'ಮಫ್ತಿ'-2 ಚಿತ್ರದಲ್ಲಿ 'ಭೈರತಿ ರಣಗಲ್' ಎದುರು ಸ್ಯಾಂಡಲ್ವುಡ್ 'ಭೀಮ'?
ನರ್ತನ್ ನಿರ್ದೇಶನದಲ್ಲಿ 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಶಿವಣ್ಣನ ಖಡಕ್ ನಟನೆಗೆ ಸಿನಿರಸಿಕರು ಫಿದಾ ಆಗಿದ್ದಾರೆ. ಫಸ್ಟ್ ವೀಕೆಂಡ್ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಂಡ ಸಿನಿಮಾ 2ನೇ ವಾರಕ್ಕೆ ಕಾಲಿಡುತ್ತಿದೆ.
ಈಗಾಗಲೇ 'ಭೈರತಿ ರಣಗಲ್' ಕಥೆಯನ್ನು ಮುಂದುವರೆಸುವುದಾಗಿ ಶಿವರಾಜ್ಕುಮಾರ್ ಹೇಳಿದ್ದಾರೆ. ನರ್ತನ್ ಬಗ್ಗೆ ಈಗಾಗಲೇ ಚರ್ಚೆ ನಡೆಸಿರುವುದಾಗಿಯೂ ತಿಳಿಸಿದ್ದಾರೆ. ಇನ್ನೆರಡು ವರ್ಷಗಳ ಬಳಿಕ ಸಿನಿಮಾ ಶುರುವಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ತಮ್ಮದೇ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

'ಭೈರತಿ ರಣಗಲ್' ಸಕ್ಸಸ್ ಮೀಟ್ ಮಾಡಿ ಚಿತ್ರತಂಡ ಸಂಭ್ರಮಿಸಿದೆ. ಈಗಾಗಲೇ ಸಿನಿಮಾ 12 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಅಭಿಮಾನಿಗಳು, ಸಿನಿರಸಿಕರು ಮಾತ್ರವಲ್ಲ ಸಿನಿಮಾ ತಾರೆಯರು ಕೂಡ 'ಭೈರತಿ ರಣಗಲ್' ಆರ್ಭಟ ಕಣ್ತುಂಬಿಕೊಂಡಿದ್ದಾರೆ. ಮೊದಲ ದಿನವೇ ಅಭಿಮಾನಿಗಳಲ್ಲಿ ಒಬ್ಬರಾಗಿ ಡಾಲಿ ಧನಂಜಯ್ ಸಿನಿಮಾ ನೋಡಿ ಖುಷಿಪಟ್ಟಿದ್ದರು.
ನರ್ತಕಿ ಥಿಯೇಟರ್ ಮುಂದೆ ಥೇಟ್ ರಣಗಲ್ ರೀತಿ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಕಾಸ್ಟ್ಯೂಮ್ನಲ್ಲಿ ಡಾಲಿ ಸಂಭ್ರಮಿಸಿದ್ದರು. ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್ ಕೂಡ ದೊಡ್ಡಪ್ಪನ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು. ರಣಗಲ್ ಆರ್ಭಟ ಕೊಂಡಾಡಿದ್ದರು. ಇದೀಗ ದುನಿಯಾ ವಿಜಯ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಕಾಮಾಕ್ಷಿಪಾಳ್ಯದ ವಿಕ್ಟರಿ ಸಿನಿಮಾಸ್ ಚಿತ್ರಮಂದಿರದಲ್ಲಿ ವಿಜಯ್ ಸಿನಿಮಾ ವೀಕ್ಷಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ 'ರಣಗಲ್' ದರ್ಬಾರ್ ಬಗ್ಗೆ ಥ್ರಿಲ್ ಆಗಿದ್ದಾಗಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಸಿನಿಮಾ ನೋಡುವುದಾಗಿ ತಿಳಿಸಿದ್ದಾರೆ. ಹಸಿದ ಹುಲಿಯಂತೆ ಶಿವಣ್ಣ ನಟಿಸಿದ್ದಾರೆ. ಭಾವನಾತ್ಮಕ ಸನ್ನಿವೇಶಗಳು ಚೆನ್ನಾಗಿದೆ ಎಂದು ವಿಜಯ್ ಹೇಳಿದ್ದಾರೆ.

'ಮಫ್ತಿ' ಸೀಕ್ವೆಲ್ನಲ್ಲಿ ಗಣ(ಶ್ರೀಮುರಳಿ) ಇರ್ತಾರೋ ಇಲ್ವೋ? ನೀವು ನಟಿಸ್ತೀರಾ ಎನ್ನುವ ಪ್ರಶ್ನೆಗೆ ಕಂಡಿತ ನಾನು- ಶಿವಣ್ಣ ನಟಿಸಿದ್ರೆ ಹಬ್ಬನೇ, ಅದಕ್ಕೇನಂತೆ ಮಾಡೋಣ ಎಂದು ವಿಜಯ್ ಹೇಳಿರುವುದು ವೈರಲ್ ಆಗುತ್ತಿದೆ. ದೊಡ್ಡ ಸಿನಿಮಾಗಳಲ್ಲಿ ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸುವುದು ಲೇಟೆಸ್ಟ್ ಟ್ರೆಂಡ್ ಆಗದೆ. ಒಂದು ವೇಳೆ ಶಿವಣ್ಣ ಜೊತೆ ವಿಜಿ ಕೂಡ ನಟಿಸಿದ್ರೆ ಅಚ್ಚರಿ ಪಡಬೇಕಿಲ್ಲ.
ಈ ವರ್ಷ 'ಭೀಮ' ಸಿನಿಮಾ ಮಾಡಿ ದುನಿಯಾ ವಿಜಯ್ ಭರ್ಜರಿ ಸಕ್ಸಸ್ ಕಂಡಿದ್ದಾರೆ. ನಟನೆ ಜೊತೆಗೆ ನಿರ್ದೇಶಕರಾಗಿಯೂ ಗೆದ್ದಿದ್ದಾರೆ. ಸದ್ಯ ಜಡೇಶ್ ಹಂಪಿ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಮತ್ತೊಂದು ಕಡೆ 'ಸಿಟಿ ಲೈಟ್ಸ್' ಎಂಬ ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಮಗಳು ಮೋನಿಷಾ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿನಯ್ ರಾಜ್ಕುಮಾರ್ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ.
6 ವರ್ಷಗಳ ಹಿಂದೆ 'ಮಫ್ತಿ' ಸಿನಿಮಾ ಬಂದಿತ್ತು. ಅದರ ಪ್ರೀಕ್ವೆಲ್ ಅಂದರೆ ಹಿಂದಿನ ಕಥೆ 'ಭೈರತಿ ರಣಗಲ್' ಚಿತ್ರದಲ್ಲಿ ಅನಾವರಣವಾಗಿದೆ. ಇನ್ನು ಕ್ಲೈಮ್ಯಾಕ್ಸ್ ಬಳಿಕ 'ಮಫ್ತಿ' ಚಿತ್ರದ ಹೈಲೆಟ್ಸ್ ಸನ್ನಿವೇಗಳ ಮಾಂಟೇಜ್ ಕೂಡ ಪ್ಲೇ ಮಾಡಿ ಎಂಡ್ಕಾರ್ಟ್ ಹಾಕಲಾಗಿದೆ. ಎರಡೂ ಚಿತ್ರಗಳಿಗೆ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ ಸೀಕ್ವೆಲ್ಗೆ ಮತ್ತಷ್ಟು ಹೈಪ್ ಕ್ರಿಯೇಟ್ ಆಗುವುದರಲ್ಲಿ ಅನುಮಾನವಿಲ್ಲ.
ಪ್ರೀಕ್ವೆಲ್ನಲ್ಲಿ ಶ್ರೀಮುರಳಿ ಇರ್ತಾರಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡಿತ್ತು. ಆದರೆ ಅದು ಸುಳ್ಳಾಗಿದೆ. ಮುಂದಿನ ಭಾಗದಲ್ಲಿ ರಣಗಲ್- ಗಣ ಎದಿರು ಬದಿರಾಗುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಶಿವಣ್ಣ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನರ್ತನ್ ಕೂಡ ಮತ್ತೊಂದು ಸಿನಿಮಾ ಮಾಡಿ ಬಳಿಕ 'ಮಫ್ತಿ' ಕಥೆ ಮುಂದುವರೆಸುವ ಸಾಧ್ಯತೆಯಿದೆ.


Click it and Unblock the Notifications











