"ಗರ್ವದಿಂದ ಬಾಳು ನಾ ಕನ್ನಡಿಗನೆಂದು"; ಕನ್ನಡ ತಾರೆಯರ ರಾಜ್ಯೋತ್ಸವ ನುಡಿನಮನ
ನಾಡಿನೆಲ್ಲೆಡೆ ಕನ್ನಡ ರಾಜ್ಯೋತ್ಸವ ಸಡಗರ ಜೋರಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ರಾಜೋತ್ಸವ ಶುಭಾಶಯಗಳ ಮಹಾಪೂರವೇ ಹರಿಯುತ್ತಿದೆ. ಕನ್ನಡ ಸಿನಿಮಾ ತಾರೆಯರು ಕೂಡ ಶುಭಾಶಯ ಕೋರುತ್ತಿದ್ದಾರೆ. ನಟ ಯಶ್, ಪತ್ನಿ ರಾಧಿಕಾ, ನಟಿ ರಮ್ಯಾ ಸೇರಿದಂತೆ ಹಲವರ ನುಡಿನಮನ ಇಲ್ಲಿದೆ.
"ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು, ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯಲ್ಲಿರಲಿ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ" ಎಂದು ನಟ ಯಶ್ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಹಿಂದೆ ಸಂದರ್ಶನವೊಂದರಲ್ಲಿ ನಟ ಯಶ್ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿನ ಸಾಲುಗಳನ್ನು ಹಾಡಿದ್ದರು. ಆ ವೀಡಿಯೋ ಹಂಚಿಕೊಂಡಿರುವ ರಾಧಿಕಾ ಪಂಡಿತ್ "ಕಲಿಯೋಕೆ ಕೋಟಿ ಭಾಷೆ. ಹಾಡೋಕೆ ಒಂದೇ ಭಾಷೆ ಕನ್ನಡ, ಕನ್ನಡ" ಎಂದು ಬರೆದುಕೊಂಡಿದ್ದಾರೆ.
ಎಲ್ಲಾದರು ಇರು ಎಂತಾದರು ಇರು..ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವ ಕುವೆಂಪು ಅವರ ಪ್ರಸಿದ್ಧ ನುಡಿ ಬರೆದು ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಎಂದು ನಟ ಧನಂಜಯ್ ಪೋಸ್ಟ್ ಮಾಡಿದ್ದಾರೆ. ನಾಡಗೀತೆಯ ಸಾಹಿತ್ಯ ಪ್ರತಿಯನ್ನು ಹಂಚಿಕೊಂಡಿದ್ದಾರೆ.
ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಸರ್ಕಾರ ಸಿದ್ಧಪಡಿಸಿರುವ ವಿಶೇಷ ನುಡಿನಮನ ವೀಡಿಯೋದಲ್ಲಿ ಕೂಡ ನಟ ಧನಂಜಯ್ ಭಾಗಿ ಆಗಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಬದುಕುತ್ತಿರುವವರ ಮಾತುಗಳು ಆ ವಿಡಿಯೋದಲ್ಲಿದೆ. ಕೊನೆಯಲ್ಲಿ ಧನಂಜಯ್ ಮಾತನಾಡಿ ರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ.
"ಕನ್ನಡವೇ ಸತ್ಯ.. ಕನ್ನಡವೇ ನಿತ್ಯ.. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ .. ಜೈ ಭುವನೇಶ್ವರಿ.. ಜೈ ಇಮ್ಮಡಿ ಪುಲಿಕೇಶಿ .. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು " ಎಂದು ನಿರ್ದೇಶಕ ಸುನಿ ಟ್ವೀಟ್ ಮಾಡಿದ್ದಾರೆ.
ಹಿರಿಯ ನಟಿ ಮಾಜಿ ಸಂಸದೆ ಸುಮಲತಾ ಅಂಬರೀಶ್ "ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವ ಜೊತೆ ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕಾಯಕದಲ್ಲಿ ತೊಡಗಿಸಿಕೊಳ್ಳೋಣ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" ಎಂದು ಶುಭ ಕೋರಿದ್ದಾರೆ. ಅಂಬರೀಶ್ ಅವರ ಕನ್ನಡ ಭಾಷಾಭಿಮಾನದ ಹಾಡುಗಳ ಝಲಕ್ ಅನ್ನು ಹಂಚಿಕೊಂಡಿದ್ದಾರೆ.
ಗಾಯಕಿ ಸುಹಾನಾ ಸಯ್ಯದ್ 'ಸೋಲಿಲ್ಲದ ಸರದಾರ' ಚಿತ್ರದ ಹಾಡು ಹಾಡಿ ರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ. ಇನ್ನುಳಿದಂತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ, ನಟಿ ರಮ್ಯಾ ಸೇರಿದಂತೆ ಸಿನಿಮಾ ತಾರೆಯರು ಕನ್ನಡ ರಾಜ್ಯೋತ್ಸವ ಶುಭಾಶಯ ಕೋರಿದ್ದಾರೆ.
"ಸರ್ವ ಜನಾಂಗದ ಶಾಂತಿಯ ತೋಟದ ನನ್ನ ಪ್ರೀತಿಯ ಎಲ್ಲ ಬಾಂಧವರಿಗೆ ...ಕನ್ನಡ ರಾಜ್ಯೋತ್ಸವದ ಶುಭಾಶಯಗಳು" ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. "ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.. ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ನವರಂಗ್ ಚಿತ್ರಮಂದಿರದಲ್ಲಿ 'ಲ್ಯಾಂಡ್ಲಾರ್ಡ್' ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ನಡೀತಿದೆ. ನಟ ದುನಿಯಾ ವಿಜಯ್ ಹಾಗೂ ಹಿರಿಯ ನಟಿ ಉಮಾಶ್ರೀ ಚಿತ್ರಮಂದಿರದ ಆವರಣದಲ್ಲಿ ಧ್ವಜಾರೋಹಣ ಮಾಡಿದ್ದಾರೆ. "ಕೇಳಲು ಇಂಪಾದ ಹಾಡಾಗಿ, ಬಳಸಲು ಸಿಹಿ ನೀರಾಗಿ, ಮನದಲ್ಲಿ ಬೆರೆಯಲು ಸವಿ ಜೇನಾಗಿ, ಎಲ್ಲರಿಗೂ ತಂಪೆರೆಯೋ ಭಾಷೆ ಕನ್ನಡ. ನಾಡಿನ ಸಮಸ್ತ ಜನರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು" ಎಂದು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.


Click it and Unblock the Notifications











