ಪ್ರಾಣಿ ಪಕ್ಷಿ ಮೇಲಿರುವ ಕಾಳಜಿ ಮಡದಿ ಮೇಲೆ ಇಲ್ಲ; ದರ್ಶನ್ಗೆ ಡಿವೋರ್ಸ್ ಕೊಡ್ತಾರಾ ಪತ್ನಿ ವಿಜಯಲಕ್ಷ್ಮಿ?
ರೇಣುಕಾಸ್ವಾಮಿ ಕೊಲೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಎನ್ನುವ ಕ್ಷುಲ್ಲಕ ಕಾರಣಕ್ಕೆ ಆತನನ್ನು ದರ್ಶನ್ ಕೊಲೆ ಮಾಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ದರ್ಶನ್, ಪವಿತ್ರಾ ಗೌಡ ಸೇರಿ 13 ಜನರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈಗಾಗಲೇ ಹಲವು ವಿವಾದಗಳು ನಟ ದರ್ಶನ್ಗೆ ಸುತ್ತಿಕೊಂಡಿತ್ತು. ಈ ಬಾರಿ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿಬಂದಿದೆ. ಕಿಡ್ನ್ಯಾಪ್ ಹಾಗೂ ಹತ್ಯೆಗೆ ಸಂಚು ರೂಪಿಸಿರುವ ವಿಚಾರ ತನಿಖೆ ವೇಳೆ ಬಯಲಾಗಿದೆ. ಒಂದು ಕೆಟ್ಟ ಮೆಸೇಜ್ ಕಳುಹಿಸಿದ ಎನ್ನುವ ಕಾರಣಕ್ಕೆ ಜೀವವೇ ತೆಗೆದುಬಿಟ್ಟಿದ್ದಾರೆ. ಆರೋಪ ಸಾಬೀತಾದರೆ ನಟ ದರ್ಶನ್ಗೂ ಕಠಿಣ ಶಿಕ್ಷೆ ಕಾದಿದೆ. ಇದೆಲ್ಲದರ ನಡುವೆ ಇನ್ನು ದರ್ಶನ್ ಸಹವಾಸ ಸಾಕು ಎಂದು ವಿಜಯಲಕ್ಷ್ಮಿ ದೂರಾಗುತ್ತಾರಾ? ಎನ್ನುವ ಚರ್ಚೆ ಶುರುವಾಗಿದೆ.

ನಟ ದರ್ಶನ್ಗೆ ವಿರುದ್ಧ ದಾಖಲಾಗಿರುವು ಪ್ರಕರಣಗಳು, ಬಂದಿರುವ ಆರೋಪಗಳು ಒಂದೆರಡಲ್ಲ. ಈ ಹಿಂದೆ ಕೂಡ ಹಲವು ಪ್ರಕರಣಗಳಲ್ಲಿ ದರ್ಶನ್ ಪೊಲೀಸ್ ವಿಚಾರಣೆ ಎದುರಿಸಿದ್ದಾರೆ. ಇನ್ನು ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 28 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿದಿದ್ದರು. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. 2016ರಲ್ಲಿ ಮತ್ತೊಮ್ಮೆ ದರ್ಶನ್ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದ ಘಟನೆಯೂ ನಡೆದಿತ್ತು.
ಸೆಪ್ಟೆಂಬರ್ 8, 2011ರಲ್ಲಿ ನಟ ದರ್ಶನ್ ಪತ್ನಿಯ ಮೇಲೆ ಗಂಭೀರ ಹಲ್ಲೆ ಮಾಡಿದ್ದರು. ಸಿಗರೇಟ್ನಿಂದ ಸುಟ್ಟು ಗಾಯಗೊಳಿಸಿದ್ದರು. ಅಷ್ಟೇ ಅಲ್ಲ ತಮ್ಮ ಮಗುವನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದರು ಎಂದು ಆರೋಪಿಸಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮರುದಿನ ದೂರು ದಾಖಲಾಗಿತ್ತು. ಪ್ರಕರಣದಲ್ಲಿ ವಿಜಯಲಕ್ಷ್ಮಿ, ಅವರ ಅತ್ತೆ ಸುಮತಿ ಹಾಗೂ ಕಾರಿನ ಚಾಲಕ ಲಕ್ಷ್ಮಣ್ ಪ್ರಮುಖ ಸಾಕ್ಷಿಗಳಾಗಿದ್ದರು. ಬಳಿಕ ಪ್ರಕರಣದಿಂದ ದರ್ಶನ್ ದೋಷಮುಕ್ತರಾಗಿದ್ದರು.
ಪ್ರಾಣಿ ಪಕ್ಷಿಗಳ ಮೇಲಿರುವ ದರ್ಶನ್ ಪ್ರೀತಿ, ಕಾಳಜಿ ಕಟ್ಟಿಕೊಂಡವಳ ಮೇಲೆ ಇರಲಿಲ್ಲ. ಆದರೆ ಅಂಬರೀಶ್ ಮಧ್ಯಪ್ರವೇಶದಿಂದ ವಿಜಯಲಕ್ಷ್ಮಿ ಎಲ್ಲವನ್ನು ಮರೆತು ರಾಜಿ, ಸಂಧಾನಕ್ಕೆ ಒಪ್ಪಿದ್ದರು. ಮಗನ ಭವಿಷ್ಯದ ಬಗ್ಗೆ ಚಿಂತಿಸಿ ಅಂದು ವಿಜಯಲಕ್ಷ್ಮಿ ಉಲ್ಟಾ ಹೊಡೆದಿದ್ದರು. ನೋವು ನುಂಗಿಕೊಂಡು ಪ್ರಕರಣ ಇತ್ಯರ್ಥ ಆಗುವಂತೆ ನೋಡಿಕೊಂಡಿದ್ದರು.
ವಿಚಾರಣೆ ಸಮಯದಲ್ಲಿ "ತಮ್ಮ ಪತಿ ಸಿಗರೇಟ್ ಸೇದುವಾಗ ಆಕಸ್ಮಿಕವಾಗಿ ಅದು ತಮ್ಮ ಮುಖಕ್ಕೆ ತಗುಲಿತು, ಅವರು ಕಾರಿನ ಬಾಗಿಲು ತೆಗೆಯಬೇಕಾದರೆ ಆಕಸ್ಮಿಕವಾಗಿ ಮಗುವಿಗೆ ತಗುಲಿತು" ಎಂದು ಹೇಳಿದ್ದರು. ಮತ್ತಿಬ್ಬರು ಸಾಕ್ಷಿಗಳು ಕೂಡ ತಮ್ಮ ಹೇಳಿಕೆ ಬದಲಿಸಿ ಅಂದು ದರ್ಶನ್ ಸಂಕಷ್ಟದಿಂದ ಹೊರ ಬರುವಂತೆ ಮಾಡಿದ್ದರು. 'ಸಾರಥಿ' ಸಿನಿಮಾ ಸಕ್ಸಸ್ ಬಳಿಕ ಎಲ್ಲವೂ ಮರೆತು ಹೋಯಿತು.

ಬಳಿಕ ಪತ್ನಿ ವಿಜಯಲಕ್ಷ್ಮಿ ಅವರನ್ನು ಬೇರೆ ಅಪಾರ್ಟ್ಮೆಂಟ್ನಲ್ಲಿ ಫ್ಲಾಟ್ ಮಾಡಿ ದರ್ಶನ್ ಇರಿಸಿದ್ದರು. 2016ರಲ್ಲಿ ಒಮ್ಮೆ ಕುಡಿದು ಆ ಅಪಾರ್ಟ್ಮೆಂಟ್ಗೆ ಹೋಗಿ ದರ್ಶನ್ ಗಲಾಟೆ ಮಾಡಿದ್ದರು. ಸೆಕ್ಯುರಿಟಿ ಗಾರ್ಡ್ ಮೇಲೂ ಹಲ್ಲೆ ಮಾಡಿದ್ದರು. ಈ ಸಂಬಂಧ ಖುದ್ದು ವಿಜಯಲಕ್ಷ್ಮಿ ಚೆನ್ನಮ್ಮನ ಕರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದೇ ಸಮಯದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿ ಬೈದಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು.
ದರ್ಶನ್ ಬಹಳ ಅಸಭ್ಯ ಪದಗಳಿಂದ ಪತ್ನಿಯನ್ನು ನಿಂದಿಸಿದ್ದಾರೆ ಎನ್ನಲಾಗಿದ್ದ ಆ ಆಡಿಯೋ ಭಾರೀ ಸದ್ದು ಮಾಡಿತ್ತು. ಆದರೆ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಜಯಲಕ್ಷ್ಮಿ ಅದೆಲ್ಲಾ ಫೇಕ್ ಆಡಿಯೋ, ಆ ರೀತಿ ದರ್ಶನ್ ಫೋನ್ ಮಾಡಿ ಬೈದಿಲ್ಲ. ಯಾರೋ ಮಿಮಿಕ್ರಿ ಮಾಡಿ ಆಡಿಯೋ ತೇಲಿಬಿಟ್ಟಿದ್ದಾರೆ ಎಂದು ಹೇಳಿದ್ದರು. ಆದರೆ ಇತ್ತೀಚಿನ ವರ್ಷಗಳ ದರ್ಶನ್, ವಿಜಯಲಕ್ಷ್ಮಿ ಅನ್ಯೋನ್ಯವಾಗಿ ಕಾಣಿಸಿಕೊಳ್ಳುತ್ತಿದ್ದರು. ಪಾರ್ಟಿಗಳಲ್ಲಿ ಭಾಗಿ ಆಗಿ ಹೆಜ್ಜೆ ಹಾಕುತ್ತಿದ್ದ ವೀಡಿಯೋಗಳು ವೈರಲ್ ಆಗುತ್ತಿತ್ತು.
ಹಳೆಯದ್ದನೆಲ್ಲಾ ಮರೆತು ದರ್ಶನ್, ವಿಜಯಲಕ್ಷ್ಮಿ ಚೆನ್ನಾಗಿದ್ದಾರೆ. ಯಾರ ಕಣ್ಣು ಬೀಳದಿರಲಿ ಎಂದು ಅಭಿಮಾನಿಗಳು ಹರಸುತ್ತಿದ್ದರು. ಇತ್ತೀಚೆಗೆ ಅಭಿಮಾನಿಗಳ ದುಬೈನಲ್ಲಿ ವಿವಾಹ ವಾರ್ಷಿಕೋತ್ಸವ ಸಹ ಆಚರಿಸಿಕೊಂಡಿದ್ದರು. ಇದೆಲ್ಲದರ ನಡುವೆ ಪವಿತ್ರಾ ಗೌಡ ಹೆಸರು ದರ್ಶನ್ ಜೊತೆ ತಳುಕು ಹಾಕಿಕೊಂಡಿತ್ತು. 'ಜಗ್ಗುದಾದ' ಸಿನಿಮಾ ಸಮಯದಲ್ಲಿ ದರ್ಶನ್ಗೆ ನಟಿ ಪವಿತ್ರಾ ಗೌಡ ಹತ್ತಿರವಾಗಿದ್ದಳು. 2017ರಲ್ಲಿ ದರ್ಶನ್ ಜೊತೆಗಿನ ಫೋಟೊವನ್ನು ಆಕೆ ಹಂಚಿಕೊಂಡಿದ್ದಳು.
'ಕುರುಕ್ಷೇತ್ರ' ಸಿನಿಮಾ ಶೂಟಿಂಗ್ ಸೆಟ್ಗೂ ಹೋಗಿ ಬಂದಿದ್ದರು. ಇದೆಲ್ಲದರ ನಡುವೆ ಕಳೆದ ವರ್ಷ ಪವಿತ್ರಾ ಗೌಡ ಸ್ನೇಹಿತೆಯರ ಜೊತೆ ಸೇರಿ ದರ್ಶನ್ ಹುಟ್ಟುಹಬ್ಬ ಆಚರಿಸಿದ್ದರು. ಆ ವೀಡಿಯೋವನ್ನು ನಟಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದರು. ಇದು ವಿಜಯಲಕ್ಷ್ಮಿ ಆಕ್ರೋಶಕ್ಕೆ ಕಾರಣವಾಗಿ ಕೊನೆಗೆ ಆ ಪೋಸ್ಟ್ ವೀಡಿಯೋ ಡಿಲೀಟ್ ಆಗಿತ್ತು. ಕೊನೆಗೆ ಖುದ್ದು ಪವಿತ್ರಾ ಗೌಡ 10 ವರ್ಷಗಳ ತಮ್ಮ ರಿಲೇಷನ್ಶಿಪ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಕೂಡ ವಿಜಯಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿ ತಿರುಗೇಟು ನೀಡಿದ್ದರು.
ಇದೀಗ ಪವಿತ್ರಾ ಗೌಡ ಕಾರಣಕ್ಕೆ ದರ್ಶನ್ ಕೊಲೆ ಪ್ರಕರಣದಲ್ಲಿ ಹೆಚ್ಚು ಕಮ್ಮಿ ಜೈಲು ಸೇರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯಲಕ್ಷ್ಮಿ ಈ ಬಗ್ಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪತಿ ದರ್ಶನ್ ಸೇರಿದಂತೆ ಎಲ್ಲರನ್ನು ಅನ್ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲ ಇನ್ಸ್ಟಾ ಡಿಪಿ ತೆಗೆದು ಹಾಕಿದ್ದಾರೆ. ಇನ್ನು ದರ್ಶನ್ ಸಹವಾಸವೇ ಬೇಡ ಎಂದು ವಿಜಯಲಕ್ಷ್ಮಿ ನಿರ್ಧರಿಸಿಬಿಟ್ರಾ? ಎನ್ನುವ ಪ್ರಶ್ನೆಯೂ ಮೂಡಿದೆ. ಎಷ್ಟೇ ಸಂಯಮದಿಂದ ಕಾದರೂ ಬದಲಾಗದ ದರ್ಶನ್ ನಡೆಯಿಂದ ನೊಂದಿರುವ ವಿಜಯಲಕ್ಷ್ಮಿ ವಿಚ್ಛೇದನ ಪಡೆಯುವ ಗಂಭೀರ ನಿರ್ಧಾರ ಕೈಗೊಳ್ಳುತ್ತಾರಾ? ಎನ್ನುವ ಊಹಾಪೋಹವೂ ಶುರುವಾಗಿದೆ.


Click it and Unblock the Notifications











