ಆ ಕಥೆ ನಂದು, ಶಿವರಾಜ್ ಕುಮಾರ್ ಅವ್ರೇ, ದಯವಿಟ್ಟು ನನಗೆ ನ್ಯಾಯ ಕೊಡಿಸಿ- ಲೇಖಕಿ ವೈ. ಕೆ ಸಂಧ್ಯಾಶರ್ಮ
ಚಿತ್ರರಂಗದಲ್ಲಿ ಕೃತಿಚೌರ್ಯದ ಆರೋಪ ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಕಥೆ ಕದ್ದು ಸಿನಿಮಾ ಮಾಡುವವರ ಸಂಖ್ಯೆ ದೊಡ್ಡದಾಗಿಯೇ ಇದೆ. ಕೆಲವರು ರಾಯಲ್ಟಿ ಕೊಟ್ಟು ಕಥೆ, ಕಾದಂಬರಿಗಳ ರೈಟ್ಸ್ ಪಡೆದು ಸಿನಿಮಾ ಮಾಡ್ತಾರೆ. ಇನ್ನು ಕೆಲವರು ಕಥೆ, ಕಾದಂಬರಿ ಓದಿ ಅದರಿಂದ ಪ್ರೇರಣೆಗೊಂಡು ನಮ್ಮದೇ ಕಥೆ ಎನ್ನುವಂತೆ ಬದಲಾಯಿಸಿ ಹಣ ಮಾಡುತ್ತಾರೆ.
ಶಿವರಾಜ್ಕುಮಾರ್ ನಟನೆಯ 'ಸತ್ಯ ಇನ್ ಲವ್' ಸಿನಿಮಾ ಕಥೆ ನನ್ನದು ಎಂದು ಕಾದಂಬರಿಕಾರ್ತಿ, ಪತ್ರಕರ್ತೆ, ನೃತ್ಯ ವಿಮರ್ಶಕಿ ವೈ. ಕೆ ಸಂಧ್ಯಾ ಶರ್ಮ ದನಿ ಎತ್ತಿದ್ದಾರೆ. 18 ವರ್ಷಗಳ ಹಿಂದೆ ಈ ಸಿನಿಮಾ ಬಂದಿತ್ತು. ರಾಘವ ಲೋಕಿ ತಮ್ಮದೇ ಕಥೆ, ಚಿತ್ರಕಥೆ ಎಂದು ಸಿನಿಮಾ ಮಾಡಿದ್ದರು. ಶಿವರಾಜ್ ಕುಮಾರ್, ಜೆನಿಲಿಯಾ ನಾಯಕ-ನಾಯಕಿಯಾಗಿ ನಟಿಸಿದ್ದರು. ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಆದರೆ ಚಿತ್ರದ ಮೊದಲಾರ್ಧ ಕಥೆ ನಾನು ಬರೆದ ಕಾದಂಬರಿಯಿಂದ ಕದ್ದಿದ್ದಾರೆ ಎಂದು ವೈ. ಕೆ ಸಂಧ್ಯಾ ಶರ್ಮ ಬೇಸರ ವ್ಯಕ್ತಪಡಿಸಿದ್ದಾರೆ.

ವೈ. ಕೆ ಸಂಧ್ಯಾ ಶರ್ಮ ಸಾಕಷ್ಟು ಕಥೆ, ಕಾದಂಬರಿಗಳನ್ನು ಬರೆದಿದ್ದಾರೆ. Raghuram ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ತಮ್ಮ ಕಥೆ, ಕಾದಂಬರಿಗಳ ಬಗ್ಗೆ ಮಾತನಾಡುತ್ತಾ 'ಸತ್ಯ ಇನ್ ಲವ್' ಸಿನಿಮಾ ವಿಚಾರ ಪ್ರಸ್ತಾಪಿಸಿದ್ದಾರೆ. ನನಗೆ ಅನ್ಯಾಯವಾಗಿದೆ ಎಂದಿದ್ದಾರೆ. ನನ್ನ ಕಾದಂಬರಿ ಕದ್ದು ಸಿನಿಮಾ ಮಾಡಿದ್ದಾರೆ. ಶಿವರಾಜ್ ಕುಮಾರ್ ಅವ್ರೇ, ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.
ಸ್ಟಿಲ್ ಛಾಯಾಗ್ರಾಹಕ ಭದ್ರಿನಾಥ್ ಎಂಬುವವರು ಬಂದು 500 ರೂಪಾಯಿ ಕೊಟ್ಟು ಅಗ್ರಿಮೆಂಟ್ ಮಾಡಿಕೊಂಡಿದ್ದರು. ಬಳಿಕ ಅವರು ನನ್ನ ಕಾದಂಬರಿಯನ್ನು ಮಾರಿಕೊಂಡಿದ್ದಾರೆ. ನಿರ್ದೇಶಕ ರಾಘವ ಲೋಕಿ ತನ್ನದೇ ಕಥೆ ಎನ್ನುವಂತೆ ಸಿನಿಮಾ ಮಾಡಿದ್ದಾರೆ ಎಂದು ವೈ. ಕೆ ಸಂಧ್ಯಾ ಶರ್ಮ ಆರೋಪಿಸಿದ್ದಾರೆ. ಮಯೂರ ಮಾಸಪತ್ರಿಕೆಗಾಗಿ ಒಂದು ಕಾದಂಬರಿ ಬರೆದಿದ್ದೆ. ಬಳಿಕ ಅದನ್ನೇ 'ಕನಸಿಗೊಂದು ಕನ್ನಡಿ' ಎನ್ನುವ ಕಾದಂಬರಿಯಾಗಿ ಮುದ್ರಣವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
'ಸತ್ಯ ಇನ್ ಲವ್' ಚಿತ್ರದ ಫಸ್ಟ್ ಹಾಫ್ ಮಾತ್ರ ನನ್ನ ಕಾದಂಬರಿ ಆಧರಿಸಿದ್ದು. ಸೆಕೆಂಡ್ ಹಾಫ್ ಅಲ್ಲ ಏನೇನೋ ಬದಲಿಸಿಕೊಂಡಿದ್ದಾರೆ. ಅದು ನನಗೆ ಬೇಡ. ಆದರೆ ಮಂತ್ರಾಯಕ್ಕೆ ಹೋಗುವ ಯುವಕ ಅಲ್ಲಿ ಯುವತಿಯನ್ನು ನೋಡಿ ಇಷ್ಟಪಡುತ್ತಾನೆ. ಅಷ್ಟರಲ್ಲೇ ಆಕೆ ಬಸ್ ಏರಿ ಊರಿಗೆ ಹೋಗಿಬಿಡ್ತಾಳೆ. ಅವಳನ್ನು ಆತ ಹುಡುಕುವ ಕಥೆ. ಇದು ನಿಜಜೀವನದ ಘಟನೆ. ನಮ್ಮ ಅಕ್ಕನ ಮಗನ ಜೀವನದಲ್ಲಿ ಆಗಿದ್ದು. ಅದನ್ನೇ ಕಾದಂಬರಿಯಾಗಿ ನಾನು ಬರೆದಿದ್ದೆ. ಆ ಯುವತಿಯನ್ನು ಹುಡುಕಲು ನಮ್ಮ ಅಕ್ಕನ ಮಗನ ಜೊತೆ ನಾನು ಹೋಗುತ್ತಿದ್ದೆ. ಈ ಎಲ್ಲಾ ವಿಚಾರಗಳನ್ನು ಸೇರಿಸಿ ಕಾದಂಬರಿ ಬರೆದಿದ್ದೆ ಎಂದು ಕೆ ಸಂಧ್ಯಾ ಶರ್ಮ ವಿವರಿಸಿದ್ದಾರೆ.
'ಕನಸಿಗೊಂದು ಕನ್ನಡಿ' ಕಾದಂಬರಿಯಲ್ಲಿ ಕ್ಲೈಮ್ಯಾಕ್ಸ್ ಬೇರೆ ರೀತಿ ಬದಲಿಸಿದ್ದೆ. ಬಳಿಕ ಒಂದೊಳ್ಳೆ ಕತೆ ಇದೆ ನೋಡಿ ಎಂದು ಚಿತ್ರರಂಗದಲ್ಲಿ ಭದ್ರಿನಾಥ್ ಈ ಕಥೆಯನ್ನು ಸಾಕಷ್ಟು ಜನರಿಗೆ ಹೇಳಿದ್ದಾರೆ. ಕೊನೆಗೆ ಮಾರಿಕೊಂಡಿದ್ದಾರೆ. ಅವ್ರು ಶಿವಣ್ಣನಿಗೆ ಹೇಳಿ ಒಪ್ಪಿಸಿದ್ದರ ಬಗ್ಗೆ ನನಗೆ ಯಾರೋ ಹೇಳಿದ್ರು. ಇತ್ತೀಚೆಗೆ ಆ ವಿಚಾರ ಗೊತ್ತಾಯಿತು. ಮೂಲ ವಸ್ತು ನಂದು. ಕಳ್ಳರು, ಅದನ್ನು ಬದಲಾಯಿಸಿಕೊಂಡಿದ್ದಾರೆ. ನಾನು ಸಿನಿಮಾ ನೋಡಿದಾಗ ಅಚ್ಚರಿಯಾಗಿತ್ತು. ಕೆಸಿಎನ್ ಗೌಡ್ರು ಹಾಗೂ ಪತ್ರಕರ್ತ ವಿಜಯ ಸಾರಥಿ ಬಳಿ ಈ ವಿಚಾರ ಹೇಳಿಕೊಂಡ್ರು ಪ್ರಯೋಜನವಾಗಲಿಲ್ಲ ಎಂದು ವೈ ಕೆ ಸಂಧ್ಯಾ ಶರ್ಮ ಎಂದಿದ್ದಾರೆ.
ಕೊನೆಗೆ ನಿರ್ದೇಶಕ ರಾಘವ ಲೋಕಿಗೆ ಫೋನ್ ಮಾಡಿದಾಗ ಆತ ನಡುಗಿ ಹೋಗಿಬಿಟ್ಟ. ಸಂಧ್ಯಾ ಅವ್ರೇ ನಾವು ಒಂದೇ ದೋಣಿಯ ಪಯಣಿಗರು. ನಿಮ್ಮ ಮನಸ್ಸಿನಲ್ಲಿ ಬಂದಿದ್ದೇ ನನ್ನ ಮನಸ್ಸಿನಲ್ಲಿ ಬಂದುಬಿಟ್ಟಿದೆ, ಇಬ್ಬರೂ ಒಂದೇ ತಡ ಯೋಚಿಸಿಬಿಟ್ಟಿದ್ದೀನಿ ಅಂದ್ರು. ಕೇಸ್ ಹಾಕ್ತೀನಿ ಅಂದಾಗ ಆ ರೀತಿ ಮಾಡ್ಬೇಡಿ ಅಂದ್ರು. ಬಳಿಕ ಫೋನ್ ಸ್ವಿಚ್ ಆಫ್ ಆಯ್ತು. ಮೊದಲಿಗೆ ಕಾಲು ಹಿಡಿಯುವಂತೆ ಮಾತನಾಡ್ದ. ಬಳಿಕ ತಪ್ಪಿಸಿಕೊಂಡುಬಿಟ್ಟ. ಮಂತ್ರಾಲಯ ಹೇಗೆ ಇಬ್ಬರಿಗೂ ಹೊಳೆಯಲು ಸಾಧ್ಯ. ನಮ್ಮ ಅಕ್ಕನ ಮಗನ ಕಥೆ, ನಿಜವಾಗಿ ಅಲ್ಲೇ ನಡೆದಿದ್ದು. ನನ್ನ ಕಾದಂಬರಿ ಓದಿ ಸಿನಿಮಾ ಮಾಡಿದ್ದಾರೆ. ಒಳ್ಳೆ ದುಡ್ಡ ತಗೊಂಡು ಮಾರಿಕೊಂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೊನೆ ಪಕ್ಷ ಕಥೆ ನನ್ನದು ಎಂದು ಹಾಕಬೇಕಿತ್ತು. ನಾನು ಶಿವಣ್ಣನನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಅವ್ರು ದೊಡ್ಡವರು.. ದುಡ್ಡು ಮುಖ್ಯವಲ್ಲ, ಕೊನೆಪಕ್ಷ ಹೆಸರು ಕೊಟ್ಟಿದ್ದರೆ ಚೆನ್ನಾಗಿತ್ತು. ಇದು ಕೃತಿಚೌರ್ಯ. ಸಿನಿಮಾರಂಗದಲ್ಲಿ ಇದು ಸಹಜ.. ಆದರೂ ಕಾದಂಬರಿ ಕದಿಯುವುದು ತಮಾಷೆಯಲ್ಲ. ಅಣ್ಣಾವ್ರು ಸಾಕಷ್ಟು ಕಾದಂಬರಿ ಆಧರಿಸಿ ಸಿನಿಮಾ ಮಾಡಿದ್ದಾರೆ. ಎಲ್ಲದ್ದಕ್ಕೂ ಕ್ರೆಡಿಟ್ ಕೊಟ್ಟಿದ್ದಾರೆ. 'ಸತ್ಯ ಇನ್ ಲವ್' ಚಿತ್ರದಲ್ಲಿ ನನ್ನ ಹೆಸರು ಹಾಕಬೇಕು ಎಂದು ಆಗ್ರಹಿಸಿದ್ದಾರೆ.


Click it and Unblock the Notifications