'ಮಾಸ್ಟರ್ ಕ್ಲಾಸ್'ಗೆ ಆಯ್ಕೆಯಾದ ಕನ್ನಡಿಗ ಟಿ.ಕೆ ದಯಾನಂದ್ ಕಥೆ
ಕನ್ನಡದ ಖ್ಯಾತ ಬರಹಗಾರರಲ್ಲಿ ಒಬ್ಬರಾದ ಟಿ.ಕೆ ದಯಾನಂದ್ ಅವರು ಬರೆದ ಕಥೆಯೊಂದು ಮಾಸ್ಟರ್ ಕ್ಲಾಸ್ ಸೀಸನ್-4ನಲ್ಲಿ ಆಯ್ಕೆಯಾಗಿದೆ. ಈ ಮೂಲಕ ಕನ್ನಡದ ಕಥೆಯೊಂದು ಬಾಲಿವುಡ್ ತೆರೆಮೇಲೆ ಮೂಡಲಿದೆ ಎಂಬ ಸಂತಸ ಸ್ಯಾಂಡಲ್ವುಡ್ ಪ್ರೇಕ್ಷಕರಿಗೆ ಲಭಿಸಿದೆ.
ಮಾಸ್ಟರ್ ಕ್ಲಾಸ್ ಎಂಬುದು ಭಾರತದ ಅತ್ಯುತ್ತಮ ಕಥೆಗಾರರಿಗೆ ನೀಡಿರುವ ಒಂದು ವೇದಿಕೆ. ಕಥೆಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ವೇದಿಕೆ ಇದಾಗಿದೆ. ಇಲ್ಲಿ ಆಯ್ಕೆಯಾಗಿರುವ ಕಥೆಗಳು ಬಾಲಿವುಡ್ನಲ್ಲಿ ಸಿನಿಮಾಗಳಾಗಿದೆ. ಜೊತೆಗೆ ಕಿರುಚಿತ್ರಗಳನ್ನು ಮಾಡಲಾಗುತ್ತೆ. ಇದೀಗ, ಟಿ ಕೆ ದಯಾನಂದ್ ಅವರ ಕಥೆಯೂ ಸಿನಿಮಾ ರೂಪ ಪಡೆದುಕೊಳ್ಳಲಿದೆ.
ಮಾಸ್ಟರ್ ಕ್ಲಾಸ್ ಈಗಾಗಲೇ ಮೂರು ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಈಗ ನಾಲ್ಕನೇ ಆವೃತ್ತಿ ಕೂಡ ಯಶಸ್ವಿಯಾಗಿ ನಡೆದಿದೆ. ಈ ಬಾರಿ ಕನ್ನಡಿಗ ಟಿ.ಕೆ ದಯಾನಂದ್ ಕಥೆ ಆಯ್ಕೆ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಶವ ಪರೀಕ್ಷೆ ಮಾಡುವ ವೈದ್ಯರಿಗೆ ಸಹಾಯಕ ಇರುತ್ತಾರೆ. ಅಂತಹ ಸಹಾಯಕನ ಸುತ್ತ ನಡೆಯುವ ಕಥೆಯೊಂದನ್ನು ಟಿ ಕೆ ದಯಾನಂದ್ ಪ್ರಸ್ತುತಪಡಿಸಿದ್ದರು. ಈ ಕಥೆ ತೀರ್ಪುಗಾರರು ಮತ್ತು ಆಯೋಜಕರಿಂದ ಮೆಚ್ಚುಗೆ ಪಡೆದು ಆಯ್ಕೆಯಾಗಿದೆ.
ಟಿ ಕೆ ದಯಾನಂದ್ ಕುರಿತು
ಓದು ಮುಗಿಯುತ್ತಿದ್ದಂತೆ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಟಿ.ಕೆ ದಯಾನಂದ್, ನಂತರ ಕನ್ನಡದಲ್ಲಿ ಬೆಂಕಿಪಟ್ಣ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಕಡೆ ಹೆಚ್ಚು ಆಸಕ್ತಿ ಇರುವ ದಯಾನಂದ್ ಈಗಾಗಲೆ ಸಾಕಷ್ಟು ಡಾಕ್ಯುಮೆಂಟರಿಗಳನ್ನು ತಯಾರಿಸಿದ್ದಾರೆ. ಕನ್ನಡದ ಹೆಮ್ಮಯ ಕಥೆಗಾರ ದಯಾನಂದ್ ಕಳೆದ ವರ್ಷ ರಿಲೀಸ್ ಆಗಿ ಸೂಪರ್ ಹಿಟ್ ಆದ ಬೆಲ್ ಬಾಟಂ ಸಿನಿಮಾದ ಕಥೆ ಬರೆದಿದ್ದು ಕೂಡ ಇದೆ ದಯಾನಂದ್ ಎನ್ನುವುದು ವಿಶೇಷ.

ಅಂದ್ಹಾಗೆ, ಮಾಸ್ಟರ್ ಕಾಸ್ ಗೆ ಕಥೆ ಕಳುಹಿಸುವವರು ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಕಥೆಯಾಗಿರಬೇಕು. ಸಾಮಾನ್ಯ ಜೀವನದ ಅಸಾಧಾರಣ ಕಥೆ ಆಗಿರಬೇಕು, ಫಿಕ್ಷನ್ ಗಿಂತ ವಿಭಿನ್ನವಾಗಿ ಇರುವಂತಹ ಕಥೆಗಳನ್ನು ಕಳುಹಿಸಬೇಕು. ಇಂತಹ ನಿಯಮಗಳನ್ನು ಹೊಂದಿರುವ ಕತೆಗಳನ್ನು ಮಾಸ್ಟರ್ ಕ್ಲಾಸ್ ವೆಬ್ ಸೈಟ್ ನಲ್ಲಿ ನೊಂದಾಯಿಸಬಹುದು.


Click it and Unblock the Notifications











