'ರಾಜಕೀಯ'ಕ್ಕೆ ಕಿಚ್ಚ.. ? ಬಾದ್ ಷಾ ಸುದೀಪ್, ಬ್ಲಾಕ್ ಬಸ್ಟರ್ ಸಮಾಚಾರ..!
ಸಿನಿಮಾ ಹಾಗೂ ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಕಾಲ ಕಾಲಕ್ಕೆ ಇಲ್ಲಿ ಸಿನಿಮಾ ಸಂತೆಯಿಂತ ದೂರವಾಗಿ ರಾಜಕೀಯದ ಅಖಾಡಕ್ಕೆ ಧುಮುಕಿದವರು ಇದ್ದಾರೆ. ಬಣ್ಣದ ಮೇಲಿನ ವ್ಯಾಮೋಹ, ರಾಜಕೀಯ ಮೇಲಿನ ಮೋಹದಿಂದ ಎರಡು ದೋಣಿಯ ನಾವಿಕರಾದವರು ಇದ್ದಾರೆ.
ಇನ್ನೂ.. ಚುನಾವಣೆ ಬಂತಂದ್ರೆ ಸಾಕು. ರಾಜಕೀಯದ ಪಕ್ಷಗಳು ಸ್ಟಾರ್ ಬಿರುದನ್ನ ಹೊತ್ತ ಅನೇಕರಿಗೆ ಗಾಳ ಹಾಕುವುದು, ಪ್ರಚಾರಕ್ಕೆ ಕರೆ ತರುವುದು ತೀರಾ ಕಾಮನ್ನು. ಈ ವರ್ಷ ಕೂಡ ಈ ಪ್ರಯತ್ನ ನಡೆಯುತ್ತಿದೆ. ರಾಜಕೀಯಕ್ಕೆ ಅವರು ಬರ್ತಾರೆ, ಪ್ರಚಾರಕ್ಕೆ ಇವರು ಧುಮುಕುತ್ತಾರೆ ಅನ್ನುವ ಸುದ್ದಿಗಳು ದಿನಕ್ಕೊಂದು ಸ್ಫೋಟಗೊಳ್ಳುತ್ತಿವೆ. ಇದರ ನಡುವೆ ಕಿಚ್ಚ ಸುದೀಪ್ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಬರಬಹುದು ಬರದೇ ಇರಬಹುದು ಎಂದು ಅಡ್ಡ ಗೋಡೆಯ ಮೇಲೆ ದೀಪವನ್ನೂ ಇಟ್ಟಿದ್ದಾರೆ ದೀಪು.

ಅಸಲಿಗೆ ಕಳೆದ ಹದಿನೈದು ವರ್ಷಗಳಲ್ಲಿ ಪ್ರತೀ ಸಲ ಚುನಾವಣೆ ಬಂದಾಗಲೂ ಕಿಚ್ಚ ಸುದೀಪ, ರಾಜಕಾರಣಕ್ಕೆ ಬರ್ತಾರಂತೆ ಅನ್ನುವ ಸುದ್ದಿ, ಪುಟ್ಟೇನಹಳ್ಳಿಯಿಂದ ವಿಧಾನಸೌಧವರೆಗೆ ಕೇಳಿ ಬರುತ್ತಾನೇ ಇರುತ್ತೆ. ಈ ವರ್ಷ ಕೂಡ ಇಂಥಹದ್ದೇ ಒಂದು ಸುದ್ದಿ ಇದೆ. ಇನ್ನೂ ಸುದೀಪ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದರು. ಅನೇಕ ಕಡೆ ಸುತ್ತಾಡಿದ್ದರು. ಹೀಗಾಗಿ ಈ ವರ್ಷ ಕೂಡ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡ್ತಾರೆ ಎಂದೇ ಅನೇಕರು ಊಹಿಸಿದ್ದಾರೆ. ಇವೆಲ್ಲದಕ್ಕೂ ಖುದ್ದು ಸುದೀಪ್ ಉತ್ತರವನ್ನ ಕೊಟ್ಟಿದ್ದಾರೆ. ಕಾಲಚಕ್ರದ ಪ್ರಕಾರ ನಡೆಯೋಣ ಎಂದಿದ್ದಾರೆ.
ಹೌದು, ಕ್ರಿಕೆಟ್ ನ ಸಹ ಆಟಗಾರ, ಚಿತ್ರರಂಗದ ಸಹೋದ್ಯೋಗಿ ಚಂದನ್ ಅವರ ಹೊಸ ಹೋಟೆಲ್ ಉದ್ಘಾಟನೆಗೆ ಆಗಮಿಸಿದ್ದ ಸುದೀಪ್, ರಾಜಕೀಯ, ಕ್ರಿಕೆಟ್, ಸಿನಿಮಾ ಮೂರು ವಿಚಾರದ ಬಗ್ಗೆಯೂ ತಮ್ಮ ಮನದ ಮಾತನ್ನ ಹಂಚಿಕೊಂಡಿದ್ದಾರೆ. ಅಭಿಮಾನಿಗಳ ಅಸಹನೆ, ಅಸಮಾಧಾನವನ್ನೂ ತಮ್ಮದೇ ಶೈಲಿಯಲ್ಲಿ ತಣ್ಣಗಾಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ.

ರಾಜಕೀಯ ಪ್ರವೇಶದ ಬಗ್ಗೆ ಕಿಚ್ಚ ಹೇಳಿದ್ದೇನು..?
ಕಳೆದ ಬಾರಿ ಯಾರಿಗಾಗಿ, ಯಾವ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿದ್ದೆ ಎಂಬುದನ್ನು ನಾನು ಸ್ಪಷ್ಟಪಡಿಸಿದ್ದೆ. ಈ ಬಾರಿ ಇನ್ನೂ ಸಹ ಯಾರೂ ನನ್ನನ್ನು ಪ್ರಚಾರಕ್ಕಾಗಿ ಕೇಳಿಲ್ಲ. ಕೇಳಿದಾಗ ಆ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದಿರುವ ಅಭಿನಯ ಚಕ್ರವರ್ತಿ ಸುದೀಪ್, ನಾನು ಸಿನಿಮಾ ಬಿಟ್ಟು ಕ್ರಿಕೆಟ್ ಆಡ್ತಿರುವುದಕ್ಕೆ ಆಗಲೇ ಅನೇಕರ ಕಣ್ಣು ಕೆಂಪಾಗಿದೆ. ಇಂಥಹ ಸಮಯದಲ್ಲಿ ಶೂಟಿಂಗ್ ಬಿಟ್ಟು ರಾಜಕೀಯ ಪ್ರಚಾರಕ್ಕೆ ಹೋದರೆ ಇನ್ನಷ್ಟು ಗಲಾಟೆಗಳಾಗುತ್ತವೆಯೋ ಏನೋ ಎಂದು ಹಾಸ್ಯ ಚಟಾಕಿಯನ್ನೂ ಹಾರಿಸಿದ್ದಾರೆ ಕಿಚ್ಚ ಸುದೀಪ್.
ರಾಜಕೀಯಕ್ಕೆ ಧುಮುಕುತ್ತಾರಾ ಸುದೀಪ್..?
ಹಾಗೇ ನೋಡಿದರೆ ಕನ್ನಡ ಚಿತ್ರರಂಗದ ಕೀರ್ತಿಯನ್ನ ಆ ಕಾಲದಲ್ಲಿಯೇ ಹೆಚ್ಚಿಸಿದ ಸುದೀಪ್ ಅವರನ್ನು ರಾಜಕೀಯದ ಪಡಸಾಲೆಗೆ ಎಳೆದುತರಲು ಎಲ್ಲ ಪ್ರಮುಖ ಪಕ್ಷಗಳೂ ಅನಾದಿಕಾಲದಿಂದಲೂ ಕಸರತ್ತು ನಡೆಸುತ್ತಾನೇ ಬಂದಿವೆ. ಆದರೆ ಸುದೀಪ್ ಸ್ಟಾರ್ ಪ್ರಚಾರಕರಾಗಿ ಪಕ್ಷಗಳ ಜೊತೆ ಕೈ ಜೋಡಿಸಿದ್ದಾರೆ ಹೊರತು, ರಾಜಕೀಯಕ್ಕೆ ತಾವು ಬರುವ ವಿಚಾರವನ್ನ ನೇರಾನೇರವಾಗಿ ಅಧಿಕೃತವಾಗಿ ಹೇಳಿಲ್ಲ. ಹಾಗೇ ನೋಡಿದರೆ ಹಿಂದೆ ಕಾಂಗ್ರೆಸ್ ಪಕ್ಷದಿಂದ ಸುದೀಪ್ ಚಿತ್ರದುರ್ಗಕ್ಕೆ ಸ್ಪರ್ಧಿಸುತ್ತಾರೆ ಅಂತಾ ಪುಕಾರೆದ್ದಿತ್ತು. ಆ ನಂತರ ಬಾದ್ ಷಾ ಜೆ.ಡಿ.ಎಸ್. ಸೇರೋದು ಖಚಿತ ಅಂತಲೂ ಜನ ಮಾತಾಡಿಕೊಂಡಿದ್ದರು. ಆ ನಂತರ ಕಾಲ ಚಕ್ರ ಉರುಳಿದಂತೆ ಅಂತಿಮವಾಗಿ ಕಿಚ್ಚ ಕಮಲ ಹಿಡಿಯೋದು ಖಚಿತ ಅನ್ನುವ ಅಭಿಪ್ರಾಯ ಸಾರ್ವತ್ರಿಕ ವಲಯದಲ್ಲಿ ವ್ಯಕ್ತವಾಗಿತ್ತು.

ಇದರಲ್ಲಿ ಯಾವುದು ಸತ್ಯ-ಮಿಥ್ಯ, ಯಾವ ಪಕ್ಷದಿಂದ ಸುದೀಪ್ ತಮ್ಮ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆಯಲಿದ್ದಾರೆ ಅನ್ನುವುದು ಸದ್ಯಕ್ಕೆ ನಿಗೂಡವಾದರೂ, ಸುದೀಪ್ ನೋಡಿ ಈಗ ನಾನು ಹೋಟೆಲ್ ಉದ್ಘಾಟನೆಗೆ ಬರಲ್ಲ ಅಂದುಕೊಂಡಿದ್ದರು ಆದರೆ ಬಂದಿದ್ದೇನೆ. ಹಾಗೆಯೇ ರಾಜಕೀಯದ್ದು ಏನಾಗುತ್ತದೆಯೋ ನೋಡೋಣ. ಎಲ್ಲರೂ ನಾನು ಬರಲ್ಲ ಅಂದುಕೊಂಡಿದ್ದಾರೆ, ಬಂದಾಗ ಗೊತ್ತಾಗುತ್ತದೆ. ಒಂದೊಮ್ಮೆ ಬರಲಿಲ್ಲ ಎಂದರೆ ಬರಲಿಲ್ಲ ಅಷ್ಟೇ ಎಂದಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಸುಳಿವನ್ನೂ ಸುದೀಪ್ ಕೊಟ್ಟಿದ್ದಾರೆ.
ಮಿಕ್ಕಂತೆ ರಾಜಕೀಯದ ಟಾಪಿಕ್ ಹೊರತು ಪಡಿಸಿದರೆ, ಸುದೀಪ್ ತಮ್ಮ ಮುಂದಿನ ಸಿನಿಮಾ ಮ್ಯಾಕ್ಸ್ ಬಗ್ಗೆ ಮಾತನಾಡಿದ್ದಾರೆ. ಮ್ಯಾಕ್ಸ್ ಸಿನಿಮಾ ತಡವಾಗಲು ಕ್ರಿಕೆಟ್ ಕಾರಣ ಅಲ್ಲ ಅಂದಿದ್ದಾರೆ. ಇನ್ನೂ ಹದಿನೈದು ದಿನ ಚಿತ್ರದ ಚಿತ್ರೀಕರಣ ಮುಕ್ತಾಯವಾಗಲಿದೆ, ಮೇನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದಿದ್ದಾರೆ.

ಒಟ್ಟಿನಲ್ಲಿ ತಕ್ಷಣಕ್ಕೆ ರಾಜಕಾರಣಕ್ಕೆ ಬರುವ ಯಾವ ಅನಿವಾರ್ಯತೆಯೂ ಸುದೀಪ್ ಅವರಿಗೆ ಇಲ್ಲ. ಕನ್ನಡ ಮಾತ್ರವಲ್ಲದೆ, ಇಡೀ ಇಂಡಿಯಾದಲ್ಲಿವರು ಬೇಡಿಕೆಯ ನಟರಲ್ಲಿ ಸುದೀಪ್ ಕೂಡ ಒಬ್ಬರು. ಇನ್ನೂ ಇಲ್ಲಿ ಜನಪ್ರಿಯ ಹೀರೋ ಆಗಿದ್ದುಕೊಂಡೇ ಪಕ್ಕದ ರಾಜ್ಯಗಳಲ್ಲಿ ವಿಲನ್ ಆಗಿಯೂ ಅವತಾರವೆತ್ತಿ, ಜನ ಮನ ಗೆದ್ದವರು ಸುದೀಪ್. ಇಂಥ ಸುದೀಪ್ ಸಿನಿಮಾ ಹಾಗೂ ಕ್ರಿಕೆಟ್ ನಲ್ಲಿ ಚತುರ ಆಟಗಾರ ಅನ್ನುವುದು ಆಗಲೇ ಸಾಬೀತಾಗಿದೆ. ಆದರೆ, ರಾಜಕಾರಣ ಇವರಿಗೆ ಆಗಿಬರುತ್ತ..? ಉತ್ತರ ಕಾಲವೇ ನೀಡಲಿದೆ.


Click it and Unblock the Notifications










