋಶಿಯಲ್ ಮೀಡಿಯಾ ಖಾತೆಗಳನ್ನು ಓಪನ್ ಮಾಡಿದ್ರೆ ಪೆಂಗ್ವಿನ್ ವಿಡಿಯೋ ಕಣ್ಣಿಗೆ ರಾಚುತ್ತಿದೆ.
ಕೆಲ ಪ್ರಾಣಿ, ಪಕ್ಷಿ ಪ್ರಭೇದಗಳಲ್ಲಿ ಇಂತಹ ನಡವಳಿಕೆ ಕಂಡುಬರುತ್ತದೆ. ಇದು ಅಷ್ಟು ಚಿಂತಿಸುವ ವಿಚಾರ ಅಲ್ಲ ಎಂದು ವೈಜ್ಞಾನಿಕ ದೃಷ್ಟಿಕೋನದಲ್ಲಿ ಹೇಳಲಾಗುತ್ತದೆ. ಪೆಂಗ್ವಿನ್ ಬಗ್ಗೆ ಅಧ್ಯಯನ ನಡೆಸುವವರು ಇದಕ್ಕೆ ನಾನಾ ಕಾರಣಗಳನ್ನು ಕೊಡುತ್ತಾರೆ. ಕೆಲವೊಮ್ಮೆ ಅವು ಬಂಡೆಗೆ ಡಿಕ್ಕಿ ಹೊಡೆಯುತ್ತವೆ. ಗೊಂದಲಕ್ಕೆ ಒಳಗಾದಾಗ ಹೀಗೆ ಆಡಬಹುದು. ಇದು ನರ ಸಂಬಂಧಿ ಸಮಸ್ಯೆ ಇರಬಹುದು ಹೀಗೆ ನಾನಾ ವಿಚಾರಗಳನ್ನು ಮುಂದಿಡುತ್ತಾರೆ. ಇದೇ ವಿಡಿಯೋ ಬಳಸಿ ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಮಾಡಿದ್ದ ವೀಡಿಯೋ ಸಹ ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಗಂಡು ಪೆಂಗ್ವಿನ್ ತನ್ನ ಸಂಗಾತಿಗೆ ತುಂಬಾ ನಿಷ್ಠವಾಗಿರುತ್ತದೆ. ಒಮ್ಮೆ ಗಂಡು ಹೆಣ್ಣು ಪೆಂಗ್ವಿನ್ ಜೋಡಿಯಾಗಿಬಿಟ್ಟರೆ ಅದು ಜೀವನದುದ್ದಕ್ಕೂ ಅದೇ ಬಂಧವನ್ನು ಕಾಯ್ದುಕೊಳ್ಳುತ್ತದೆ. ಹೆಣ್ಣು ಪೆಂಗ್ವಿನ್ ತನ್ನ ನಂಬಿಕೆಗೆ ದ್ರೋಹ ಬಗೆದರೆ, ಗಂಡು ಪೆಂಗ್ವಿನ್ ಬ್ರೇಕಪ್ ಸಹಿಸುವುದಿಲ್ಲ. ಅದು ಹೀಗೆ ತನ್ನ ಗುಂಪು ಮತ್ತು ಸಮುದ್ರವನ್ನು ಬಿಟ್ಟು ಒಂಟಿಯಾಗಿ ಹೋಗುತ್ತದೆ. ಅಂತಿಮವಾಗಿ ಆ ಗಂಡು ಪೆಂಗ್ವಿನ್ ಜೀವಕ್ಕೆ ಇದು ಅಪಾಯ ತಂದು ಒಡ್ಡುತ್ತದೆ ಎಂದು ವಿಶ್ಲೇಷಿಸಿದ್ದರು.
'ಉಪೇಂದ್ರ' ಚಿತ್ರದಲ್ಲಿ ನಾನು(ಉಪೇಂದ್ರ) ಕೂಡ ಇದೇ ರೀತಿ ಸಮುದ್ರದ ಕಡೆಗೆ ನಡೆದು ಹೋಗಿಬಿಡುವ ಸನ್ನಿವೇಶ ಇದೆ. ಕೀರ್ತಿ(ರವೀನಾ ಟಂಡನ್), ಸ್ವಾತಿ(ಪ್ರೇಮಾ), ರತಿ(ದಾಮಿನಿ) ಮೂವರು ಬೇಡ ಎಂದು ನಾನು ಸಮುದ್ರದ ಕಡೆಗೆ ನಡೆದುಕೊಂಡು ಹೋಗುತ್ತಾನೆ. ನಾನು ಸತ್ತಾಗ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಉಪೇಂದ್ರ ಸಂದೇಶ ನೀಡಿದ್ದರು. ಅದನ್ನೇ ಕ್ಲೈಮ್ಯಾಕ್ಸ್ನಲ್ಲಿ ತೋರಿಸಿದ್ದರು. ಇದಕ್ಕೆ ಒಂಟಿ ಪೆಂಗ್ವಿನ್ ಸಂಗತಿಯನ್ನು ಸೇರಿಸಿ ಮೀಮ್ಸ್ ಕ್ರಿಯೇಟ್ ಮಾಡಲಾಗಿದೆ. ವರ್ನರ್ ಹೆರ್ಜಾಗ್ ತಮ್ಮ ಡಾಕ್ಯುಮೆಂಟರಿಯಲ್ಲಿ ಹೇಳುವುದಕ್ಕೂ ಮುನ್ನ ನಮ್ಮ ಉಪ್ಪಿ ಈ ವಿಚಾರ ತೆರೆಮೇಲೆ ಹೇಳಿದ್ರಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಟಿ ಸಾನ್ಯಾ ಅಯ್ಯರ್ ಕೂಡ ಈ ವಿಡಿಯೋ ಹಂಚಿಕೊಂಡಿದ್ದಾರೆ.


Click it and Unblock the Notifications











