ಹೈ ಗ್ರೌಂಡ್ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಷ್ಪಾ; ದೂರು ದಾಖಲು
ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಾಪಕಿಯಾಗಿ ಗುರ್ತಿಸಿಕೊಂಡಿದ್ದಾರೆ. 'ಕೊತ್ತಲವಾಡಿ' ಚಿತ್ರ ನಿರ್ಮಿಸಿ ಅವರು ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆದರೆ ಸಿನಿಮಾ ಸೋತು ಭಾರೀ ನಷ್ಟ ತಂದೊಡ್ಡಿತ್ತು. ಆದರೂ ಹೊಸ ಸಿನಿಮಾ ಮಾಡುವುದಾಗಿ ಹೇಳಿದ್ದರು. ಇದೀಗ 'ಕೊತ್ತಲವಾಡಿ' ಸಿನಿಮಾ ಸಂಬಂಧ ಪುಷ್ಪಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
'ಕೊತ್ತಲವಾಡಿ' ಸಿನಿಮಾ ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದಕ್ಕಿಂತ ವಿವಾದಗಳಿಂದ ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಇದೇ ಸಂಬಂಧ ಸಿನಿಮಾ ಪಿಆರ್ಓ ಹರೀಶ್ ಅರಸು ಸೇರಿ ಐವರ ವಿರುದ್ಧ ಪುಷ್ಪಾ FIR ದಾಖಲಿಸಿದ್ದಾರೆ. 'ಕೊತ್ತಲವಾಡಿ' ಸಿನಿಮಾ ಪ್ರಮೋಟ್ ಮಾಡುತ್ತೇವೆ ಎಂದು ಹೇಳಿ ಹಣ ಪಡೆದು ಬಳಿಕ ಡಿ ಪ್ರಮೋಟ್ ಮಾಡಿದ್ದಾರೆ ಎಂದು ಪುಷ್ಪಾ ಆರೋಪಿಸಿದ್ದಾರೆ.

ಈ ಸಂಬಂಧ ಮನು, ನಿತಿನ್, ಹರೀಶ್ ಅರಸು, ಮಹೇಶ್ ಗುರು ಹಾಗೂ ಸ್ವರ್ಣಲತಾ ಎಂಬುವವರ ವಿರುದ್ದ ದೂರು ದಾಖಲಿಸಿದ್ದಾರೆ. ಬರೋಬ್ಬರಿ 64 ಲಕ್ಷ ರೂ. ಹಣ ಪಡೆದು ಸಿನಿಮಾ ಪ್ರಚಾರ ಸರಿಯಾಗಿ ಮಾಡಲಿಲ್ಲ ಎಂದು ಪುಷ್ಪಾ ಹೇಳಿದ್ದಾರೆ. ಕೊಟ್ಟಿರುವ ಹಣ ಸಾಲದು, ಇನ್ನು ಹಣ ಬೇಕು, ಕೊಡದೇ ಇದ್ದರೆ ಮನೆ ಬಳಿ ಬಂದು ಗಲಾಟೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ದೂರಿದ್ದಾರೆ. ಬೆದರಿಕೆ ಕರೆಗಳ ಬಗ್ಗೆ ಮಾಹಿತಿ ನೀಡಿದ್ದು ಪೊಲೀಸರು ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ.
'ಕೊತ್ತಲವಾಡಿ' ಚಿತ್ರದಲ್ಲಿ ನಟಿಸಿದ್ದ ಕೆಲ ಕಲಾವಿದರು ನಮಗೆ ಸಂಭಾವನೆ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ಆ ವಿಚಾರ ಭಾರೀ ಸುದ್ದಿ ಆಗಿತ್ತು. ಈ ಬಗ್ಗೆ ನಿರ್ಮಾಪಕಿ ಪುಷ್ಪಾ ಅರುಣ್ಕುಮಾರ್ ಪ್ರತಿಕ್ರಿಯಿಸಿರಲಿಲ್ಲ. ಶ್ರೀರಾಜ್ ನಿರ್ದೇಶನದ 'ಕೊತ್ತಲವಾಡಿ' ಚಿತ್ರದಲ್ಲಿ ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವಾ ನಟಿಸಿದ್ದರು. ಆಗಸ್ಟ್ 1ರಂದು ತೆರೆಗೆ ಬಂದಿದ್ದ ಸಿನಿಮಾ 'ಸು ಫ್ರಮ್ ಸೋ' ಆರ್ಭಟದ ಮಧ್ಯೆ ಮುಗ್ಗರಿಸಿತ್ತು.

ಮೊದಲ ಸಿನಿಮಾ ಸೋತರೂ ಮತ್ತೆ ಸಿನಿಮಾ ನಿರ್ಮಾಣ ಮಾಡುವುದಾಗಿ ಪುಷ್ಪಾ ಅರುಣ್ ಕುಮಾರ್ ಭರವಸೆಯ ಮಾತುಗಳನ್ನಾಡುತ್ತಾ ಬರ್ತಿದ್ದಾರೆ. ಬಳಿಕ ತೆಲುಗಿನ 'ಘಾಟಿ' ಚಿತ್ರವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿ ಕೈ ಸುಟ್ಟುಕೊಂಡಿದ್ದರು. ಆದರೂ ಕಂಗೆಡಲಿಲ್ಲ. ಆದರೆ 'ಕೊತ್ತಲವಾಡಿ' ಸಿನಿಮಾ ವಿವಾದ ಆಕೆಗೆ ಬೇಸರ ತಂದಿದೆ. ಇದೇ ಕಾರಣಕ್ಕೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವಾರದ ಹಿಂದೆ ಪುಷ್ಪಾ ಅರುಣ್ ಕುಮಾರ್ ದೂರು ನೀಡಿದ್ದು ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ. ಹರೀಶ್ ಕನ್ನಡ ಚಿತ್ರರಂಗದಲ್ಲಿ ಪಿಆರ್ಓ ಆಗಿ ಗುರ್ತಿಸಿಕೊಂಡಿದ್ದಾನೆ. ಸಾಕಷ್ಟು ಸಿನಿಮಾಗಳನ ಪ್ರಚಾರ ಕಾರ್ಯ ನಿಭಾಯಿಸುತ್ತಿದ್ದಾನೆ. ಆದರೆ 'ಕೊತ್ತಲವಾಡಿ' ಸಿನಿಮಾ ಪ್ರಚಾರವನ್ನು ತಾನೇ ಮಾಡುವುದಾಗಿ ಹೇಳಿ ಹಣ ಪಡೆದು ಮೋಸ ಮಾಡಿರುವ ಆರೋಪ ಬಂದಿದೆ. ಸಾಕಷ್ಟು ಜನ ಆತನನ್ನು ನಂಬಿ ಸಿನಿಮಾ ಪ್ರಚಾರ ಮಾಡಿ ಹಣ ಕೊಟ್ಟಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಪಿಆರ್ಓ ಹರೀಶ್ ಕಾರಣಕ್ಕೆ ಕಲಾವಿದರಾದ ಸ್ವರ್ಣಲತಾ ಹಾಗೂ ಮಹೇಶ್ ಗುರು ತನ್ನ ಬಗ್ಗೆ ತಪ್ಪಾಗಿ ಕಾಮೆಂಟ್ ಮಾಡಿದ್ದಾರೆ. ಆಗಸ್ಟ್ 15ರಂದು ನನಗೆ ಹಾಗೂ ಚಿತ್ರದ ನಿರ್ದೇಶಕ ಶ್ರೀರಾಜ್ಗೆ ಹರೀಶ್ ಹಾಗೂ ಇತರರಿಂದ ಬೆದರಿಕೆ ಕರೆ ಬಂದಿದೆ. ವಂಚನೆ, ಬೆದರಿಕೆ, ಮಾನನಷ್ಟ ಹಾಗೂ ಕ್ರಿಮಿನಲ್ ಪಿತೂರಿಗಾಗಿ ಐವರ ವಿರುದ್ಧ ಕ್ರಮಕ್ಕೆ ಪುಷ್ಪಾ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮನವಿ ಮಾಡಿದ್ದಾರೆ.
ರಾಜೇಶ್ ನಟರಂಗ, ಅವಿನಾಶ್ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಕೂಡ 'ಕೊತ್ತಲವಾಡಿ' ಚಿತ್ರದಲ್ಲಿ ನಟಿಸಿದ್ದರು. ಹಳ್ಳಿ ಸೊಡಗಿನ ಈ ಚಿತ್ರದಲ್ಲಿ ಮರಳು ಮಾಫಿಯಾ, ಹಳ್ಳಿಯ ರಾಜಕೀಯ ದೊಂಬರಾಟದ ಕತೆ ಹೇಳಲಾಗಿತ್ತು. ಮುಂದೆ ನಟ ಶರಣ್ ಹೀರೊ ಆಗಿ 2ನೇ ಸಿನಿಮಾ ಮಾಡುವುದಾಗಿ ಪುಷ್ಪಾ ಹೇಳಿದ್ದಾರೆ.


Click it and Unblock the Notifications











