ವಿಶೇಷ ದಿನಕ್ಕೆ ಮಹತ್ವದ ಸಂದೇಶ ಕೊಟ್ಟ ನಟ ದರ್ಶನ್
ಇಂದು ಜುಲೈ 29. ಈ ದಿನವನ್ನು ವಿಶ್ವ ಹುಲಿ ದಿವಸವೆಂದು ಆಚರಿಸಲಾಗುತ್ತದೆ. ಪ್ರಾಣಿ ಪ್ರೇಮಿಯಾಗಿರುವ ನಟ ದರ್ಶನ್ಗೆ ಅರಣ್ಯ ಜೀವಿಗಳ ಮೇಲೆ ವಿಶೇಷ ಕಾಳಜಿ. ಹಾಗಾಗಿ ಹುಲಿ ದಿನದ ಪ್ರಯುಕ್ತ ವಿಶೇಷ ಸಂದೇಶವೊಂದನ್ನು ನೀಡಿದ್ದಾರೆ.
ವಿಶ್ವ ಹುಲಿ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ಮನವಿ ಮಾಡಿರುವ ದರ್ಶನ್, ''ಇಂದು ಅರಣ್ಯಗಳಲ್ಲಿ ಒಂದು ಹುಲಿಗೆ 15 ಅಥವಾ 16 ಚದರ ಕಿ.ಮೀ ಜಾಗ ಬೇಕಾಗಿರುತ್ತದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಒಂದು ಹುಲಿಗೆ ಕೇವಲ 5-6 ಚದರ ಕಿ.ಮೀಗಳಷ್ಟೆ ಲಭ್ಯವಿದೆ. ಇದರಿಂದ ಹುಲಿಗಳು ಪರಸ್ಪರ ಹತ್ತರದಲ್ಲಿಯೇ ಜೀವಿಸುತ್ತಿವೆ. ಇದರಿಂದಾಗಿ ಅವು ಪರಸ್ಪರ ಕಾದಾಟದಲ್ಲಿ ತೊಡಗಿ ಸಾವನ್ನಪ್ಪುವ ಪ್ರಕರಣಗಳು ಹೆಚ್ಚಾಗುತ್ತಿವೆ'' ಎಂದು ದರ್ಶನ್ ಆತಂಕ ವ್ಯಕ್ತಪಡಿಸಿದ್ದಾರೆ.
''ಹಾಗಾಗಿ, ಹುಲಿ ಸಂತತಿ ಬೆಳೆಯಬೇಕೆಂದರೆ ನಾಡಿನ ಜನ ಕಾಡಿಗೆ ಹೋಗುವುದನ್ನು ನಿಲ್ಲಿಸಬೇಕು, ಕಾಡನ್ನು ಆಕ್ರಮಿಸಿಕೊಳ್ಳುವುದನ್ನು ನಿಲ್ಲಿಸಿದರಷ್ಟೆ ಹುಲಿಗಳು ಹಾಗೂ ಇತರೆ ವನ್ಯ ಜೀವಿಗಳು ಬದುಕಬಲ್ಲವು. ಮನುಷ್ಯ ಕಾಡಿಗೆ ಹೋದರೆ ವನ್ಯ ಜೀವಿಗಳು ನಾಡಿಗೆ ಬಂದು ಬಿಡುತ್ತವೆ'' ಎಂದಿದ್ದಾರೆ ದರ್ಶನ್.

ಟ್ವಿಟರ್ನಲ್ಲಿಯೂ ಹುಲಿ ದಿನದ ಶುಭಾಶಯ ಕೋರಿರುವ ದರ್ಶನ್, ''ಹುಲಿ ಸಂರಕ್ಷಣೆ ಹಾಗೂ ಹುಲಿಗಳ ನೈಸರ್ಗಿಕ ನೆಲೆವೀಡು ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜುಲೈ 29 ರಂದು ಹುಲಿ ದಿನವನ್ನು ಆಚರಿಸಲಾಗುತ್ತದೆ. ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆ. ಹುಲಿ ಸಂತತಿಯನ್ನು ನಾವೆಲ್ಲರೂ ರಕ್ಷಿಸೋಣ'' ಎಂದಿದ್ದಾರೆ.
ನಟ ದರ್ಶನ್ರ ಪ್ರಾಣಿ ಪ್ರೇಮದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ ಅದು ಬಹುತೇಕರಿಗೆ ಗೊತ್ತಿರುವಂಥಹುದೇ. ಮೈಸೂರಿನ ತಮ್ಮ ಫಾರ್ಮ್ ಹೌಸ್ನಲ್ಲಿ ಸಾಕಷ್ಟು ಪ್ರಾಣಿಗಳನ್ನು ದರ್ಶನ್ ಸಾಕಿದ್ದಾರೆ ಅವುಗಳ ಆರೈಕೆಯನ್ನು ಕಾಳಜಿಯಿಂದ ಮಾಡುತ್ತಾರೆ.
ವನ್ಯ ಮೃಗಗಳ ಬಗ್ಗೆಯೂ ದರ್ಶನ್ಗೆ ಅಷ್ಟೇ ಕಾಳಜಿ, ಪ್ರೇಮವಿದೆ. ಕೆಲವು ತಿಂಗಳ ಹಿಂದಷ್ಟೆ ಮೃಗಾಲಯಗಳಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯುವಂತೆ ದರ್ಶನ್ ಮಾಡಿದ್ದ ಕರೆಗೆ ಓಗೊಟ್ಟು ರಾಜ್ಯದ ಹಲವಾರು ಮಂದಿ ಮುಂದೆ ಬಂದು ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಹಣ ತೆತ್ತು ದತ್ತು ಪಡೆದಿದ್ದರು. ಆ ಮೂಲಕ ಪ್ರಾಣಿಗಳ ಉಳಿವಿಗೆ ಸಹಕರಿಸಿದ್ದರು.
ಇದು ಮಾತ್ರವೇ ಅಲ್ಲದೆ ವನ್ಯ ಜೀವಿ ಫೊಟೋಗ್ರಫಿ ಮಾಡಿರುವ ದರ್ಶನ್ ತಾವು ತೆಗೆದ ಚಿತ್ರಗಳನ್ನು ಆಸಕ್ತರಿಗೆ ಮಾರಿ ಅದರಿಂದ ಬಂದ ಹಣವನ್ನು ವನ್ಯ ಜೀವಿ ಸಂರಕ್ಷಣೆಗೆ ದೇಣಿಗೆ ನೀಡುತ್ತಾರೆ.


Click it and Unblock the Notifications











