'ಒಡೆಯ' ನೋಡುವುದಕ್ಕೂ ಮುಂಚೆ ಈ ವಿಷಯಗಳನ್ನು ತಿಳಿದಿರಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಒಡೆಯ' ಸಿನಿಮಾ ಇದೇ ವಾರ ತೆರೆಕಾಣುತ್ತಿದೆ. ಮೆಜೆಸ್ಟಿಕ್ ನ ನರ್ತಕಿ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಡಿಸೆಂಬರ್ 12 ರಂದು ಒಡೆಯ ತೆರೆಕಾಣುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಒಡೆಯ ತಮಿಳಿನ ಸೂಪರ್ ಹಿಟ್ ಚಿತ್ರ ವೀರಂ ರೀಮೇಕ್. ಅಲ್ಲಿ ಸೂಪರ್ ಹಿಟ್ ಆಗಿದ್ದ ಚಿತ್ರ ಕನ್ನಡದಲ್ಲಿ ಒಡೆಯನಾಗಿ ಬರ್ತಿದೆ. ಅಜಿತ್ ಮಾಡಿದ್ದ ಪಾತ್ರವನ್ನು ಇಲ್ಲಿ ಡಿ ಬಾಸ್ ಮಾಡಿರುವುದು ಸ್ಯಾಂಡಲ್ ವುಡ್ ಪಾಲಿಗೆ ವಿಶೇಷ.
ಒಡೆಯ ಚಿತ್ರವನ್ನು ಸಾಮಾನ್ಯ ಪ್ರೇಕ್ಷಕರು ಯಾಕೆ ನೋಡಬೇಕು? ಏನಿದೆ ಈ ಚಿತ್ರದಲ್ಲಿ ಅಂತಹ ವಿಶೇಷ? ಮುಂದೆ ಓದಿ....

ಎಂಡಿ ಶ್ರೀಧರ್-ದರ್ಶನ್ ಕಾಂಬಿನೇಷನ್
ದರ್ಶನ್ ಮತ್ತು ಎಂಡಿ ಶ್ರೀಧರ್ ಜೋಡಿ ಎನ್ನುವುದು ಪ್ರೇಕ್ಷಕರಿಗೆ ಖುಷಿ ಕೊಡಬಹುದು. ಯಾಕಂದ್ರೆ, ಈ ಹಿಂದೆ 'ಪೊರ್ಕಿ' ಮತ್ತು 'ಬುಲ್ ಬುಲ್' ಅಂತಹ ಸಿನಿಮಾ ಮಾಡಿದ್ದು ಇದೇ ಜೋಡಿ. ಆ ಎರಡು ಚಿತ್ರಗಳು ರೀಮೇಕ್ ಆಗಿದ್ದರೂ, ಕನ್ನಡದ ನೇಟಿವಿಟಿಗೆ ತಕ್ಕಂತೆ ಸಿನಿಮಾ ಮಾಡಿ ಸಕ್ಸಸ್ ಆಗಿದ್ದರು. ಹಾಗಾಗಿ, ಈ ಸಲವೂ ಒಡೆಯ ಚಿತ್ರವನ್ನ ಚೆನ್ನಾಗಿ ಮಾಡಿರುತ್ತಾರೆ ಎಂಬ ಭರವಸೆ ಇದೆ.

ಸಹೋದರರ ಸೆಂಟಿಮೆಂಟ್
ಇದುವರೆಗೂ ದರ್ಶನ್ ಇಂತಹ ಪಾತ್ರ ಮಾಡಿಲ್ಲ. ನಾಲ್ಕು ತಮ್ಮಂದಿರ ಮುದ್ದಿನ ಅಣ್ಣನ ಪಾತ್ರದಲ್ಲಿ ಡಿ ಬಾಸ್ ಕಾಣಿಸಿಕೊಂಡಿದ್ದು, ಅಣ್ಣ-ತಮ್ಮಂದಿರ ಜುಗಲ್ ಬಂದಿ ನೋಡಲು ಮಜಾ ಕೊಡುತ್ತೆ. ದರ್ಶನ್ ಜೊತೆಗೆ ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ಸಹೋದರರಾಗಿ ನಟಿಸಿದ್ದಾರೆ.

ಅಲ್ಲಿ ಹಿಟ್ ಆದ ಚಿತ್ರ ಎಂಬ ನಂಬಿಕೆ
2014ರಲ್ಲಿ ತಮಿಳಿನಲ್ಲಿ ವೀರಂ ಸಿನಿಮಾ ರಿಲೀಸ್ ಆಗಿತ್ತು. ಈಗ ದರ್ಶನ್ ಮಾಡುತ್ತಿರುವ ಪಾತ್ರವನ್ನು ಅಲ್ಲಿ ಅಜಿತ್ ಮಾಡಿದ್ದರು. ಚಿತ್ರಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಗಳಿಕೆ ಕಂಡಿತ್ತು. 'ವೀರಂ' ಯಶಸ್ಸು ಕೇಳಿದವರಿಗೆ, ಒಡೆಯ ಚಿತ್ರದ ಮೇಲೆ ಹೆಚ್ಚಿನ ನಂಬಿಕೆ ಹುಟ್ಟಿಕೊಂಡಿದೆ.

ವೀರಂ ನೋಡದವರಿಗೆ ಫುಲ್ ಮಿಲ್ಸ್
ತಮಿಳಿನಲ್ಲಿ ವೀರಂ, ತೆಲುಗಿನಲ್ಲಿ ಕಾಠಮರಾಯುಡು ಎಂಬ ಹೆಸರಿನಲ್ಲಿ ಸಿನಿಮಾ ಬಂದಿದೆ. ಆ ಎರಡು ಚಿತ್ರಗಳನ್ನ ನೋಡಿದ ಕನ್ನಡ ಪ್ರೇಕ್ಷಕರಿಗೆ ಒಡೆಯ ರೆಗ್ಯುಲರ್ ಎನಿಸಿದರೂ, ಮೂಲ ಚಿತ್ರವನ್ನ ನೋಡದ ಪ್ರೇಕ್ಷಕರಿಗೆ ಭರ್ಜರಿ ಮಿಲ್ಸ್ ಆಗೋದು ಪಕ್ಕಾ.


Click it and Unblock the Notifications











