ಗಂಡುಗಲಿ ಮದಕರಿ ನಾಯಕನಾಗಲಿಲ್ಲವೇಕೆ ದರ್ಶನ್ ? ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯವೇನು ?
ದರ್ಶನ್ ಕನ್ನಡ ಚಿತ್ರರಂಗದ ನಂಬರ್ ಓನ್ ಹೀರೋ. ವರ್ಷಕ್ಕೆ ಎರಡು ಚಿತ್ರಗಳನ್ನು ಖಾಯಂ ಆಗಿ ಮಾಡುವ ಸ್ಟಾರ್. ಈ ಕಾರಣಕ್ಕೆ ದರ್ಶನ್ ಜೈಲು ಪಾಲಾದ ದಿನದಿಂದ ಅನೇಕರು ದರ್ಶನ್ ಅನುಪಸ್ಥಿತಿ ಕನ್ನಡ ಚಿತ್ರರಂಗಕ್ಕೆ ತುಂಬಾ ಕಾಡುತ್ತಿದೆ ಎಂದು ಅಲವತ್ತುಕೊಂಡಿದ್ದರು. ಕನ್ನಡ ಚಿತ್ರರಂಗ ಉದ್ಧಾರವಾಗಲಿ ಎಂದು ಪೂಜೆ ಪುನಸ್ಕಾರ ಮಾಡಿದರು. ದರ್ಶನ್ ಜೈಲಿನಲ್ಲಿರುವ ಕಾರಣದಿಂದ ಚಿತ್ರರಂಗವನ್ನೇ ನಂಬಿಕೊಂಡ...
ಅನೇಕ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಕೂಡ ಹೇಳಿದರು. ಇವರೆಲ್ಲರ ಪ್ರಾರ್ಥನೆಯ ಫಲವಾಗಿ ದರ್ಶನ್ ಸದ್ಯ ಹೊರಗಡೆ ಇದ್ದಾರೆ. ನೆಮ್ಮದಿಯಿಂದ ಓಡಾಡಿಕೊಂಡು ಇದ್ದಾರೆ. ಡೆವಿಲ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಇಂಥಾ ದರ್ಶನ್.. ಹಾಗೇ ನೋಡಿದರೆ ಇಷ್ಟೊತ್ತಿಗೆಲ್ಲ ರಾಜಾ ವೀರ ಮದಕರಿ ನಾಯಕನ ಅವತಾರದಲ್ಲಿ ಬೆಳ್ಳಿತೆರೆಯಲ್ಲಿ ಧಗಧಗಿಸಬೇಕಿತ್ತು. ಹತ್ತು ಹಲವು ದಾಖಲೆಗಳನ್ನು ಮುರಿಯಬೇಕಿತ್ತು. ಈ ಚಿತ್ರದ ಮುಹೂರ್ತ ಸಮಾರಂಭ ನಡೆದಾಗ ಕನ್ನಡ ಚಿತ್ರರಂಗದ ತವರು ಮನೆ ಗಾಂಧಿನಗರ ಇದೇ ತರಹದ ಮಾತುಗಳನ್ನಾಡಿತ್ತು. ರಾಜಾ ವೀರ ಮದಕರಿ ನಾಯಕ ಕನ್ನಡ ಚಿತ್ರರಂಗದ ಪುರಾತನ ದಾಖಲೆಯನ್ನೆಲ್ಲ ಮುರಿದು ಹೊಸ ಇತಿಹಾಸ ಬರೆಯುತ್ತೆ ಎಂದು ಭವಿಷ್ಯ ಕೂಡ ಇದೇ ಗಾಂಧಿನಗರದಲ್ಲಿ ಕೇಳಿ ಬಂದಿತ್ತು.
ಆದರೆ .. ದುರಾದೃಷ್ಟ ವೀರ ಮದಕರಿ ನಾಯಕ ಚಿತ್ರ ಮುಹೂರ್ತ ಭಾಗ್ಯವನ್ನೇನೋ ಕಂಡಿತು. ಆದರೆ ಬಿಡುಗಡೆಯ ಭಾಗ್ಯವನ್ನು ಕಾಣಲಿಲ್ಲ. ಹಲವಾರು ವರ್ಷಗಳಿಂದ ತಯಾರಿಯನ್ನು ಮಾಡಿಕೊಂಡಿದ್ದರು ಕೂಡ ಚಿತ್ರದ ಚಿತ್ರೀಕರಣ ಪೂರ್ಣವಾಗಲೇ ಇಲ್ಲ. ಹೀಗಾಗಿ ಹಲವರಲ್ಲಿ ಈ ಕುರಿತು ಪ್ರಶ್ನೆ ಇತ್ತು. ರಾಜಾ ವೀರ ಮದಕರಿ ನಾಯಕ ಚಿತ್ರ ಯಾಕೆ ಬರಲಿಲ್ಲ ಎನ್ನುವ ಕುತೂಹಲ ಇತ್ತು. ಇದಕ್ಕೆ ಈಗ ಚಿತ್ರದ ನಿರ್ದೇಶಕರಾದ ಕನ್ನಡದ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಉತ್ತರವನ್ನು ನೀಡಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಗೆ ಕನ್ನಡ ಸಂದರ್ಶನದಲ್ಲಿ ಮಾತನಾಡಿರುವ ರಾಜಾ ವೀರ ಮದಕರಿ ನಾಯಕ ಚಿತ್ರದ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ತುಂಬಾನೇ ಇಷ್ಟಪಟ್ಟು- ಕಷ್ಟಪಟ್ಟು ಸಿನಿಮಾ ಮಾಡಲು ಮುಂದಾಗಿದ್ದೇವು, ಚಿತ್ರದ ಕಥೆಯ ಮೇಲೆಯೇ ಮೂರು ವರ್ಷ ಕೆಲಸ ಕೂಡ ನಾವು ಮಾಡಿದ್ದೆವು ಎಂದು ಹೇಳಿದ್ದಾರೆ.

ಒಂದಲ್ಲ.. ಎರಡಲ್ಲ.. ಚಿತ್ರದ ಹನ್ನೆರಡು ವರ್ಷನ್ ಕಥೆಗಳನ್ನು ಕೂಡ ನಾವು ರೆಡಿ ಮಾಡಿಕೊಂಡಿದ್ದೆವು ಎಂದು ಹೇಳಿರುವ ನಿರ್ದೇಶಕ ಸಿಂಗ್ ಬಾಬು ಪಾಪ ಪ್ರತಿ ಬಾರಿ ದರ್ಶನ್ ಬಂದು ನಾವು ಹೇಳಿದಂತೆ ತಯಾರಾಗುತ್ತಿದ್ದರು ಎಂದು ಹೇಳಿದ್ದಾರೆ. ಮುಂದುವರೆದು ಕನ್ನಡದ ಖ್ಯಾತ ನಿರ್ಮಾಪಕ ಧೀರ ರಾಕ್ ಲೈನ್ ವೆಂಕಟೇಶ್ ತುಂಬಾ ಖುಷಿಯಿಂದ ಚಿತ್ರ ನಿರ್ಮಾಣ ಮಾಡಲು ರೆಡಿಯಾಗಿದ್ದರು ಎಂದಿರುವ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕೇರಳದಲ್ಲಿ 08-09 ದಿನಗಳ ಕಾಲ ನಾವು ಈ ಚಿತ್ರದ ಚಿತ್ರೀಕರಣ ಕೂಡ ಮಾಡಿದ್ದೆವು ಆದರೆ ದುರಾದೃಷ್ಟ ಅದೇ ಸಮಯದಕ್ಕೆ ಕೊರೊನಾ ವಕ್ಕರಿಸಿಕೊಂಡಿತು ಎಂದು ಹೇಳಿದ್ದಾರೆ.
ಹಾಡುಗಳ ಸಂಯೋಜನೆ ಎಲ್ಲವೂ ಮುಗಿದು ಹೋಗಿತ್ತು, ಕಾಸ್ಟೂಮ್ ಕೂಡ ರೆಡಿಯಾಗಿತ್ತು, ಅದೇ ಸಮಯದಲ್ಲಿ ಕೊರೊನಾ ಬಂತು ಈ ಕಾರಣಕ್ಕೆ ಚಿತ್ರ ನಿಂತು ಹೋಯ್ತು ಎಂದಿರುವ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಲಾಕ್ ಡೌನ್ ಮುಕ್ತಾಯವಾದ ನಂತರ ಚಿತ್ರ ಶುರು ಮಾಡುವ ಆಲೋಚನೆ ಮಾಡಿದ್ದೆವು ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ಚಿತ್ರಮಂದಿರದಿಂದ ಪ್ರೇಕ್ಷಕರು ದೂರವಾಗಿದ್ದರು, ಹೀಗಾಗಿ ಈ ಸಮಯದಲ್ಲಿ 100 ಕೋಟಿ ಬಂಡವಾಳ ಹೂಡಿ ಸಿನಿಮಾ ಮಾಡುವುದು ಹೇಗೆ ? ಎನ್ನುವ ಗೊಂದಲ ಶುರುವಾಯ್ತು ಎಂದು ಹೇಳಿರುವ ಸಿಂಗ್ ಬಾಬು ಈ ಎಲ್ಲ ಕಾರಣಗಳಿಂದ ಆ ಚಿತ್ರವನ್ನು ನಿಲ್ಲಿಸಬೇಕಾಯ್ತು ಎಂದು ಹೇಳಿದ್ದಾರೆ. ಚಿತ್ರದ ಕಥೆ ಎಲ್ಲ ರೆಡಿಯಾಗಿದ್ದು 6-7 ವರ್ಷ ಆಯ್ತು ಮುಂದೆ ಈ ಚಿತ್ರ ಇನ್ಯಾವಾಗ ಶುರುವಾಗುತ್ತೆ, ಚಿತ್ರಕ್ಕೆ ಯಾವಾಗ ಜೀವ ಬರುತ್ತೆ ಎಂದು ಹೇಳುವುದು ಕಷ್ಟ ಎಂದಿರುವ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಆ ಚಿತ್ರ ಬಂದಿದ್ದರೆ ಕನ್ನಡಕ್ಕೆ ಒಂದೊಳ್ಳೆಯ ಐತಿಹಾಸಿಕ ಚಿತ್ರವಾಗುತ್ತಿತ್ತು ಎಂದು ಹೇಳಿದ್ದಾರೆ.


Click it and Unblock the Notifications











