ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹಾಸ್ಯನಟ ಚಿಕ್ಕಣ್ಣಗೆ ಶುರುವಾಯ್ತು ಭೀತಿ!
ಕೆಟ್ಟ ಮೆಸೇಜ್ ಮಾಡಿದ್ದ ಕಾರಣಕ್ಕೆ ರೇಣುಕಾಸ್ವಾಮಿ ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಕೇಳಿಬಂದಿದೆ. ಈಗಾಗಲೇ 13 ಜನರನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮತ್ತಷ್ಟು ಜನರನ್ನು ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಕಳೆದೊಂದು ವಾರದಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಪರಭಾಷಾ ಕಲಾವಿದರು ಕೂಡ ಈ ಬಗ್ಗೆ ಮಾತನಾಡುತ್ತಿದ್ದಾರೆ. ಇನ್ನು ತನಿಖೆ ಹೆಚ್ಚಾದಾಗ ದರ್ಶನ್ ಆಪ್ತರಲ್ಲಿ ಹಲವರಿಗೆ ಢವ ಢವ ಶುರುವಾಗಿದೆ. ಶನಿವಾರ(ಜೂನ್ 8) ಮಧ್ಯಾಹ್ನ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ನಲ್ಲಿ ನಡೆದ ಪಾರ್ಟಿಯಲ್ಲಿ ಮತ್ತೊಬ್ಬ ನಟ ಭಾಗಿ ಆಗಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಆತನಿಗೆ ಪೊಲೀಸರು ನೊಟೀಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.

ಚಿತ್ರದುರ್ಗದಿಂದ ಶನಿವಾರ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಬೆಂಗಳೂರಿಗೆ ಕರೆಸಲಾಗಿತ್ತು. ದರ್ಶನ್ ಆಪ್ತ ವಿನಯ್ ಮಾವನ ಪಟ್ಟಣಗೆರೆಯಲ್ಲಿದ್ದ ಶೆಡ್ನಲ್ಲಿ ಆತನನ್ನು ಕೂಡಿ ಹಾಕಿ ಥಳಿಸಲಾಗಿತ್ತು. ಇದಕ್ಕೂ ಮುನ್ನ ವಿನಯ್ ಒಡೆತನದ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ಲ್ಲಿ ದರ್ಶನ್ ಆಪ್ತರ ಜೊತೆ ಪಾರ್ಟಿ ಮಾಡಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಇದೇ ಪಾರ್ಟಿಯಲ್ಲಿ ದರ್ಶನ್ಗೆ ಆಪ್ತರಾಗಿದ್ದ ಹಾಸ್ಯ ನಟ ಚಿಕ್ಕಣ್ಣ ಹಾಗೂ ನಿರ್ಮಾಪಕರೊಬ್ಬರು ಭಾಗಿ ಆಗಿದ್ದರು ಎಂದು ಹೇಳಲಾಗುತ್ತಿದೆ.
ಸಂಜೆ ವೇಳೆಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ದರ್ಶನ್ ಅಲ್ಲಿಂದ ಎದ್ದು ಹೊರಟುಬಿಟ್ಟರಂತೆ. ಇದೀಗ ದರ್ಶನ್ ಹಾಗೂ ಹಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಂತೆ ನಟ ಚಿಕ್ಕಣ್ಣಗೆ ಭಯ ಶುರುವಾಗಿದೆಯಂತೆ. ಯಾವ ಕ್ಷಣದಲ್ಲಾದ್ರು ಕಾಮಾಕ್ಷಿಪಾಳ್ಯ ಪೊಲೀಸರು ತಮ್ಮನ್ನು ಸಂಪರ್ಕಿಸಬಹುದು ಎನ್ನುವ ಭೀತಿಯಲ್ಲಿದ್ದಾರಂತೆ. ಕೊಲೆ ವಿಚಾರವಾಗಿ ಸ್ಟೋನಿ ಬ್ರೂಕ್ ರೆಸ್ಟೊರೆಂಟ್ನಲ್ಲಿ ಏನಾದ್ರು ಚರ್ಚೆಯಾಗಿತ್ತಾ? ಎಂದು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಪಡೆಯುವ ಸಾಧ್ಯತೆಯಿದೆ.
ಚಿಕ್ಕಣ್ಣನನ್ನು ನೋಟಿಸ್ ಕೊಟ್ಟು ವಿಚಾರಣೆಗೆ ಕರೆಸುವ ಬಗ್ಗೆ ಪೊಲೀಸರು ಹಿರಿಯ ಅಧಿಕಾರಿಗಳ ಸಲಹೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಶೀಘ್ರದಲ್ಲೇ ನೋಟಿಸ್ ನೀಡಿ ಆ ನಟನನ್ನು ಕರೆಸಹುದು ಎನ್ನಲಾಗ್ತಿದೆ. ನಟ ದರ್ಶನ್ ಜೊತೆಗೆ ಚಿತ್ರರಂಗದ ಕೆಲ ನಟರು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ನಟರಾದ ಧನ್ವೀರ್, ಅಭಿಷೇಕ್ ಅಂಬರೀಶ್, ಯಶಸ್ ಸೂರ್ಯ, ಚಿಕ್ಕಣ್ಣ ಸೇರಿದಂತೆ ಕೆಲವರ ದರ್ಶನ್ ಆಪ್ತ ಬಳಗದಲ್ಲಿ ಗುರ್ತಿಸಿಕೊಂಡಿದ್ದರು.

ಇನ್ನು ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧನ ವಿಚಾರದ ಬಗ್ಗೆ ಪರ ವಿರೋಧ ಚರ್ಚೆ ಜೋರಾಗಿದೆ. ದರ್ಶನ್ ಅಭಿಮಾನಿಗಳಲ್ಲಿ ಕೆಲವರು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರೆ ಬಹುತೇಕರು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ ಎನ್ನುತ್ತಿದ್ದಾರೆ. ಕನ್ನಡ ಸಿನಿಮಾ ತಾರೆಯರಲ್ಲಿ ಬಹುತೇಕರು ಮೌನವಹಿಸಿದ್ದಾರೆ. ದರ್ಶನ್ ಆಪ್ತರು ಕೂಡ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ.
ನಟರಾದ ಉಪೇಂದ್ರ, ಸುದೀಪ್ ಹಾಗೂ ನಟಿ ರಮ್ಯಾ ಮಾತ್ರ ಈ ಬಗ್ಗೆ ಇಲ್ಲಿಯವರೆಗೆ ಮಾತನಾಡಿದ್ದಾರೆ. ಜೂನ್ 8ರಂದು ರೇಣುಕಾಸ್ವಾಮಿಯನ್ನು ಕರೆತಂದು ಥಳಿಸಲಾಗಿತ್ತು. ಈ ವೇಳೆ ಆತನ ಜೀವ ಹೋಗಿದ್ದು ಬಳಿಕ ಶವನ್ನು ಸುಮನಹಳ್ಳಿ ರಿಂಗ್ ರೋಡ್ ಬಳಿ ಎಸೆಯಲಾಗಿತ್ತು. ಬಳಿಕ ಪೊಲೀಸರಿಗೆ ವಿಷಯ ಗೊತ್ತಾಗಿ ತನಿಖೆ ಆರಂಭಿಸಿದ್ದರು. ಮೊದಲಿಗೆ 4 ಜನ ಆರೋಪ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದರು. ಪೊಲೀಸ್ ವಿಚಾರಣೆ ವೇಳೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದವರ ಹೆಸರುಗಳು ಬಯಲಾಗಿತ್ತು.


Click it and Unblock the Notifications











