ರಕ್ಷಿತ್ - ಪುಷ್ಕರ್ ದೂರ ಆಗಿದ್ದೇಕೆ..? ಮತ್ತೆ ಸಿನಿಮಾ ಮಾಡ್ತಾರಾ..?
ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ... ಒಂದ್ಕಾಲದ ಗಳಸ್ಯ, ಕಂಠಸ್ಯ ಸ್ನೇಹಿತರು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ ಆರಂಭವಾದ ಈ ಗೆಳೆತನದ ಬೆಸುಗೆ ಅವನೇ ಶ್ರೀಮನ್ನಾರಾಯಣದ ಕಾಲ್ಪನಿಕ ಊರು ಅಮರಾವತಿವರೆಗೆ ಮುಂದುವರೆದುಕೊಂಡು ಬಂದಿತ್ತು.
ಈ ಆರು ವರ್ಷದಲ್ಲಿ ಇವರಿಬ್ಬರೂ ಸೃಷ್ಟಿಸಿದ್ದ ಪವಾಡ ಒಂದೆರಡಲ್ಲ. ಉದಾಹರಣೆಗೆ 'ಕಿರಿಕ್ ಪಾರ್ಟಿ', 'ಹಂಬಲ್ ಪೊಲಿಟಿಷಿಯನ್ ನಾಗರಾಜ್', 'ಕಥೆಯೊಂದು ಶುರುವಾಗಿದೆ'. 'ಭೀಮಸೇನಾ ನಳ ಮಹಾರಾಜ'.

ಆದರೆ 'ಅವನೇ ಶ್ರೀಮನ್ನಾರಾಯಣ'ದ ನಂತರ ಈ 'ಗೆಳೆತನ'ದ ಮೇಲೆ ಅದ್ಯಾರ ಮಸಣಿ 'ಕಣ್ಣು' ಬಿತ್ತೋ ಗೊತ್ತಿಲ್ಲ. ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಜಂಟಿ 'ವ್ಯವಹಾರ'ಗಳಿಗೆ ಫುಲ್ ಸ್ಟಾಪ್ ಇಟ್ಟರು. ವ್ಯಾವಹಾರಿಕವಾಗಿ ಇಬ್ಬರೂ ಪರಸ್ಪರ 'ಒಪ್ಪಿಗೆಯ ಮೇರೆಗೆ' ತಲಾಕ್ ಕೊಟ್ಟು ಒಂಟಿಯಾದರು. ಇದಕ್ಕೆ ಪೂರಕವಾಗಿ 'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ನಿರ್ಮಾಣ ಪಾಲುದಾರಿಕೆಯಿಂದ 'ಪುಷ್ಕಳ'ವಾದೊಂದು ಗೆಲುವಿನ ರೂವಾರಿಯಾಗಿದ್ದ 'ಪುಷ್ಕರ್ ಮಲ್ಲಿಕಾರ್ಜುನಯ್ಯ' ಅವರ ಹೆಸರನ್ನ ರಕ್ಷಿತ್ ಶೆಟ್ಟಿ ತಮ್ಮ '777 ಚಾರ್ಲಿ 'ಚಿತ್ರದಿಂದ ಕೈ ಬಿಟ್ಟರು. 'ಸಪ್ತಸಾಗರದಾಚೆ' ಸಿನಿಮಾದ ಪಾಲುದಾರಿಕೆಯಿಂದ ಪುಷ್ಕರ್ ಹಿಂದೆ ಸರದರು.
ಇದೆಲ್ಲವೂ ಆಗಿ ಈಗ ಹೆಚ್ಚು ಕಡಿಮೆ 'ನಾಲ್ಕು' ವರ್ಷಗಳಾಗಿವೆ. ಈ ನಾಲ್ಕು ವರ್ಷದಲ್ಲಿ ರಕ್ಷಿತ್ ಶೆಟ್ಟಿ ಮುಟ್ಟಿದ್ದೆಲ್ಲ ಚಿನ್ನ ಆಗಿದೆ. 'ಚಾರ್ಲಿ' ಹಾಗೂ 'ಸಪ್ತಸಾಗರದಾಚೆ'ಯ ಗೆಲುವು, ರಕ್ಷಿತ್ ಶೆಟ್ಟಿಯ ಬೆಲೆಯನ್ನಷ್ಟೇ ಹೆಚ್ಚಿಸಿಲ್ಲ. ಉತ್ಸಾಹವನ್ನೂ ಹೆಚ್ಚಿಸಿದೆ.
ಈ ಕಡೆ ರಕ್ಷಿತ್ ಅವರಿಂದ ದೂರ ಆದ ನಂತರ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಮಲಯಾಳಂ ಸಿನಿಮಾ 'ತಿಂಗಳಾಯಿಚ ನಿಶ್ಚಯಂ'ಗೆ ಕೇರಳ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. 'ಅವತಾರ ಪುರುಷ' ಚಿತ್ರದ ಮೊದಲ ಭಾಗ ಮಾಡಿಕೊಟ್ಟ 'ಕಮಾಯಿ'ಯಿಂದ ಕಷ್ಟದ ಬೆಟ್ಟ ಕಡಿಮೆಯಾಗಿದೆ. ಬಿಡುಗಡೆಗೆ ಸಿದ್ಧವಾಗಿರುವ 'ಅವತಾರ ಪುರುಷ ' ಚಿತ್ರದ ಭಾಗ ಎರಡು, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಸಿನಿಮಾ ಉತ್ಸಾಹವನ್ನ ಬಡಿದೆಬ್ಬಿಸುವ ಭರವಸೆಯೂ ಇದೆ.

ಇದರ ನಡುವೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಮಾತನಾಡಿದ್ದಾರೆ. ಇಬ್ಬರ ನಡುವೆ ಇದ್ದ ಆತ್ಮೀಯವಾದ ಸಂಬಂಧ ಉಸಿರು ಚೆಲ್ಲಿದ್ಹೇಗೆ ಎಂಬ ವಿಚಾರದ ಬಗ್ಗೆ ಪೋಸ್ಟ್ ಮಾರ್ಟ್ಂ ವರದಿಯನ್ನ ಸಲ್ಲಿಸದೇ, ನೀವೆಲ್ಲ ಅಂದುಕೊಂಡತೆ ನಮ್ಮ ನಡುವೆ ಭಿನ್ನಾಭಿಪ್ರಾಯದ ಜ್ವಾಲಾಮುಖಿ ಸ್ಪೋಟವೇನು ಆಗಿರಲಿಲ್ಲ ಅಂದಿದ್ದಾರೆ.
ಹೌದು, 'ವಿಸ್ತಾರ ನ್ಯೂಸ್' ಜೊತೆ ತಮ್ಮ ಮನದ ಮಾತನ್ನ ಹಂಚಿಕೊಂಡಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ನಾವು ಇಬ್ಬರು ಪ್ರಬುದ್ದರು ಎಂದಿದ್ದಾರೆ. ಆರೇಳು ವರ್ಷ ಇಬ್ಬರು ಒಟ್ಟಿಗೆ ಪ್ರಯಾಣ ಮಾಡಿದ್ದೇವೆ, ಕೆಲವೊಮ್ಮೆ ಸೋಲು-ಗೆಲುವುಗಳಲ್ಲಿ ವ್ಯತ್ಯಾಸವಾಗಿರುತ್ತಷ್ಟೇ. ಅದನ್ನ ಹೊರತು ಪಡಿಸಿದರೆ ನಮ್ಮ ನಡುವಿನ ಸಂಬಂಧ ಸ್ಥಿರವಾಗಿದೆ. ಆರೋಗ್ಯಕರವಾಗಿದೆ ಎಂದಿದ್ದಾರೆ.
ಇನ್ನೂ 'ಜಿಎಸ್ಟಿ' ಹಾಗೂ 'ಟಿಡಿಎಸ್ ' ಹಣವನ್ನ ಮರಳಿ ನನಗೆ ನೀಡಲು 'ಆರು' ತಿಂಗಳ ಹಿಂದೆ ರಕ್ಷಿತ್ ಶೆಟ್ಟಿ ತಮಗೆ ಕರೆ ಮಾಡಿದ್ದರು ಎಂದಿರುವ ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾದ ಕುರಿತು ಚರ್ಚೆಯನ್ನ ಮಾಡಲಿಲ್ಲ ಎಂದಿದ್ದಾರೆ. ವ್ಯೆಯಕ್ತಿಕವಾಗಿ ಹಾಗೂ ವೃತ್ತಿಪರವಾಗಿ ಇಬ್ಬರು ಅಂತರವನ್ನ ಕಾಪಾಡಿಕೊಂಡಿದ್ದೇವೆ ಎಂದು ಕೂಡ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೇಳಿದ್ದಾರೆ. ಹಾಗಂಥ ರಕ್ಷಿತ್ ಶೆಟ್ಟಿ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತೆ ಜಂಟಿಯಾಗಿ ಸಿನಿಮಾ ಮಾಡೋದೇ ಇಲ್ಲ ಅಂತೇನೂ ಇಲ್ಲ. ಯಾಕೆಂದರೆ ನಾವು ನಿಮಗೆ ಆರಂಭದಲ್ಲಿಯೇ ಹೇಳಿದಂತೆ ಇಬ್ಬರು ಪರಸ್ಪರ ಒಪ್ಪಿ ದೂರವಾಗಿದ್ದಾರೆ. 'ದ್ವೇಷ' ಮತ್ತು 'ಹಗೆತನ'ದಿಂದಲ್ಲ. ಹೀಗಾಗಿ ಇಬ್ಬರು ಮತ್ತೆ ಚಿತ್ರಕ್ಕಾಗಿ ಒಂದಾಗಬಹುದು. ಕಾಲ ಕೂಡಿ ಬರಬೇಕಷ್ಟೇ.

ಒಟ್ಟಿನಲ್ಲಿ ಗೆಲುವಿಗೆ ನೂರು ಜನ ಅಪ್ಪಂದಿರು, ಸೋಲಿಗೆ ಮಾತ್ರ ಒಬ್ಬನೇ ಎಂಬ ಮಾತಿನಂತೆ, ಎಲ್ಲೆಲ್ಲಿಂದಲೋ ಬಂದವರು ಆರಂಭದಲ್ಲಿ ಒಂದು ಕಡೆ ಸೇರಿ ಏನೋ ಸಾಧಿಸುತ್ತಾರೆ. ಆದರೆ ಆ ನಂತರ ಅಲ್ಲೀತನಕ ಇದ್ದ ಒಗ್ಗಟ್ಟು ಒಂದೇ ಏಟಿಗೆ ದಿಕ್ಕಾಪಾಲಾಗಿರುತ್ತದೆ. ಅದಕ್ಕೆ ಕಾರಣಗಳೂ ಹಲವಾದರೂ ದುಡ್ಡು ಕಾಸಿನ ವ್ಯವಹಾರಕ್ಕೆ ಜೀವದ ಗೆಳೆಯರ ಮಧ್ಯೆಯೂ ಬಿರುಕು ಮೂಡಿಸುವ ಶಕ್ತಿಯಿದೆ. ಇನ್ನೂ ಇಬ್ಬರ ನಡುವೆ ತಂದಿಟ್ಟು ಆ ಬೆಂಕಿಯಲ್ಲಿ ಮೈಕಾಯಿಸಿಕೊಳ್ಳುವವರು ಇದ್ದೇ ಇರುತ್ತಾರೆ. ಪುಷ್ಕರ್ ಮತ್ತು ರಕ್ಷಿತ್ ನಡುವೆ ಕೂಡಾ ಇದೇ ಆಗಿರಬೇಕು. ಏನೇ ಆಗಲಿ, 'ಕಥಾನಾಯಕ'ನಕ್ಕಿಂತ 'ಕಥೆ' ಮುಖ್ಯವೆಂದು ಚಿತ್ರಕ್ಕೆ ಕೋಟಿ ಕೋಟಿ ಚೆಲ್ಲುತ್ತಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೊಸತನಕ್ಕಾಗಿ ತುಡಿಯುವ ರಕ್ಷಿತ್ ಶೆಟ್ಟಿ ಆದಷ್ಟು ಬೇಗ 'ಒಂದಾಗಲಿ' ಅನ್ನುವುದೇ ಚಿತ್ರಪ್ರೇಮಿಗಳ ಆಶಯ


Click it and Unblock the Notifications











