ಸುದ್ದಿಯಿಲ್ಲದೆ 'ಗೂಗ್ಲಿ' ಜೊತೆಯಾದ ಪವನ್, ಯಶ್
ಸ್ಯಾಂಡಲ್ ವುಡ್ ಬಹುನಿರೀಕ್ಷೆಯ ನಿರ್ದೇಶಕ ಹಾಗೂ ನಟರಿಬ್ಬರ ಸಂಗಮದ ಚಿತ್ರವೊಂದರ ಮುಹೂರ್ತ ಸದ್ದಿಲ್ಲದೇ ನಡೆದುಹೋಗಿದೆ. 'ಗೋವಿಂದಾಯ ನಮಃ' ಖ್ಯಾತಿಯ ಪವನ್ ಒಡೆಯರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಟ್ಟಾಗಿ ಕೆಲಸ ಮಾಡಲಿರುವ 'ಗೂಗ್ಲಿ' ಚಿತ್ರದ ಮುಹೂರ್ತ ಇತ್ತೀಚಿಗೆ ವಿಜಯನಗರದ ಮಾರುತಿ ಮಂದಿರದಲ್ಲಿ ನೆರವೇರಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಈ ರೀತಿ ಮಾಡಿದ್ದು ಯಾಕೆಂದರೆ, ಚಿತ್ರದ ಚಿತ್ರೀಕರಣ ಇಂದಿನಿಂದಲೇ (03 ಸೆಪ್ಟೆಂಬರ್ 2012) ಪ್ರಾರಂಭವಾಗಬೇಕಿತ್ತು. ಹೀಗಾಗಿ ಅರ್ಜೆಂಟ್ ನಲ್ಲಿ ಮುಹೂರ್ತ ಮಾಡಿ ಏನೋ ಕಳೆದುಕೊಂಡಂತೆ ಆಡುವುದು ಬೇಡ ಎಂದು ನಿರ್ಧರಿಸಿದ ಚಿತ್ರತಂಡವು, ಕೆಲವೇ ಆಪ್ತರ ಸಮ್ಮುಖದಲ್ಲಿ ಮುಹೂರ್ತ ಮುಗಿಸಿ ಚಿತ್ರೀಕರಣ ಪ್ರಾರಂಭಿಸಿದೆ. ಯಶ್ ನಾಯಕತ್ವದ 'ಡ್ರಾಮಾ' ಇತ್ತೀಚಿಗಷ್ಟೇ ಮುಗಿದ ಬೆನ್ನಲ್ಲೇ ಈ ಚಿತ್ರ ಶುರುವಾಗಿದೆ.
ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿರುವ 'ಗೋವಿಂದಾಯ ನಮಃ' ಚಿತ್ರವು, ಇದರ ನಿರ್ದೇಶಕರಾಗಿರುವ ಪವನ್ ಒಡೆಯರ್ ಅವರಿಗೆ ಯಶಸ್ವಿ ನಿರ್ದೇಶಕರ ಪಟ್ಟವನ್ನು ಕಟ್ಟಿಕೊಟ್ಟಿದೆ. ಕೋಮಲ್ ಬದಲು ಈ ಬಾರಿ ತಮ್ಮ ಚಿತ್ರಕ್ಕೆ ಯಶ್ ಅವರನ್ನು ಆಯ್ಕೆ ಮಾಡಿಕೊಂಡಿರುವ ಒಡೆಯರ್, ಹೊಸ ಜಾದೂ ಮಾಡಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದಹಾಗೆ, ಚಿತ್ರದ ನಾಯಕಿ ಕೃತಿ ಖರಬಂಧ.
ಅದೇನೆ ಇರಲಿ, ಅರ್ಜೆಂಟ್ ಮುಹೂರ್ತ ಮುಗಿಸಿ ಚಿತ್ರೀಕರಣ ಶುರುಮಾಡಿರುವ ಚಿತ್ರತಂಡ, ಸ್ವಲ್ಪ ದಿನಗಳ ಚಿತ್ರೀಕರಣ ಮುಗಿಸಿ ಮಾಧ್ಯಮದವರನ್ನು ಕರೆಸಿ ಚಿತ್ರದ ಬಗ್ಗೆ ವಿವರ ನೀಡಲಿದೆಯಂತೆ. ಈ ಮಾಹಿತಿ ಚಿತ್ರತಂಡದಿಂದಲೇ ಹೊರಬಂದಿದೆ. ಈ ಚಿತ್ರದಲ್ಲೂ 'ಗೋವಿಂದಾಯ ನಮಃ' ಚಿತ್ರದಂತೆ ನವಿರಾದ ಪ್ರೇಮಕಥೆಯೊಂದಿಗೆ ಕಾಮಿಡಿ ಹಾಗೂ ಪಂಚ್ ಡೈಲಾಗ್ ಇದೆಯಂತೆ. ಒಟ್ಟಿನಲ್ಲಿ 'ಅದ್ದೂರಿ' ಅರ್ಜುನ್ ಸಾಲಿಗೆ 'ಗೂಗ್ಲಿ' ಪವನ್ ಕೂಡ ಸೇರುತ್ತಾರಾ ಎಂಬುದು ಸದ್ಯದ ಪ್ರಶ್ನೆ! (ಒನ್ ಇಂಡಿಯಾ ಕನ್ನಡ)


Click it and Unblock the Notifications











