ಸಾಧಕರನ್ನು ನಿಂದಿಸಿ ಹೆಸರು ಮಾಡುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ; ರಂಗರಾಜು ವಿರುದ್ಧ ಯಶ್ ಆಕ್ರೋಶ
ಸ್ಯಾಂಡಲ್ ವುಡ್ ನ ದಾದಾ, ಸಾಹಸಸಿಂಹ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ರಾಕಿಂಗ್ ಸ್ಟಾರ್ ಯಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಧಕರನ್ನು ನಿಂದಿಸಿ ಹೆಸರು ಮಾಡ ಬಯಸುವ ಹೀನಮಟ್ಟಕ್ಕೆ ಇಳಿಯುವವರು ಕಲಾವಿದನಲ್ಲ ಎಂದು ಯಶ್ ಗುಡುಗಿದ್ದಾರೆ.
ತೆಲುಗಿನ ನಟ ವಿಜಯ್ ರಂಗರಾಜು ಇತ್ತೀಚಿಗೆ ಸಂದರ್ಶವೊಂದರಲ್ಲಿ ಕನ್ನಡದ ಖ್ಯಾತ ನಟ ವಿಷ್ಣುವರ್ಧನ್ ಬಗ್ಗೆ ಬಾಯಿಗೆ ಬಂದಹಾಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಸ್ಯಾಂಡಲ್ ವುಡ್ ದಾದಾ ಬಗ್ಗೆ ನಾಲಿಗೆ ಹರಿಬಿಟ್ಟಿರುವ ರಂಗರಾಬು ವಿರುದ್ಧ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. ನಟ ಜಗ್ಗೇಶ್, ಅನಿರುದ್ಧ್, ಪುನೀತ್ ರಾಜ್ ಕುಮಾರ್, ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್, ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದೀಗ ರಾಕಿಂಗ್ ಸ್ಟಾರ್ ಯಶ್ ರಂಗರಾಜು ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು ಎಂದಿದ್ದಾರೆ.
'ಸರಿದಾರಿಯಲ್ಲಿ ನಡೆಯುವವರು ಬೆವರುಹರಿಸಿ ಹಂತಹಂತವಾಗಿ ಬೆಳೆದು ಹೆಸರು ಮಾಡಿ ಉಳಿದುಕೊಳ್ಳುತ್ತಾರೆ, ಅಡ್ಡದಾರಿಯಲ್ಲಿ ನಡೆಯುವವರು ಅಂತ ಹೆಸರುಗಳನ್ನು ಬಳಸಿಕೊಳ್ಳಲು ಹೋಗಿ ಬದಿಯಲ್ಲೇ, ಉಳಿದುಬಿಡುತ್ತಾರೆ. ವಿಷ್ಣು ಸರ್ ಕನ್ನಡ ನಾಡು ಕಂಡ ಮಹಾನ್ ಸಾಧಕರು ಅವರ ಶ್ರಮ ಪ್ರತಿಭೆ ಹಾಗೂ ನಟನೆಯ ಜೊತೆಜೊತೆಯಾಗಿ ಅವರ ಬದುಕು ಅವರ ವ್ಯಕ್ತಿತ್ವದಿಂದ ನಮ್ಮ ಮನೆ ಮನದಲ್ಲಿ ಅಜರಾಮರವಾಗಿರುವವರು.'

'ಅಂತ ಸಾಧಕರನ್ನು ನಿಂದಿಸಿ ಹೆಸರು ಮಾಡ ಬಯಸುವ ಹೀನಮಟ್ಟಕ್ಕೆ ಇಳಿಯುವವನು ಕಲಾವಿದನಲ್ಲ. ಕನ್ನಡ ಚಿತ್ರರಂಗ ಎಲ್ಲಾ ಚಿತ್ರರಂಗಗಳ ಜೊತೆ ಪರಸ್ಪರ ಹೊಂದಾಣಿಕೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬಂದಿದೆ. ಅದು ಇಂತವರಿಂದ ತಪ್ಪುದಾರಿಗೆ ಹೋಗಬಾರದು. ಆ ವ್ಯಕ್ತಿ ಕ್ಷಮೆ ಕೇಳಿ ತಮ್ಮ ಅಸಮಂಜಸ ಮಾತುಗಳನ್ನು ಹಿಂಪಡೆಯಬೇಕು.' ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


Click it and Unblock the Notifications











