'ದುನಿಯಾ' ಚಿತ್ರದ ಈ ಪಾತ್ರದಲ್ಲಿ ಯಶ್ ನಟಿಸಬೇಕಿತ್ತು, ಆದರೆ ಕೈ ತಪ್ಪಿದ್ದು ಹೇಗೆ ಗೊತ್ತೇ?
ಕನ್ನಡ ಚಿತ್ರರಂಗದ ವಿಭಿನ್ನ ಕಥೆ ಮತ್ತು ನಿರೂಪಣೆ ಹಾಗೂ ಹಿಟ್ ಚಿತ್ರಗಳ ಸಾಲಿನಲ್ಲಿ ಸೂರಿ ನಿರ್ದೇಶನದ ಮೊದಲ ಚಿತ್ರ 'ದುನಿಯಾ' ವಿಭಿನ್ನವಾಗಿ ಗುರುತಿಸಿಕೊಳ್ಳುತ್ತದೆ. ರೌಡಿಸಂ ಮತ್ತು ಪ್ರೇಮಕಥೆಗಳು ಹೆಚ್ಚಾಗಿದ್ದ ಸಂದರ್ಭದಲ್ಲಿ ಈ ಎರಡನ್ನೂ ಹದವಾಗಿ ಬೆರೆಸಿದ್ದ 'ದುನಿಯಾ' ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಏಕತಾನತೆಯ ಕಥೆ, ನಿರೂಪಣೆಯ ಚಿತ್ರಗಳ ನಡುವೆ ಹೊಸಬರು ತೋರಿಸಿದ್ದ ಜಗತ್ತು ಜನರನ್ನು ಸೆಳೆದಿತ್ತು.
Recommended Video
ಚಿತ್ರರಂಗಕ್ಕೆ ಹೊಸ ಆಮ್ಲಜನಕ ನೀಡಿದ್ದ ಚಿತ್ರಗಳಾದ 'ಮುಂಗಾರು ಮಳೆ' ಮತ್ತು 'ದುನಿಯಾ' ಮೂರು ತಿಂಗಳ ಅಂತರದಲ್ಲಿ ಬಿಡುಗಡೆಯಾಗಿದ್ದವು. ಈ ಎರಡೂ ಚಿತ್ರಗಳು ಮಾಡಿದ್ದ ಮೋಡಿ ಸಣ್ಣದಲ್ಲ. ದುನಿಯಾ ಚಿತ್ರದ ಬಳಿಕ ಸೂರಿ, ವಿಜಯ್ ಮತ್ತು ರಶ್ಮಿ ಅವರ ಹೆಸರಿನ ಹಿಂದೆ 'ದುನಿಯಾ' ಎಂಬ ವಿಶೇಷಣ ಸೇರಿಕೊಂಡಿತ್ತು. ಇದರಲ್ಲಿ ಸಣ್ಣ ಪಾತ್ರ ಮಾಡಿದ್ದ ಯೋಗೇಶ್ ಹೆಸರು 'ಲೂಸ್ ಮಾದ' ಯೋಗಿ ಎಂದೇ ಉಳಿದುಕೊಂಡಿತು. ರಂಗಾಯಣ ರಘು ಅವರ 'ಪೌಡರ್ ಹಾಕ್ಕೊಳ್ಳಿ ತಲೆ ಬಾಚ್ಕೊಳಿ' ಪಾತ್ರವೂ ಅಚ್ಚೊತ್ತಿತು.
ಆದರೆ ಆ ಕಾಲದಲ್ಲಿ ಈ ಸಿನಿಮಾ ಮಾಡುವುದು ಸುಲಭವಾಗಿರಲಿಲ್ಲ. ಹೊಸಬರನ್ನು ಚಿತ್ರರಂಗ ಸ್ವಾಗತಿಸುತ್ತಿರಲಿಲ್ಲ. ಅಂತಹ ಬೆಂಬಲವೂ ಸಿಗುತ್ತಿರಲಿಲ್ಲ. ಬಜೆಟ್, ಸ್ಟಾರ್ ಕಲಾವಿದರು, ಅನುಭವಿಗಳ ಕೊರತೆ ಹೀಗೆ ಸಾಕಷ್ಟು ಕೊರತೆಗಳ ನಡುವೆಯೇ ಚಿತ್ರ ಸೆಟ್ಟೇರಿತ್ತು. ಇಂದು ಇಡೀ ದೇಶದ ಗಮನ ಸೆಳೆದಿರುವ ನಟ ಯಶ್ ಕೂಡ 'ದುನಿಯಾ'ದಲ್ಲಿ ಒಂದು ಪಾತ್ರ ಮಾಡಬೇಕಿತ್ತು. ಮುಂದೆ ಓದಿ...

ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಯಶ್
'ನಂದಗೋಕುಲ', 'ಉತ್ತರಾಯಣ', 'ಸಿಲ್ಲಿ ಲಲ್ಲಿ', 'ಪ್ರೀತಿ ಇಲ್ಲದ ಮೇಲೆ' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದ ಯಶ್, ಚಿತ್ರರಂಗಕ್ಕೆ ಇನ್ನೂ ಕಾಲಿರಿಸಿರಲಿಲ್ಲ. ಸಿನಿಮಾಗಳಲ್ಲಿ ಅವಕಾಶಕ್ಕೆ ಎದುರು ನೋಡುತ್ತಿದ್ದ ಅವರನ್ನು 'ನಂದಗೋಕುಲ'ದಲ್ಲಿ ಛಾಯಾಗ್ರಹಣ ಮಾಡಿದ್ದ ಸತ್ಯ ಹೆಗ್ಡೆ, ನಿರ್ದೇಶಕ ದುನಿಯಾ ಸೂರಿ ಬಳಿ ಕರೆದುಕೊಂಡು ಹೋಗಿದ್ದರು.

ಕಿಶೋರ್ ಅಸಿಸ್ಟೆಂಟ್ ಪಾತ್ರ
ಈ ಚಿತ್ರದಲ್ಲಿ ಅನೇಕ ಸಣ್ಣ ಪುಟ್ಟ ಪಾತ್ರಗಳಿದ್ದವು. ಅವುಗಳಿಗೆ ಅನೇಕ ಕಲಾವಿದರು ಬೇಕಾಗಿದ್ದರು. ಅದರಲ್ಲಿ ಒಂದು ಇನ್ಸ್ಪೆಕ್ಟರ್ ಪಾತ್ರ ನಿಭಾಯಿಸಿದ್ದ ಕಿಶೋರ್ ಅವರ ಅಸಿಸ್ಟೆಂಟ್ ಪಾತ್ರ. ಆಗಿನ್ನೂ ಬೆಳೆಯುತ್ತಿದ್ದ ಯಶ್ ಅವರಿಗೆ ಈ ಪಾತ್ರ ಕೊಡಿಸಬೇಕು ಎಂದು ಸತ್ಯ ಹೆಗ್ಡೆ ಅವರನ್ನು ಸೂರಿ ಅವರಿಗೆ ಪರಿಚಯಿಸಿದ್ದರು. ಯಶ್ ಅವರನ್ನು ನೋಡಿದ್ದ ಸೂರಿ ಪಾತ್ರಕ್ಕೆ ಆಯ್ಕೆ ಮಾಡಿದ್ದರು.

ದೃಶ್ಯ ಬದಲಿಸಿದ್ದ ಸೂರಿ
ರೌಡಿಯೊಬ್ಬನನ್ನು ಪೊಲೀಸ್ ಅಧಿಕಾರಿಯ ಅಸಿಸ್ಟೆಂಟ್ ನಡೆದುಕೊಂಡು ಹೋಗಿ ಶೂಟ್ ಮಾಡುವ ದೃಶ್ಯವಿತ್ತು.
ಆದರೆ, ದುನಿಯಾ ಸೂರಿ ಚಿತ್ರದ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರು. ಶೂಟ್ ಮಾಡುವ ದೃಶ್ಯ ಕಿಶೋರ್ ಅವರೇ ಮಾಡಲಿ, ಅಸಿಸ್ಟೆಂಟ್ ಬೇಡ ಎಂದರು. ಹೀಗಾಗಿ ಅಸಿಸ್ಟೆಂಟ್ ಪಾತ್ರದಲ್ಲಿ ನಟಿಸಬೇಕಿದ್ದ ಯಶ್ ಅವರಿಗೆ ಆಗ ಅವಕಾಶ ಸಿಕ್ಕಿರಲಿಲ್ಲ.

ಮತ್ತೆ ಸೂರಿ ಜತೆ ಸಿನಿಮಾ ಮಾಡಿಲ್ಲ
ಅದೇ ವರ್ಷ ಯಶ್, 'ಜಂಭದ ಹುಡುಗಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಮರು ವರ್ಷ ರಾಧಿಕಾ ಪಂಡಿತ್ ಜತೆ ನಟಿಸಿದ 'ಮೊಗ್ಗಿನ ಮೊನಸ್ಸು' ಸೂಪರ್ ಹಿಟ್ ಆಯ್ತು. ಅಲ್ಲಿಂದ ಯಶ್ ಅವರ ದೆಸೆ ಬದಲಾಯಿತು. ಈ 13 ವರ್ಷದಲ್ಲಿ ಯಶ್ ಅನೇಕ ನಿರ್ದೇಶಕರ ಜತೆ ಕೆಲಸ ಮಾಡಿದ್ದಾರೆ. ಆದರೆ ಮೊದಲು ಆಕ್ಷನ್ ಕಟ್ ಹೇಳಿಸಿಕೊಳ್ಳಬೇಕಿದ್ದ ದುನಿಯಾ ಸೂರಿ ಜತೆ ಮತ್ತೆ ಕೆಲಸ ಮಾಡುವ ಅವಕಾಶವೇ ಸಿಗಲಿಲ್ಲ.

ಜೈದೇವ್ ಕೂಡ ನಟಿಸಬೇಕಿತ್ತು
ಯಶ್ ಜತೆ ನಂದಗೋಕುಲದಲ್ಲಿ ನಟಿಸಿದ್ದ ಜೈದೇವ್ ಅವರಿಗೂ ಸತ್ಯ ಹೆಗ್ಡೆ ಪಾತ್ರ ಕೊಡಿಸಿದ್ದರು. ಇದು ನಾಯಕಿಯ ಸ್ನೇಹಿತೆಯ ಬಾಯ್ಫ್ರೆಂಡ್ ಪಾತ್ರವಾಗಿತ್ತು. ಈ ಪಾತ್ರದ ಒಂದೆರಡು ಶಾಟ್ಗಳನ್ನೂ ತೆಗೆಯಲಾಗಿತ್ತು. ನಂತರ ಆ ಪಾತ್ರವನ್ನೂ ಬೇಡ ಎಂದು ನಿರ್ಧರಿಸಲಾಗಿತ್ತು. ಹೀಗೆ ಇಬ್ಬರು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟರು ಸಿನಿಮಾದಲ್ಲಿ ಒಟ್ಟಿಗೆ ನಟಿಸುವ ಅವಕಾಶ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ.


Click it and Unblock the Notifications











