ಹೊಸ ವರ್ಷದಂದು ರಂಜನಿ ರಾಘವನ್ ಹೊಸ ಹೆಜ್ಜೆ, ಇಳಯರಾಜ ಹೃದಯ ಗೆದ್ದ ಕನ್ನಡತಿ..!
ಪುಟ್ಟ ಗೌರಿ ಮದುವೆ ಬಳಿಕ ಕನ್ನಡತಿ ಧಾರಾವಾಹಿ ಮೂಲಕ ಮೋಡಿ ಮಾಡಿದ ನಟಿ ರಂಜನಿ ರಾಘವನ್ ಕಳೆದ ವರ್ಷ ಕಂಪ್ಲೀಟ್ ಆಗಿ ಸೈಲೆಂಟ್ ಆಗಿ ಇದ್ದರು. ರಂಜನಿ ಅವರು ಆಗಾಗ ಸೋಶಿಯಲ್ ಮೀಡಿಯಾವನ್ನು ಇಣುಕಿ ನೋಡುತ್ತಿದ್ದರು. ಕಳೆದ ವರ್ಷ ಮದುವೆಯ ಸುದ್ದಿಯನ್ನು ಹೇಳಿ ಎಲ್ಲರಿಗೂ ಖುಷಿ ಕೊಟ್ಟಿದ್ದರು. ಒಟ್ಟಿಗೆ ವ್ಯಾಸಂಗ ಮಾಡಿದ ಹುಡುಗ ಸಾಗರ್ ಭಾರಧ್ವಾಜ್ ಎಂಬುವರನ್ನು ಪ್ರೀತಿಸುತ್ತಿರುವ ನಟಿ ರಂಜನಿ ರಾಘವನ್ ಅವರು ಅವರನ್ನೇ ಮದುವೆಯಾಗಲು ನಿರ್ಧರಿಸುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು.
ನಟಿ, ಸಾಹಿತಿಯ ಹೊಸ ಹೆಜ್ಜೆ
ಕಿರುತೆರೆಯಲ್ಲಿ ಇಲ್ಲದಿದ್ದರೂ ರಂಜಿನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿಚಾರಗಳನ್ನು ತಿಳಿಸುತ್ತಿರುತ್ತಾರೆ. ಇಡೀ ಜಗತ್ತೇ ಹೊಸ ವರ್ಷವನ್ನು ಆಚರಿಸಿದೆ. ಹೊಸ ವರ್ಷದ ಸಂಭ್ರಮದಲ್ಲಿ ಹಲವರು ಸಿಹಿ ಸುದ್ದಿಗಳನ್ನು ಕೂಡ ಹಂಚಿಕೊಂಡಿದ್ದಾರೆ. ಅದೇ ರೀತಿಯಲ್ಲಿ ರಂಜನಿ ರಾಘವನ್ ಅವರು ಕೂಡ ಹೊಸ ವರ್ಷದ ದಿನ ಹೊಸ ವಿಚಾರವನ್ನು ಹಂಚಿಕೊಂಡಿದ್ದಾರೆ. ನಟಿ ಹಾಗೂ ಸಾಹಿತಿಗಾರ್ತಿ ಆಗಿರುವ ನಟಿ ರಂಜನಿ ಅವರು ಈ ವರ್ಷ ನಿರ್ದೇಶನ ಮಾಡಲು ತಯಾರಿ ನಡೆಸಿದ್ದಾರೆ. ಮೊದಲು ಪಾತ್ರದ ಮೂಲಕ ಕಥೆ ಹೇಳಿ, ನಂತರ ಪುಸ್ತಕದ ಮೂಲಕ ಎಲ್ಲರೂ ಕತೆ ಓದಿಸಿದರು. ಇದೀಗ ಹೊಸ ಕತೆಯನ್ನು ಹೇಳಲು ಬಂದಿದ್ದಾರೆ.

ನಿರ್ದೇಶಕಿಯಾಗಲು ತಯಾರಿ ನಡೆಸಿರುವ ನಟಿ
ಎರಡು ವರ್ಷಗಳ ಹಿಂದೆಯೇ ಕಥೆ ಹುಟ್ಟಿದ್ದು, ಈಗ ಅದನ್ನು ನಿರ್ದೇಶನದ ಮೂಲಕ ಎಲ್ಲರಿಗೂ ಹೇಳಲು ಬಯಸಿದ್ದೇನೆ. ಇದಕ್ಕಾಗಿ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರು ಸಿನಿಮಾ ನಿರ್ಮಾಣ ಮಾಡಲಿದ್ದು, ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಅವರು ಕಥೆಯನ್ನು ಮೆಚ್ಚಿಕೊಂಡಿರುವುದು ನನ್ನ ಭಾಗ್ಯ ಎಂದು ಎಂದಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಂಜನಿ ರಾಘವನ್ ಹೊಸ ವರ್ಷದ ದಿನ ನನ್ನ ಹೊಸ ಕೆಲಸದ ಬಗ್ಗೆ ಹೇಳಿಕೊಳ್ಳಲು ಭಯ ಉತ್ಸಾಹ ಎರಡೂ ಇದೆ. ಈ ಹಿಂದೆ ಬರವಣಿಗೆ ಮತ್ತು ನಟನೆಯ ಮೂಲಕ ಕಥೆಗಳನ್ನ ತಲುಪಿಸೋ ಪ್ರಯತ್ನ ಮಾಡಿದ್ದೇನೆ. ಈಗ ಮೊದಲ ಬಾರಿಗೆ ಕಥೆಯೊಂದನ್ನ ದೊಡ್ಡ ಪರದೆಯ ಮೇಲೆ ನಿಮಗೆ ತೋರಿಸುವತ್ತ ಕೆಲಸ ನಡೆದಿದೆ. ಹೊಸ ಕೆಲಸ ಅನ್ನುವುದಕ್ಕಿಂತ ಸಿನಿಮಾ ನಿರ್ದೇಶಕಿ ಆಗಬೇಕೆಂಬ ಕನಸು ಹೊತ್ತು ಬಹಳ ವರ್ಷಗಳೇ ಸರಿದಿದೆ,ಈ ಕತೆ ಹುಟ್ಟಿ ಎರಡು ವರ್ಷಗಳಾಗಿವೆ. ಒಂದೂವರೆ ವರ್ಷದಿಂದ ಇದರ ಚಿತ್ರಕತೆಯನ್ನ ಬರೆದು ತಿದ್ದಿದ್ದೇನೆ. ಚಿತ್ರರಂಗದ ಹಲವಾರು ಜನರ ಸಹಾಯ ಪ್ರೋತ್ಸಾಹದಿಂದ, ನಮ್ಮ ನಿರ್ಮಾಪಕರಾದ ಡಾ. ಆನಂದ್ ಮತ್ತು ರಾಮಕೃಷ್ಣ ಸುಬ್ರಮಣ್ಯಂ ಅವರ ಸಹಕಾರದಿಂದ ನಮ್ಮ ಸಿನಿಮಾ ಬಗ್ಗೆ ಮಾತನಾಡುವ ಧೈರ್ಯ ಬಂದಿದೆ ಎಂದು ಬರೆದುಕೊಂಡಿದ್ದಾರೆ.
ಪೋಸ್ಟ್ ಹಂಚಿಕೊಂಡ ನಟಿ
ಮುಂದುವರೆದು ಈ ಪಯಣದಲ್ಲಿ ಮುಖ್ಯವಾಗಿ ನನಗೆ ಶಕ್ತಿಯಾಗಿರುವವರು Maestro ಇಸೈಜ್ಞಾನಿ ಇಳಯರಾಜ ಸರ್. 1000 ಹೆಚ್ಚು ಚಿತ್ರಕ್ಕೆ ಸಂಗೀತ ನೀಡಿರುವವರು ನನ್ನ ಕತೆಯನ್ನ ಮೆಚ್ಚಿ ಜೊತೆಗೆ ನಿಂತಿದ್ದಾರೆ. ಸೆಪ್ಟೆಂಬರ್ ಹದಿಮೂರು ೨೦೨೩ ರಂದು ಅವರನ್ನ ಭೇಟಿ ಆಗಿ ಕತೆ ಹೇಳುವ ಅದೃಷ್ಟ ಸಿಕ್ಕಾಗ "ಚೆನ್ನೈಗೆ ಹೋಗಿ ಅವರನ್ನ ಭೇಟಿ ಆಗಿ, ಕಾಲಿಗೆ ಬಿದ್ದು ಒಂದು ಫ಼ೋಟೋ ತೆಗೆಸಿಕೊಂಡು ಬಂದ್ರೆ ಅದೇ ದೊಡ್ಡದು" ಅಂತಷ್ಟೇ ಅಂದುಕೊಂಡಿದ್ದು! "ಕನ್ನಡದಲ್ಲಿ ಕಥೆ ಹೇಳಮ್ಮ, ಕನ್ನಡ ನನಗೆ ಚೆನ್ನಾಗಿ ಬರುತ್ತೆ ಕೊಲ್ಲೂರು ಮೂಕಾಂಬಿಕೆ ನನ್ನವ್ವ" ಎಂದು ಮಾತು ಶುರು ಮಾಡಿದವರು ಮೂರೇ ದಿನದಲ್ಲಿ ಕಥೆ ನನ್ನ ಮನಸ್ಸಿಗೆ ಬಹಳ ಹತ್ತಿರವಾಗಿದೆ ಎಂದು ತಿಳಿಸಿ ನಮ್ಮ ಸಿನಿಮಾದ ಭಾಗವಾಗಿ, ಇವತ್ತಿಗೆ ಇಳಯರಾಜ ಸರ್ ನಮಗೆ "ಒನ್ ಕಾಲ್ ಅವೇ" ಅನ್ನೋ ಜಂಭ ಹುಟ್ಟಿಸಿದ್ದಾರೆ ಎಂದಿದ್ದಾರೆ
ರಂಜನಿ ಅವರ ಹೊಸ ಪಯಣಕ್ಕೆ ಶುಭವಾಗಲಿ
ಹೋದ ವರ್ಷ 2024 ಜನವರಿ ಒಂದು ನನ್ನ ಹೊಸ ಕನಸಿನ ಬಗ್ಗೆ ಪೋಸ್ಟ್ ಹಾಕಿದ್ದರೂ ಅದೇನೆಂದು ಹೇಳಲು 2025 ಬರಬೇಕಾಯಿತು! ಸಿನಿಮಾ ಮಾಡುವಾಗ ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ ಅನ್ನುವುದು ಇಲ್ಲಿಯ ತನಕ ಕಲಿತ ಪಾಠವಾದರೂ ಒಳ್ಳೆಯ ಸಿನಿಮಾ ಆಗಲು ಅದಕ್ಕೇನು ಬೇಕೋ ಅದೇ ಪಡೆದುಕೊಳ್ಳುತ್ತದೆ ಅನ್ನೋ ನಂಬಿಕೆಯೂ ಅಚಲವಾಗಿದೆ. ಕನ್ನಡಿಗರ ಅಶೀರ್ವಾದ, ಸಹಕಾರವನ್ನ ಬೇಡುತ್ತಾ ಮುನ್ನಡೆಯುತ್ತಿದ್ದೇನೆ. ನಿಮ್ಮೆಲ್ಲರಿಗೂ ರಾಶಿ ಪ್ರೀತಿ ಎಂದು ರಂಜನಿ ಅವರು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











