ಬಲವಂತವಾಗಿ ಕನ್ನಡ ಕಲಿಸೋದಲ್ಲ, ಭಾಷೆ ಉಳಿವಿಗೆ ಮಾಡಬೇಕಿರುವುದು ಇಷ್ಟೇ- ನಟ ಯಶ್
ನಟ ಯಶ್ ಸಿನಿಮಾ ಕೆಲಸಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ. ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಆದರೂ ಆದಾಯ ತೆರಿಗೆ ಇಲಾಖೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪತ್ನಿ ರಾಧಿಕಾ ಪಂಡಿತ್ ಸಮೇತ ಯಶ್ ಪಾಲ್ಗೊಂಡಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊ, ವೀಡಿಯೋ ವೈರಲ್ ಆಗ್ತಿದೆ.
ಇನ್ಕಂ ಟ್ಯಾಕ್ಸ್ ಸ್ಪೋರ್ಟ್ಸ್ ಮತ್ತು ರೀ ಕ್ರಿಯೇಷನ್ ಕ್ಲಬ್ ಬೆಂಗಳೂರು ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ನಟ ಯಶ್ ದಂಪತಿ ನಿನ್ನೆ(ನವೆಂಬರ್ 25) ಭಾಗಿ ಆಗಿದ್ದರು. ಬಿಳಿ ಬಣ್ಣದ ಕುರ್ತಾ ಪೈಜಾಮಾ ಧರಿಸಿ ಯಶ್ ಮಿಂಚಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ವೆಂಕಟ್ ಕೋನಂಕಿ ಕೂಡ ಹಾಜರಾಗಿದ್ದರು. ಗೋವಾ ಹಾಗೂ ಕರ್ನಾಕಟ ಭಾಗದ ಚೀಫ್ ಕಮೀಷನರ್ ಆಫ್ ಇನ್ಕಂ ಟ್ಯಾಕ್ಸ್ ಐಆರ್ಎಸ್ ಅಧಿಕಾರಿ ಪ್ರೀತಿ ಗಾರ್ಗ್, ಡೈರೆಕ್ಟರ್ ಜನರಲ್ ಆಫ್ ಇನ್ಕಂ ಟ್ಯಾಕ್ಸ್ ಡಾ. ನರೇಂದ್ರ ಕುಮಾರ್, ಚೀಫ್ ಕಮೀಷನರ್ ಇನ್ಕಂ ಟ್ಯಾಕ್ಸ್ ಐಆರ್ಎಸ್ ಅಧಿಕಾರಿ ಪ್ರಿಸ್ಸಿಲ್ಲಾ ಸಿಂಗ್ಸಿಟ್ ಸೇರಿ ಹಲವು ಗಣ್ಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅನ್ಯಭಾಷಿಕರು ಹೆಚ್ಚು ಇದ್ದ ಕಾರಣ ಕನ್ನಡ ಹಾಗೂ ಇಂಗ್ಲೀಷ್ ಸೇರಿಸಿ ನಟ ಯಶ್ ಮಾತನಾಡಿದ್ದರು. ಕನ್ನಡ ಭಾಷೆಯ ಉಳಿವಿಗೆ ಏನು ಮಾಡಬೇಕು ಎನ್ನುವ ಕಿವಿಮಾತು ಹೇಳಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ನೋಡಿ ಎಲ್ಲರೂ ಸಂಭ್ರಮಿಸಿದ್ದರು. "ಎಲ್ಲರಿಗೂ ನಮಸ್ಕಾರ.. ಬಹಳ ಖುಷಿ ಆಗ್ತಿದೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಕ್ಕೆ. ಬಹಳ ದಿನಗಳಿಂದ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿ ಆಗಲು ಸಾಧ್ಯವಾಗಿರಲಿಲ್ಲ, ಜನರ ಜೊತೆ ಬೆರೆಯಲು ಸಾಧ್ಯವಾಗ್ತಿಲ್ಲ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದೀನಿ. ಬಹಳ ಪ್ರೀತಿಯಿಂದ ಕರೆದ್ರು. ನೀವು ಕರೆದಾಗ ಎಲ್ಲರೂ ಬರಲೇಬೇಕು" ಎಂದು ಯಶ್ ನಗೆಚಟಾಕಿ ಹಾರಿಸಿದ್ದಾರೆ.
ಮಾತು ಮುಂದುವರೆಸಿದ ಯಶ್ "ಹೆಚ್ಚು ಟ್ಯಾಕ್ಸ್ ಕಟ್ಟುವ ವಿಚಾರದಲ್ಲಿ ನಮ್ಮ ರಾಜ್ಯ 2ನೇ ಸ್ಥಾನದಲ್ಲಿದೆ ಎಂದು ಕೇಳಿ ಖುಷಿಯಾಯಿತು. ಆದಷ್ಟು ಬೇಗ ಮೊದಲ ಸ್ಥಾನಕ್ಕೆ ಏರುವುದು ನಮ್ಮ ಗುರಿಯಾಗಬೇಕು ಅನ್ನಿಸುತ್ತದೆ. ಭಾಷೆಯ ವಿಚಾರಕ್ಕೆ ಬಂದರೆ ಕನ್ನಡ ಬರದವರಿಗೆ ಕೂಡ ಇಲ್ಲಿ ಸ್ಪರ್ಧೆ ಇಟ್ಟು ಕನ್ನಡ ಕಲಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಬಹಳ ಜನಕ್ಕೆ ಕನ್ನಡ ಗೊತ್ತಿಲ್ಲ ಅನ್ಸತ್ತೆ. ನನಗೆ ಅನ್ನಿಸುವುದು ಏನು ಅಂದ್ರೆ ಎಲ್ಲಿಗೆ ಹೋದ್ರು, ಅಲ್ಲಿನ ಭಾಷೆ, ಸಂಸ್ಕೃತಿಗೆ ಗೌರವ ಕೊಟ್ಟರೆ ಅದರ ಹತ್ತು ಪಟ್ಟು ತಿರುಗಿ ಬರುತ್ತದೆ. ಅದೇ ಕರ್ನಾಟಕ, ಕನ್ನಡ ನನಗೆ ಕಲಿಸಿದೆ. ನೀವೆಲ್ಲಾ ಕನ್ನಡ ಕಲಿಯಲು ಯತ್ನಿಸಿದ್ದು ಖುಷಿಯಿದೆ" ಎಂದಿದ್ದಾರೆ.
ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಬಗ್ಗೆ ಯಶ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಕರ್ನಾಟಕಕ್ಕೆ ಬೇರೆ ಕಡೆಗಳಿಂದ ಬಂದವರು ಇಲ್ಲಿನ ಜನರ ಬಗ್ಗೆ ಒಳ್ಳೆ ಮಾತುಗಳನ್ನಾಡುತ್ತಾರೆ. ಅದು ನಮ್ಮ ಸಂಸ್ಕೃತಿ. ನಾವೆಲ್ಲರೂ ಬೇರೆಯವರಿಗೆ ಕನ್ನಡ ಕಲಿಸೋಣ. ಎಲ್ಲರಲ್ಲಿ ಒಂದು ಮನವಿ ಬಲವಂತವಾಗಿ ಯಾರಿಗೆ ಏನೂ ಕಲಿಸೋಕೆ ಆಗಲ್ಲ. ಬೇರೆಯವರು ಕನ್ನಡ ಕಲಿಯಬೇಕು ಎಂದು ಗಲಾಟೆ ಮಾಡುವ ಬದಲು ಕನ್ನಡ ಗೊತ್ತಿಲ್ಲದಿದ್ದರೆ ಇಲ್ಲಿ ಕಷ್ಟ ಎನ್ನುವ ಭಾವನೆ ಬರುವಂತೆ ಮಾಡಬೇಕು. ನನ್ನ ಪ್ರಕಾರ ಯಾವುದೇ ಭಾಷೆ ಹೊಟ್ಟೆ ತುಂಬಿಸುತ್ತದೆ. ಎಲ್ಲಾ ಕಡೆ ಕನ್ನಡಕ್ಕೆ ಪ್ರಾಮುಖ್ಯತೆ ಬರುವಂತೆ ಮಾಡಬೇಕು ಅಂದ್ರೆ ನಾವು ಕನ್ನಡಿಗರಾಗಿ ಅಭಿವೃದ್ಧಿಯಾಗುವಂತೆ ಮಾಡಬೇಕು" ಎಂದು ಸಲಹೆ ನೀಡಿದ್ದಾರೆ.
ಸದ್ಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಲ್ಲಿ ಯಶ್ ಕೆಲಸ ಮಾಡುತ್ತಿದ್ದಾರೆ. ಎರಡೂ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಸಹ ನಿರ್ಮಾಪಕರಿಗೆ ಕೈ ಜೋಡಿಸಿದ್ದಾರೆ. ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ದೀಪಾವಳಿಗೆ 'ರಾಮಾಯಣ' ಚಿತ್ರದ ಮೊದಲ ಭಾಗ ಬಿಡುಗಡೆಯಾಗಲಿದೆ.


Click it and Unblock the Notifications











