ಅನಂತ್ ನಾಗ್ಗೆ ಪದ್ಮ ಪ್ರಶಸ್ತಿ ಅಭಿಯಾನ ಬೆಂಬಲಿಸಿದ ನಟ ಯಶ್
ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕು ಎಂಬ ಅಭಿಯಾನವನ್ನು ರಾಕಿಂಗ್ ಸ್ಟಾರ್ ಯಶ್ ಬೆಂಬಲಿಸಿದ್ದಾರೆ. ''ಅನಂತ್ ನಾಗ್ ಕರ್ನಾಟಕದ ಹೆಮ್ಮೆ, ಭಾರತೀಯ ಚಿತ್ರರಂಗ ಅಭಿಜ್ಞಾ' ಎಂದು ಟ್ವಿಟ್ಟರ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅನಂತ್ ನಾಗ್ ಅವರ ಜೊತೆಗಿನ ಫೋಟೋ ಹಂಚಿಕೊಂಡಿರುವ ಯಶ್ ಮಿಸ್ಟರ್ ಪರ್ಫೆಕ್ಟ್ ಬಗ್ಗೆ ಬಹಳ ಪ್ರಶಂಸೆಯ ನುಡಿಗಳನ್ನು ಹಾಡಿದ್ದಾರೆ.
''ಅಭಿನಯ ಎನ್ನುವುದು ವರ್ತನೆ ಎಂದು ಅನಂತ್ ನಾಗ್ ಅವರು ಒಮ್ಮೆ ಹೇಳಿದ್ದರು. ಆ ಮಾತು ನನ್ನಲ್ಲಿ ಇನ್ನು ಉಳಿದಿದೆ. ಅವರ ಹಾಸ್ಯ ಪ್ರಧಾನ ಸಿನಿಮಾಗಳನ್ನು ನೋಡಿ ನಕ್ಕವನು ನಾನು ಬೆಳೆದವನು ನಾನು. ಅವರ ಅತ್ತಾಗ ನನ್ನ ಕಣ್ಣು ಸಹ ಒದ್ದೆಯಾಗಿತ್ತು. ಆ ಮಹಾನ್ ಕಲಾವಿದನ ಜೊತೆ ನಟಿಸಬೇಕು ಎನ್ನುವ ಹಂಬಲ ಎಂದೆಂದಿಗೂ ಇರಲಿದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಅನಂತ್ ನಾಗ್ ಕರ್ನಾಟಕದ ಹೆಮ್ಮೆ
''ಅವರ ಸಿನಿಮಾಗಳು ಇಂದಿಗೂ ಪ್ರಸ್ತುತ. ಕಿರುತೆರೆಯಿಂದ ಹಿಡಿದು ನನ್ನ ಸಿನಿಮಾ ಪಯಣದ ಆರಂಭದ ದಿನಗಳಿಂದಲೂ ಈ ಅದ್ಭುತ ಕಲಾವಿದನ ಜೊತೆ ನಟಿಸುವ ಅದೃಷ್ಟ ನನಗೆ ಸಿಕ್ಕಿದೆ. ಅನಂತ್ ನಾಗ್ ಅವರ ಅಪಾರ ಜ್ಞಾನ ನನಗೆ ಪ್ರೇರಣೆಯಾಗಿದೆ. ಅನಂತ್ ನಾಗ್ ಕರ್ನಾಟಕ ಹೆಮ್ಮೆ. ಅವರು ಕೇವಲ ನಟರಲ್ಲ ಅವರು ಭಾರತೀಯ ಸಿನಿಮಾರಂಗದ ಅಭಿಜ್ಞಾ. ಪದ್ಮ ಪ್ರಶಸ್ತಿಗೆ ಇವರಿಗಿಂತ ಉತ್ತಮರು ಯಾರು?'' ಎಂದು ನಟ ಯಶ್ ಪ್ರಶ್ನಿಸಿದ್ದಾರೆ.

ಪುನೀತ್ ಬೆಂಬಲಿಸಿದ್ದರು
ಇದಕ್ಕೂ ಮುಂಚೆ ಪುನೀತ್ ರಾಜ್ ಕುಮಾರ್ ಸಹ ಈ ಅಭಿಯಾನಕ್ಕೆ ಕೈ ಜೋಡಿಸಿದ್ದರು. ''ನನ್ನ ನೆಚ್ಚಿನ ನಟರಲ್ಲಿ ಒಬ್ಬರಾದ ಶ್ರೀಯುತ ಅನಂತನಾಗ್ ಸರ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ನಮ್ಮೆಲ್ಲರ ಆಶೆ. ನಾನು ಅವರ ದೊಡ್ಡ ಅಭಿಮಾನಿ. ಸಿನಿಮಾ ರಂಗಕ್ಕೆ ಅನಂತನಾಗ್ ಸರ್ ಅವರ ಕೊಡುಗೆ ಅಪಾರ'' ಎಂದು ಪುನೀತ್ ಟ್ವೀಟ್ ಮಾಡಿದ್ದರು.

ರಕ್ಷಿತ್-ರಿಷಭ್ ಶೆಟ್ಟಿ ಬೆಂಬಲ
ನಟ ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿ ಸಹ ಅನಂತ್ ನಾಗ್ಗೆ ಪದ್ಮ ಕೊಡಿ ಅಭಿಯಾನಕ್ಕೆ ಕೈ ಜೋಡಿಸಿದ್ದರು. ''ನಟ, ನಿರ್ದೇಶಕ ರಿಷಬ್ ಟ್ವೀಟ್ ಅನ್ನು ಶೇರ್ ಮಾಡಿ ರಕ್ಷಿತ್, "ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ" ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು.
Recommended Video

ಜನರ ಅಭಿಪ್ರಾಯ ಸಂಗ್ರಹ
ಭಾರತದಲ್ಲಿ ನೀಡಲಾಗುವ ಅತ್ಯಂತ ಗೌರವವಾನ್ವಿತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗೆ ಹೆಸರು ಸೂಚಿಸುವಂತೆ ಕೇಂದ್ರ ಸರ್ಕಾರ 'ಪೀಪಲ್ಸ್ ಪದ್ಮ' ಹೆಸರಿನಡಿಯಲ್ಲಿ ಕರೆ ನೀಡಿದೆ. ಸರ್ಕಾರದ ಈ ನಿರ್ಧಾರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಸಾಲಿನ ಪದ್ಮ ಪ್ರಶಸ್ತಿಗಾಗಿ ಕರ್ನಾಟಕದಿಂದ ಹಿರಿಯ ನಟ ಅನಂತ್ ನಾಗ್, ಹಂಸಲೇಖ, ಹಿರಿಯ ಕಲಾವಿದ ಬಿರಾದರ್ ಅಂತವರ ಹೆಸರು ಮುಂಚೂಣಿಯಲ್ಲಿದೆ.


Click it and Unblock the Notifications











