Yash: ಬಾಲಿವುಡ್ಗೆ ಹೋಗಲ್ವಂತೆ ಯಶ್: ನೀಡಿದ ಕಾರಣ ಬೊಂಬಾಟ್
ನಟ ಯಶ್ ಈಗ ಕೇವಲ ಕನ್ನಡದ ಸ್ಟಾರ್ ನಟರಲ್ಲ ಅವರು ಪ್ಯಾನ್ ಇಂಡಿಯಾ ಸ್ಟಾರ್. ಇದೀಗ ಬಿಡುಗಡೆ ಆಗುತ್ತಿರುವ 'ಕೆಜಿಎಫ್ 2' ಸಿನಿಮಾದ ಮೂಲಕ ವಿಶ್ವಮಟ್ಟದ ಸ್ಟಾರ್ ಆಗಲು ಹೊರಟಿದ್ದಾರೆ.
'ಕೆಜಿಎಫ್ 2' ಪ್ರಚಾರಕ್ಕಾಗಿ ದೇಶ ಪರ್ಯಟನೆ ಮಾಡುತ್ತಿರುವ ಯಶ್ ಹಲವು ಸಂದರ್ಶನಗಳು, ಸುದ್ದಿಗೋಷ್ಠಿಗಳನ್ನು ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಯಶ್ ಹೋದಲೆಲ್ಲ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಮಾಧ್ಯಮಗಳು ಸಹ.
ಮುಂಬೈ, ದೆಹಲಿಗಳಲ್ಲಿ ಹಲವು ಸಂದರ್ಶನಗಳನ್ನು ಯಶ್ ನೀಡಿದ್ದು, ಮಾಧ್ಯಮದವರು ನೀವೇಕೆ ಬಾಲಿವುಡ್ಗೆ ಪಾದಾರ್ಪಣೆ ಮಾಡಬಾರದು ಎಂಬರ್ಥದ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ 'ರಾಕಿ ಭಾಯ್' ಮಾದರಿಯಲ್ಲಿ ಉತ್ತರ ನೀಡಿದ್ದಾರೆ ಯಶ್.
Recommended Video


ಎಲ್ಲೇ ಇದ್ದರೂ ಒಳ್ಳೆಯ ಸಿನಿಮಾ ಮಾಡಿ ಎಲ್ಲರಿಗೂ ತಲುಪಿಸುವ ಧ್ಯೇಯ
''ನೀವು ನೇರವಾಗಿ ಬಾಲಿವುಡ್ಗೆ ಬರದೆ, ಬಾಲಿವುಡ್ ಸ್ಟಾರ್ಗಳು ನಿಮಗಾಗಿ ಬರುವಂತೆ ಮಾಡಿದಿರಿ, ಸಂಜಯ್ ದತ್ ನಿಮಗಾಗಿ ಬಂದರು, ರವೀನಾ ಟಂಡನ್ ನಿಮ್ಮ ಜೊತೆ ಇದ್ದಾರೆ. ಪೃಥ್ವಿರಾಜ್ ನಿಮ್ಮ ಸಿನಿಮಾ ಪ್ರೆಸೆಂಟ್ ಮಾಡುತ್ತಿದ್ದಾರೆ. ಕರಣ್ ಜೋಹರ್ ನಿಮ್ಮ ಟ್ರೇಲರ್ ಇವೆಂಟ್ ಅನ್ನು ನಿರೂಪಣೆ ಮಾಡಿದರು. ಇದೆಲ್ಲ ಹೇಗೆ ಸಾಧ್ಯವಾಯಿತು'' ಎಂಬ ಸಂದರ್ಶಕಿಯ ಪ್ರಶ್ನೆಗೆ ಉತ್ತರಿಸಿದ ಯಶ್, ''ಇನ್ಯಾವುದೋ ಚಿತ್ರರಂಗಕ್ಕೆ ಹೋಗಿ ಅಲ್ಲಿ ಕೆಲಸ ಮಾಡಿದರೆ, ಅದು ದೊಡ್ಡ ಸಾಧನೆ ಎಂದು ನಾನು ಅಂದುಕೊಂಡಿಲ್ಲ. ನಾವು ಎಲ್ಲೇ ಇದ್ದರು ಎಷ್ಟು ಒಳ್ಳೆಯ ಸಿನಿಮಾ ಮಾಡುತ್ತೇವೆ ಎಂಬುದಷ್ಟೆ ನನ್ನ ಆಲೋಚನೆ'' ಎಂದಿದ್ದಾರೆ ಯಶ್.

''ಯಾವ ಭಾಷೆಯಲ್ಲಾಗಲಿ ಸಿನಿಮಾ ಮಾಡಿ ವಿಶ್ವಕ್ಕೆ ನೀಡಬಹುದು''
ಮುಂದುವರೆದು, ''ಈ ಡಿಜಿಟಲ್ ಪ್ರಪಂಚದಲ್ಲಿ ಪರಿಸ್ಥಿತಿಗಳು ಅದೆಷ್ಟು ಬೇಗನೆ ಬದಲಾಗಿವೆ. ಒಟಿಟಿ ಫ್ಲ್ಯಾಟ್ಫಾರ್ಮ್ ಇತರೆಗಳಿಂದ ಇಂದು ನಮ್ಮ ಪ್ರೇಕ್ಷಕ ಕೊರಿಯಾದ ಕಂಟೆಂಟ್, ಇನ್ಯಾವುದೇ ದೇಶದ ಭಾಷೆಯ ಕಂಟೆಂಟ್ ನೋಡುತ್ತಿದ್ದಾನೆ. ಹೀಗಿದ್ದಾಗ ನಾವು, ನನ್ನದು ಆ ಭಾಷೆಯ ಸಿನಿಮಾ, ನನ್ನದು ಈ ಚಿತ್ರರಂಗ ಎಂದು ಕುಳಿತುಕೊಳ್ಳುವಂತಿಲ್ಲ. ನಾನು ಇನ್ನೊಂದು ಚಿತ್ರರಂಗಕ್ಕೆ ಕಾಲಿಡುತ್ತೇನೆ ಅಲ್ಲಿ ಕೆಲಸ ಮಾಡುತ್ತೇನೆ ಎಂದುಕೊಳ್ಳುವಂತಿಲ್ಲ. ನೀವು ಎಲ್ಲೇ ಇದ್ದರು ಒಳ್ಳೆಯ ಸಿನಿಮಾ ಮಾಡಿದರೆ ವಿಶ್ವದ ಪ್ರೇಕ್ಷಕನಿಗೆ ನೀನು ತಲುಪಿಸಬಹುದು. ಅದಕ್ಕೆ ಬೇರೆ ಚಿತ್ರರಂಗಕ್ಕೆ ಹೋಗುವ ಅವಶ್ಯಕತೆ ಇಲ್ಲ'' ಎಂದಿದ್ದಾರೆ ಯಶ್.

ಇನ್ನಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಲು ಬಂದಿದ್ದೇನೆ: ಯಶ್
''ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್ ಎಂಬುದೆಲ್ಲ ಏನಿಲ್ಲ. ನಾನು ಬಾಲಿವುಡ್ಗೆ ಬಂದರೆ, ಇಷ್ಟು ದಿನ ನನ್ನ ಸಿನಿಮಾ ನೋಡಿ ಮೆಚ್ಚಿದ ಜನರನ್ನು ನಾನು ರಂಜಿಸುವುದು ಹೇಗೆ? ನನ್ನ ಫ್ಯಾನ್ಗಳನ್ನು ರಂಜಿಸುವುದು ಹೇಗೆ? ನಾನು ಇಲ್ಲಿಗೆ ಬಂದಿರುವುದು ಹೆಚ್ಚು ಇನ್ನಷ್ಟು ಅಭಿಮಾನಿಗಳನ್ನು ಗಳಿಸಿಕೊಳ್ಳಲು, ಇನ್ನಷ್ಟು ಜನರಿಗೆ ನಾವು ಎಷ್ಟು ಒಳ್ಳೆಯ ಕೆಲಸ ಮಾಡಬಲ್ಲೆವು ಎಂದು ತೋರಿಸಲು. ಹೀಗಿದ್ದಾಗ, ನಾನು ಈಗಾಗಲೇ ಇರುವ ಆಸ್ತಿಯನ್ನು ಬಿಟ್ಟು ಹೊಸ ಗಡಿಯೊಳಗೆ ಪ್ರವೇಶಿಸುವುದರಲ್ಲಿ ಅರ್ಥವೇ ಇಲ್ಲ'' ಎಂದಿದ್ದಾರೆ ಯಶ್.

ಒಳ್ಳೆಯ ಉದ್ದೇಶಕ್ಕಾಗಿ ಎಲ್ಲರೂ ಒಟ್ಟಿಗೆ ಸೇರಿದ್ದೇವೆ: ಯಶ್
''ಈಗ 'ಕೆಜಿಎಫ್ 2' ಜೊತೆಗೆ ಸೇರಿರುವ ಸ್ಟಾರ್ ನಟ-ನಟಿಯರಿಗೆ ಈ ವಿಷಯ ಚೆನ್ನಾಗಿ ಅರ್ಥವಾಗಿದೆ. ಯಾವುದೇ ಭಾಷೆಯಲ್ಲಾಗಲಿ ಏನೋ ಒಂದು ಒಳ್ಳೆಯದಾಗುತ್ತಿದೆ ಎಂದರೆ ನಾವು ಅದರ ಜೊತೆಗಿರಬೇಕು ಎಂಬುದು ಅವರ ಆಸೆಯಾಗಿದೆ. 'ಕೆಜಿಎಫ್ 2' ಜೊತೆ ಸೇರಿರುವ ಪರಭಾಷೆಯ ಸ್ಟಾರ್ಗಳಿಗೆ ಅವರದ್ದೇ ಆದ ಶಕ್ತಿ ಇದೆ, ಕೆಲವು ವಿಭಾಗಗಳಲ್ಲಿ ಅಗಾಧ ಅನುಭವ, ಪರಿಣಿತಿ ಇದೆ, ಅದನ್ನು ನಾವು ನಮ್ಮ ಸಿನಿಮಾದ ಒಳಿತಾಗಿ ಬಳಸಿಕೊಳ್ಳುತ್ತಿದ್ದೇವೆ. ಇದು ಕೇವಲ ಬ್ಯುಸಿನೆಸ್ಗೆ ಸಂಬಂಧಿಸಿದ್ದು ಮಾತ್ರವಲ್ಲ. ನಾವು ಒಟ್ಟಾರೆಯಾಗಿ ಪ್ರಗತಿ ಸಾಧಿಸಲು ಸಹ ಇಂಥಹಾ ಒಳಗೊಳ್ಳುವಿಕೆಗಳು ಸಹಾಯ ಮಾಡುತ್ತವೆ'' ಎಂದಿದ್ದಾರೆ ಯಶ್.

ಏಪ್ರಿಲ್ 14 ಕ್ಕೆ ಸಿನಿಮಾ ಬಿಡುಗಡೆ
ಯಶ್ ನಟಿಸಿರುವ ಬಹುನಿರೀಕ್ಷಿತ ಸಿನಿಮಾ 'ಕೆಜಿಎಫ್ 2' ಇದೇ ಏಪ್ರಿಲ್ 14 ಕ್ಕೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಪ್ರಚಾರ ಕಾರ್ಯಕ್ರಮದಲ್ಲಿ ಯಶ್ ಬ್ಯುಸಿಯಾಗಿದ್ದು ದೆಹಲಿ, ಮುಂಬೈ, ಪುಣೆಗಳಲ್ಲಿ ಅದ್ಧೂರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೈದರಾಬಾದ್, ಚೆನ್ನೈ, ತಿರುವನಂತಪುರಂ ಬಳಿಕ ಕರ್ನಾಟಕದ ವಿವಿಧ ನಗರಗಳಲ್ಲಿ ಪ್ರಚಾರ ಮಾಡಲಿದ್ದಾರೆ. ಸಿನಿಮಾದಲ್ಲಿ ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ, ರಾವ್ ರಮೇಶ್ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











