ಯಶ್ ತಾಯಿ ಪುಷ್ಪಾ ಅವರನ್ನು ಟ್ರೋಲ್ ಮಾಡಿದವರು ಈಗ ಗಪ್ಚುಪ್!
ಸೋಶಿಯಲ್ ಮೀಡಿಯಾದಲ್ಲಿ ಯಾವಾಗ, ಯಾರು ಟ್ರೋಲ್ ಆಗ್ತಾರೆ ಎನ್ನುವುದು ಗೊತ್ತಾಗಲ್ಲ. ನೆಟ್ಟಿಗರು ತಮಗೆ ಮನಸ್ಸಿಗೆ ಬಂದಿದ್ದನ್ನು ಕಾಮೆಂಟ್ ಮಾಡುತ್ತಾರೆ. ಕೆಲವೊಮ್ಮೆ ಸುಖಾಸುಮ್ಮನೆ ಟ್ರೋಲ್ ಮಾಡುವುದು ಇದೆ. ಇತ್ತೀಚೆಗೆ ನಟ ಯಶ್ ತಾಯಿ ನಿರ್ಮಾಪಕಿ ಪುಷ್ಪಾ ಅವರನ್ನು ಕೆಲವರು ಟ್ರೋಲ್ ಮಾಡಿದ್ದರು.
ನೇರಾನೇರ ಮಾತುಗಳಿಂದ ಯಶ್ ತಾಯಿ ಪುಷ್ಪಾ ಗಮನ ಸೆಳೆಯುತ್ತಿದ್ದಾರೆ. ಫಿಲ್ಟರ್ ಇಲ್ಲದೇ ಅವರು ಮಾತನಾಡುವುದು ವೈರಲ್ ಆಗ್ತಿದೆ. ಪಿಎ ಪ್ರೊಡಕ್ಷನ್ಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿ ಚಿತ್ರ ನಿರ್ಮಾಣಕ್ಕೆ ಅವರು ಮುಂದಾಗಿದ್ದಾರೆ. ಆ ಸಂಸ್ಥೆಯ ಚೊಚ್ಚಲ ಸಿನಿಮಾ 'ಕೊತ್ತಲವಾಡಿ' ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 1ರಂದು ಸಿನಿಮಾ ತೆರೆಗೆ ಬರಲಿದೆ. ಚಿತ್ರದ ಪ್ರಚಾರ ಕೂಡ ಶುರುವಾಗಿದೆ.

ನಾನು ಯಶ್ನ ಕೊತ್ತಲವಾಡಿ ಸಿನಿಮಾ ಪ್ರಚಾರ ಮಾಡುವಂತೆ, ಬಂದು ಸಿನಿಮಾ ನೋಡುವಂತೆ ಕೇಳಲ್ಲ. ಯಶ್ ನೋಡಿದ ಮಾತ್ರಕ್ಕೆ ಸಿನಿಮಾ ಗೆಲ್ಲಲ್ಲ. ನನಗೆ ಪ್ರೇಕ್ಷಕರ ಪ್ರತಿಕ್ರಿಯೆ ಮುಖ್ಯ. ಜನ ಒಳ್ಳೆ ಸಿನಿಮಾ ನೋಡಿ ಗೆಲ್ಲಿಸಬೇಕು ಎಂದು ಪುಷ್ಪಾ ಹೇಳಿದ್ದರು. ಇದಕ್ಕೆ ಕೆಲವರು ಏನೇನೋ ಊಹಾಪೋಹ ಕಲ್ಪಿಸಿ ಕಾಮೆಂಟ್ ಮಾಡಿದ್ದರು. ಅದಕ್ಕೆಲ್ಲಾ ಅವರು ಸ್ಪಷ್ಟನೆ ನೀಡಿದ್ದರು. ಇನ್ನು ನಿಮ್ಮ ಮಗನ ಜೊತೆ ಸಿನಿಮಾ ಮಾಡ್ತೀರಾ ಎನ್ನುವ ಪ್ರಶ್ನೆಗೆ ಯಾರಾದರೂ 2000 ಕೋಟಿ ರೂ. ಸಾಲ ಕೊಟ್ಟರೆ ಖಂಡಿತ ಮಾಡ್ತೀನಿ ಎಂದಿದ್ದರು.
ಇತ್ತೀಚೆಗೆ ಟಿವಿ9 ವಾಹಿನಿ ಸಂದರ್ಶನದಲ್ಲಿ ಪುಷ್ಪಾ ಅರುಣ್ ಕುಮಾರ್ ಮಾತನಾಡಿದ್ದರು. "ಯಾರಾದರೂ 2000 ಕೋಟಿ ರೂ. ಸಾಲ ಕೊಟ್ಟರೆ ಯಶ್ ಸಿನಿಮಾ ಮಾಡಬಹುದು. ಅವನ ಸಿನಿಮಾ ಮಾಡಲು ಅಷ್ಟು ಬಜೆಟ್ ಬೇಕು. ಹೂಡಿಕೆ ಮಾಡುವವರು ಇದ್ದರೆ ಖಂಡಿತ ಸಿನಿಮಾ ಮಾಡ್ತೀನಿ. ಹೇಗಾದರೂ ಮಾಡಿ ಅವನ ಡೇಟ್ಸ್ ತಗೋತ್ತೀನಿ" ಎಂದಿದ್ದರು. ಈ ವೀಡಿಯೋ ವೈರಲ್ ಮಾಡಿ ಕೆಲವರು ಟ್ರೋಲ್ ಮಾಡಿದ್ದರು.
400, 500 ಕೋಟಿ ರೂ. ಬಜೆಟ್ನಲ್ಲಿ ಸಿನಿಮಾ ನಿರ್ಮಾಣ ಮಾಡುವುದೇ ಕಷ್ಟ. ಅಂತಾದ್ರಲ್ಲಿ 2000 ಕೋಟಿ ರೂ. ಬಜೆಟ್ ಸಿನಿಮಾನಾ? ಅಷ್ಟು ದೊಡ್ಡ ಬಕೆಟ್ನಲ್ಲಿ ಸಿನಿಮಾ ಮಾಡೋಕೆ ಸಾಧ್ಯನಾ? ಅಂತೆಲ್ಲಾ ವ್ಯಂಗ್ಯವಾಗಿ ಮಾತನಾಡಿದ್ದರು. ಆದರೆ ಇದೀಗ 'ರಾಮಾಯಣ' ಚಿತ್ರದ ಬಜೆಟ್ ಕೇಳಿದವರು ಶಾಕ್ ಆಗಿದ್ದಾರೆ. ಸ್ವತಃ ಚಿತ್ರದ ನಿರ್ಮಾಪಕ ನಿಮಿತ್ ಮಲ್ಹೋತ್ರಾ ಮಾತನಾಡಿ 'ರಾಮಾಯಣ' ಭಾಗ-1 ಹಾಗೂ ಭಾಗ-2 ಸೇರಿ ಒಟ್ಟಾರೆ ಬಜೆಟ್ 4000 ಕೋಟಿ ರೂ. ಎಂದಿದ್ದಾರೆ.
'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ಸಹ ನಿರ್ಮಾಪಕನಾಗಿ ಕೈ ಜೋಡಿಸಿದ್ದಾರೆ. ಅಂದರೆ ಯಶ್ ನಟಿಸುತ್ತಿರುವ ಈ ಚಿತ್ರದ ಬಜೆಟ್ 2000 ಕೋಟಿ ರೂ. ಎನ್ನುವಂತಾಯಿತು. ಆ ಅರ್ಥದಲ್ಲಿ ಯಶ್ ನಟನೆಯ ಮುಂದಿನ ಸಿನಿಮಾಗಳು ದೊಡ್ಡಮಟ್ಟದಲ್ಲಿ ನಿರ್ಮಾಣವಾಗಲಿದೆ. ಇದೆಲ್ಲ ಗೊತ್ತಿದ್ದೆ ಯಶ್ ಸಿನಿಮಾ ನಿರ್ಮಾಣಕ್ಕೆ 2000 ಕೋಟಿ ರೂ. ಬೇಕು ಎಂದು ನಿರ್ಮಾಪಕಿ ಪುಷ್ಪಾ ಹೇಳಿದ್ದಾರೆ. ಅವರನ್ನು ಟ್ರೋಲ್ ಮಾಡಿದವರು ಈಗ ಎಲ್ಲೋದ್ರು ಎಂದು ಯಶ್ ಅಭಿಮಾನಿಗಳು ತಿರುಗೇಟು ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದು ಬಹಳ ಚರ್ಚೆ ಆಗ್ತಿದೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಸಿನಿಮಾ ಎರಡು ಭಾಗಗಳಾಗಿ ತೆರೆಗೆ ಬರ್ತಿದೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮನಾಗಿ ರಣ್ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಿದ್ದಾರೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ತೆರೆಗೆ ಬರಲಿದೆ. ದೇಶ ವಿದೇಶದ ಭಾಷೆಗಳಲ್ಲಿ ಸಿನಿಮಾ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಆಗಲಿದೆ.


Click it and Unblock the Notifications











