ರಸ್ತೆ ಗಲಾಟೆ: ನಾವು ಅಪ್ಪ-ಅಮ್ಮನಿಗೆ ಹುಟ್ಟಿದ ಮಕ್ಕಳೇ ಎಂದ ಯಶ್
ಸ್ಯಾಂಡಲ್ ವುಡ್ ನಟ ಯಶ್ ಅವರ ತಾಯಿ-ತಂದೆ ಜೊತೆ ಗ್ರಾಮಸ್ಥರು ಜಗಳಕ್ಕೆ ಇಳಿದಿರುವ ಘಟನೆ ಸಂಬಂಧ ರಾಕಿಂಗ್ ಸ್ಟಾರ್ ಇಂದು ಹಾಸನ ಜಿಲ್ಲೆಯ ದುದ್ದ ಪೊಲೀಸ್ ಸ್ಟೇಷನ್ ಗೆ ಭೇಟಿ ನೀಡಿದ್ದರು. ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಗ್ರಾಮಸ್ಥರು ಮತ್ತು ಯಶ್ ಕುಟುಂಬದ ನಡುವೆ ಇಂದು (ಮಾರ್ಚ್ 9) ಬೆಳಗ್ಗೆ ವಾಗ್ವಾದ ನಡೆದಿತ್ತು.
Recommended Video
ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ತನ್ನ ಬೆಂಬಲಿಗರ ಮೇಲೆ ಕೈ ಮಾಡಲು ಮುಂದಾಗಿರುವ ಜನರ ವಿರುದ್ಧ ಅಸಮಾಧಾನಗೊಂಡಿರುವ ಯಶ್ ಈ ವಿಚಾರವಾಗಿ ಮಾತನಾಡಲು ಹಾಸನ ಪೊಲೀಸ್ ಸ್ಟೇಷನ್ ಗೆ ಭೇಟಿ ನೀಡಿದ್ದರು.
ಪೊಲೀಸರ ಜೊತೆ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ಕಷ್ಟಪಟ್ಟು ಜಮೀನು ಖರೀದಿಸಿದ್ದೇವೆ. ಈಗ ಕಾಂಪೌಂಡ್ ಮಾಡಿಸುತ್ತಿದ್ದೇವೆ. ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಹುಡುಗರ ಮೇಲೆ ಕೈ ಮಾಡಿದ್ದಾರೆ ಎಂದು ಗರಂ ಆಗಿದ್ದಾರೆ. ಮುಂದೆ ಒದಿ..

ಕಷ್ಟಪಟ್ಟು ಜಮೀನು ತೆಗೆದುಕೊಂಡಿದ್ದೇವೆ
'ಕಷ್ಟಪಟ್ಟು ದುಡಿದು ಜಮೀನು ತೆಗೆದುಕೊಂಡಿದ್ದೇವೆ. ಕಾಂಪೌಂಡ್ ಹಾಕಿಸುತ್ತಿದ್ದೇವೆ. ರಸ್ತೆ ವಿಚಾರವಾಗಿ ಮಾತುಕತೆ ನಡೆದಿದೆಯಂತೆ. ಕೆಲಸ ಮಾಡುವ ಹುಡುಗರ ಬಗ್ಗೆ ಮಾತಾಡ್ತಾರೆ. ಮಾತುಕತೆ ಆದರೆ ಮಾತುಕತೆಯಲ್ಲೇ ಬಗಹರಿಸಿಕೊಳ್ಳಬೇಕು. ಕೆಲಸ ಮಾಡುವ ಹುಡುಗರ ಮೇಲೆ ಕೈ ಮಾಡಿದ್ರೆ ಸುಮ್ಮನೆ ಇರಲಿಕ್ಕೆ ಆಗಲ್ಲ. ನಮ್ಮ ಜೊತೆ ಕೆಲಸ ಮಾಡೋರು ಅಂದರೆ ನಮ್ಮ ಮನೆಯವರ ರೀತಿ. ತಂದೆ-ತಾಯಿಯ ಬಗ್ಗೆಯೂ ಬಾಯಿಗೆ ಬಂದಹಾಗೆ ಮಾತನಾಡಿದ್ದಾರೆ ಅದಕ್ಕಾಗಿ ಬಂದಿದ್ದೇನೆ' ಎಂದಿದ್ದಾರೆ.

ದುಡ್ಡು ಮಾಡಬೇಕು ಅಂದರೆ ಬೆಂಗಳೂರಲ್ಲೇ ಮಾಡಬಹುದು
'ರಸ್ತೆಯನ್ನು ದೇವಸ್ಥಾನಕ್ಕೆ ಹೋಗಲು ಮಾಡಿದ್ದಾರೆ. ಅದು ನಮಗೆ ಬೇಕು ಎಂದು ಮಾಡಿಲ್ಲ. ಹಾಸನಕ್ಕೆ ಬಂದು ನಾನ್ಯಾಕೆ ಜಮೀನು ಮಾಡಬೇಕು. ದುಡ್ಡು ಮಾಡಬೇಕು ಎಂದರೆ ಬೆಂಗಳೂರಲ್ಲೇ ಆಸ್ತಿ ಮಾಡಬಹುದಲ್ವಾ. ನಾವು ಕೃಷಿ ಮಾಡಬೇಕು ನನ್ನ ಆಸೆ. ಅವರು ಹಳ್ಳಿ ಜನ, ನಮ್ಮ ತಂದೆ ತಾಯಿಯೂ ಹಳ್ಳಿ ಜನ. ಮಾತುಕತೆ ನಡೆದಿದೆ. ಆದರೆ ಯಾವ ರೀತಿ ಮಾತನಾಡಬೇಕು ಆ ರೀತಿ ಮಾತನಾಡಬೇಕು.'

ನಾವೂ ಅಪ್ಪ ಅಮ್ಮನಿಗೆ ಹುಟ್ಟಿರುವ ಮಕ್ಕಳೆ
'ಮೀಡಿಯಾ ಇದೆ ಅಂತಾರೆ, ಎಲ್ಲರದೂ ಅದೆ ಆಗಿದೆ. ಮೀಡಿಯಾ ಇದ್ದರೆ ಇರಲಿ ಬಿಡಿ. ನಾವೂ ಅಪ್ಪ ಅಮ್ಮನಿಗೆ ಹುಟ್ಟಿರುವ ಮಕ್ಕಳೆ. ತಂದೆ ತಾಯಿ ಬಗ್ಗೆ ಮಾತನಾಡಿದಾಗ ನಮ್ಮ ಇಮೇಜ್ ನೋಡಿಕೊಂಡು ಕೂರಲು ಆಗಲ್ಲ. ಎಲ್ಲಿಂದಲೋ ಬಂದವರು, ಇಲ್ಲಿಗೆ ಬಂದಿದ್ದಾರೆ ಅಂತ ಕೇಳ್ತಾರಂತೆ.'

ಹಾಸನದಲ್ಲಿ ಹುಟ್ಟಿದ ಮಗ
'ನಾನು ಹಾಸನದಲ್ಲೇ ಹುಟ್ಟಿರುವ ಮಗ. ನಮ್ಮ ತಂದೆ ತಾಯಿ ಹಾಸನದಲ್ಲಿ ಹುಟ್ಟಿದವರು. ಹಾಸನ, ಬೆಳಗಾವಿ, ಮಂಗಳೂರು ಕರ್ನಾಟಕದಲ್ಲಿ ಎಲ್ಲಿ ಬೇಕಾದ್ರು ಮಾಡ್ತೀನಿ. ಬಣ್ಣ ಕಟ್ಟುತ್ತಾರೆ'

ಘಟನೆ ಹಿನ್ನಲೆ
ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಇಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದರು. ಈ ವೇಳೆ ಶುರುವಾದ ಗಲಾಟೆ ಮಾತಿಗೆ ಮಾತು ಬೆಳೆದು ಯಶ್ ಬೆಂಬಲಿಗರು ಮತ್ತು ಗ್ರಾಮಸ್ಥರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಸ್ಥಿಕೆ ವಹಿಸಿ ಗ್ರಾಮಸ್ಥರನ್ನು ಸಮಾಧಾನ ಪಡಿಸಿದ್ದಾರೆ.


Click it and Unblock the Notifications











