ದುಬೈನಿಂದ ಬೆಂಗಳೂರಿಗೆ ವಾಪಸ್ ಬಂದ ದರ್ಶನ್: ಪೊಲೀಸ್ ವಿಚಾರಣೆಗೆ ಹಾಜರಾಗುತ್ತಾರಾ?
ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಪ್ರೀಮಿಯರ್ ಶೋನಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ಅದಕ್ಕು ಮುನ್ನ ನಿಯಮ ಉಲ್ಲಂಘಿಸಿ ರಾತ್ರಿಯಿಡೀ ಪಬ್ನಲ್ಲಿ ಪಾರ್ಟಿ ಮಾಡಿದ್ದ ಪ್ರಕರಣ ಸಂಬಂಧ ನಟ ದರ್ಶನ್ ಸೇರಿದಂತೆ 8 ಜನರಿಗೆ ನೋಟಿಸ್ ಜಾರಿ ಆಗಿತ್ತು.
ಜನವರಿ 3ರಂದು ರಾತ್ರಿ ರಾಜಾಜಿನಗರದ ಜೆಟ್ಲ್ಯಾಗ್ ಪಬ್ನಲ್ಲಿ ದರ್ಶನ್ ಸೇರಿದಂತೆ ಹಲವರು ರಾತ್ರಿಯಿಡೀ ಪಾರ್ಟಿ ಮಾಡಿದ್ದಾರೆ ಎನ್ನಲಾಗಿತ್ತು. 'ಕಾಟೇರ' ಸಕ್ಸಸ್ ಪಾರ್ಟಿ ಆಗಿದ್ದರಿಂದ ದರ್ಶನ್ ಆಪ್ತರು ಭಾಗಿ ಆಗಿದ್ದರು. ಈ ಪಾರ್ಟಿ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಬಕಾರಿ ಮತ್ತು ಪೊಲೀಸ್ ಕಾಯಿದೆ ಷರತ್ತು ಉಲ್ಲಂಘನೆ ಆರೋಪದಡಿ ಪಬ್ ಮಾಲೀಕರ ಮೇಲೆ ದೂರು ದಾಖಲಾಗಿದೆ. ಪಬ್ ಮಾಲೀಕರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪಾರ್ಟಿಯಲ್ಲಿ ಹಾಜರಾಗಿದ್ದರು ಎನ್ನಲಾಗಿದ್ದ 8 ಜನರಿಗೆ ನೋಟಿಸ್ ನೀಡಿದ್ದರು.

ದರ್ಶನ್ ಜೊತೆಗೆ ಡಾಲಿ ಧನಂಜಯ್, ಚಿಕ್ಕಣ್ಣ, ಅಭಿಷೇಕ್ ಅಂಬರೀಶ್, ನೀನಾಸಂ ಸತೀಶ್, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ದೇಶಕ ತರುಣ್ ಸುಧೀರ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣಗೆ ನೋಟಿಸ್ ನೀಡಲಾಗಿದೆ. ಆದರೆ ಯಾರೊಬ್ಬರು ನೋಟಿಸ್ಗೆ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿತ್ತು. ಇನ್ನು ನೋಟಿಸ್ ಬೆನ್ನಲ್ಲೇ ದರ್ಶನ್, ತರುಣ್ ಸುಧೀರ್ ದುಬೈಗೆ ಪಯಣ ಬೆಳೆಸಿದ್ದರು.
ನಾಲ್ಕು ದಿನಗಳ ಕಾಲ ದರ್ಶನ್ ದುಬೈನಲ್ಲಿ ಸ್ನೇಹಿತರ ಜೊತೆ ಕಾಲ ಕಳೆದು ಬಂದಿದ್ದಾರೆ. ಮೊದಲಿಗೆ ಅಲ್ಲಿ 'ಕಾಟೇರ' ಚಿತ್ರದ ಗೋಲ್ಡ್ ಪ್ರೀಮಿಯರ್ ಶೋನಲ್ಲಿ ಚಿತ್ರತಂಡ ಭಾಗಿ ಆಗಿತ್ತು. ದುಬೈ ಕನ್ನಡಿಗರು ದರ್ಶನ್ನ ನೋಡಿ ಖುಷಿಯಾಗಿದ್ದರು. ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ ವಿದೇಶಗಳಲ್ಲಿ ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

'ಕಾಟೇರ' ಸಕ್ಸಸ್ ಬೆನ್ನಲ್ಲೇ ದುಬೈ ಅಭಿಮಾನಿಗಳು ನಟ ದರ್ಶನ್ಗೆ 'ಕರುನಾಡ ಅಧಿಪತಿ' ಬಿರುದು ನೀಡಿ ಖುಷಿಪಟ್ಟಿದ್ದರು. ನಿರ್ದೇಶಕ ತರುಣ್ ಸುಧೀರ್ ಅವರಿಗೆ 'ಹ್ಯಾಟ್ರಿಕ್ ಡೈರೆಕ್ಟರ್' ಎನ್ನುವ ಬಿರುದು ಕೊಟ್ಟಿದ್ದರು. ಬಳಿಕ ದರ್ಶನ್ ದುಬೈನಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದರು. ಮೃಗಾಲಯಕ್ಕೆ ಭೇಟಿ ನೋಡಿ ಪ್ರಾಣಿ ಪಕ್ಷಿಗಳ ಜೊತೆ ಒಂದಷ್ಟು ಹೊತ್ತು ಕಾಲ ಕಳೆದಿದ್ದರು. ಪಳಗಿಸಿದ ಹುಲಿ ಮೈ ಸವರಿ ಖುಷಿ ಪಟ್ಟಿದ್ದರು.
ದುಬೈನಿಂದಲೇ ಇತ್ತೀಚೆಗೆ ದರ್ಶನ್ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು. ತಮ್ಮ ಹಿತ ಶತ್ರುಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಂತೆ ಇತ್ತು. "ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ" ಎಂದು ಬರೆದಿದ್ದರು.
ನಟ ದರ್ಶನ್ ಇದೀಗ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ ಎನ್ನಲಾಗ್ತಿದೆ. ದರ್ಶನ್ ಏರ್ಪೋರ್ಟ್ನಲ್ಲಿ ಬಂದಿಳಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದೆಲ್ಲದರ ಬೆನ್ನಲ್ಲೇ ಪಬ್ ಪಾರ್ಟಿ ನೋಟಿಸ್ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ? ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು 'ಕಾಟೇರ' ಎರಡನೇ ವಾರಂತ್ಯದ ಸಮೀಪದಲ್ಲಿದೆ. ಈಗಾಗಲೇ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.


Click it and Unblock the Notifications











