'ಯಜಮಾನ'ನ ಪ್ಲಸ್ ಗಳೇನು? ಮೈನಸ್ ಗಳೇನು?
Recommended Video

'ಯಜಮಾನ' ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಡಿ ಬಾಸ್ ಅಭಿಮಾನಿಗಳು ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ದಾರೆ. ಎಲ್ಲ ಸೆಂಟರ್ ಗಳಲ್ಲಿಯೂ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ.
ಒಂದುವರೆ ವರ್ಷಗಳ ನಂತರ ದರ್ಶನ್ ತಮ್ಮ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ. ಇಂದು ಚಿತ್ರಮಂದಿರಗಳಿಗೆ 'ಯಜಮಾನ' ಬಂದಿದ್ದಾನೆ. ಸಿನಿಮಾದಲ್ಲಿ ಕೃಷ್ಣ ಪಾತ್ರವನ್ನು ಮಾಡಿರುವ ದರ್ಶನ್ ಎಲ್ಲರಿಗೆ ಇಷ್ಟ ಆಗಿದ್ದಾರೆ.
ಪ್ರತಿ ಸಿನಿಮಾದಲ್ಲಿ ಇರುವ ಹಾಗೆಯೇ 'ಯಜಮಾನ'ದಲ್ಲಿಯೂ ಕೆಲವು ಪ್ಲಸ್ ಪಾಯಿಂಟ್ ಗಳು ಇದ್ದರೆ, ಕೆಲವು ಮೈನಸ್ ಪಾಯಿಂಟ್ ಗಳು ಇವೆ. ಕಥೆ, ದರ್ಶನ್ ನಟನೆ, ಹಾಡುಗಳು, ಸಂಭಾಷಣೆ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್ ಗಳಾಗಿವೆ.
ಅಂದಹಾಗೆ, 'ಯಜಮಾನ'ನಿಗೆ ವರ ಹಾಗೂ ಶಾಪವಾದ ಕೆಲ ಅಂಶಗಳ ಪಟ್ಟಿ ಮುಂದಿದೆ ಓದಿ...

ಪ್ಲಸ್ 1 - ದರ್ಶನ್ ನಟನೆ
ಸಿನಿಮಾದ ನಾಯಕ ದರ್ಶನ್ ನಟನೆ ಸಿನಿಮಾಗೆ ಶಕ್ತಿ ತುಂಬಿದೆ. ಇಡೀ ಸಿನಿಮಾದಲ್ಲಿ ಸರಳ ಕಾಸ್ಟೂಮ್ ನಲ್ಲಿ ದರ್ಶನ ನೀಡುವ ಡಿ ಬಾಸ್ ತೆರೆ ಮೇಲೆ ತುಂಬ ಚೆನ್ನಾಗಿ ಕಾಣುತ್ತಾರೆ. ಡ್ಯಾನ್ಸ್, ಫೈಟ್ ನಿಂದ ಹಿಡಿದು ಯಾವ ದೃಶ್ಯದಲ್ಲಿಯೂ ಅವರ ನಟನೆ ಬೋರ್ ಸರಿ ಎನಿಸದೆ ಇರುವುದಿಲ್ಲ.

ಪ್ಲಸ್ 2 - ಸಾಮಾನ್ಯ ಪ್ರೇಕ್ಷಕರಿಗೆ ಹತ್ತಿರವಾಗುವ ಕಥೆ
ಸಿನಿಮಾದ ಕಥೆ ಸಾಮಾನ್ಯ ಪ್ರೇಕ್ಷಕರಿಗೆ ಹತ್ತಿರ ಆಗುವಂತಿದೆ. ಅದಲ್ಲಿಯೂ ರೈತರಿಗೆ, ಮಾಧ್ಯಮ ವರ್ಗದ ಪ್ರೇಕ್ಷಕರಿಂದ ಸಿನಿಮಾ ಒಳ್ಳೆಯ ಮಾತುಗಳು ಸಿಗಲಿದೆ. ಒಬ್ಬ ಸ್ಟಾರ್ ನಟನಿಗೆ ಇಂತಹ ಕಥೆಯನ್ನು ಹೊಂದಿಕೆ ಆಗುವಂತೆ ನಿರೂಪಣೆ ಮಾಡಿರುವ ಶೈಲಿ ಚೆನ್ನಾಗಿದೆ. ಮಾಸ್ ಹಾಗೂ ಕ್ಲಾಸ್ ಎರಡರ ಮಿಶ್ರಣ ಮೆಚ್ಚುವಂತದ್ದು.

ಪ್ಲಸ್ 3 - ಪಾತ್ರಗಳ ಆಯ್ಕೆ
ಚಿತ್ರದ ಪ್ರತಿ ಪಾತ್ರಗಳು ಕೂಡ ಸರಿಯಾದ ಆಯ್ಕೆ ಅನಿಸುತ್ತದೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯಾ ಹೋಪ್ ನಟನೆಯಲ್ಲಿ ಹಿಂದೆ ಬಿದ್ದಿಲ್ಲ. ಖಳನಟ ಠಾಕೂರ್ ಅನೂಪ್ ಸಿಂಗ್ ಖದರ್ ಜೋರಾಗಿದೆ. ಉಳಿದ ಪಾತ್ರಗಳಾದ ಧನಂಜಯ್, ರವಿಶಂಕರ್, ದೇವರಾಜ್, ಸಾಧುಕೋಕಿಲ, ದತ್ತಣ್ಣ, ಶಿವು ಕೆ ಆರ್ ಪೇಟೆ, ಸಂಜು ಬಸಯ್ಯ ಹೀಗೆ ಎಲ್ಲ ಪಾತ್ರಗಳು ಅಚ್ಚುಕಟ್ಟಾಗಿದೆ.

ಪ್ಲಸ್ 4 - ಸಂಭಾಷಣೆ, ಸಂಗೀತ
'ಬಹದ್ದೂರ್' ಚೇತನ್ ಕುಮಾರ್ ಬರೆದಿರುವ ಸಂಭಾಷಣೆ ಸಿನಿಮಾದ ಹೈಲೈಟ್ ಆಗಿದೆ. ದರ್ಶನ್ ಅವರ ಅನೇಕ ಸಂಭಾಷಣೆಗಳು ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಪಡೆಯುತ್ತವೆ. ಹರಿಕೃಷ್ಣ ಸಂಗೀತದ ಹಾಡುಗಳ ಪಲಿತಾಂಶ ಈಗಾಗಲೇ ಸಿಕ್ಕಿದೆ. ಮುಖ್ಯವಾಗಿ ಹಿನ್ನಲೆ ಸಂಗೀತ ಕೂಡ ಸೋಗಸಾಗಿದೆ.

ಮೈನಸ್ 1 - ಸಿನಿಮಾದ ಅವಧಿ ಕಡಿಮೆ ಮಾಡಬೇಕಿತ್ತು
'ಯಜಮಾನ' ಚಿತ್ರವನ್ನು ನೋಡಿ ಬಂದ ಬಹುತೇಕರಿಗೆ ಸಿನಿಮಾದ ಅವಧಿ ಕಡಿಮೆ ಮಾಡಬಹುದಿತ್ತು ಅನಿಸುತ್ತದೆ. ಸಿನಿಮಾ ಚೆನ್ನಾಗಿ ಇದ್ದರೂ ಅವಧಿ ಹೆಚ್ಚು ಇರುವ ಕಾರಣ ಫಸ್ಟ್ ಹಾಫ್ ಹಾಗೂ ಸೆಕೆಂಡ್ ಹಾಫ್ ಎರಡೂ ದೊಡ್ಡದಾಗಿದೆ. ಅನಗತ್ಯದ ದೃಶ್ಯ ಹಾಗೂ ಹಾಡುಗಳಿಗೆ ನಿರ್ದೇಶಕರು ಕತ್ತರಿ ಹಾಕಬಹುದಿತ್ತು.

ಮೈನಸ್ 2 - ಅನಗತ್ಯ ಕಾಮಿಡಿ, ಆಕ್ಷನ್ ದೃಶ್ಯಗಳು
ಕಮರ್ಷಿಯಲ್ ಸಿನಿಮಾದ ಎಂದ ಮೇಲೆ ಕಾಮಿಡಿ ಹಾಗೂ ಆಕ್ಷನ್ ದೃಶ್ಯಗಳು ಇರಲೇ ಬೇಕು. ಆದರೆ, 'ಯಜಮಾನ' ಸಿನಿಮಾದಲ್ಲಿ ಅವೆರಡು ಕೊಂಚ ಜಾಸ್ತಿ ಆಯ್ತು ಅನಿಸುತ್ತದೆ. ಬೇಡದೆ ಇರುವ ಕಾಮಿಡಿ ದೃಶ್ಯವನ್ನು ತೆಗೆದು ಹಾಕಬಹುದಿತ್ತು. ಸಾಹಸ ದೃಶ್ಯಗಳಲ್ಲಿ ಅಸಹಜ ಎನಿಸೋ ವೈಭವಿಕರಣ ಜಾಸ್ತಿಯಾಯ್ತು.

ಮೈನಸ್ 3 - ಬಸಣ್ಣಿ ಯಾಕೆ ಬಂದಳು
'ಬಸಣ್ಣಿ ಬಾ..' ಹಾಡು ಸೂಪರ್ ಆಗಿದೆ. ಆ ಹಾಡು ಬಂದಾಗ ಇಡೀ ಚಿತ್ರಮಂದಿರವೇ ಕುಣಿಯುತ್ತದೆ. ಆದರೆ, ಆ ಹಾಡು ಯಾಕೆ ಬಂತು ಎಂದು ಯಾರಿಗೂ ತಿಳಿಯುವುದಿಲ್ಲ. ಯಾವುದೇ ಹಿನ್ನೆಲೆ ಇಲ್ಲದೆ ಇದ್ದಕ್ಕಿದ್ದ ಹಾಗೆ ಬರುವ ಚಿತ್ರದ ಈ ಹಾಡು ಅಚ್ಚರಿ ಮೂಡಿಸುತ್ತದೆ. 'ಹತ್ತ್ ರೂಪಾಯಿಗೆ ಒಂದ್..' ಹಾಡು ಕೂಡ ಸಿನಿಮಾಗೆ ಅಗತ್ಯ ಇತ್ತೆ ? ಎನ್ನುವ ಪ್ರಶ್ನೆ ಬರುತ್ತದೆ.

ಈ ಒಂದು ದೃಶ್ಯ ಇರಬೇಕಿತ್ತು
ಇಡೀ ಸಿನಿಮಾ ನಿಂತಿರುವು ಎಣ್ಣೆ ಉತ್ಪಾದನೆ ಮಾಡುವುದರ ಮೇಲೆ. ಹೀಗಿರುವಾಗ ಎಣ್ಣೆಯನ್ನು ರೈತರು ಹೇಗೆ ಮಾಡುತ್ತಾರೆ. ಅದರ ವೈಶಿಷ್ಟ್ಯವನ್ನು ಒಂದು ದೃಶ್ಯದಲ್ಲಿಯಾದರೂ ತೋರಿಸಿದ್ದರೆ, ಕಥೆಗೆ ಇನ್ನಷ್ಟು ನ್ಯಾಯ ಸಿಗುತ್ತಿತ್ತು.

ಮೈನಸ್ ಅನ್ನು ಮರೆಸುತ್ತದೆ.. ಪ್ಲಸ್ ಅನ್ನು ಮೆರೆಸುತ್ತದೆ
ಸಿನಿಮಾದಲ್ಲಿ ಏನೇ ಮೈನಸ್ ಪಾಯಿಂಟ್ ಗಳಿದ್ದರೂ ಕೊನೆಗೆ ಅದೆಲ್ಲವು ಮರೆಯಾಗುತ್ತದೆ. ಇಡೀ ಸಿನಿಮಾ ಮೈನಸ್ ಅನ್ನು ಮರೆಸಿ, ಪ್ಲಸ್ ಅನ್ನು ಮೆರೆಸುತ್ತದೆ. ದರ್ಶನ್ ಅಭಿಮಾನಿಗಳು ಇಷ್ಟಪಡುವ ಎಲ್ಲ ಅಂಶಗಳು ಸಿನಿಮಾದಲ್ಲಿವೆ. ಕ್ಲಾಸ್ ಹಾಗೂ ಮಾಸ್ ಇಬ್ಬರೂ ಆಡಿಯನ್ಸ್ ಗೆ ತೃಪ್ತಿಯಾಗುವ ಚಿತ್ರವಿದು.


Click it and Unblock the Notifications











