'ಕೆಜಿಎಫ್ 2' ಗೆಲ್ಲಿಸಿದ್ದಕ್ಕೆ ಕತೆಯ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಯಶ್
'ಕೆಜಿಎಫ್ 2' ಸಿನಿಮಾ ಐತಿಹಾಸಿಕ ಹಿಟ್ ಎನಿಸಿಕೊಂಡಿದೆ. ಕೇವಲ 7 ದಿನಗಳಲ್ಲಿ 700 ಕೋಟಿ ರುಪಾಯಿ ಗಳಿಸಿ ಮುನ್ನುಗ್ಗುತ್ತಿದೆ. ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಗಳಿಸಲಿ ದಾಖಲೆ ಬರೆಯಲಿದೆ ಈ ಸಿನಿಮಾ.
Recommended Video

ನಟ ಯಶ್ ಸೇರಿದಂತೆ ಇಡೀ ಚಿತ್ರತಂಡ ಥ್ರಿಲ್ ಆಗಿದೆ. ನಿರೀಕ್ಷೆಯೇ ಮಾಡದಷ್ಟು ದೊಡ್ಡ ಹಿಟ್ ಆಗಿದೆ 'ಕೆಜಿಎಫ್ 2' ಸಿನಿಮಾ. ಈ ಅದ್ಭುತ ವಿಜಯಕ್ಕೆ ಕಾರಣರಾದ ಅಭಿಮಾನಿಗಳಿಗೆ ನಟ ಯಶ್ ಧನ್ಯವಾದ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ನಟ ಯಶ್ ಕತೆಯೊಂದನ್ನು ಹೇಳುವ ಮೂಲಕ ಭಿನ್ನವಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

''ಒಂದು ಹಳ್ಳಿ ಬರಗಾಲದ ಪರಿಸ್ಥಿತಿಯಲ್ಲಿತ್ತು. ಜನರೆಲ್ಲ ಒಟ್ಟಿಗೆ ಮಳೆಗಾಗಿ ಪ್ರಾರ್ಥಿಸಲು ನಿಶ್ಚಯಿಸಿದರು. ಅಂತೆಯೇ ನಿಗದಿತ ದಿನ ಪ್ರಾರ್ಥನೆ ಮಾಡಲು ದೊಡ್ಡ ಸಂಖ್ಯೆಯ ಜನ ಸೇರಿದ್ದರು. ಆದರೆ ಒಬ್ಬ ಬಾಲಕ ಮಾತ್ರ ಛತ್ರಿ ತೆಗೆದುಕೊಂಡು ಬಂದಿದ್ದ. ಜನ ಅವನನ್ನು ಮೂರ್ಖ ಎಂದರು, ಕೆಲವರು ಅತಿಯಾದ ಆತ್ಮವಿಶ್ವಾಸವೆಂದರು. ಆದರೆ ಅದು ಆ ಎರಡೂ ಅಲ್ಲ ಬದಲಿಗೆ ನಂಬಿಕೆ'' ಎಂದು ಕತೆ ಹೇಳಿದ್ದಾರೆ ಯಶ್.
''ಛತ್ರಿ ಹಿಡಿದು ಬಂದಿದ್ದ ಆ ಬಾಲಕನಂತೆಯೇ ನಾನೂ ಸಹ, ನನಗೂ ನಂಬಿಕೆ ಇತ್ತು ನಾನು ಈ ದಿನವನ್ನು ನೋಡಿಯೇ ನೋಡುತ್ತೇನೆಂದು. ನಾನು ಇಂದು ಇರುವ ಸ್ಥಿತಿಯಲ್ಲಿ ಕೇವಲ 'ಧನ್ಯವಾದ' ಎಂದು ಹೇಳುವುದು ಬಹಳ ಸಣ್ಣ ಪದ. ಆದರೂ ನಾನು ನಿಮಗೆಲ್ಲರಿಗೂ ಹೃದಯಾಂತರಾಳದಿಂದ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನೀವು ದೊಡ್ಡ ಪ್ರಮಾಣದಲ್ಲಿ ಪ್ರೀತಿ ಮತ್ತು ಆಶೀರ್ವಾದದ ಮಳೆಗರೆದಿದ್ದೀರಿ'' ಎಂದಿದ್ದಾರೆ ಯಶ್.
''ನನ್ನ ಇಡೀ 'ಕೆಜಿಎಫ್' ತಂಡ ಬಹಳ ಖುಷಿಯಾಗಿದ್ದೇವೆ, ನಿಮಗೆ ಋಣಿಯಾಗಿದ್ದೇವೆ. ಒಂದು ಅದ್ಭುತವಾದ ಸಿನಿಮ್ಯಾಟಿಕ್ ಅನುಭವವನ್ನು ನಿಮಗೆ ನೀಡಬೇಕು ಎಂಬುದು ನಮ್ಮ ಆಸೆಯಾಗಿತ್ತು. ಅಂತೆಯೇ ನೀಡಿದ್ದೇವೆ, ನೀವೆಲ್ಲ ಅದನ್ನು ಎಂಜಾಯ್ ಮಾಡಿದ್ದೀರೆಂದು, ಮಾಡುತ್ತೀರೆಂದು ನಂಬಿದ್ದೇನೆ'' ಎಂದಿರುವ ಯಶ್, ವಿಡಿಯೋದ ಕೊನೆಯಲ್ಲಿ, ''ನಾನು ಮೊದಲೇ ಹೇಳಿದ್ದೆನಲ್ಲ, ನಿಮ್ಮ ಹೃದಯ ನನ್ನ ಏರಿಯಾ'' ಎಂದು ರಾಕಿಭಾಯ್ ಸ್ಟೈಲ್ ಅಲ್ಲಿ ಡೈಲಾಗ್ ಹೊಡೆದಿದ್ದಾರೆ.
ನಟ ಯಶ್ ತಮ್ಮ ಕುಟುಂಬದೊಂದಿಗೆ ವಿದೇಶಕ್ಕೆ ತೆರಳಿದ್ದು, ಸಿನಿಮಾ ಯಶಸ್ಸಾದ ಖುಷಿಯನ್ನು ಕುಟುಂಬದೊಂದಿಗೆ ಕಾಲ ಕಳೆಯತ್ತಾ ಕಳೆಯುತ್ತಿದ್ದಾರೆ. ಬೀಚ್ನಲ್ಲಿ ಪತ್ನಿ ರಾಧಿಕಾ ಜೊತೆ ಮಕ್ಕಳನ್ನು ಆಟವಾಡಿಸುತ್ತಿರುವ ಯಶ್ರ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈಗಲೂ ಪ್ರವಾಸದಲ್ಲಿಯೇ ಇರುವ ಯಶ್, ಅಲ್ಲಿಂದಲೇ ವಿಡಿಯೋ ಹಂಚಿಕೊಂಡಿದ್ದಾರೆ.


Click it and Unblock the Notifications











