"ಮಕ್ಕಳು ಎಲ್ಲಿ ಮುದ್ದು"; ವಿಡಿಯೋ ಕಾಲ್ನಲ್ಲಿ ಪತ್ನಿ ರಾಧಿಕಾ ಜೊತೆ ಯಶ್ ಮಾತು ವೈರಲ್
'ಟಾಕ್ಸಿಕ್' ಹಾಗೂ 'ರಾಮಾಯಣ' ಸಿನಿಮಾ ಕೆಲಸಗಳಲ್ಲಿ ಯಶ್ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಮಾರ್ಕೆಟಿಂಗ್, ಪ್ರಮೋಷನ್ ಅಂತೆಲ್ಳಾ ಊರೂರು ಸುತ್ತಾಡುತ್ತಿಡುತ್ತಿರುತ್ತಾರೆ. ಆದರೂ ಅವರ ಮನಸ್ಸು ಬೆಂಗಳೂರಿನಲ್ಲಿರುವ ಮನೆಯ ಕಡೆಯೇ ಸೆಳೆಯುತ್ತಿರುತ್ತದೆ. ಸದ್ಯ 'ರಾಮಾಯಣ' ಸಿನಿಮಾ ಚಿತ್ರೀಕರಣಕ್ಕಾಗಿ ಯಶ್ ಮುಂಬೈನದಲ್ಲಿದ್ದಾರೆ ಎನ್ನಲಾಗ್ತಿದೆ.
ಇತ್ತೀಚೆಗೆ ಪತ್ನಿ ರಾಧಿಕಾ ಪಂಡಿತ್ ಜೊತೆ ಯಶ್ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಆ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಭಿಮಾನಿಗಳನ್ನು ಭೇಟಿ ಆಗಿದ್ದ ರಾಧಿಕಾ ಕೂಡಲೇ ಯಶ್ ಅವರಿಗೆ ವೀಡಿಯೋ ಕಾಲ್ ಮಾಡಿದ್ದಾರೆ. ಅಭಿಮಾನಿಗಳೆಲ್ಲಾ ನೆಚ್ಚಿನ ನಟನ ಜೊತೆ ಮಾತನಾಡಿ ಸಂಭ್ರಮಿಸಿದ್ದಾರೆ. ಈ ನಡುವೆ ಯಶ್ "ಮಕ್ಕಳು ಎಲ್ಲಿ ಮುದ್ದು" ಎಂದು ಕೇಳಿದ್ದು "ಅಲ್ಲಿ ನಿಂತ್ಕೊಂಡಿದ್ದಾರೆ" ಅಂತ ರಾಧಿಕಾ ಪಂಡಿತ್ ಪ್ರತಿಕ್ರಿಯಿಸಿದ್ದಾರೆ.

ಯಶ್ ಪಕ್ಕಾ ಫ್ಯಾಮಿಲಿ ಮ್ಯಾನ್.. ಸಭೆ, ಸಮಾರಂಭಗಳಲ್ಲಿ ಸದಾ ಪತ್ನಿ ರಾಧಿಕಾ ಪಂಡಿತ್ ಕೈ ಹಿಡಿದು ಸುತ್ತಾಡುತ್ತಾರೆ. ಕೆಲಸಗಳ ಬಿಡುವಿನ ನಡುವೆ ಆಗಾಗ್ಗೆ ಫ್ಯಾಮಿಲಿ ಸಮೇತ ಪ್ರವಾಸಕ್ಕೆ ತೆರಳುತ್ತಾರೆ. ಒಟ್ಟಾರೆ ಫ್ಯಾಮಿಲಿಗೆ ಹೆಚ್ಚಿನ ಸಮಯ ಕೊಡಲು ಬಯಸುತ್ತಾರೆ. ಸಾಕಷ್ಟು ಸಂದರ್ಭಗಳಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಸಿನಿಮಾಕಾನ್ ಸಮಾವೇಶಕ್ಕಾಗಿ ಲಾಸ್ ವೇಗಾಸ್ಗೆ ಯಶ್ ತೆರೆಳಿಸಿದ್ದರು. 'ಟಾಕ್ಸಿಕ್' ಹಾಗೂ 'ರಾಮಾಯಣ' ಬಳಿಕ ವಾಟ್ ನೆಕ್ಸ್ಟ್ ಎನ್ನುವ ಪ್ರಶ್ನೆಗೆ ಬ್ರೇಕ್ ಎಂದಿದ್ದರು. ಫ್ಯಾಮಿಲಿಗೆ ಸಮಯ ಕೊಡೊಕೆ ಆಗ್ತಿಲ್ಲ. ಹಾಗಾಗಿ ಕೊಂಚ ಬ್ರೇಕ್ ಪಡೆದು ಅವರೊಟ್ಟಿಗೆ ಕಾಲ ಕಳೆಯಬೇಕು. ಆ ಬಳಿಕ ಮುಂದಿನ ಪ್ರಾಜೆಕ್ಟ್ ಎಂದಿದ್ದರು.
ಸದ್ಯ ಯಶ್ ಹಾಗೂ ರಾಧಿಕಾ ವೀಡಿಯೋ ಕಾಲ್ ಸಂಭಾಷಣೆ ವೀಡಿಯೋ ವೈರಲ್ ಆಗ್ತಿದೆ. ಸೋ ಕ್ಯೂಟ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೊಂದು 'ಟಾಕ್ಸಿಕ್' ಸಿನಿಮಾ ರಿಲೀಸ್ ಯಾವಾಗ ಎಂದು ತಲೆಕೆಡಿಸಿಕೊಂಡಿದ್ದಾರೆ. 4 ವರ್ಷಗಳಿಂದ ಕಾದು ಕಾದು ಸಾಕಾಯ್ತು ಬೇಗ ಸಿನಿಮಾ ರಿಲೀಸ್ ಮಾಡಿ ಬಾಸ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಜೂನ್ 4ರಂದು 'ಟಾಕ್ಸಿಕ್' ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಹಾಲಿವುಡ್ನಲ್ಲಿ ಕೂಡ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಕಾರಣಕ್ಕೆ ಕೊಂಚ ಹೆಚ್ಚು ಸಮಯ ಬೇಕು ಎಂದು ಈಗಾಗಲೇ ಯಶ್ ತಿಳಿಸಿದ್ದಾರೆ. ಆಗಸ್ಟ್ ಅಥವಾ ಡಿಸೆಂಬರ್ನಲ್ಲಿ ಈ ಗ್ಯಾಂಗ್ಸ್ಟರ್ ಸಿನಿಮಾ ತೆರೆಗೆ ಬರಬಹುದು ಎನ್ನಲಾಗ್ತಿದೆ. ಅಕ್ಟೋಬರ್ ಕೊನೆ ವಾರದಲ್ಲಿ ದೀಪಾವಳಿ ಸಂಭ್ರಮದಲ್ಲಿ 'ರಾಮಾಯಣ' ಮೊದಲ ಭಾಗ ಬಿಡುಗಡೆ ಆಗುತ್ತದೆ ಎಂದು ಯಶ್ ಹೇಳಿದ್ದಾರೆ.
'ಕೆಜಿಎಫ್- 2' ಸಿನಿಮಾ ಬಂದೋಗಿ 4 ವರ್ಷ ಕಳೆದಿದೆ. ಆ ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಅದೇ ಕಾರಣಕ್ಕೆ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಲೇಟ್ ಆದರೂ ಲೇಟೆಸ್ಟ್ ಆಗಿ 'ಟಾಕ್ಸಿಕ್' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಇನ್ನು ಯಶ್ ಮಕ್ಕಳಾದ ಐರಾ ಹಾಗೂ ಯಥರ್ವ್ ಸದ್ಯ ಬೇಸಿಗೆ ರಜೆಯಲ್ಲಿದ್ದಾರೆ. ರಾಧಿಕಾ ಮಕ್ಕಳ ಲಾಲನೆ ಪಾಲನೆಯಲ್ಲೇ ಬ್ಯುಸಿಯಾಗಿದ್ದಾರೆ. ಮಕ್ಕಳ ಜೊತೆ ಸದಾ ಇರುತ್ತಾರೆ.
ಇತ್ತೀಚೆಗೆ ರಾಧಿಕಾ ಮಕ್ಕಳನ್ನು ತವರೂರು ಗೋವಾಗೆ ಕರೆದುಕೊಂಡು ಹೋಗಿದ್ದರು. ಅಲ್ಲಿನ ಬೆಟ್ಟ, ಗುಡ್ಡ, ಕಾಡಿನಲ್ಲಿ ಸುತ್ತಾಡಿಸಿದ್ದರು. ಮಣ್ಣಿನ ವಾಸನೆ, ಹುಳ ಹುಪ್ಪಟೆ, ಜಲಪಾತಗಳ ಪರಿಚಯ ಮಾಡಿಸಿದ್ದರು. ರಾಧಿಕಾ ಪೋಷಕರು ಸಾಥ್ ಕೊಟ್ಟಿದ್ದರು. "ಕಾಡಿನ ಮಧ್ಯೆ ನಡೆಯುವಾಗ ಗಾಳಿ ನಿಮ್ಮ ಕಿವಿಗೆ ಪಿಸುಗುಟ್ಟುತ್ತದೆ. ಅಲ್ಲಿ ಎಲೆಗಳ ಘರ್ಜನೆ, ಕೊಂಬೆಗಳ ಸದ್ದು ಮತ್ತು ಪಕ್ಷಿಗಳ ಚಿಲಿಪಿಲಿ ತಮ್ಮದೇ ಆದ ಸ್ವರಮೇಳ ರಚಿಸುತ್ತವೆ. ಬೇಸಿಗೆಯಲ್ಲಿ ಚಾರಣ, ಮರಗಳನ್ನು ಹತ್ತುವುದು, ಹೊಳೆಯ ಉದ್ದಕ್ಕೂ ಜಾರುವ ಬಂಡೆಗಳ ಮೇಲೆ ನಡೆಯುವುದು, ಆ ನಿರ್ಮಲ ಜಲಪಾತದಲ್ಲಿ ಕರಗುವ ಆಯಾಸದ ಅನುಭವ ಮಾತ್ರ ಸಿಕ್ಕಿತು" ಎಂದು ರಾಧಿಕಾ ಬರೆದುಕೊಂಡಿದ್ದರು.


Click it and Unblock the Notifications