ಅಕ್ಕ-ಪಕ್ಕ ಬಾಡಿಗಾರ್ಡ್ಸ್, ಸುತ್ತ ಮುತ್ತ ಕ್ಯಾಮರಾ, ಬದಲಾದ ಅಣ್ತಮ್ಮ, ಇವರು ''ನಿಮ್ಮ ಯಶ್'' ಅಲ್ಲ ಬಿಡಿ...!
'ಮೊಗ್ಗಿನ ಮನಸು' ಚಿತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದು, 'ಕೆ.ಜಿ.ಎಫ್' ಚಿತ್ರದ ಮೂಲಕ ಭಾರತದ ಅಸಂಖ್ಯಾತ ಜನರನ್ನು ಬೆರಗಾಗಿಸಿದವರು ಯಶ್. ಇಂಥಾ ಯಶ್ ಈಗ ಕೇವಲ ರಾಕಿಂಗ್ ಸ್ಟಾರ್ ಅಲ್ಲ ಬದಲಿಗೆ ನ್ಯಾಷನಲ್ ಸ್ಟಾರ್. ಗೊತ್ತಿಲ್ಲ, ಮುಂದೊಂದು ದಿನ ಇಂಟರ್ ನ್ಯಾಷನಲ್ ಸ್ಟಾರ್ ಆದರೂ ಆಗಬಹುದು. ಯಾಕೆಂದರೆ ಯಶ್ ಯೋಚನೆ-ಯೋಜನೆ ಎರಡು ದೊಡ್ಡದು. ಇದಕ್ಕೆ ಕೈಗನ್ನಡಿ ಎಂಬಂತೆ ಯಶ್ ಅವರ ಮುಂದಿನ ಸಿನಿಮಾ 'ಟಾಕ್ಸಿಕ್' ಮೇಲೆ ಎಲ್ಲರ ಕಣ್ಣಿದೆ. ಜಗತ್ತು ಯಶ್ ಬಗ್ಗೆ ಮಾತನಾಡುತ್ತಿದೆ.
ಆದರೆ, ಯಶ್ ಮಾತ್ರ ಮಾತನಾಡುತ್ತಿಲ್ಲ. ಅವರ ಅಭಿಮಾನಿಗಳು ಎಷ್ಟೇ ಗೋಗರೆದರೂ 'ಟಾಕ್ಸಿಕ್' ಚಿತ್ರದ ಬಗ್ಗೆ ಮೌನ ಮುರಿಯುತ್ತಿಲ್ಲ. ತಮ್ಮ ಪಾಡಿಗೆ ತಮ್ಮ ಕೆಲಸದ ಕಡೆ ಗಮನ ಕೊಡ್ತಿದ್ದಾರೆ. ಸದ್ದು ಗದ್ದಲ ಮಾಡದೇ ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಹೀಗಿರುವಾಗ ಯಶ್ ಬಾಲಿವುಡ್ನ ಸಂಪ್ರದಾಯಕ್ಕೆ ಒಗ್ಗಿಕೊಂಡಿದ್ದಾರಾ ಅನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ.

ಹೌದು, ನಿಮಗೆ ಗೊತ್ತಿರಲಿ.. ಬಾಲಿವುಡ್ನಲ್ಲಿ ಒಂದು ಸಂಪ್ರದಾಯ ಇದೆ. ಅದಕ್ಕೆ ಅವರು ನೀಡಿರುವ ಪಾಪರಾಜಿ. ಮಾಯಾನಗರಿ ಮುಂಬೈನಲ್ಲಿ ಯಾರೆಲ್ಲ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೋ ಅವರೆಲ್ಲರನ್ನು ಹಿಂಬಾಲಿಸವುದು ಈ ಪಾಪರಾಜಿಗಳ ಕೆಲಸ. ಇದಕ್ಕೆ ಅಂತನೇ ಇವರಿಗೆ ಹಣ ನೀಡಲಾಗುತ್ತೆ. ಇನ್ನೂ ಪ್ರಚಾರದ ಹುಚ್ಚಿಗೆ ಬಲಿಯಾಗಿರುವ ಅನೇಕ ತಾರೆಯರು ಈ ಪಾಪರಾಜಿಗಳ ಕೈಯಲ್ಲಿ ತಮ್ಮ ದಿನನಿತ್ಯದ ದಿನಚರಿಯನ್ನು ನೀಡುತ್ತಾರೆ. ಪ್ರಚಾರದ ಹೆಸರಿನಲ್ಲಿ ಮುಂಬೈನಲ್ಲಿ ಅಣಬೆಯಂತೆ ಎದ್ದು ನಿಂತ ಏಜೆನ್ಸಿಗಳಿಗೆ ಅನೇಕ ತಾರೆಯರು ದುಡ್ಡುನ್ನು ಕೊಡುತ್ತಾರೆ. ಬಾತ್ರೂಮ್ ಮತ್ತು ಬೆಡ್ ರೂಮ್ ಹೊರತು ಪಡಿಸಿ ತಮ್ಮ ಹಿಂದೆ ಯಾವಾಗಲೂ ಕ್ಯಾಮರಾ ಇರಬೇಕೆಂಬ ಷರತ್ತನ್ನೂ ಹಾಕಿ ಅವರು ಕೇಳಿದಷ್ಟು ಹಣವನ್ನು ನೀಡುತ್ತಾರೆ.
ಒಂದ್ಕಾಲದಲ್ಲಿ ಕನ್ನಡದ ಸ್ಟಾರ್ ಆಗಿದ್ದ, ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಯಶ್ ಎಂದು ಬರೆದುಕೊಂಡಿದ್ದ ರಾಕಿಂಗ್ ಸ್ಟಾರ್ ಕೂಡ ಈ ಸಂಪ್ರದಾಯಕ್ಕೆ ಶರಣಾಗಿದ್ದಾರಾ ಗೊತ್ತಿಲ್ಲ. ಆದರೆ, ಯಶ್ ಮುಂಬೈಗೆ ಹೋದಾಗೆಲ್ಲ ಅವರ ಸುತ್ತ ಮುತ್ತ ಕಂಡು ಬರುವ ಕ್ಯಾಮರಾಗಳನ್ನು ಕಂಡರೆ ಈ ಅನುಮಾನ ಎಂತವರಿಗಾದರೂ ಬರುತ್ತೆ. ಈ ಅನುಮಾನ ಈಗ ಇನ್ನೂ ಹೆಚ್ಚಾಗುವಂತೆ ಇನ್ನೊಂದು ವಿಡಿಯೋ ಈಗ ವೈರಲ್ ಆಗಿದೆ. ಯಶ್ ನಡೆ ಮತ್ತು ಅವರ ಬಾಡಿಗಾರ್ಡ್ಗಳ ಕುರಿತು ಪ್ರಶ್ನೆಯನ್ನು ಹುಟ್ಟುಹಾಕಿದೆ.
ಹೌದು, ಟಾಕ್ಸಿಕ್ ಚಿತ್ರದ ಚಿತ್ರೀಕರಣಕ್ಕೆ ಮುಂಬೈನಲ್ಲಿ ಬಿಡಾರ ಹೂಡಿರುವ ಯಶ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮುಂಬೈನ ಇಕ್ಕಟ್ಟಾದ ಬೀದಿಯಲ್ಲಿ ಕಾರಿಂದ ಕೆಳಗಿಳಿದಿದ್ದಾರೆ. ಬಹುಶಃ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ತೆರಳಲು ಚಿಕ್ಕದಾದ ಬೋಟ್ ಇರುವತ್ತ ನಡೆದುಕೊಂಡು ಹೋಗಿದ್ದಾರೆ. ಈ ಸಮಯದಲ್ಲಿ ಇವರ ಸುತ್ತ ಮುತ್ತ ಪಾಪರಾಜಿಗಳ ವರ್ಗ ಕಂಡು ಬಂದಿದೆ. ಯಶ್ ಅವರ ಭಾವಚಿತ್ರ ಮತ್ತು ವಿಡಿಯೋಗಳನ್ನು ತೆಗೆಯಲು ಮುಗಿ ಬಿದ್ದಿದೆ.
ಆದರೆ, ಯಶ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ಗಜ ಗಾಂಭಿರ್ಯದಿಂದ ಸಂದಿಗೊಂದಿಯಲ್ಲಿ ನಡೆದುಕೊಂಡು ಹೋಗಿದ್ದಾರೆ. ಇನ್ನೂ ಯಶ್ ನಡೆದುಕೊಂಡು ಹೋಗುತ್ತಿರುವಾಗ ಅನೇಕರು ಅವರ ಫೋಟೊ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ಯಶ್ ಅವರ ಅಕ್ಕ-ಪಕ್ಕ ಇದ್ದ ಬಾಡಿಗಾರ್ಡ್ಗಳು ಇದಕ್ಕೆ ಅನುವು ಮಾಡಿ ಕೊಟ್ಟಿಲ್ಲ. ಬದಲಿಗೆ ಯಶ್ ಮುಖ ಕಾಣದಂತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಭಾರಿ ನೂಕು ನುಗ್ಗಲಿನ ವಾತಾವರಣ ಇರುವಾಗ ತಮ್ಮ ಧಣಿಯನ್ನು ಪಾರು ಮಾಡಿದವರಂತೆ ಯಶ್ ಅವರನ್ನು ಅಲ್ಲಿಂದ ಅವರ ಬಾಡಿಗಾರ್ಡ್ಗಳು ಕರೆದೊಯ್ದಿದ್ದಾರೆ. ಈ ನಡುವೆ ಅಲ್ಲಿದ್ದ ಪಾಪರಾಜಿಗಳು ಮಾಸ್ಕ್ ತೆಗೆಯುವಂತೆ ಯಶ್ ಅವರಿಗೆ ಮನವಿ ಮಾಡಿದ್ದಾರೆ. ಮಾಸ್ಕ್ ಇಲ್ಲದೇ ಫೋಟೊಗೆ ಫೋಸ್ಗೆ ಕೊಡುವಂತೆ ಕೇಳಿದ್ದಾರೆ. ಕನ್ನಡ ಬಾರದೇ ಇದ್ದರೂ ಯಶ್ ಗಮನ ಸೆಳೆಯಲು ಕನ್ನಡ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಇದೆಲ್ಲದಕ್ಕೂ ಯಶ್ ಸೊಪ್ಪು ಹಾಕಿಲ್ಲ. ಬದಲಿಗೆ ಆರಾಮ ಎಂದು ಕೇಳಿದ ಪ್ರಶ್ನೆಗೊಂದು ಉತ್ತರ ನೀಡಿ ಬೋಟ್ ಹತ್ತಿದ್ದಾರೆ.
ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಯಶ್ ಅಕ್ಕ ಪಕ್ಕ ನಿಜಕ್ಕೂ ಇಷ್ಟೊಂದು ಬಾಡಿಗಾರ್ಡ್ಗಳ ಅವಶ್ಯಕತೆ ಇದೆಯಾ ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ. ಇದಕ್ಕೆ ಕೈಗನ್ನಡಿ ಎನ್ನುವಂತೆ ಒಬ್ಬರು ಅಷ್ಟೊಂದು ಬಾಡಿಗಾರ್ಡ್ ಬೇಕಿರಲಿಲ್ಲ ಎಂದರೆ, ಇನ್ನೂ ಒಬ್ಬರು ಬೆಳೆಯೋಕೆ ಮಾತ್ರ ಕನ್ನಡ ಬೇಕು ಆ ನಂತರ ಅಷ್ಟೇ ಎಂದಿದ್ದಾರೆ. ಚಿತ್ರದ ಕೆಲಸಕ್ಕಿಂತ ಬಾಡಿಗಾರ್ಡ್ಗಳ ಜೊತೆಯಲ್ಲಿಯೇ ಯಶ್ ಮುಂಬೈಗೆ ಹೆಚ್ಚು ಹೋಗಿದ್ದು ಎಂದು ಇನ್ನೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಯಶ್ ಹೋಗುವ ಬರುವ ಸಮಯಕ್ಕೆ ಸರಿಯಾಗಿ ಕ್ಯಾಮರಾಗಳೆಲ್ಲ ಅಲ್ಲಿ ಹೇಗೆ ಹಾಜರಾಗುತ್ತವೆ ಎನ್ನುವ ಅನುಮಾನ ಕೂಡ ಅನೇಕರನ್ನು ಇದೇ ಸಮಯದಲ್ಲಿ ಕಾಡುತ್ತಿದೆ.
Getting superstar treatment in Mumbai, reporters trying to approach him in Kannada... He is the real Game Changer for KFI
— Insulter (@Insulter3730010) November 10, 2024
The name is Yash 🫡pic.twitter.com/OITPws82sX


Click it and Unblock the Notifications











