'ನಿಮ್ಮ ಪಾದಗಳಿಗೆ ಕೇಳಿಕೊಳ್ತಿನಿ ನಮ್ಮ ಕಾರು ಫಾಲೋ ಮಾಡಬೇಡಿ': ನಟ ದರ್ಶನ್ ಹಳೆ ವಿಡಿಯೋ ವೈರಲ್
ಈ ಬಾರಿ ನಟ ಯಶ್ ಹುಟ್ಟುಹಬ್ಬ ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ ಎನ್ನುವ ದುರ್ಘಟನೆ ಎಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. ನಟನ ನಾಲ್ವರು ಅಭಿಮಾನಿಗಳು ಹುಟ್ಟುಹಬ್ಬದ ಸಂದರ್ಭದಲ್ಲಿ ಮೃತಟ್ಟಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮೂವರು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಮತ್ತೊಬ್ಬರು ದುರಂತ ಅಂತ್ಯ ಕಂಡಿದ್ದಾರೆ.
ಅಭಿಮಾನಿಗಳ ನಿಧನದ ಸುದ್ದಿ ಕೇಳಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ನಟ ಯಶ್ ತೆರಳಿದ್ದರು. ಅಲ್ಲಿಂದ ಆಸ್ಪತ್ರೆಗೆ ದಾಖಲಾಗಿದ್ದ ಮತ್ತೊಬ್ಬ ಅಭಿಮಾನಿಯನ್ನು ನೋಡಲು ಗದಗದ ಜಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಯಶ್ ನೋಡಲು ಅವರ ಕಾರನ್ನು ಫಾಲೋ ಮಾಡಿದ್ದ 22 ವರ್ಷ ನಿಖಿಲ್ ಗೌಡ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿದ್ದಾರೆ. ಇಂತಹ ಸಮಯದಲ್ಲಿ ನಟ ದರ್ಶನ್ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಮ್ಮ ಕಾರು ಫಾಲೋ ಮಾಡಬೇಡಿ: ನಟ ದರ್ಶನ್ ಮನವಿ
ಸದ್ಯ ಕಾಟೇರ ಸಿನಿಮಾ ಯಶಸ್ಸಿನಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನೇಕ ಬಾರಿ ಅಭಿಮಾನಿಗಳ ವರ್ತನೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಕಾರುಗಳನ್ನು ಚೇಸ್ ಮಾಡಬೇಡಿ. ನಮ್ಮನ್ನು ಫಾಲೋ ಮಾಡಬೇಡಿ ಅದರಿಂದ ನಿಮಗೆ ತೊಂದರೆಯಾಗುತ್ತದೆ ಎಂದೆಲ್ಲಾ ತಮ್ಮ ಸೆಲಬ್ರಿಟಿಸ್ಗಳಿಗೆ ಮನವಿ ಮಾಡಿದ್ದರು. ಈಗ ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
"ದಯವಿಟದಟು ಎಲ್ಲಾ ನನ್ನ ಸೆಲೆಬ್ರಿಟಿಗಳಿಗೆ ಕರ್ನಾಟಕದಾದ್ಯಂತ ಇರುವವರಿಗೆ ಒಂದು ಮೆಸೆಜ್ ಹೋಗಲಿ. ಇಲ್ಲಿ ನೀವು ಇಷ್ಟು ಜನ ಇದ್ದೀರಾ. ದಯಮಾಡಿ ನಾನು ಗಾಡಿ ಓಡಿಸುವಾಗ ಅಕ್ಕ ಪಕ್ಕ ಬೈಕ್ಗಳಲ್ಲಿ ಬರಬೇಡ್ರಿ. ನಿಮ್ಮ ಪಾದರವಿರಂದಗಳಿಗೆ ನಾನು ಕೇಳಿಕೊಳ್ಳುವುದು ಇಷ್ಟೇ. ಏನಕ್ಕೆ ಅಂತ ನಾನು ಹೇಳ್ತಿನಿ ಕೇಳಿ. ದಯವಿಟ್ಟು ನೀವು ಬರೀ ಒಂದು ಮೊಬೈಲ್ ಹಿಡಿದುಕೊಂಡು ಒಂದು ಲೈಕ್ ಮತ್ತು ಕಾಮೆಂಟ್ಸ್ಗೋಸ್ಕರ ಜೀವನ ಹಾಳು ಮಾಡಿಕೊಳ್ಳಬೇಡಿ" ಎಂದು ಮನವಿ ಮಾಡಿದ್ದಾರೆ.
ಹೆಚ್ಚು ಕಮ್ಮಿ ಆದರೆ, ನಿಮ್ಮ ಮನೆಯವರು ಸಾಯೋ ತನಕ ನನ್ನ ದೂಷಿಸುತ್ತಾರೆ!
"ನಾವು ನೂರು- ನೂರಇಪ್ಪತ್ತರಲ್ಲಿ ಹೋಗ್ತಾ ಇರ್ತಿವಿ. ಅಂತ ವೇಳೆ ಬೈಕ್ನಲ್ಲಿ ಕಾರಿಗೆ ಅಡ್ಡ ಬಂದ್ರೆ ಏನಾಗುತ್ತೆ ಹೇಳಿ. ಯೋಚನೆ ಮಾಡ್ರಯ್ಯ. ಬದುಕಿದ್ರೆ ನನ್ನ ಇನ್ನು ಯಾವತ್ತು ಬೇಕಾದರೂ ನೋಡಬಹುದು. ನನ್ನ ನೋಡದೆ ಇದ್ದರೂ ಪರವಾಗಿಲ್ಲ. ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇರ್ತಾರೆ. ಅವಾಗ ತಾನೇ ಮದುವೆಯಾದ ಹೊಸ ಗಂಡ ಹೆಂಡ್ತಿ ಆಗಿರ್ತೀರಾ. ಆಗ ತಾನೇ ಹುಟ್ಟಿದ ಮಗು ಮನೆಯಲ್ಲಿ ಇರುತ್ತೆ. ನಿಮಗೆ ಏನಾದರೂ ಹೆಚ್ಚು ಕಮ್ಮಿ ಆದರೆ, ನಿಮ್ಮ ಮನೆಯವರು ಸಾಯೋ ತನಕ ನನ್ನ ದೂಷಿಸುತ್ತಾರೆ. ಇದು ನಿಮಗೆ ಇಷ್ಟನಾ..?" ಎಂದು ಪ್ರಶ್ನೆ ಮಾಡಿದ್ದಾರೆ.
ಮುಂದುವರಿದು, " ದಯಮಾಡಿ ಗಾಡಿಗಳ ಪಕ್ಕದಲ್ಲಿ ಬರಬೇಡಿ. ದಯಮಾಡಿ ನಿಮ್ಮ ಪಾದಗಳಿಗೆ ಇಲ್ಲಿಂದಲೇ ಕೇಳಿಕೊಳ್ತಿನಿ. ಇದು ನಿಮಗೊಂದು ಮೆಸೇಜ್ ಇರಲಿ. ಒಂದು ಲೈಕು ಕಾಮೆಂಟ್ಗೋಸ್ಕರ ಏನು ಆಗೋದಿಲ್ಲ. ಬದುಕಿದ್ದರೇ ಮತ್ತೊಂದು ಸಲಿ ನಮ್ಮನ್ನ ನೋಡ್ತಿರ" ಎಂದು ದರ್ಶನ್ ಕಳಕಳಿಯಿಂದ ಮನವಿ ಮಾಡಿದ್ದರು. ಈ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ.


Click it and Unblock the Notifications











