Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2015ರಲ್ಲಿ ಚಂದನವನವನ್ನು ಬೆಳಗಿದ ಅತ್ಯುತ್ತಮ 10 ಚಿತ್ರಗಳು
2015 ಈ ವರ್ಷ ಕನ್ನಡ ಸಿನಿಮಾ ಕ್ಷೇತ್ರಕ್ಕೆ ಮರೆಯಲಾಗದ ವರ್ಷ. ಯಾಕಂತೀರಾ? ಯಾಕೆಂದರೆ, ನವ ಪ್ರತಿಭೆ ಅನುಪ್ ಭಂಡಾರಿ ಅವರು 'ರಂಗಿತರಂಗ' ಎಂಬ ಹೊಸ ಕೋಲ್ಮಿಂಚು ಅನ್ನು ಸ್ಯಾಂಡಲ್ ವುಡ್ ಗೆ ಉಡುಗೊರೆಯಾಗಿ ನೀಡಿದ ನಂತರ ಎಲ್ಲಾ ಕಡೆ ಕನ್ನಡ ಸಿನಿಮಾಗಳೇ ಸೌಂಡ್ ಮಾಡೋಕೆ ಶುರು ಮಾಡಿದವು.
ಅಂದಹಾಗೆ ಈ ಬಾರಿ ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಗೆ ಶುಭ ಶಕುನ ಒಲಿದಿದೆ. ಹೊಸಬರ 'ರಂಗಿತರಂಗ', ದುನಿಯಾ ಸೂರಿ ಅವರ 'ಕೆಂಡಸಂಪಿಗೆ', ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಮುಂತಾದ ಸಿನಿಮಾಗಳು 100 ದಿನಗಳನ್ನು ಪೂರೈಸಿ ದಾಖಲೆಯತ್ತ ಮುನ್ನುಗ್ಗುತ್ತಿದ್ದರೆ, ಹೊಸಬರ 'ಫಸ್ಟ್ ರ್ಯಾಂಕ್ ರಾಜು', ವಾಸ್ಕೋಡಿಗಾಮ, ಮುಂತಾದ ಸಿನಿಮಾಗಳು ಹಿಟ್ ಲಿಸ್ಟ್ ಸೇರಿಕೊಂಡಿವೆ.
ಅದ್ರಲ್ಲೂ ಭರವಸೆಯ ನಿರ್ದೇಶಕ ಅನುಪ್ ಭಂಡಾರಿ ಅವರ 'ರಂಗಿತರಂಗ' ಸಿನಿಮಾ ಮಾತ್ರ 200 ದಿನಕ್ಕೆ ಕಾಲಿಟ್ಟು 'ಬೆಳ್ಳಿ ಹಬ್ಬ'ವನ್ನು ಆಚರಿಸಿಲು ಸಜ್ಜಾಗಿದೆ. ಜೊತೆಗೆ 'ಆಸ್ಕರ್' ಪ್ರಶಸ್ತಿಗೂ ನಾಮಿನೇಟ್ ಆಗಿದೆ.[2013 ವರ್ಷ: ಕನ್ನಡ ಚಿತ್ರಗಳ ಪೋಸ್ಟ್ ಮಾರ್ಟಂ]
ಇನ್ನು ರಾಜ್ ಕುಟುಂಬದ ಮತ್ತೊಂದು ಕುಡಿ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ರಾಘವೇಂದ್ರ ರಾಜ್ ಕುಮಾರ್ ಅವರ ಮಗ 'ಸಿದ್ದಾರ್ಥ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ವರ್ಷ ಕೂಡ 2015. ಇನ್ನು ಸಂಚಾರಿ ವಿಜಯ್ ಅವರ 'ನಾನು ಅವನಲ್ಲ ಅವಳು', ಪುನೀತ್ ಅವರ 'ಮೈತ್ರಿ' ಮುಂತಾದ ಚಿತ್ರಗಳು ಜನಮೆಚ್ಚುಗೆ ಗಳಿಸಿ ಚಂದನವನದಲ್ಲಿ ಸುದ್ದಿ ಮಾಡಿವೆ.
ಈ ವರ್ಷ ಯಾವ ಸಿನಿಮಾ ಬೆಸ್ಟ್ ಸಿನಿಮಾ, ಯಾವ ಸಿನಿಮಾ ಹೆಚ್ಚು ಗಳಿಕೆ ಮಾಡಿತ್ತು. ಯಾವ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿತು ಅನ್ನೋದರ ಡೀಟೈಲ್ ರಿಪೋರ್ಟ್ ಕೊಡ್ತೀವಿ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...
ಪುನೀತ್ ಅವರ 'ಮೈತ್ರಿ'
ಕನ್ನಡದಲ್ಲಿ 'ಜಟ್ಟ'ದಂತಹ ವಿಭಿನ್ನ ಚಿತ್ರಗಳನ್ನು ಕೊಟ್ಟಂತಹ ನಿರ್ದೇಶಕ ಬಿ.ಎಂ ಗಿರಿರಾಜ್ ಅವರು 'ಬಾಲಾಪರಾಧಿಗಳಿಗೆ' ಸಂಬಂಧಪಟ್ಟಂತಹ 'ಮೈತ್ರಿ' ಎಂಬ ವಿಭಿನ್ನ ಸ್ವಮೇಕ್ ಸಿನಿಮಾವನ್ನು ನೀಡಿದರು. ಈ ಚಿತ್ರದಲ್ಲಿ ಪುನೀತ್ ಅವರು ತಮ್ಮ ಸಹಜ ಅಭಿನಯದಿಂದ ಎಲ್ಲರ ಮನಗೆದ್ದರೆ, ಮಲಯಾಳಂ ನಟ ಮೋಹನ್ ಲಾಲ್ ಅವರು ನೊಂದ ಅಪ್ಪನ ಪಾತ್ರದಲ್ಲಿ ಅದ್ಭುತವಾಗಿ ಅಭಿನಯ ನೀಡಿದ್ದರು. ಒಟ್ನಲ್ಲಿ ಎಲ್ಲರ ಮನಗೆಲ್ಲುವ ಸಿನಿಮಾ ಬಾಕ್ಸಾಫೀಸ್ ನಲ್ಲಿ ಸೌಂಡ್ ಮಾಡದಿದ್ದರೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿಯುವ ಮೂಲಕ ಈ ವರ್ಷದ ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ.[ಚಿತ್ರ ವಿಮರ್ಶೆ: ಬಿಂದಾಸ್ ಐತ್ರಿ ಪುನೀತ್ 'ಮೈತ್ರಿ']
ಶಶಾಂಕ್ ಅವರ 'ಕೃಷ್ಣಲೀಲಾ'
ಸ್ಯಾಂಡಲ್ ವುಡ್ ನಲ್ಲಿ 'ಕೃಷ್ಣ' ಅಂತಾನೇ ಖ್ಯಾತಿ ಗಳಿಸಿರುವ ಅಜೇಯ್ ರಾವ್ ಮತ್ತು 'ಅಶ್ವಿನಿ ನಕ್ಷತ್ರ' ಖ್ಯಾತಿಯ ಮಯೂರಿ ಅವರು ನಟಿಸಿದ್ದ ಸ್ವಮೇಕ್ 'ಕೃಷ್ಣಲೀಲಾ' ಸಿನಿಮಾ ಭರ್ಜರಿ 100 ದಿನಗಳನ್ನು ಪೂರೈಸಿ ಈ ವರ್ಷದ ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿದೆ. ಸತತ ಸೋಲಿನ ಸುಳಿಯಲ್ಲಿ ಸಿಲುಕಿದ್ದ ಅಜೇಯ್ ರಾವ್ ಗೆ ನಿರ್ದೇಶಕ ಶಶಾಂಕ್ ಅವರ 'ಕೃಷ್ಣಲೀಲಾ' ಕೈ ಹಿಡಿದಿತ್ತು, ಜೊತೆಗೆ ಮೊಟ್ಟ ಮೊದಲ ಬಾರಿಗೆ ಮಯೂರಿ ಅವರು ಈ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟರು.['ಕೃಷ್ಣಲೀಲಾ' ವಿಮರ್ಶೆ: ಗಿಮಿಕ್ ಇಲ್ಲ...ಎಲ್ಲೂ ಕೆಮ್ಮಂಗಿಲ್ಲ!]
ಪವನ್ ಒಡೆಯರ್ ಅವರ 'ರಣವಿಕ್ರಮ'
'ಗೋವಿಂದಯಾ ನಮಃ' ಸಿನಿಮಾ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಆಕ್ಷನ್-ಕಟ್ ಹೇಳಿದ್ದ 'ರಣವಿಕ್ರಮ' ಪಕ್ಕಾ ಆಕ್ಷನ್-ಸಿನಿಮಾ ಆಕ್ಷನ್ ಪ್ರೀಯರಿಗೆ ಹೇಳಿ ಮಾಡಿಸಿದಂತಿದ್ದ ಸಿನಿಮಾ ಕರ್ನಾಟಕದ 'ವಿಕ್ರಮ ತೀರ್ಥ' ಎಂಬ ಹಳ್ಳಿಯ ಸುತ್ತ ಸುತ್ತುವ ಕಥೆಯಾಗಿತ್ತು. ಈ ಚಿತ್ರದಲ್ಲಿ ದಕ್ಷಿಣ ಭಾಗದ ನಟಿಯರಾದ ಆದಾ ಶರ್ಮಾ ಮತ್ತು ಅಂಜಲಿ ಅವರು ಕಾಣಿಸಿಕೊಂಡಿದ್ದರು. 'ಗೂಗ್ಲಿ'ಯಂತಹ ಹಿಟ್ ಸಿನಿಮಾ ಕೊಟ್ಟಿದ್ದ ಪವನ್ ಒಡೆಯರ್ ಅವರ ಸ್ವಮೇಕ್ ಸಿನಿಮಾ 'ರಣವಿಕ್ರಮ' 2015 ರ ಉತ್ತಮ ಚಿತ್ರವಾಗಿ ಹೊರಹೊಮ್ಮಿದೆ.[ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ]
ಕಿಚ್ಚನ 'ರನ್ನ'
ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಸಿನಿಮಾದ ರಿಮೇಕ್ 'ರನ್ನ' ಸಿನಿಮಾ ಸುದೀಪ್ ಅಭಿಮಾನಿಗಳನ್ನು ಸಖತ್ತಾಗಿ ಎಂರ್ಟಟೈನ್ ಮಾಡಿತ್ತು. ಆದರೆ ತೆಲುಗಿನ ರಿಮೇಕ್ ಆಗಿದ್ದರಿಂದ 50ನೇ ದಿನಕ್ಕೆ ಸುಸ್ತಾಗಿ ನಿಂತು ಬಿಟ್ಟಿತ್ತು. ನಿರ್ದೇಶಕ ನಂದಕಿಶೋರ್ ಆಕ್ಷನ-ಕಟ್ ಹೇಳಿದ್ದ ಈ ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಟ್ರೈಲರ್ ಮೂಲಕ ಸಖತ್ ಸದ್ದು ಮಾಡಿದ್ದ ಈ ಸಿನಿಮಾ ಮ್ಯೂಸಿಕಲ್ ಹಿಟ್ ಆಗಿ ಈ ವರ್ಷದ ಉತ್ತಮ ಸಿನಿಮಾವಾಗಿದೆ.[ಚಿತ್ರ ವಿಮರ್ಶೆ; ಕಳೆಗುಂದಿಲ್ಲ ಸುದೀಪ್ 'ರನ್ನ'ನ ರಂಗು]
ಶಿವಣ್ಣನ 'ವಜ್ರಕಾಯ'
ಆಂಜನೇಯನ ಭಕ್ತರಾಗಿರುವ ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಎ ಹರ್ಷ ಮತ್ತು ಶಿವಣ್ಣ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ವಜ್ರಕಾಯ' ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಮೂರು ಹೊಸ ನಾಯಕಿಯರಿದ್ದ ಈ ಸಿನಿಮಾ ಹಲವಾರು ವಿಶೇಷತೆಗಳನ್ನು ಒಳಗೊಂಡಿತ್ತು. ದಕ್ಷಿಣ ಭಾಗದ ನಟರು ಈ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಜೊತೆಗೆ ತಮಿಳು ನಟ ಧನುಷ್ ಅವರು 'ನೋ ಪ್ರಾಬ್ಲಂ' ಹಾಡಿಗೆ ಧ್ವನಿ ನೀಡಿದ್ದರು. ಒಟ್ನಲ್ಲಿ ಸ್ವಮೇಕ್ ಸಿನಿಮಾ 'ವಜ್ರಕಾಯ' ಪ್ರೇಕ್ಷಕರಿಗೆ ಇಷ್ಟ ಆಗಿ 2015 ಉತ್ತಮ ಸಿನಿಮಾ ಆಗಿದೆ.[ಚಿತ್ರವಿಮರ್ಶೆ ; ಶಿವ ಭಕ್ತರಿಗೆ 'ವಜ್ರಕಾಯ' ನೋ ಪ್ರಾಬ್ಲಂ.!]
ಅನುಪ್ ಭಂಡಾರಿ ಅವರ 'ರಂಗಿತರಂಗ'
ಮಿಸ್ಟರಿ ಜೊತೆಗೆ ಸಸ್ಪೆನ್ಸ್-ಥ್ರಿಲ್ಲರ್ ಕಥೆಯಾಧರಿತ ಸ್ವಮೇಕ್ ಸಿನಿಮಾ 'ರಂಗಿತರಂಗ' ಬರೋಬ್ಬರಿ 200 ದಿನಗಳನ್ನು ಪೂರೈಸಿ ಇದೀಗ ಬೆಳ್ಳಿ ಹಬ್ವವನ್ನು ಆಚರಿಸುತ್ತಿದೆ. ನವ ನಟ ನಿರುಪ್ ಭಂಡಾರಿ, ನವ ನಟಿಯರಾದ ರಾಧಿಕಾ ಚೇತನ್ ಮತ್ತು ಆವಂತಿಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ರಂಗಿತರಂಗ' ದೇಶ ವಿದೇಶಗಳಲ್ಲಿ ಸೌಂಡ್ ಮಾಡಿದೆ. ಅಂದಹಾಗೆ ಈ ವರ್ಷದ ಅತ್ಯುತ್ತಮ ಸಿನಿಮಾ 'ರಂಗಿತರಂಗ' 'ಆಸ್ಕರ್' ರೇಸ್ ನಲ್ಲಿದೆ.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]
ಉಪೇಂದ್ರ ಅವರ 'ಉಪ್ಪಿ 2'
ತಮ್ಮ ಸಿನಿ ಜರ್ನಿಯಲ್ಲಿ ಎಲ್ಲವನ್ನೂ ವಿಭಿನ್ನವಾಗಿ ಮಾಡುವ ರಿಯಲ್ ಸ್ಟಾರ್ ಉಪೇಂದ್ರ ಅವರು ತಾವೇ ನಿರ್ದೇಶಿಸಿ ನಟಿಸಿದ 'ಉಪ್ಪಿ 2' ಸಿನಿಮಾ ಬಿಡುಗಡೆಗೆ ಮುನ್ನವೇ ಸಖತ್ ಕಾಂಟ್ರವರ್ಸಿ ಮೂಲಕ ಸುದ್ದಿ ಮಾಡಿತ್ತು. ಅದರಲ್ಲೂ 'ನೋ ಎಕ್ಸ್ ಕ್ಯೂಸ್ ಮಿ ಪ್ಲೀಸ್' ಹಾಡಂತೂ ಭಾರಿ ಗಾಸಿಪ್ ಕ್ರಿಯೇಟ್ ಮಾಡಿತ್ತು. ಉಪ್ಪಿ ಅಭಿಮಾನಿಗಳಂತೂ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಇಡೀ ಗಾಂಧಿನಗರದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು. ಒಟ್ನಲ್ಲಿ 100 ದಿನ ಪೂರೈಸಿದ ಉಪೇಂದ್ರ ಅವರ 'ಉಪ್ಪಿ-ಟ್ಟು' ಮಾತ್ರ ಎಲ್ಲರಿಗೆ ರುಚಿಸಿ ಈ ವರ್ಷದ ಉತ್ತಮ ಸಿನಿಮಾ ಆಗಿದೆ.[ಉಪ್ಪಿ-2 ರುಚಿಯಾಗಿದೆ, ಆದ್ರೇ ಜೀರ್ಣ ಆಗೋದ್ ಕಷ್ಟ!]
ದುನಿಯಾ ಸೂರಿ ಅವರ 'ಕೆಂಡಸಂಪಿಗೆ'
ಖ್ಯಾತ ನಿರ್ದೇಶಕ ದುನಿಯಾ ಸೂರಿ ಅವರು ಹೊಸಬರನ್ನು ಹಾಕಿಕೊಂಡು ಮಾಡಿದ 'ಕೆಂಡಸಂಪಿಗೆ' ಗಿಣಿಮರಿ ಕೇಸ್ ಪಾರ್ಟ್ ಸೆಕೆಂಡ್ ಸಿನಿಮಾ ಭರ್ಜರಿ 100 ದಿನಗಳನ್ನು ಪೂರೈಸಿ ಹೊಸ ಪ್ರತಿಭೆಗಳಿಗೆ ಭರವಸೆಯನ್ನು ಮೂಡಿಸುವ ಮೂಲಕ ಈ ವರ್ಷದ ಉತ್ತಮ ಚಿತ್ರವಾಗಿದೆ. ಚಿತ್ರದಲ್ಲಿ ನವ ನಟ ವಿಕ್ಕಿ ಮತ್ತು ನವ ನಟಿ ಮಾನ್ವಿತಾ ಹರೀಶ್ ಅವರು ಮಿಂಚಿದ್ದರು. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']
'ನಾನು ಅವನಲ್ಲ ಅವಳು'
ರಾಷ್ಟ್ರಪತಿ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ 'ನಾನು ಅವನಲ್ಲ ಅವಳು' ಸಿನಿಮಾ ಈ ವರ್ಷದ ಉತ್ತಮ ಚಿತ್ರವಾಗಿದೆ. ಮಂಗಳಮುಖಿಯರ ಜೀವನಕ್ಕೆ ಸಂಬಂಧಪಟ್ಟ ಈ ಸಿನಿಮಾದಲ್ಲಿ ಸಂಚಾರಿ ವಿಜಯ್ ಅವರು ನಟಿಸಿದ್ದರು. ನಿರ್ದೇಶಕ ಲಿಂಗದೇವರು ಆಕ್ಷನ್-ಕಟ್ ಹೇಳಿದ್ದ ಈ ಸಿನಿಮಾ ಈ ವರ್ಷ ಗೋವಾ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿತ್ತು.[ವಿಮರ್ಶೆ: ನೋಡುಗರ ಪರಿಕಲ್ಪನೆ ಬದಲಾಯಿಸುವ 'ನಾನು ಅವನಲ್ಲ...ಅವಳು']
'Mr ಐರಾವತ'
ನಿರ್ದೇಶಕ ಎ.ಪಿ ಅರ್ಜುನ್ ಅವರು ಆಕ್ಷನ-ಕಟ್ ಹೇಳಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'Mr ಐರಾವತ' ಸಿನಿಮಾ 50 ದಿನಗಳನ್ನು ಪೂರೈಸಿದೆ. ಬಾಲಿವುಡ್ ಬೆಡಗಿ ಊರ್ವಶಿ ರೌಟೇಲ ಅವರು ದರ್ಶನ್ ಜೊತೆ ಈ ಚಿತ್ರದಲ್ಲಿ ಡ್ಯುಯೆಟ್ ಹಾಡಿದ್ದರು. ದಕ್ಷ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದ ದರ್ಶನ್ ಅವರು ಅಕ್ಷರಶಃ ಜಬರ್ದಸ್ತ್ ಆಗಿ ಮಿಂಚಿದ್ದರು. ಡೈಲಾಗ್ ಗಳ ಸುರಿಮಳೆಯನ್ನೇ ಸುರಿಸಿದ 'Mr ಐರಾವತ' ಈ ವರ್ಷದ ಉತ್ತಮ ಚಿತ್ರವಾಗಿದೆ.[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']
'ಉಗ್ರಂ' ನಟನ 'ರಥಾವರ'
ಮಂಗಳಮುಖಿಯರ ಭಾವನೆಗಳ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಬಗ್ಗೆ ಎತ್ತಿ ಹಿಡಿದಿದ್ದ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ ಅವರ 'ರಥಾವರ' ಚಿತ್ರ ಈ ಬಾರಿ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡಿತ್ತು. ಅದರಂತೆ ಶ್ರೀಮುರಳಿ ಅವರು ಸಹ 'ರಥಾವರ'ನಾಗಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದರು. ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿದ್ದ 'ರಥಾವರ' ಈ ವರ್ಷದ ಅತ್ಯುತ್ತಮ ಸಿನಿಮಾ ಆಗಿದೆ.[ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]
ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್'
ಕಳೆದ ವರ್ಷ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರ 'ಮಿ.ಅಂಡ್ ಮಿಸಸ್ ರಾಮಾಚಾರಿ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಮೇಲೆ ಈ ವರ್ಷ ಬಹುನಿರೀಕ್ಷಿತ ಸಿನಿಮಾ 'ಮಾಸ್ಟರ್ ಪೀಸ್' ಕೂಡ ಅದೇ ಹಾದಿಯಲ್ಲಿ ಮುನ್ನಡೆಯಿತು. ಈ ಬಾರಿ ನಟಿ ಶಾನ್ವಿ ಶ್ರೀವಾತ್ಸವ್ ಅವರು ಯಶ್ ಅವರ ಜೊತೆ ಇದೇ ಮೊದಲ ಬಾರಿಗೆ ಡ್ಯುಯೆಟ್ ಹಾಡಿದ್ದು, ಸಿನಿಮಾ ಕೇವಲ ಒಂದೇ ದಿನದಲ್ಲಿ ಸುಮಾರು 6.5 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ಉಡೀಸ್ ಮಾಡಿದೆ. ಸಂಭಾಷಣೆಗಾರ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿದ್ದ 'ಮಾಸ್ಟರ್ ಪೀಸ್' ಈ ವರ್ಷದ ಅತ್ಯುತ್ತಮ ಸಿನಿಮಾ ಆಗಿದೆ.[ಮಾಸ್ಟರ್ ಪೀಸ್: ಮೊದಲು ದಾರಿ ತಪ್ಪಿದ ಮಗ, ನಂತರ ತಾಯಿಗೆ ತಕ್ಕ ಮಗ]