ಸುಮಲತಾ ಪರ ಪ್ರಚಾರಕ್ಕಾಗಿ ಬರ್ತಾರಾ ಈ ನಾಲ್ಕು ಸೂಪರ್ ಸ್ಟಾರ್ಸ್?
Recommended Video

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸುಮಲತಾ ಅಂಬರೀಶ್ ಪರ ಇಡೀ ಸ್ಯಾಂಡಲ್ ವುಡ್ ನಿಂತಿದೆ. ದೊಡ್ಡ ದೊಡ್ಡ ನಟರು ಸುಮಲತಾ ಬೆನ್ನಿಗೆ ನಿಂತು ಅವರ ಪರ ಪ್ರಚಾರ ಮಾಡಲು ಸಿದ್ದರಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಸೇರಿದಂತೆ ಸಾಕಷ್ಟು ಮಂದಿ ಸುಮಲತಾ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಕೆಲವರು ಟ್ವಿಟ್ಟರ್ ಮೂಲಕ ಸುಮಲತಾ ಪರ ಇದ್ದೀವಿ ಎನ್ನುವುದನ್ನು ಹೇಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಂಬರೀಶ್ ಅವರ ಅಪ್ತರು ಎನಿಸಿಕೊಂಡಿರುವ ಪರಭಾಷಾ ಸೂಪರ್ ಸ್ಟಾರ್ ಗಳು ಸುಮಲತಾ ಪರ ಪ್ರಚಾರಕ್ಕೆ ಬರ್ತಾರಾ ಎಂಬ ಕುತೂಹಲ ಮೂಡಿಸಿದೆ.
ಅಭಿನಯದ ಜೊತೆ ರಾಜಕೀಯದಲ್ಲೂ ಗುರುತಿಸಿಕೊಂಡಿರುವ ಈ ಸೂಪರ್ ಸ್ಟಾರ್ಸ್ ಅಂಬರೀಶ್ ಅವರ ಆತ್ಮೀಯ ಸ್ನೇಹಿತರು. ಅಂಬಿ ಕರೆದಾಗಲೆಲ್ಲಾ ಬೆಂಗಳೂರಿಗೆ ಬರುತ್ತಿದ್ದ ಇವರು ಈಗ ಸುಮಲತಾ ಪರ ಪ್ರಚಾರಕ್ಕೆ ಬರಬಹುದು ಎನ್ನುವ ನಿರೀಕ್ಷೆ ಹೆಚ್ಚಾಗಿದೆ. ಮೊದಲ ಬಾರಿಗೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಸುಮಲತಾ ಜೊತೆ ಈ ದೊಡ್ಡ ದೊಡ್ಡ ಸ್ಟಾರ್ಸ್ ಇರ್ತಾರಾ? ಮುಂದೆ ಓದಿ....

ಮೆಗಾಸ್ಟಾರ್ ಚಿರಂಜೀವಿ ಬರ್ತಾರಾ?
ತೆಲುಗು ನಟ ಚಿರಂಜೀವಿ, ಅಂಬರೀಶ್ ಸ್ನೇಹಿತರ ಬಳಗದಲ್ಲಿ ಗುರುತಿಸಿಕೊಂಡವರು. ಅಂಬಿಗೆ ಉತ್ತಮ ಗೆಳೆಯನಾಗಿದ್ದ ಚಿರಂಜೀವಿ, ಸುಮಲತಾ ಪರ ಪ್ರಚಾರಕ್ಕೆ ಬರುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ಸುಮಲತಾ ಜೊತೆ ದೂರವಾಣಿ ಮೂಲಕ ಮಾತನಾಡಿರುವ ಚಿರಂಜೀವಿ, ಸುಮಲತಾ ಅವರಿಗೆ ಶುಭ ಕೋರಿದ್ದಾರಂತೆ. ಅಲ್ಲದೆ ಪ್ರಚಾರಕ್ಕೂ ಬರುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಚಿರಂಜೀವಿ ಕಾಂಗ್ರೆಸ್ ಪಕ್ಷದ ಜೊತೆ ಗುರುತಿಸಿಕೊಂಡಿದ್ದಾರೆ.

ಅಂಬರೀಶ್ ಮತ್ತು ರಜನಿಕಾಂತ್ 40 ವರ್ಷದ ಗೆಳೆತನ
ಅಂಬರೀಶ್ ಮತ್ತು ರಜನಿಕಾಂತ್ ಗೆಳೆತನ ನಿನ್ನೆ ಮೊನ್ನೆಯದಲ್ಲ. ಸುಮಾರು 40 ವರ್ಷಗಳಿಂದ ಇಬ್ಬರು ಉತ್ತಮ ಸ್ನೇಹಿತರು. ರಜನಿಕಾಂತ್ ಬೆಂಗಳೂರಿಗೆ ಬಂದಾಗಲೆಲ್ಲಾ ಅಂಬರೀಶ್ ಮನೆಗೆ ಭೇಟಿ ನೀಡದೆ ಹೋಗುತ್ತಿರಲಿಲ್ಲ. ಈಗ ಅಂಬರೀಶ್ ಇಲ್ಲದಿದ್ದರು ಕುಟುಂಬದ ಜೊತೆ ಅದೇ ಸ್ನೇಹವನ್ನು ಮುಂದುವರೆಸಿರುವ ರಜನಿಕಾಂತ್ ಸುಮಲತಾ ಪರ ಪ್ರಚಾರಕ್ಕೆ ಬರ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಎದ್ದಿದೆ. ಇತ್ತೀಚಿಗಷ್ಟೆ ರಜನಿಕಾಂತ್ ಸಹ ಹೊಸ ಪಕ್ಷ ಹುಟ್ಟುಹಾಕುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಸುಮಲತಾ ಪರ ಪ್ರಚಾರದಲ್ಲಿ ಇರ್ತಾರಾ ಮೋಹನ್ ಬಾಬು?
ತೆಲುಗು ನಟ ಮೋಹನ್ ಬಾಬು, ಅಂಬರೀಶ್ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದರು. ಇಬ್ಬರ ಸ್ನೇಹ, ಸಂಬಂಧ ಹೇಗಿತ್ತು ಎನ್ನುವುದಕ್ಕೆ ಅಂಬರೀಶ್ ನಿಧನದ ಸಮಯದಲ್ಲಿ ಮೋಹನ್ ಬಾಬು ಬಿಕ್ಕಿ ಬಿಕ್ಕಿ ಅತ್ತಾಗಲೇ ಎಲ್ಲರಿಗೂ ಅರ್ಥವಾಗಿರುತ್ತೆ. ಈಗ ಪ್ರಾಣ ಸ್ನೇಹಿತನ ಪತ್ನಿ ಸುಮಲತಾ ಚುನಾವಣಾ ಅಖಾಡಕ್ಕೆ ಧುಮುಕ್ಕಿದ್ದಾರೆ. ಈ ಸಂದರ್ಭದಲ್ಲಿ ಸುಮಲತಾ ಪರ ಪ್ರಚಾರಕ್ಕೆ ಬರಬಹುದು ಎಂಬ ನಿರೀಕ್ಷೆ ಇದೆ.

ಶತೃಘ್ನ ಸಿನ್ಹಾ ಬರುವ ಸಾಧ್ಯತೆ
ಬಾಲಿವುಡ್ ನಟ ಮತ್ತು ರಾಜಕಾರಣಿ ಶತೃಘ್ನ ಸಿನ್ಹಾ ಸುಮಲತಾ ಪರ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ. ಅಂಬರೀಶ್ ಆಪ್ತರಲ್ಲಿ ಒಬ್ಬರಾಗಿರುವ ಶತೃಘ್ನ ಸಿನ್ಹಾ ಈ ಬಾರಿಯ ಚುನಾವಣೆಯಲ್ಲಿ ಸ್ಫರ್ದಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಸ್ನೇಹಿತನ ಪತ್ನಿಯ ಪರ ಪ್ರಚಾರಕ್ಕೆ ಮಂಡ್ಯಕ್ಕೆ ಬಂದರು ಬರಬಹುದು ಎಂಬ ಲೆಕ್ಕಾಚಾರ ಹಾಕಲಾಗಿದೆ. ಒಂದು ವೇಳೆ ಈ ನಾಲ್ವರು ಮಂಡ್ಯಕ್ಕೆ ಎಂಟ್ರಿ ಕೊಟ್ಟರೇ, ಸುಮಲತಾ ಅವರ ಬಲ ಮತ್ತಷ್ಟು ಹೆಚ್ಚಾಗುವುದಂತೂ ಸುಳ್ಳಲ್ಲಾ.


Click it and Unblock the Notifications











