ಕಾಲ್ ಮಾಡಿ ಬಯ್ದಿದ್ದೆ; ತನ್ನ ಬಗ್ಗೆ ಇಲ್ಲದ್ದನ್ನು ಹೇಳಿ ಬಿಟ್ಟಿ ಕ್ರೆಡಿಟ್ ತೆಗೆದುಕೊಂಡವನ ಬಗ್ಗೆ ಯಶ್ ಮಾತು!
ರಾಕಿಂಗ್ ಸ್ಟಾರ್ ಯಶ್.. ಸದ್ಯಕ್ಕೆ ದಿ ಫೇಸ್ ಆಫ್ ಕನ್ನಡ ಸಿನಿಮಾ ಎಂದರೆ ತಪ್ಪಾಗಲಾರದು. ಏಕೆಂದರೆ ಕನ್ನಡ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಬಹುದು ಎಂಬುದನ್ನು ಕೆಜಿಎಫ್ ಚಿತ್ರ ಸರಣಿ ಮೂಲಕ ತೋರಿಸಿಕೊಟ್ಟದ್ದು ಇದೇ ರಾಕಿಂಗ್ ಸ್ಟಾರ್ ಯಶ್. ಹೀಗಾಗಿ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಎಂದರೆ ಮೊದಲು ತಲೆಗೆ ಬರುವ ಹೆಸರೇ ರಾಕಿಂಗ್ ಸ್ಟಾರ್ ಯಶ್.
ಇನ್ನು ಯಶ್ ಸಾಧನೆಗೆ ಕರ್ನಾಟಕದಲ್ಲಿ ಮಾತ್ರವಲ್ಲದೇ ರಾಜ್ಯದ ಹೊರಗೂ ಸಹ ದೊಡ್ಡ ಮಟ್ಟದಲ್ಲಿ ಪ್ರಶಂಸೆ ದೊರತಿದೆ. ಹಲವು ದೊಡ್ಡ ಸುದ್ದಿ ವಾಹಿನಿಗಳು ಯಶ್ ಅವರನ್ನು ವಿಶೇಷ ಸಂದರ್ಶನಗಳಿಗೆ ಆಹ್ವಾನಿಸಿ ಮಾತನಾಡಿಸಿವೆ. ಇದೀಗ ಇದೇ ಸಾಲಿಗೆ ಹೆಸರಾಂತ ಫಿಲ್ಮ್ ಕಂಪ್ಯಾನಿಯನ್ ಸಹ ಸೇರಿಕೊಂಡಿದೆ. ಹೌದು, ಫಿಲ್ಮ್ ಕಂಪ್ಯಾನಿಯನ್ ಬೆಂಗಳೂರಿನ ವಸಂತ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಡಿಸೆಂಬರ್ 15ರಂದು ಹಲವಾರು ಅಭಿಮಾನಿಗಳು ಹಾಗೂ ಸಿನಿ ರಸಿಕರ ಸಮ್ಮುಖದಲ್ಲಿ ಯಶ್ ಅವರ ಜತೆ ಸಂವಾದ ನಡೆಸಿತ್ತು.
ಈ ಕಾರ್ಯಕ್ರಮಕ್ಕೆ 'ರಾಕಿಂಗ್ ಸ್ಟಾರ್ ಯಶ್ - ದ ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ' ಎಂದು ಹೆಸರನ್ನು ಇಟ್ಟಿದ್ದ ಫಿಲ್ಮ್ ಕಂಪ್ಯಾನಿಯನ್ ಒಂದೊಳ್ಳೆ ಸಂವಾದವನ್ನು ನಡೆಸಿತು. ಯಶ್ ಸಹ ಸುಮಾರು 75 ನಿಮಿಷಗಳ ಸುದೀರ್ಘ ಸಂವಾದದಲ್ಲಿ ಮಾತನಾಡಿ ವಿವಿಧ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಇದೇ ಸಮಯದಲ್ಲಿ ತನ್ನ ಬಗ್ಗೆ ಕೆಲ ಸಂದರ್ಶನಗಳಲ್ಲಿ ಇಲ್ಲದ್ದನ್ನು ಹೇಳಿ ಕ್ರೆಡಿಟ್ ತೆಗೆದುಕೊಂಡದ್ದನ್ನೂ ಸಹ ಯಶ್ ನೆನಪಿಸಿಕೊಂಡರು.

ನನ್ನ ಬಗ್ಗೆ ಇಲ್ಲದ್ದನ್ನು ಹೇಳಿದ್ದರು
ಯಶ್ ಬೆಳೆದ ನಂತರ ಈ ಹಿಂದೆ ಯಶ್ ಜತೆ ಕಾಲ ಕಳೆದಿದ್ದ ಅವರ ಕೆಲ ಸ್ನೇಹಿತರು ಯಶ್ ಬಗ್ಗೆ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದನ್ನು ಮೆಲುಕು ಹಾಕಿದ ಯಶ್ ಕೆಲವರು ಇಲ್ಲದ್ದನ್ನು ಹೇಳಿಕೊಂಡು ಕ್ರೆಡಿಟ್ ತೆಗೆದುಕೊಂಡರು ಎಂದರು. "ಇತ್ತೀಚೆಗೆ ತುಂಬಾ ಸಂದರ್ಶನಗಳನ್ನು ನೋಡಿದ್ದೇನೆ, ಜನರು ಹಲವಾರು ಕತೆಗಳನ್ನು ಹೇಳಿದ್ದಾರೆ. ಇದನ್ನೆಲ್ಲಾ ನೋಡಿದ ನಾನು ಇದೆಲ್ಲಾ ನಡೆದಿದ್ದಾದರೂ ಯಾವಾಗ ಎಂದು ಆಶ್ಚರ್ಯದಿಂದ ನೋಡಿದ್ದೇನೆ" ಎಂದು ಯಶ್ ತಮಾಷೆಯಾಗಿ ಹೇಳಿಕೊಂಡರು.

ನಾಲ್ಕೈದು ದಿನ ಸ್ನಾನ ಮಾಡಿಲ್ಲ ಎಂದಿದ್ದ
ಇನ್ನೂ ಮುಂದುವರಿದು ಮಾತನಾಡಿದ ಯಶ್ "ಒಬ್ಬ ವ್ಯಕ್ತಿ ನಾನು ಐದು ದಿನ ಊಟ ಮಾಡಿರಲಿಲ್ಲ ಆ ಸಂದರ್ಭದಲ್ಲಲಿ ನನಗೆ ತಾನು ಊಟ ತಂದುಕೊಟ್ಟದ್ದಾಗಿ ಹೇಳಿಕೊಂಡಿದ್ದ. ಮತ್ತೊಬ್ಬ ನಾನು ನಾಲ್ಕೈದು ಸ್ನಾನ ಮಾಡಿಯೇ ಇರಲಿಲ್ಲ ಎಂದು ಹೇಳಿದ್ದ. ಇದನ್ನು ನನ್ನಿಂದ ತಡೆದುಕೊಳ್ಳಲಾಗಿಲ್ಲ. ತಕ್ಷಣವೇ ಆತನಿಗೆ ಕರೆ ಮಾಡಿ ನಾನು ಯಾವಾಗ ಐದು ದಿನ ಸ್ನಾನ ಮಾಡದೇ ಇದ್ದೆ, ಇದು ಯಾವಾಗ ನಡೆಯಿತು, ನಿನಗೆ ಕ್ರೆಡಿಟ್ ಬೇಕಿದ್ರೆ ಬೇರೆ ಏನಾದ್ರೂ ಹೇಳು ಸಮಸ್ಯೆ ಇಲ್ಲ, ಆದರೆ ಸ್ವಚ್ಛತೆ ವಿಷಯದಲ್ಲಿ ತಮಾಷೆ ಬೇಡ ಎಂದು ಬಯ್ದಿದ್ದೆ" ಎಂದು ನಗುತ್ತಲೇ ಹೇಳಿದರು. ಇನ್ನು ಯಾವಾಗಲೂ ಚೆನ್ನಾಗಿ ಕಾಣಬೇಕು ಎಂದು ಚೆನ್ನಾಗಿ ಡ್ರೆಸ್ ಮಾಡಿಕೊಳ್ಳುತ್ತಿದ್ದ ತನ್ನ ಬಗ್ಗೆ ಈ ರೀತಿ ಹೇಳಿದ್ದು ಬೇಸರವಾಗಿತ್ತು ಎಂದು ಯಶ್ ಹೇಳಿದರು.

ಯಶ್ ಚೇಂಜ್ ಆದ ಅಂತಾರೆ, ಬದಲಾದ್ರೇನೆ ಬೆಲೆ!
ಇನ್ನು ತಾನು ಬದಲಾಗಿದ್ದೇನೆ ಎಂದು ಮಾತನಾಡುವವರಿಗೂ ಸಹ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ಬದಲಾದರೇನೆ ಬೆಲೆ ಎಂಬರ್ಥದಲ್ಲಿ ಯಶ್ ಮಾತನಾಡಿದ್ದಾರೆ. ಯಾವ ಜಾಗದಲ್ಲಿ ಇರುತ್ತೇವೋ ಅಲ್ಲೇ ಇದ್ದರೆ ಬೆಲೆ ಇರುವುದಿಲ್ಲ ಎಂದು ಯಶ್ ಹೇಳಿದರು. ಉದಾಹರಣೆಗೆ ಊರಿಗೆ ಹೋದರೆ ಈಗಲೂ 'ಇವನಾ ಇಲ್ಲೇ ಓಡಾಡ್ಕೊಂಡು ಇದ್ದ ಎನ್ನುತ್ತಾರೆ, ಕಾಲೇಜಿಗೆ ಹೋದರೆ 'ಇವನು ನನ್ನ ಜೊತೆಗೆ ಓದಿದ್ದು, ಈಗ ದೊಡ್ಡ ಸ್ಟಾರ್ ಆಗಿಬಿಟ್ಟ' ಹಾಗೂ ನಾಟಕ ಕ್ಷೇತ್ರಕ್ಕೆ ಹೋದರೆ 'ಇವನಿಗೆ ನಾಟಕದಲ್ಲಿ ಅವಕಾಶ ಕೊಡಿಸಿದ್ದೇ ನಾನು' ಎಂದು ಮಾತನಾಡುವವರಿದ್ದಾರೆ ಎಂದು ಯಶ್ ಹೇಳಿದರು. ಹೀಗಾಗಿ ಬದಲಾಗಬೇಕು ಎಂದು ಯಶ್ ಬದಲಾವಣೆಯನ್ನು ಬೆಳವಣಿಗೆಗೆ ಹೋಲಿಸಿ ಮಾತನಾಡಿದ್ದಾರೆ.


Click it and Unblock the Notifications











