ಸಾಮಾಜಿಕ ಸಂದೇಶವಿಲ್ಲದ ಬೃಹತ್ ಬಜೆಟ್ ಚಿತ್ರಗಳು ಹಣ ಗಳಿಸಬಹುದೇ ವಿನಃ ಸಮಾಜವನ್ನು ಬದಲಾಯಿಸಲಾರವು: ಅರವಿಂದ ಮಾಲಗತ್ತಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕಾಟೇರ' ಸಿನಿಮಾ 2ನೇ ವಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲಾ ವರ್ಗದ ಪ್ರೇಕ್ಷಕರನ್ನು ಸಿನಿಮಾ ಸೆಳೆಯುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಂಡಾಡುತ್ತಿದ್ದಾರೆ. ಬಾಕ್ಸಾಫೀಸ್ನಲ್ಲಿ ಈಗಾಗಲೇ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಮುನ್ನುಗ್ಗುತ್ತಿದೆ.
ರಾಜಕೀಯ ಮುಖಂಡರು, ಸಿನಿಮಾ ತಾರೆಯರು, ರೈತ ನಾಯಕರು ಕೂಡ ಸಿನಿಮಾ ನೋಡಿ ಇಷ್ಟಪಟ್ಟಿದ್ದಾರೆ. ಚಿತ್ರದಲ್ಲಿ ತೋರಿಸಿರುವ ಸೂಕ್ಷ್ಮ ವಿಚಾರಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರತಂಡದ ಶ್ರಮಕ್ಕೆ ಬೆನ್ನು ತಟ್ಟಿದ್ದಾರೆ. ಇದೀಗ ಚಿಂತಕ, ಬರಹಗಾರ ಅರವಿಂದ ಮಾಲಗತ್ತಿ 'ಕಾಟೇರ' ಸಿನಿಮಾ ವೀಕ್ಷಿಸಿದ್ದಾರೆ. ಫೇಸ್ಬುಕ್ನಲ್ಲಿ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಕಾಟೇರ' ದೇವಮಾನವನಾದುದು..
ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಹರಿದಾಡುತ್ತಿದ್ದ ಕಾಟೇರ ಸಿನಿಮಾ ಸಂಗತಿ ಓದಿ, ಸಮಯ ಕಾದು, ಧರಣಿ ಹಾಗೂ ಯಕ್ಷನೊಂದಿಗೆ ಹೋಗಿ ನೋಡಿ ಬಂದೆ. 'ಕಾಟೇರ' ಕನ್ನಡದ ಅಪರೂಪದ ಚಲನಚಿತ್ರ. ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಪ್ರಸಂಗಗಳನ್ನು ಇದು ಒಳಗೊಂಡಿದ್ದು , ಸಶಕ್ತವಾದ ಸಾಮಾಜಿಕ ಸಂದೇಶಗಳನ್ನು ಇದು ರವಾನಿಸುತ್ತದೆ ಎನ್ನುವುದೇ ಈ ಸಿನಿಮಾದ ದೊಡ್ಡ ಶಕ್ತಿ.
ಈ ಸಿನಿಮಾ ನೋಡುವಾಗ ನನಗೆ "ಕಾಡು" "ಯಜಮಾನ" ಸಿನಿಮಾ ನೆನಪಾದರೂ, ಅವುಗಳಿಗಿಂತ ಮೀರಿದ ಸಂದೇಶಗಳು ಈ ಸಿನಿಮಾದಲ್ಲಿವೆ. ಜನಪದ ನಂಬಿಕೆ ಮತ್ತು ಸಂಪ್ರದಾಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಅಸ್ಪೃಶ್ಯತೆ ಮತ್ತು ಭೂ ಒಡೆತನ ಈ ಸಿನಿಮಾದ ಕೇಂದ್ರ ಬಿಂದುಗಳಾಗಿದ್ದು ಅದರ ಸುತ್ತಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಚ್ಚಿ ತೋರಿಸಲಾಗಿದೆ. ಇಂಥ ಸಮಸ್ಯೆಗಳನ್ನು ಮುಂದೆ ಮಾಡಿ ಬೃಹತ್ ಬಜೆಟಿನ ಮೂಲಕ ಮುಂದಿಡುವ ಸಾಹಸ ಮಾಡಿದ್ದು ಅಭಿನಂದನೀಯ. ಈ ಪರಿಭಾಷೆಯಿಂದ ಇದು ಕನ್ನಡಕ್ಕೆ ಹೊಸತು. ಕನ್ನಡಿಗರೂ ಇಂಥ ಸಿನಿಮಾಗಳನ್ನೂ ಮಾಡಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ.
ಹಿಂಸೆ ಕಣ್ಣು ಕಟ್ಟುವ ಮುನ್ನ ಅಹಿಂಸೆಯೆಡೆಗೆ ತಿರುಗಿಸುವ ಕೋಣವನ್ನು ಬಲಿಯಿಂದ ಪಾರು ಮಾಡುವುದು, ಮಾನವೀಯತೆ ಎನ್ನುವುದು ಕೇವಲ ಮನುಷ್ಯರಿಗೆ ಮಾತ್ರ ಸಿಮಿತಗೊಳ್ಳದೆ ವಿಸ್ತರಿಸಿಕೊಳ್ಳುವ ರೀತಿ ಕಾಟೇರನನು ದೇವಮಾನವನನ್ನಾಗಿ ಮಾಡುವ ಹೆಜ್ಜೆಯಾಗಿದೆ. ಈ ಪ್ರಸಂಗ ನೋಡುವಾಗ ನನ್ನಲ್ಲಿ ಹೆಚ್ಚು ಕುತೂಹಲವನ್ನು ಸೃಷ್ಟಿ ಮಾಡಿತ್ತು. ಸಮಾಜಮುಖಿ ಚಿತ್ರಗಳು ವಾಸ್ತವವಾದಿತನಕ್ಕೆ ತಿರುಗಿಸಬೇಕಾದ ಸಾಮರ್ಥ್ಯ ಪ್ರೇಕ್ಷಕರಲ್ಲಿ ಮೂಡಬೇಕಿದೆ.
ನಾಯಕ ನಟ ದರ್ಶನ್ ಅವರ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರದ ನಾನು, ಈ ಸಿನಿಮಾ ನೋಡಿದ ಮೇಲೆ ಅವರ ಅಭಿನಯದ ಬಗ್ಗೆ ಮನಸೋಲುವಂತೆ ಮಾಡಿದೆ. ಒಂದು ಕಾಲಕ್ಕೆ ರಾಜಕುಮಾರ್, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಇವರ ಅಭಿಮಾನಿಯಾಗಿದ್ದವ ನಾನು.
ಸಮಾಜ ಬದಲಾಗಬೇಕು ಎನ್ನುವ ಚಿತ್ರರಂಗದ ಒಡೆಯರು ಇಂತಹ ಸಾಹಸಕ್ಕೆ ಹೆಚ್ಚು ಹೆಚ್ಚು ಕೈ ಹಾಕಿದಷ್ಟು , ಕನ್ನಡ ಚಿತ್ರರಂಗ ಅನ್ಯ ಭಾಷಾ ಚಿತ್ರಗಳಂತೆ ಮೆರೆಯಲು ಸಾಧ್ಯ. ಸಶಕ್ತವಾದ ಸಾಮಾಜಿಕ ಸಂದೇಶವಿಲ್ಲದ ಬೃಹತ್ ಬಜೆಟ್ ಚಿತ್ರಗಳು ಹಣ ಗಳಿಸಬಹುದೇ ವಿನ: ಸಮಾಜವನ್ನು ಬದಲಾಯಿಸಲಾರವು" ಎಂದು ಬರೆದುಕೊಂಡಿದ್ದಾರೆ.
'ಕಾಟೇರ' ಸಿನಿಮಾ 2ನೇ ವಾರ ಸ್ಕ್ರೀನ್ಗಳ ಸಂಖ್ಯೆ ಹೆಚ್ಚಿಸಿಕೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. 2ನೇ ವಾರಾಂತ್ಯದಲ್ಲಿ ಭಾರೀ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಈಗಾಗಲೇ ವಿಶೇಷಗಳಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಇನ್ನು ತೆಲುಗು, ತಮಿಳಿನಲ್ಲೂ ಸಿನಿಮಾ ಡಬ್ ಮಾಡಿ ಕೊಡುವಂತೆ ಬೇಡಿಕೆ ಶುರುವಾಗಿದೆ.
ಈ ಹಿಂದೆ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ ಕೂಡ ಇದೇ ರೀತಿಯ ಬೇಡಿಕೆ ಸೃಷ್ಟಿಸಿಕೊಂಡಿತ್ತು. ಮೊದಲಿಗೆ ಕನ್ನಡದಲ್ಲೇ ಸಿನಿಮಾ ಬಿಡುಗಡೆಯಾದರೂ ಬಳಿಕ ಅಕ್ಕಪಕ್ಕದ ರಾಜ್ಯಗಳಿಂದ ಡಬ್ಬಿಂಗ್ಗೆ ಬೇಡಿಕೆ ಆರಂಭವಾಗಿತ್ತು. ಬಳಿಕ ಚಿತ್ರವನ್ ಡಬ್ ಅಲ್ಲೂ ರಿಲೀಸ್ ಮಾಡಲಾಗಿತ್ತು. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿತ್ತು.


Click it and Unblock the Notifications











