ರೆಬಲ್ ಸ್ಟಾರ್ ಆಸೆ ಈಡೇರಿಸಿದ ರಾಕಿ ಭಾಯ್
ಅಂಬಿ ಕುಟುಂಬದ ಜೊತೆ ರಾಕಿಂಗ್ ಸ್ಟಾರ್ ಯಶ್ ಒಡನಾಟ ಗೊತ್ತೇಯಿದೆ. 'ಡ್ರಾಮಾ' ಚಿತ್ರದಲ್ಲಿ ಅಂಬಿ- ಯಶ್ ಒಟ್ಟಿಗೆ ನಟಿಸಿದ್ದರು. ಸುಮಲತಾ ಅಂಬರೀಶ್ ಮಂಡ್ಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ದರ್ಶನ್ ಜೊತೆ ಸೇರಿ ಯಶ್ ಪ್ರಚಾರ ನಡೆಸಿದ್ದರು. ಇವರಿಬ್ಬರ ಬೆಂಬಲದಿಂದ ಸುಮಲತಾ ಸಂಸದೆಯಾಗಿ ಆಯ್ಕೆ ಆಗಿದ್ದರು.
ಯಶ್-ರಾಧಿಕಾ ದಂಪತಿ ಅಂದ್ರೆ ಅಂಬರೀಶ್ ಅವರಿಗೂ ಅಪಾರ ಪ್ರೀತಿ ಇತ್ತು. ಯಶ್ ಮಗಳಿಗೆ ಅಂಬಿ ತೊಟ್ಟಿಲು ಮಾಡಿಸಿ ಕೊಟ್ಟಿದ್ದರು. ರಾಧಿಕಾ ಪಂಡಿತ್ ಸೀಮಂತ ಶಾಸ್ತ್ರದಲ್ಲಿ ಅಂಬರೀಶ್ ಭಾಗಿ ಆಗಿದ್ದರು. ನಿಧನರಾಗುವ ಮುನ್ನ ಅಂಬಿ ಕಲಘಟಗಿಯಲ್ಲಿ ತೊಟ್ಟಿಲು ಮಾಡಿಸಲು ಹೇಳಿದ್ದರು. ಅದು ಸುಮಲತಾ ಅವರಿಗೂ ಗೊತ್ತಿರಲಿಲ್ಲ.

ಅಂಬಿ ಅಗಲಿಕೆ ಬಳಿಕ ಈ ವಿಚಾರವನ್ನು ಯಶ್ಗೆ ಹೇಳಿ ತೊಟ್ಟಿಲನ್ನು ಐರಾಗೆ ಕೊಟ್ಟಿದ್ದರು. ಇದೀಗ ಆ ತೊಟ್ಟಿಲು ಮತ್ತೆ ಅಂಬಿ ಮನೆ ಸೇರಿದೆ. ಕಳೆದ ನವೆಂಬರ್ 12ರಂದು ಸುಮಲತಾ ಸೊಸೆ ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಆ ಮಗುವಿಗಾಗಿ ಯಶ್ ತಮ್ಮ ಮನೆಯಲ್ಲಿದ್ದ ತೊಟ್ಟಿಲನ್ನು ಕೊಟ್ಟಿದ್ದಾರೆ. ಇದು ಅಂಬರೀಶ್ ಆಸೆ ಕೂಡ ಆಗಿತ್ತು.
ಮಗನಿಗೆ ಮಗುವಾದಾಗ ಇದೇ ತೊಟ್ಟಿಲಲ್ಲೇ ಮಗುವನ್ನ ಮಲಗಿಸಿ ತೋಗಿಸಬೇಕೆಂದು ಅಂಬರೀಶ್ ಹೇಳಿದ್ದರಂತೆ. ಆ ಮಾತನ್ನ ನೆನಪಿನಲ್ಲಿಟ್ಟುಕೊಂಡು ರಾಕಿಂಗ್ ಸ್ಟಾರ್ ಯಶ್, ಇದೀಗ ಅಭಿಷೇಕ್ ಅಂಬರೀಷ್ ಮಗನ ನಾಮಕರಣಕ್ಕೆ ಆ ಅವಿಸ್ಮರಣೀಯ ಉಡುಗೊರೆಯನ್ನ ನೀಡಿದ್ದಾರೆ.
ಬೆಳಗಾವಿಯ ನಾರಾಯಣ ಕಲಾಲ್ ಅವರಿಕೆ ಅಂಬರೀಶ್ ಕರೆ ಮಾಡಿ ತೊಟ್ಟಿಲು ಮಾಡಿಸಲು ಹೇಳಿದ್ದರು. ಬಳಿಕ ನಾರಾಯಣ ಕಲಾಲ್ ಕಲಘಟಗಿಯ ಶ್ರೀಧರ್ ಸಾಹುಕಾರ್ ಎಂಬುವವರ ಕುಟುಂಬದವರಿಗೆ ತೊಟ್ಟಿಲು ಸಿದ್ಧಪಡಿಸಲು ಆರ್ಡರ್ ಕೊಟ್ಟಿದ್ದರು. ವಿಶೇಷವಾಗಿ ತೊಟ್ಟಿಲು ತಯಾರಿಸುವುದರಲ್ಲಿ ಶ್ರೀಧರ್ ಸಾಹುಕಾರ್ ಕುಟುಂಬ ನಿಪುಣರು. ಆ ಭಾಗದಲ್ಲಿ ಸಾಕಷ್ಟು ಜನ ಅವರ ಬಳಿ ತೊಟ್ಟಿಲು ಮಾಡಿಸುತ್ತಾರೆ.

ಸಾಗುವಾನಿ ಮರದಿಂದ ಈ ತೊಟ್ಟಿಲು ತಯಾರಿಸಲಾಗಿದೆ. ಯಾವುದೇ ರಾಸಾಯನಿಕ ಬಳಸದೇ ಗಿಡಮೂಲಿಕೆಗಳಿಂದ ಬಣ್ಣ ತಯಾರಿಸಿ ಹಚ್ಚಲಾಗಿದೆ. ಈ ತೊಟ್ಟಿಲಿನ ಬೆಲೆ ಅಂದಾಜು 1 ಲಕ್ಷ ರೂ. ಆಗಬಹುದು. ಮಾರ್ಚ್ 14ರಂದು ಅಭಿಷೇಕ್ ಅಂಬರೀಶ್ ಮಗನ ನಾಮಕರಣ ನಡೆಯಲಿದೆ. ಅದಕ್ಕೂ ಮುನ್ನ ಯಶ್ ಮನೆಯಿಂದ ತೊಟ್ಟಿಲು ಅಂಬಿ ಮನೆ ತಲುಪಿದೆ.
ಸುಮಲತಾ ಅಂಬರೀಶ್ ಮೊಮ್ಮಗನ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಮೊಮ್ಮೊಗನ ಜೊತೆಗಿನ ಒಡನಾಟದ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಅಂಬಿ ಮೊಮ್ಮಗನಿಗೆ ಯಾವ ಹೆಸರು ಇಡುತ್ತಾರೆ ಎನ್ನುವ ಕುತೂಹಲ ಸಹ ಅಭಿಮಾನಿಗಳಲ್ಲಿದೆ. ಶೀಘ್ರದಲ್ಲೇ ಅದಕ್ಕೆ ಬ್ರೇಕ್ ಬೀಳಲಿದೆ.
ಅಭಿಷೇಕ್ ಅಂಬರೀಶ್ ಹೊಸದಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. 'ಅಮರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದ ಅಭಿ ಬಳಿಕ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಅಬ್ಬರಿಸಿದ್ದರು. 'ಕಾಳಿ' ಎಂಬ ಸಿನಿಮಾ ಶುರುವಾಗಿತ್ತು. ಆದರೆ ಬಳಿಕ ಅದರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆ ಆಗಿದ್ದರು.
ಇತ್ತ ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮುಂಬೈಗೆ ತೆರಳಿ 'ರಾಮಾಯಣ' ಚಿತ್ರದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು ಎನ್ನಲಾಗಿತ್ತು. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿಲ್ಲ. ಚಿತ್ರದಲ್ಲಿ ರಾವಣನಾಗಿ ನಟಿಸುವುದರ ಜೊತೆಗೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ.
'ಟಾಕ್ಸಿಕ್' ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡದ ಜೊತೆಗೆ ಇಂಗ್ಲೀಷ್ನಲ್ಲಿ ಸಿನಿಮಾ ತಯಾರಾಗುತ್ತಿದೆ. ಆದರೆ ರಿಲೀಸ್ ಡೇಟ್ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ.


Click it and Unblock the Notifications











