ರಂಗಸ್ಥಳದಲ್ಲೇ ಕುಸಿದು ಬಿದ್ದ ಯಕ್ಷಗಾನ ಕಲಾವಿದ: ವಿಡಿಯೋ ವೈರಲ್
ಯಕ್ಷಗಾನ ನಡೆಯುತ್ತಿರುವಾಗಲೇ ಪ್ರಖ್ಯಾತ ವೇಷಧಾರಿ, ರಂಗಸ್ಥಳದಲ್ಲೇ ತಲೆ ತಿರುಗಿ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ನಡೆದಿದೆ.
ಪ್ರಖ್ಯಾತ ಯಕ್ಷಗಾನ ಕಲಾವಿದ ಮೋಹನ ಕುಮಾರ್ ಅಮ್ಮುಂಜೆಯವರು ರಂಗಸ್ಥಳದಲ್ಲಿಯೇ ತಲೆತಿರುಗಿ ಬಿದ್ದ ಕಲಾವಿದ.
ದ.ಕ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಅಲಂಗಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಘಟನೆ ನಡೆದಿದ್ದು, ದ.ಕ.ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ರಾತ್ರಿ 'ಕರ್ಣಪರ್ವ' ಯಕ್ಷಗಾನ ನಡೆದಿತ್ತು. ಪ್ರಖ್ಯಾತ ಯಕ್ಷಗಾನ ಕಲಾವಿದ ಮೋಹನ ಕುಮಾರ್ ಅಮ್ಮುಂಜೆಯವರು 'ಕರ್ಣಪರ್ವ'ದ 'ಅರ್ಜುನ' ಪಾತ್ರಧಾರಿಯಾಗಿಯೂ ಗಣೇಶ್ ಶೆಟ್ಟಿ ಕನ್ನಡಿಕಟ್ಟೆಯವರ 'ಕರ್ಣ' ಪಾತ್ರಧಾರಿ ಯಾಗಿದ್ದರು.ಇಬ್ಬರು ಪ್ರಖ್ಯಾತ ಕಲಾವಿದರು ಯಕ್ಷ ಪ್ರೇಕ್ಷಕರನ್ನು ರಂಜಿಸುತ್ತಿದ್ದರು..ಅರ್ಜುನ - ಕರ್ಣ ಪಾತ್ರಗಳ ಮುಖಾಮುಖಿಯಾಗಿ ವಾಕ್ಸಮರ ನಡೆದಿದೆ. ಸಂಭಾಷಣೆಯ ವೇಳೆ ನಿರ್ಗಳವಾಗಿ ಮಾತನಾಡಿದ ಅಮ್ಮುಂಜೆಯವರ ಬಳಿಕ ಭಾಗವತರು ಕರ್ಣನಿಗೆ ವೀರರಸದ ಪದ್ಯ ಎತ್ತಿ ಕೊಟ್ಟರು. ಕರ್ಣ ಪಾತ್ರಧಾರಿ ಗಣೇಶ ಶೆಟ್ಟಿ ಕನ್ನಡಿಕಟ್ಟೆಯವರು ಕುಣಿಯಲು ಆರಂಭಿಸಿದ್ದಾರೆ.

ಈ ಸಂದರ್ಭ ನಿಂತಿದ್ದ ಅರ್ಜುನ ಪಾತ್ರಧಾರಿ ಮೋಹನ ಕುಮಾರ್ ಅಮ್ಮುಂಜೆಯವರು ಸ್ವಲ್ಪ ಓಲಾಡುವಂತೆ ಆಗಿ ಏಕಾಏಕಿ ಎರಡು ಹೆಜ್ಜೆ ಮುಂದೆ ಬಂದು ಮುಗ್ಗರಿಸಿ ಬಿದ್ದಿದ್ದಾರೆ. ರಂಗಸ್ಥಳದಲ್ಲಿದ್ದ ಹಿಮ್ಮೇಳ-ಮುಮ್ಮೇಳದ ಕಲಾವಿದರು ಒಂದು ಕ್ಷಣಕ್ಕೆ ಏನಾಗುತ್ತಿದೆ ಎಂದು ತಿಳಿಯದೆ ಗಾಬರಿಗೊಂಡಿದ್ದಾರೆ.
ಬಳಿಕ ಸ್ವಲ್ಪ ಉಪಚಾರ ಮಾಡಿದ ಕೊಂಚ ಹೊತ್ತಿನಲ್ಲಿಯೇ ಮೋಹನ ಕುಮಾರ್ ಅಮ್ಮುಂಜೆಯವರು ಚೇತರಿಕೆ ಕಂಡಿದ್ದಾರೆ. ಈ ಬಗ್ಗೆ ಸ್ವತಃ ಮೋಹನ ಕುಮಾರ್ ಅಮ್ಮುಂಜೆಯವರೇ ಆಡಿಯೋ ಮೂಲಕ 'ಲಾಕ್ ಡೌನ್ ನಿಂದ ಐದಾರು ತಿಂಗಳು ಯಕ್ಷಗಾನ ಇಲ್ಲದಿದ್ದರಿಂದ ಫೋಕಸ್ ಲೈಟ್ ನಿಂದ ಸ್ವಲ್ಪ ತಲೆ ತಿರುಗಿ ಬಿದ್ದದ್ದು ಹೌದು. ಆದರೆ ಯಕ್ಷಾಭಿಮಾನಿಗಳು ಗಾಬರಿಯಾಗುವುದು ಬೇಡ. ಇದೀಗ ಚೇತರಿಕೆ ಕಂಡಿದ್ದೇನೆ' ಎಂದು ಹೇಳಿದ್ದಾರೆ.
ಬಳಿಕ ಯಕ್ಷಗಾನವೂ ಸುಸಾಂಗವಾಗಿ ನಡೆದಿದೆ. ಅರ್ಜುನ ಪಾತ್ರಧಾರಿಯಾಗಿ ಮೋಹನ ಕುಮಾರ್ ಅಮ್ಮುಂಜೆಯವರೇ ಪಾತ್ರ ಮುನ್ನಡೆಸಿದ್ದಾರೆ.ಯಕ್ಷಗಾನ ಕಲಾವಿದ ವೇದಿಕೆಯಲ್ಲಿಯೇ ಕುಸಿದು ಬಿದ್ದಿದ್ದರಿಂದ ಯಕ್ಷಗಾನ ಆತಂಕದಲ್ಲೇ ಮುಂದುವರಿದಿದೆ.
ಈ ಹಿಂದೆ ಹಲವು ಯಕ್ಷಗಾನ ಕಲಾವಿದರು ರಂಗಸ್ಥಳದಲ್ಲಿ ಕುಸಿದು ಬಿದ್ದು,ಕಲಾಮಾತೆಯ ಮಡಿಲು ಸೇರಿದ್ದರು. 2017ರ ಮಾರ್ಚ್ 23 ರಂದು ಕಟೀಲು ಸಮೀಪದ ಎಕ್ಕಾರಿನಲ್ಲಿ ನಡೆಯುತ್ತಿದ್ದ ಯಕ್ಷಗಾನ ಬಯಲಾಟ ಸಂಧರ್ಭದಲ್ಲಿ ಕಟೀಲು ಯಕ್ಷಗಾನ ಮೇಳದ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅರುಣಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದರು..ಮಹಿಷಾಸುರ ಮತ್ತು ನಾಟಕೀಯ ವೇಷದಲ್ಲಿ ಭಾರೀ ಪ್ರಸಿದ್ಧಿಯಾಗಿದ್ದ ಗಂಗಯ್ಯ ಶೆಟ್ಟರ ಅರುಣಾಸುರ ಪಾತ್ರವನ್ನು ನೋಡಲೆಂದೇ ಸಾವಿರಾರು ಜನರು ಸೇರಿದ್ದರು. ಆರೋಗ್ಯ ಸಮಸ್ಯೆಯಿದ್ದರೂ ರಂಗಸ್ಥಳದಲ್ಲಿ ಅನಾರೋಗ್ಯ ವನ್ನು ತೋರಿಸದ ಗಂಗಯ್ಯ ಶೆಟ್ಟಿಯವರು ಅಬ್ಬರದಿಂದಲೇ ಪ್ರದರ್ಶನ ನೀಡಿದ್ದರು. ಅರುಣಾಸುರ ಮತ್ತು ದುಂಬಿ ರೂಪದಲ್ಲಿ ಬಂದ ದೇವತೆಯ ಕಾಳಗದ ಸನ್ನಿವೇಶ ದ ಸಂಧರ್ಭದಲ್ಲಿ ಗಂಗಯ್ಯ ಶೆಟ್ಟಿಯವರು ರಂಗಸ್ಥಳದಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದರು. ವೇಷದಲ್ಲಿ ಇರುವಾಗಲೇ ಕಲಾವಿದ ಗಂಗಯ್ಯ ಶೆಟ್ಟಿ ಸಾವನ್ನಪ್ಪಿದ್ದರು..ಈ ಸಾವು ಕಲಾಮಾತೆಯ ಅನುಗ್ರಹ ಅಂತಾ ಗಂಗಯ್ಯ ಶೆಟ್ಟಿ ಅಭಿಮಾನಿಗಳು ಅಭಿಮಾನವನ್ನು ತೋರ್ಪಡಿಸಿದ್ದರು.
ಇದೇ ರೀತಿಯಾಗಿ ಅರುವ ನಾರಾಯಣ ಶೆಟ್ಟಿ ಸೇರಿದಂತೆ ಕೆಲವು ಯಕ್ಷಗಾನದ ಖ್ಯಾತನಾಮರು ರಂಗಸ್ಥಳದಲ್ಲೇ ಕಲಾಲೀನರಾಗಿದ್ದಾರೆ.
ಕಲಾವಿದರಿಗೆ ಅಪಘಾತಗಳಾಗುತ್ತಿರುವ ಸುದ್ದಿಗಳು ನಿನ್ನೆಯಿಂದ ಕೇಳಿಬರುತ್ತಿವೆ. ನಿನ್ನೆಯಷ್ಟೆ ಕನ್ನಡದ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣದ ವೇಳೆ ಸಾಹಸ ಕಲಾವಿದ ವಿವೇಕ್ ವಿದ್ಯುತ್ ಅಪಘಾತಕ್ಕೆ ಈಡಾಗಿ ನಿಧನ ಹೊಂದಿದ್ದಾನೆ. ಇಂದು ನಟ ಪ್ರಕಾಶ್ ರೈ ಅವರು ಚಿತ್ರೀಕರಣದ ವೇಳೆ ಅಪಘಾತಕ್ಕೆ ಈಡಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.


Click it and Unblock the Notifications











