ವಿಷ್ಣುವರ್ಧನ್ ಸಮಾಧಿ ನೆಲಸಮ; ನಟ ಯಶ್ ಸಹೋದರಿ ನಂದಿನಿ ಪ್ರತಿಕ್ರಿಯೆ
ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ವಿಷ್ಣುವರ್ಧನ್ ಸಮಾಧಿ ತೆರವು ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೈಕೋರ್ಟ್ ಆದೇಶ ಎಂದು ಹೇಳಿ ರಾತ್ರೋರಾತ್ರಿ ವಿಷ್ಣು ಸಮಾಧಿ ಗೋಪುರವನ್ನು ಸಂಪೂರ್ಣವಾಗಿ ಕೆಡವಲಾಗಿದೆ. ಈ ಬಗ್ಗೆ ಕನ್ನಡ ಸಿನಿಮಾ ತಾರೆಯರು ಒಬ್ಬೊಬ್ಬರಾಗಿ ಪ್ರತಿಕ್ರಿಯಿಸಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ದಾದಾ ಸ್ಮಾರಕ ಮರುಸ್ಥಾಪನೆಗಾಗಿ ಕೋರ್ಟ್ಗೆ ಹೋಗಲು ಸಿದ್ಧ, ಹಣಕಾಸು ನೆರವಿಗೂ ಬದ್ಧ ಎಂದು ನಟ ಸುದೀಪ್ ಹೇಳಿದ್ದಾರೆ. ಇನ್ನುಳಿದಂತೆ ನಟರಾದ ಶ್ರೀಮುರಳಿ, ವಶಿಷ್ಟ ಸಿಂಹ, ರಿಷಬ್ ಶೆಟ್ಟಿ, ನಟಿಯರಾದ ಶ್ರುತಿ ಸೇರಿದಂತೆ ಹಲವರು ಈ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಇಂತಹ ವಿದ್ಯಮಾನಗಳು ನಡೆದಾಗ ಸ್ಟಾರ್ ನಟರೆಲ್ಲಾ ಬೆಂಬಲ ಸೂಚಿಸಬೇಕು, ಜೊತೆಗೆ ನಿಲ್ಲಬೇಕು ಎಂದು ಅಭಿಮಾನಿಗಳು ಬಯಸುತ್ತಾರೆ. ನಟರಾದ ದರ್ಶನ್, ಯಶ್ ಸೇರಿ ಕೆಲವರು ಯಾಕೆ ಇನ್ನು ಮೌನವಾಗಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

'ಮಿ. & ಮಿ ರಾಮಾಚಾರಿ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸಿದ್ದರು. ಆ ಚಿತ್ರಕ್ಕಾಗಿ 'ನಾಗರಹಾವು' ಚಿತ್ರದ ರೆಫರೆನ್ಸ್ ಕೂಡ ತೆಗೆದುಕೊಳ್ಳಲಾಗಿತ್ತು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದ್ದು ಗೊತ್ತೇಯಿದೆ. 'KGF' ಸರಣಿಗೂ ಮುನ್ನ ಇದು ಯಶ್ ನಟನೆಯ ಅತಿದೊಡ್ಡ ಹಿಟ್ ಸಿನಿಮಾ ಎನಿಸಿತ್ತು. ಹೀಗೆ ಸಿನಿಮಾದಲ್ಲಿ ದಾದಾ ಅಭಿಮಾನಿ ಎಂದು ಹೇಳಿದವರು ಈಗ ಯಾಕೆ ಸುಮ್ಮನಿದ್ದಾರೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕೊನೆ ಪಕ್ಷ ಒಂದು ಪೋಸ್ಟ್ ಮಾಡಬಹುದಿತ್ತಲ್ಲ ಎಂದು ಕೇಳುತ್ತಿದ್ದಾರೆ.
ನಟ ಯಶ್ ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎನ್ನುವ ಚರ್ಚೆ ನಡುವೆ ಇದೀಗ ಅವರ ಸಹೋದರಿ ನಂದಿನಿ ರಾಹುಲ್ ಪೋಸ್ಟ್ ವೈರಲ್ ಆಗುತ್ತಿದೆ. "ವಿಷ್ಣು ದಾದಾ ಅವರ ಸಮಾಧಿಯನ್ನು ನೆಲಸಮ ಮಾಡಿರಬಹುದು. ಆದರೆ ಇವರು ಕನ್ನಡಿಗರ ಮನಸಲ್ಲಿ ಕಟ್ಟಿರುವ ಅರಮನೆಯನ್ನು ಕೆಡವಲು ಸಾಧ್ಯವೇ..? ಕರ್ನಾಟಕಕ್ಕೆ ಇವರು ಯಾವಾಗಲೂ ಯಜಮಾನರೆ" ಎಂದು ಯಶ್ ಅಭಿಮಾನಿಗಳು ಬಳಗದ ಸೋಶಿಯಲ್ ಮೀಡಿಯಾ ಪೋಸ್ಟ್ ಅನ್ನು ನಂದಿನಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದಾರೆ. ಅದು ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ನಂದಿನಿ ಬೆಂಗಳೂರು ಕಲಿನರಿ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು ಶೆಫ್ ಆಗಿ ಕೆಲಸ ಮಾಡುತ್ತಿದ್ದಾರೆ.
ಮಾತನಾಡುವುದಕ್ಕಿಂತ ಏನಾದರೂ ಮಾಡಿ ತೋರಿಸುವುದು ಮುಖ್ಯ ಎಂದು ನಂಬಿದವರು ನಟ ಯಶ್. ಸಾಹಸಸಿಂಹ ವಿಷ್ಣುವರ್ಧನ್ ಅಭಿಮಾನಿಯಾಗಿರುವ ಯಶ್ ಈ ಬಗ್ಗೆ ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ. ಇನ್ನು ರಕ್ಷಾಬಂಧನ್ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಅಣ್ಣನಿಗೆ ನಂದಿನಿ ರಾಕಿ ಕಟ್ಟಿ ಸಂಭ್ರಮಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊವನ್ನು ಹಂಚಿಕೊಂಡಿದ್ದರು.

ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರ ಅಭಿಮಾನಿಗಳಿಗೆ ಬಹಳ ನೋವು ತಂದಿದೆ. ದಾದಾ ಸಮಾಧಿ ಜಾಗಕ್ಕೆ ಅಭಿಮಾನಿಗಳು ತೆರಳಲು ಅವಕಾಶ ಸಿಗುತ್ತಿಲ್ಲ. ಮತ್ತೆ ಅಲ್ಲಿ ಸ್ಮಾರಕ ನಿರ್ಮಾಣ ಆಗಬೇಕು ಎಂದು ಅಭಿಮಾನಿಗಳು ಪ್ರತಿಭಟನೆ ಕೂಡ ನಡೆಸಿದ್ದರು. ಇದೇ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸ್ಮಾರಕ ಸಂರಕ್ಷಣೆಗೆ ಆಗ್ರಹಿಸಿದ್ದಾರೆ.
ವಿಷ್ಣುವರ್ಧನ್ ಸಮಾಧಿ ನೆಲಸಮ ವಿಚಾರವಾಗಿ ಬಾಲಕೃಷ್ಣ ಕುಟುಂಬ ಸದಸ್ಯರಾದ ಗೀತಾ ಬಾಲಿ ಟಿವಿ9 ವಾಹಿನಿಗೆ ಪ್ರತಿಕ್ರಿಯಿಸಿದ್ದಾರೆ. "ನನ್ನ ಕೊನೆಯ ತಮ್ಮ ಕಾರ್ತಿಕ್ನಿಂದಲೇ ಇದೆಲ್ಲಾ ನಡೆದಿದೆ. ದೊಡ್ಡದಾಗಿ ಬ್ಯುಸಿನೆಸ್ ಮಾಡಲು ಹೀಗೆಲ್ಲಾ ಮಾಡ್ತಿದ್ದಾನೆ" ಎಂದಿದ್ದಾರೆ.


Click it and Unblock the Notifications











