ನಿಜ ಜೀವನದಲ್ಲಿ ರೈತನಾಗಲು ಸಜ್ಜಾದ ರಾಕಿ ಭಾಯ್
ನಟ ಯಶ್ಗೆ ಕೃಷಿಯಲ್ಲಿ, ಹಳ್ಳಿ ಜೀವನದಲ್ಲಿ ಬಹಳ ಒಲವು. ತಮ್ಮ ಕೃಷಿ ಪ್ರೀತಿಯ ಬಗ್ಗೆ ಈ ಹಿಂದೆಯೇ ಕೆಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ ನಟ ಯಶ್.
Recommended Video
ಕೃಷಿ ಹಾಗೂ ಕೃಷಿಕರ ಬಗ್ಗೆ ಅಪಾರ ಒಲವು ಇರುವ ನಟ ಯಶ್ ಇದೀಗ ತಾವೇ ಸ್ವತಃ ಕೃಷಿಕರಾಗುತ್ತಿದ್ದಾರೆ. ಹಾಸನದ ತಿಮ್ಲಾಪುರ ಬಳಿಯ ತಮ್ಮ ಜಮೀನಿನ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಯಶ್, ಜಮೀನನ್ನು ಹದಗೊಳಿಸಿ ಕೃಷಿ ಮಾಡಲಿದ್ದಾರೆ.
ಯಶ್ ಅವರು ಮುಂದಾಳತ್ವವಹಿಸಿ ಜಮೀನನ್ನು ಹಸನು ಮಾಡಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜಮೀನಿನಲ್ಲಿ ಮಾದರಿ ಕೃಷಿ ಮಾಡುವ ಯೋಚನೆಯಲ್ಲಿದ್ದಾರೆ ಯಶ್. ಈ ಹಿಂದೆಯೇ ಈ ಬಗ್ಗೆ ಯಶ್ ಹೇಳಿದ್ದರು.

ವಿವಾದಕ್ಕೆ ಕಾರಣವಾಗಿದ್ದ ಜಮೀನು
ಕೆಲವು ದಿನಗಳ ಹಿಂದೆ ಯಶ್ ಅವರ ಈ ಜಮೀನು ವಿವಾದಕ್ಕೆ ಕಾರಣವಾಗಿತ್ತು, ದೇವಸ್ಥಾನದ ಜಾಗವನ್ನು ಅತಿಕ್ರಮಿಸಿ ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ತಕರಾರು ತೆಗೆದಿದ್ದರು. ಆದರೆ ನಂತರ ಗ್ರಾಮಸ್ಥರು ಹಾಗೂ ಯಶ್ ತಂಡ ಒಟ್ಟಿಗೆ ಕೂತು ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಂಡರು.

ಹಲವು ಯೋಜನೆಗಳಿವೆ ಯಶ್ಗೆ
ಜಮೀನು ವಿವಾದ ಆಗಿದ್ದಾಗ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಯಶ್, 'ಈ ಜಮೀನಿನಲ್ಲಿ ಮಾದರಿ ಕೃಷಿ ಮಾಡುವ ಉದ್ದೇಶ ಇದೆ. ನೀರು ಮರುಪೂರ್ಣ ವ್ಯವಸ್ಥೆ, ಇಂಗು ಗುಂಡಿ ನಿರ್ಮಾಣ, ಮಳೆ ನೀರು ಹಿಡಿದಿಡುವ ಆಧುನಿಕ ವ್ಯವಸ್ಥೆ ಮಾಡುವ ಯೋಚನೆ ಇದೆ. ಇದರಿಂದ ಸುತ್ತ-ಮುತ್ತಲಿನ ರೈತರಿಗೂ ಅನುಕೂಲವಾಗಲಿದೆ ಎಂದಿದ್ದರು.

ಕೊಳವೆ ಬಾವಿ ರಹಿತ ತೋಟಗಾರಿಕೆ
ಯಶ್ ಅವರು ಹಾಸನದ ತಿಮ್ಲಾಪುರದ ಬಳಿಯ ಜಮೀನು ಖರೀದಿಸಿದ್ದೆ ಕೃಷಿಯ ಉದ್ದೇಶಕ್ಕೆ. ಆ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೊಳವೆಬಾವಿ ರಹಿತ ತೋಟಗಾರಿಕೆ ಮಾಡುವ ಉದ್ದೇಶ ಯಶ್ ಅವರದ್ದು.

ಕೆರೆ ತುಂಬುವ ಕಾರ್ಯ ಮಾಡಿದ್ದ ಯಶ್
ಮಳೆ ನೀರು ಪುನರ್ಬಳಕೆ, ಕೆರೆ ಮರುಪೂರಣ ಇಂಥಹಾ ವಿಷಯಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಯಶ್, 'ಯಶೋಮಾರ್ಗ' ಸಮಾಜ ಸೇವಾ ಸಂಸ್ಥೆ ಮೂಲಕ ಕೆಲವು ಕೆರೆಗಳನ್ನು ಸ್ವಂತ ಖರ್ಚಿನಲ್ಲಿ ಮರುಪೂರಣ ಮಾಡಿಸಿದ್ದಾರೆ.


Click it and Unblock the Notifications











