ಯಾದಗಿರಿಯಲ್ಲಿ ನಿನ್ನೆ ಆಗಿದ್ದೇನು.? ನಟ ಯಶ್ ಬಾಯಿಂದ ಬಂದ ತಪ್ಪು-ಒಪ್ಪು
ರೈತರ ಜೊತೆ ಸಂವಾದ ನಡೆಸಲು ತಡವಾಗಿ ಬಂದ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಯಾದಗಿರಿ ಅಭಿಮಾನಿಗಳು ಆಕ್ರೋಶಗೊಂಡ ಘಟನೆ ನಿನ್ನೆ (ಫೆಬ್ರವರಿ 27) ನಡೆದಿದೆ.
ಯಾದಗಿರಿಯ ಸುರಪುರಕ್ಕೆ ಮಧ್ಯಾಹ್ನ 2 ಗಂಟೆಗೆ ಯಶ್ ಆಗಮಿಸಬೇಕಿತ್ತು. ಆದ್ರೆ, ಯಶ್ ಎಂಟ್ರಿಕೊಟ್ಟಿದ್ದು ರಾತ್ರಿ 9 ಗಂಟೆಗೆ.! ಹೀಗಾಗಿ ಕಾದು-ಕಾದು ಸುಸ್ತಾದ ಅಭಿಮಾನಿಗಳು ರೊಚ್ಚಿಗೆದ್ದು ಯಶ್ ಕಾರನ್ನ ಜಖಂಗೊಳಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.[ಯಾದಗಿರಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ಯಶ್: ಕಾರಿನ ಗಾಜು ಪುಡಿ ಪುಡಿ]
ಆದ್ರೆ, ಈ ಘಟನೆ ಬಗ್ಗೆ ನಟ ಯಶ್ ಹೇಳುವುದೇ ಬೇರೆ. ''ವರದಿ ಆಗಿರುವಂತೆ ಏನೂ ನಡೆದಿಲ್ಲ'' ಅಂತ ನಟ ಯಶ್ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಲೇಟ್ ಆಗಿ ಹೋಗಿದ್ದು ನಿಜ
''ಲೇಟ್ ಆಗಿ ಹೋಗಿದ್ದು ಖಂಡಿತ ನಿಜ. ಯಾಕಂದ್ರೆ, ಪ್ರತಿ ಊರಿನಲ್ಲೂ ನಾನು ನಿರೀಕ್ಷೆ ಮಾಡದೇ ಇರುವಷ್ಟು ಜನ ಇದ್ದರು. ಎಲ್ಲರೂ ಪ್ರೀತಿಯಿಂದ ಹಾರ ಹಾಕಿ, ಪಟಾಕಿ ಸಿಡಿಸಿ, ಸ್ವಾಗತ ಮಾಡಿದರು. ಹೀಗಾಗಿ 20-30 ಕಿ.ಮೀ ದೂರ ಹೋಗಲು ಎರಡು-ಮೂರು ಗಂಟೆ ಬೇಕಾಗುತ್ತಿತ್ತು. ಇದೇ ಕಾರಣಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚು ತಡ ಆಯ್ತು ನಿನ್ನೆ ರಾತ್ರಿ'' ಎನ್ನುತ್ತಾರೆ ನಟ ಯಶ್.

ಕಾರಿನ ಗಾಜು ಪೀಸ್ ಪೀಸ್ ಆಗಿದ್ದು ಯಾಕೆ.?
''ಜನ ಆಕ್ರೋಶಗೊಂಡು ಕಾರಿನ ಗಾಜು ಪೀಸ್ ಪೀಸ್ ಮಾಡಿದ್ದಾರೆ ಎನ್ನುವುದು ಸುಳ್ಳು ಸುದ್ದಿ. ನನ್ನ ಕಾರಿಗೆ ಓಪನ್ ಟಾಪ್ ಇದೆ. ನನಗೆ ಶೇಕ್ ಹ್ಯಾಂಡ್ ಕೊಡಲು ಗಾಡಿ ಮೇಲೆ ಹತ್ತಿ, ಗಾಜು ತಟ್ಟುತ್ತಿದ್ದಕ್ಕೆ ಗ್ಲಾಸ್ ಕ್ರ್ಯಾಕ್ ಆಗಿದೆ ಅಷ್ಟೇ'' - ನಟ ಯಶ್

ಕಾರಿನ ಗ್ಲಾಸ್ ಒಡೆದದ್ದು ಯಾವಾಗ.?
''ಸುರಪುರ ಹೋಗುವ ಮುನ್ನವೇ ಕಾರಿನ ಗ್ಲಾಸ್ ಒಡೆದಿತ್ತು. ತುಂಬ ಜನ ಇದ್ದಿದ್ರಿಂದ ಕಂಟ್ರೋಲ್ ಮಾಡಲು ಆಗಲಿಲ್ಲ'' - ನಟ ಯಶ್

ಇನ್ನೊಂದ್ಚೂರು ಇದ್ದಿದ್ರೆ....
''ಸ್ವಲ್ಪ ಇದಿದ್ರೆ, ಸ್ಟೇಜ್ ಕೂಡ ಒಡೆದು ಹೋಗುತ್ತಿತ್ತು. ಜನರನ್ನ ನಿಯಂತ್ರಣ ಮಾಡಲು ಲಘು ಲಾಠಿ ಪ್ರಹಾರ ಅಯ್ತು ಅಷ್ಟೆ. ಲಾಠಿ ಚಾರ್ಜ್ ಬೇಡ ಅಂತ ನಾನೇ ಪೊಲೀಸರ ಬಳಿ ಮನವಿ ಮಾಡಿದ್ದೆ'' - ನಟ ಯಶ್

ಅಭಿಮಾನಿಗಳ ಅಭಿಮಾನಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು
''ರಾಯಚೂರಿನಲ್ಲಿ ಮಧ್ಯಾಹ್ನ ಇದ್ದದ್ದು ಪ್ರೋಗ್ರಾಂ. ಆದ್ರೆ, ಅಲ್ಲಿಗೆ ಹೋಗುವ ಹೊತ್ತಿಗೆ ರಾತ್ರಿ ಆಗಿತ್ತು. ಆದರೆ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಜನ ಸ್ವಲ್ಪ ಕೂಡ ಹೈರಾಣ ಆಗದೇ ಕಾಯುತ್ತಿದ್ದರು. ಅವರ ಅಭಿಮಾನ ಹಾಗೂ ಪ್ರೀತಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು'' - ನಟ ಯಶ್.

ಅಭಿಮಾನಿಗಳು ಆ ತರಹ ಇಲ್ಲ
''ನಾವ್ಯಾರು ಮಧ್ಯಾಹ್ನ ಊಟ ಕೂಡ ಮಾಡಲು ಆಗಲಿಲ್ಲ. ದಾರಿಯಲ್ಲಿ ಜ್ಯೂಸ್ ಕುಡಿದ್ವಿ ಅಷ್ಟೇ. ಇಲಿ ಹೋಯ್ತು ಅಂದ್ರೆ ಹುಲಿ ಹೋಯ್ತು ಅಂತಾರಲ್ಲ. ಹಾಗೆ ಇದು ಆಗಿದೆ ಅಷ್ಟೇ. ಜನ ಯಾಕೆ ಕಲ್ಲು ಹೊಡೆಯುತ್ತಾರೆ.? ಅದೆಲ್ಲ ಸುಳ್ಳು. ಅಭಿಮಾನಿಗಳು ಆ ತರಹ ಮಾಡಲ್ಲ'' - ನಟ ಯಶ್.


Click it and Unblock the Notifications











