ಈ ವರ್ಷ ನಿರ್ದೇಶಕರ ಮ್ಯಾಜಿಕ್ ಹೇಗಿತ್ತು, ಯಾರು ಬೆಸ್ಟ್ ?
Recommended Video

ಒಂದು ಸಿನಿಮಾ ಗೆದ್ದರೂ, ಸೋತರು ಅದಕ್ಕೆ ನಿಜವಾದ ಕಾರಣ ನಿರ್ದೇಶಕ. ಡೈರೆಕ್ಟರ್ ಸಿನಿಮಾ ಎಂಬ ಸಾಮ್ರಾಜ್ಯದ ರಾಜ. ಈ ವರ್ಷವೂ ಕನ್ನಡದ ನಿರ್ದೇಶಕರು ತಮ್ಮ ತಮ್ಮ ಸಿನಿಮಾಗಳ ಮೂಲಕ ತಮ್ಮ ಪ್ರಯತ್ನವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದರು.
ಸ್ಟಾರ್ ಡೈರೆಕ್ಟರ್, ಹೊಸ ನಿರ್ದೇಶಕರು ಸೇರಿದಂತೆ ಎಲ್ಲರೂ ಹೊಸ ಹೊಸ ರೀತಿಯ ಸಿನಿಮಾ ಮಾಡಲು ಮುಂದೆ ಬಂದಿದ್ದರು. ಆದರೆ, ಕೆಲವು ನಿರ್ದೇಶಕರು ಮಾತ್ರ ಇದರಲ್ಲಿ ಗೆದ್ದಿದ್ದಾರೆ. ಅನೇಕರು ಸೋತಿದ್ದಾರೆ.
'ಟಗರು' ಮೂಲಕ ಸೂರಿ, 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಮೂಲಕ ರಿಷಬ್ ಶೆಟ್ಟಿ, 'ರಾಂಬೋ 2' ಮೂಲಕ ಅನಿಲ್ ಕುಮಾರ್ ಸಿಹಿ ಸವಿದರು. ಜೊತೆಗೆ ಪ್ರಶಾಂತ್ ನೀಲ್ 'ಕೆಜಿಎಫ್' ಮೂಲಕ ಹೊಸ ಟ್ರೆಂಡ್ ಶುರು ಮಾಡಿದ್ದಾರೆ. ಮುಂದೆ ಓದಿ...

ಸಕ್ಸಸ್ ಆದ ಸೂರಿ
ನಿರ್ದೇಶಕ ಸೂರಿ ಈ ಬಾರಿಯೂ ಗೆದ್ದಿದ್ದಾರೆ. ತಮ್ಮ ಸ್ಕ್ರೀನ್ ಪ್ಲೇ ಹಾಗೂ ಮೇಕಿಂಗ್ ಶಕ್ತಿ ಏನು ಎನ್ನುವುದನ್ನು ಸಾಬೀತು ಮಾಡಿದ್ದಾರೆ. 'ಟಗರು' ಬ್ಲಾಕ್ ಬಾಸ್ಟರ್ ಹಿಟ್ ಆಗಿದ್ದು, ಸೂರಿ, 'ಸಕ್ಸಸ್ ಸೂರಿ' ಎಂದು ಕರೆಸಿಕೊಂಡಿದ್ದಾರೆ. 25 ವಾರಗಳ ಕಾಲ ಪ್ರದರ್ಶನ ಕಂಡ ಈ ಚಿತ್ರದಲ್ಲಿ ಶಿವರಾಜ್ ಕುಮಾರ, ಧನಂಜಯ್, ವಸಿಷ್ಟ, ಭಾವನ, ಮಾನ್ವಿತಾ ನಟಿಸಿದ್ದರು.

ರಾರಾಜಿಸಿದ ರಿಷಬ್ ಶೆಟ್ಟಿ
'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಮಾಡಿದ್ದ ನಿರ್ದೇಶಕ ರಿಷಬ್ ದೊಡ್ಡ ಯಶಸ್ಸು ಪಡೆದರು. 'ಕಿರಿಕ್ ಪಾರ್ಟಿ' ಬಳಿಕ ಮತ್ತೊಂದು ಹಿಟ್ ಕೊಟ್ಟರು. ಸ್ಯಾಂಡಲ್ ವುಡ್ ನಲ್ಲಿ ಈ ಮೂಲಕ ರಿಷಬ್ ತಮ್ಮ ಸ್ಥಾನವನ್ನು ಇನ್ನಷ್ಟು ಭದ್ರ ಮಾಡಿಕೊಂಡರು. ಮಕ್ಕಳನ್ನ ಇಟ್ಟುಕೊಂಡು ಕನ್ನಡ ಭಾಷೆಯ ಕಥೆಯನ್ನು ರಿಷಭ್ ಹೇಳಿದ್ದರು.

ಪ್ರೇಮ್ ಫ್ಲಾಪ್ ಶೋ
ಪ್ರೇಮ್ ತಮ್ಮ ಮೇಲೆ ಬರುವ ಟೀಕೆಗಳಿಗೆ 'ದಿ ವಿಲನ್' ಮೂಲಕ ಉತ್ತರ ನೀಡಬಹುದಾಗಿತ್ತು. ಆದರೆ, ಅವರು ಮತ್ತೆ ಎಡವಿ ಬಿದ್ದಿದ್ದಾರೆ. 'ದಿ ವಿಲನ್' ಸಿನಿಮಾ ದೊಡ್ಡ ಮ್ಯಾಜಿಕ್ ಮಾಡುತ್ತದೆ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಅದು ಠುಸ್ ಪಟಾಕಿಯಾಗಿದೆ. ಪ್ರೇಮ್ ಈ ವರ್ಷ ಫ್ಲಾಪ್ ಶೋ ಕೊಟ್ಟಿದ್ದಾರೆ.

7 ವರ್ಷಗಳ ಬಳಿಕ ದಿನಕರ್
ನಿರ್ದೇಶಕ ದಿನಕರ್ ತೂಗುದೀಪ್ 7 ವರ್ಷಗಳ ಬಳಿಕ ಮತ್ತೆ ಕಮ್ ಬ್ಯಾಕ್ ಮಾಡಿದ್ದರು. 'ಸಾರಥಿ' ನಂತರ ಡೈರೆಕ್ಷನ್ ಮಾಡಿರದ ಅವರು 'ಲೈಫ್ ಜೊತೆ ಒಂದ್ ಸೆಲ್ಫಿ' ಮೂಲಕ ಮತ್ತೆ ಬಂದರು. ಆದರೆ, ಆ ಸಿನಿಮಾ ಯಾವುದು ಜಾದು ಮಾಡಲಿಲ್ಲ. ಸಿನಿಮಾ ಮೂರರಲ್ಲಿ ಮತ್ತೊಂದು ಎನ್ನುವ ಹಾಗೆ ಆಯ್ತು.

ಸೈಲೆಂಟ್ ಶಶಾಂಕ್
ಈ ವರ್ಷ ಶಶಾಂಕ್ ನಿರ್ದೇಶಕ ಮಾತ್ರವಲ್ಲದೆ ನಿರ್ಮಾಪಕ ಕೂಡ ಆಗಿದ್ದಾರೆ. ಶಶಾಂಕ್ 'ತಾಯಿಗೆ ತಕ್ಕ ಮಗ' ಸಿನಿಮಾದಲ್ಲಿ ನಿರ್ದೇಶಕನ ಜೊತೆಗೆ ಬಂಡವಾಳ ಕೂಡ ಹಾಕಿದ್ದರು. ಆದರೆ, ಅದೇಕೋ ಈ ಸಿನಿಮಾ ದೊಡ್ಡ ಹಿಟ್ ಆಗಲಿಲ್ಲ. ಕೆಲವು ಒಳ್ಳೆಯ ಮಾತುಗಳು ಇದ್ದರೂ, ಪ್ರೇಕ್ಷಕರನ್ನು ಸೆಳೆಯುವ ಯತ್ನ ಚಿತ್ರ ಮಾಡಲೇ ಇಲ್ಲ.

ಹೊಗಳುವ ಹಾಗಿಲ್ಲ, ತೆಗಳುವ ಹಾಗಿಲ್ಲ
ಅರ್ಜುನ್ ಸರ್ಜಾ (ಪ್ರೇಮ ಬರಹ), ಜಯತೀರ್ಥ (ವೆನಿಲ್ಲಾ), ಆರ್ ಚಂದ್ರು (ಕನಕ), ನವನೀತ್ (ಬಕಾಸುರ), ನಂದ ಕಿಶೋರ್ (ಬೃಹಸ್ಪತಿ), ಹರಿ ಸಂತೋಷ್ (ವಿಕ್ಟರಿ 2) ಈ ವರ್ಷ ಒಂದೊಂದು ಚಿತ್ರಗಳನ್ನ ನಿರ್ದೇಶನ ಮಾಡಿದ್ದರು. ಇವರ ಈ ಸಿನಿಮಾಗಳು ಅತ್ತ ಅದ್ಬುತ ಅಲ್ಲದ, ತೀರ ಕಳಪೆಯೂ ಅಲ್ಲದ ಸಿನಿಮಾಗಳಾದವು.

ಕಾಂತ, ಸತ್ಯ ಪ್ರಮಾಣಿಕ ಪ್ರಯತ್ನ
ಕಾಂತ ಕನ್ನಲ್ಲಿ (ಇರುವುದೆಲ್ಲವ ಬಿಟ್ಟು), ಡಿ ಸತ್ಯ ಪ್ರಕಾಶ್, (ಒಂದಲ್ಲಾ ಎರಡಲ್ಲಾ), ಪಿ ಶೇಖರ್ (ದಿ ಟೆರರಿಸ್ಟ್) ತಮ್ಮ ತಮ್ಮ ಸಿನಿಮಾಗಳ ಮೂಲಕ ಪ್ರಾಮಾಣಿಕ ಪ್ರಯತ್ನ ಮಾಡಿದರು. ಇವುಗಳಲ್ಲಿ 'ಇರುವುದೆಲ್ಲವ ಬಿಟ್ಟು ಹಾಗೂ 'ಒಂದಲ್ಲಾ ಎರಡಲ್ಲಾ' ಚಿತ್ರಗಳ ಒಳ್ಳೆಯ ಸಿನಿಮಾ ಆಗಿದ್ದರೂ, ಹೆಚ್ಚು ದಿನ ಚಿತ್ರಮಂದಿರದಲ್ಲಿ ಇರಲು ಸಾಧ್ಯ ಆಗಲಿಲ್ಲ.

ಕಾಮಿಡಿ ಮಾಡಿದ ಅನಿಲ್ ಕುಮಾರ್
ನಿರ್ದೇಶಕ ಅನಿಲ್ ಕುಮಾರ್ ಅವರಿಗೆ 'ರಾಂಬೋ 2' ಒಳ್ಳೆಯ ಬ್ರೇಕ್ ನೀಡಿತು. ಒಳ್ಳೆಯ ಕಾಮಿಡಿ, ತರುಣ್ ಸುಧೀರ್ ಕಥೆ, ಶರಣ್ ಮತ್ತು ಚಿಕ್ಕಣ್ಣ ಕಾಂಬಿನೇಶನ್ ಸಿನಿಮಾದ ಗೆಲುವಿಗೆ ಕಾರಣವಾಯ್ತು. ಈ ವರ್ಷ ಬಂದ ಬೆಸ್ಟ್ ಮನರಂಜನೆ ಚಿತ್ರಗಳಲ್ಲಿ ಇದು ಕೂಡ ಒಂದಾಯ್ತು.

ಪ್ರಶಾಂತ್ ಪರ್ವ
ಈ ನಿರ್ದೇಶಕರ ಜೊತೆಗೆ ಪ್ರಶಾಂತ್ ನೀಲ್ ತಮ್ಮ 'ಕೆಜಿಎಫ್' ಸಿನಿಮಾದ ಮೂಲಕ ಮಹಾ ಸಮರಕ್ಕೆ ಸಿದ್ಧವಾಗಿದ್ದಾರೆ. ಈ ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗುತ್ತಿದೆ. ಇಡೀ ದೇಶದಲ್ಲಿಯೇ 'ಕೆಜಿಎಫ್' ಕ್ರೇಜ್ ಜೋರಾಗಿದೆ. ಈ ಮೂಲಕ ಪ್ರಶಾಂತ್ ಪರ್ವ ಪ್ರಾರಂಭವಾಗಿದೆ.


Click it and Unblock the Notifications











