ಗಾಂಧಿನಗರದಲ್ಲಿ ಒಂದು ಕಟೌಟ್ ನಿಲ್ಲಿಸಬೇಕು ಎಂದುಕೊಂಡಿದ್ದ ಯಶ್; ಇವತ್ತು ಅಮೆರಿಕಾದ ರಾಜಬೀದಿಗಳಲ್ಲಿ ದರ್ಬಾರ್
ಪರಿಶ್ರಮದ ಜೊತೆಗೆ ಅದೃಷ್ಟವೂ ಕೈಹಿಡಿದರೆ ಅದ್ಭುತಗಳು ನಡೆಯುತ್ತವೆ. ಚಿತ್ರರಂಗದಲ್ಲಿ ಸಾಕಷ್ಟು ಜನ ಹೀಗೆ ನೋಡನೋಡುತಲೇ ಸಾಧನೆಯ ಶಿಖರ ಏರಿದ್ದಾರೆ. ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಸೂಪರ್ ಸ್ಟಾರ್ ರಜನಿಕಾಂತ್ ಆಗಿ ಕಣ್ಮುಂದೆ ನಿಂತಿದ್ದಾರೆ. ಬಸ್ ಡ್ರೈವರ್ ಮಗನಾಗಿದ್ದ ಯಶ್ ಇವತ್ತು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೇರಿದ್ದಾರೆ.
ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೇ ಬಂದ ಯಶ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭ ಇರಲಿಲ್ಲ. ಆದರೆ ಛಲ ಬಿಡಲಿಲ್ಲ. ಒಮ್ಮೆ ಬೆಂಗಳೂರಿನಲ್ಲಿ ಮಲಗಲು ಜಾಗ ಇಲ್ಲದೇ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ನಲ್ಲಿ ರಾತ್ರಿ ಕಳೆದ ದಿನಗಳು ಇವೆ. ಅಂದು ಗಾಂಧಿನಗರದ ಚಿತ್ರಮಂದಿರದ ಮುಂದೆ ನನ್ನ ಕಟೌಟ್ ನಿಲ್ಲಬೇಕು ಎಂದು ಯಶ್ ಕನಸು ಕಂಡಿದ್ದರು. ಈಗ ಭಾರತ ಅಲ್ಲ, ಅಮೆರಿಕಾದಲ್ಲಿ ಯಶ್ ಕಟೌಟ್ಗಳು ರಾರಾಜಿಸುವಂತಾಗಿದೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಮೂಲಕ ಹಾಲಿವುಡ್ ಅಂಗಳದಲ್ಲಿ ದರ್ಬಾರ್ ನಡೆಸಲು ಯಶ್ ಸಜ್ಜಾಗಿದ್ದಾರೆ.

'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ಲಾಸ್ ವೆಗಾಸ್ನಲ್ಲಿ ನಡೆದ ಸಿನಿಮಾಕಾನ್ ಸಮಾವೇಶದಲ್ಲಿ ಯಶ್ ಭಾಗಿ ಆಗಿದ್ದಾರೆ. ಹಾಲಿವುಡ್ ಮಾಧ್ಯಮಗಳ ಸಂದರ್ಶನಗಳಲ್ಲಿ ಭಾಗಿ ಆಗಿ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ಭಾರತೀಯ ಸಿನಿಮಾ ಹಾಗೂ ಪಾಶ್ಚಿಮಾತ್ಯ ಸಿನಿಮಾಗಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ್ದಾರೆ. ಭಾರತ ಹಾಗೂ ಹಾಲಿವುಡ್ ಕಲಾವಿದರು, ತಂತ್ರಜ್ಞರನ್ನು ಸೇರಿಸಿ ಮುಂದೆ ಸಿನಿಪ್ರಪಂಚದಲ್ಲಿ ಹೊಸ ಅಲೆ ಎಬ್ಬಿಸುವ ಲೆಕ್ಕಾಚಾರದಲ್ಲಿರುವುದಾಗಿ ಹೇಳಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಸಿನಿಮಾಕಾನ್ ವೇದಿಕೆಯಲ್ಲಿ ಚಿತ್ರದ ದೊಡ್ಡ ಸ್ಯ್ಟಾಂಡಿ ಹಾಕಿದ್ದಾರೆ. ಬೇರೆ ಯಾವುದೇ ಚಿತ್ರದ ಪೋಸ್ಟರ್ ಇಷ್ಟು ದೊಡ್ಡಮಟ್ಟದಲ್ಲಿ ಪ್ರದರ್ಶನ ಮಾಡಿಲ್ಲ. ಇನ್ನು 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳ ಒಂದಷ್ಟು ಫುಟೇಜ್ ಅನ್ನು ಪ್ರದರ್ಶನ ಮಾಡಲಾಗಿದೆ. ಹಾಲಿವುಡ್ ಸಿನಿಮಾ ಮಂದಿ ಅದನ್ನು ನೋಡಿ ಮೆಚ್ಚಿದ್ದಾರೆ. ಅದಕ್ಕಾಗಿ ಚಿತ್ರಮಂದಿರಗಳ ಮುಂದೆ ದೊಡ್ಡ ಬಿಲ್ ಬೋರ್ಡ್ ಹಾಕಿರುವುದನ್ನು ನೋಡಬಹುದು. 'ಕೆಜಿಎಫ್'-2 ಸಿನಿಮಾ ಬಿಡುಗಡೆ ಆಗಿದ್ದಾಗ ಮುಂಬೈನ ಕಾರ್ನಿವಲ್ ಚಿತ್ರಮಂದಿರದ ಮುಂದೆ 102 ಅಡಿಗಳ ದೊಡ್ಡ ಕೌಟೌಟ್ ಹಾಕಲಾಗಿತ್ತು. ಈಗ 'ರಾಮಾಯಣ' ಚಿತ್ರದ ಬ್ಯಾನರ್ಗಳು ಅಮೆರಿಕಾದ ಬೀದಿಗಳಲ್ಲಿ ರಾರಾಜಿಸ್ತಿದೆ.
'ಕೆಜಿಎಫ್' ಚಿತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡುವುದಾಗಿ ಯಶ್ ಹೇಳಿದ್ದರು. ಅದನ್ನು ಸಾಧಿಸಿ ತೋರಿಸಿದ್ದರು. ಈಗ 'ಟಾಕ್ಸಿಕ್' ಮೂಲಕ ಹಾಲಿವುಡ್ ಮಂದಿ ಕೂಡ ಕನ್ನಡದ ಸಿನಿಮಾ ಬಗ್ಗೆ ಮಾತನಾಡುವಂತೆ ಮಾಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಕನ್ನಡ ಜೊತೆಗೆ ಇಂಗ್ಲೀಷ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಜೂನ್ 4ರಂದು ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ.
ಸಿನಿಮಾಕಾನ್ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಸಿನಿಮಾ 'ರಾಮಾಯಣ' ಎನಿಸಿಕೊಂಡಿದೆ. ಸಮಾವೇಶದಲ್ಲಿ ಭಾಗಿಯಾದ ಮೊದಲ ಭಾರತದ ಸ್ಟಾರ್ ನಟ ಯಶ್ ಎನ್ನುವ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಈ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. 'ಟಾಕ್ಸಿಕ್' ಹಾಗೂ 'ರಾಮಾಯಣ' ಇನ್ನು ಆರಂಭ ಮಾತ್ರ ಮುಂದೆ ಇಂತಹ ಮತ್ತಷ್ಟು ಪ್ರಯತ್ನ ಮಾಡಲು ಯಶ್ ಮನಸ್ಸು ಮಾಡಿದ್ದಾರೆ.
ದೀಪಾವಳಿ ಸಂಭ್ರಮದಲ್ಲಿ ಅಕ್ಟೋಬರ್ ಕೊನೆ ವಾರ 'ರಾಮಾಯಣ' ಸಿನಿಮಾ ತೆರೆಗೆ ಬರುತ್ತದೆ ಎಂದು ಯಶ್ ತಿಳಿಸಿದ್ದಾರೆ. 4000 ಕೋಟಿ ರೂ. ಬಜೆಟ್ನಲ್ಲಿ ಎರಡು ಭಾಗಗಳಾಗಿ ಈ ಪೌರಾಣಿಕ ಕಥಾಹಂದರ ಸಿನಿಮಾ ನಿರ್ಮಾಣವಾಗಿದೆ. ರಾವಣನಾಗಿ ಯಶ್ ಆರ್ಭಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅದಕ್ಕೂ ಮುನ್ನ 'ಟಾಕ್ಸಿಕ್' ಅಖಾಡದಲ್ಲಿ ರಾಯ ಹಾಗೂ ಟಿಕೆಟ್ ದರ್ಬಾರ್ ಕಣ್ತುಂಬಿಕೊಳ್ಳಬಹುದು.


Click it and Unblock the Notifications