ಹೌದು,ನಾನು ಡಿವೋರ್ಸಿ ; ಶಿಷ್ಯ ಮತ್ತು ಖುಷಿ ನಾಯಕಿ ಚೈತ್ರಾ ಹಳ್ಳಿಕೇರಿ ಮನದ ನೋವೇನು ?
ಶಿಷ್ಯ ಮತ್ತು ಖುಷಿ ಚಿತ್ರಗಳ ಮೂಲಕ ಅನೇಕರ ಹೃದಯವನ್ನು ಗೆದ್ದವರು ಚೈತ್ರಾ ಹಳ್ಳಿಕೇರಿ. ಅವಕಾಶಗಳ ಮಹಾಪೂರ ಹರಿದು ಬರುತ್ತಿದ್ದ ಸಂದರ್ಭದಲ್ಲಿ ಚಿತ್ರರಂಗವನ್ನು ಎಡಗಾಲಿನಲ್ಲಿ ಒದ್ದು ಬಾಲಾಜಿ ಎಂಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದರು. ಚಿತ್ರರಂಗದಿಂದ ದೂರವಾದರು. ಇಬ್ಬರು ಮಕ್ಕಳ ತಾಯಿ ಕೂಡ ಆದರು.
ಆದರೆ ದುರಾದೃಷ್ಟ ಚೈತ್ರಾಗೆ ಸಂಸಾರದ ಸುಖ ಸಿಗಲಿಲ್ಲ. ಸಿಗಬೇಕಿದ್ದ ಮಾನ-ಮರ್ಯಾದೆ ಕೂಡ ಗಂಡನಿಂದ ಸಿಗಲಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ 2018ರಲ್ಲಿ ಚೈತ್ರಾ ದಾಂಪತ್ಯ ಕಲಹ ಬೀದಿಗೆ ಬಂದಿತ್ತು. ಕಂಡವರ ಬಾಯಿಗೆ ಇವರ ದಾಂಪತ್ಯ ಜೀವನ ಆಹಾರವೂ ಆಗಿತ್ತು. ಆ ನಂತರ ಮಕ್ಕಳ ಹಿತದೃಷ್ಟಿಯಿಂದ ಅನ್ಯೋನ್ಯವಾಗಿ ಇರಲು ಇಬ್ಬರು ಒಪ್ಪಂದ ಮಾಡಿಕೊಂಡರು.

ಆದರೆ .. 2021ರಲ್ಲಿ ಈ ಒಪ್ಪಂದ ಕೂಡ ಮುರಿದು ಬಿತ್ತು. 2021ರಲ್ಲಿ ಇಬ್ಬರ ಸಾಂಸಾರಿಕ ಜೀವನ ಇನ್ನೊಮ್ಮೆ ಸುದ್ದಿಯಾಯ್ತು. ವಿಚ್ಛೇದನದ ಅರ್ಜಿ ವಿಚಾರಣೆ ಕೌಟಂಬಿಕ ನ್ಯಾಯಾಲಯದಲ್ಲಿ ಶುರುವಾಯಿತು. ಹೀಗೆ ತಮ್ಮ ವ್ಯೆಯಕ್ತಿಕ ಜೀವನದಿಂದ ಆಗಾಗ ಸುದ್ದಿಯಾಗುತ್ತಾ ಬಂದ ಚೈತ್ರಾ ಈಗ ಅನೇಕರ ಪ್ರಶ್ನೆಗಳಿಗೆ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಉತ್ತರ ನೀಡಿದ್ಧಾರೆ. ಹೌದು, ನಾನು ವಿಚ್ಛೇದನ ಪಡೆದಿದ್ದೇನೆ. ಎಂದು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚೈತ್ರಾ ನಾನು ಇವತ್ತು ಒಂದು ವಿಷಯವನ್ನು ನಿಮ್ಮೆಲ್ಲರಿಗೆ ಹೇಳಲು ಬಯಸುತ್ತೇನೆ, ಇನ್ಸ್ಟಾಗ್ರಾಮ್, ಫೇಸ್ ಬುಕ್, ಹೀಗೆ ಎಲ್ಲೆಡೆ ನೀವು ನನ್ನ ವ್ಯೆಯಕ್ತಿಕ ಜೀವನದ ಬಗ್ಗೆ ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಿದ್ದೇನೆ ಎಂದಿದ್ದಾರೆ. ಹೌದು ನಾನು ವಿಚ್ಛೇದಿತಳು ಎಂದಿದ್ದಾರೆ.
ನನ್ನ ಈ ಪ್ರಯಾಣದಲ್ಲಿ ಅನೇಕರು ಅವರ ಅವರ ಇಷ್ಟಾನುಸಾರ ನನ್ನ ಬಗ್ಗೆ ಮಾತನಾಡುತ್ತಲೇ ಬಂದರು. ಆದರೆ ನಾನು ಅದೆಲ್ಲವನ್ನೂ ನಿರ್ಲಕ್ಷಿಸಿದೆ, ನನ್ನ ಬದುಕಿನಲ್ಲಿ ಮುಂದೆ ಸಾಗಿದೆ ಎಂದಿರುವ ಚೈತ್ರಾ, ನಾನು 17 ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕು ಈಗ ಇಲ್ಲ ಅದರ ಬಗ್ಗೆ ನನಗೆ ಸಂತೋಷ ಇದೆ ಎಂದು ಹೇಳಿದ್ದಾರೆ. ನಿಂದನೆ ಮತ್ತು ಅವಮಾನಗಳಿಂದ ಬೇಸತ್ತು ನನ್ನ ಖುಷಿಯ ಸಲುವಾಗಿ ನಾನು ಮುನ್ನಡೆದೆ ಎಂದಿರುವ ಚೈತ್ರಾ ಕಳೆದ ನಾಲ್ಕು ವರ್ಷಗಳಿಂದ ನೀವು ನನಗೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದಿದ್ಧಾರೆ. ಪ್ರತಿಯೊಂದು ಮೋಡಕ್ಕೂ ಬೆಳ್ಳಿ ರೇಖೆ ಇದೆ ಎಂದಿದ್ದಾರೆ. ನಿಮ್ಮ ಜೀವನದ ಆಯ್ಕೆ ನಿಮ್ಮದೇ ಆಗಿರಬೇಕು ಎನ್ನುವುದಷ್ಟೇ ನಾನು ಎಲ್ಲರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಅಂದ್ಹಾಗೇ ಚೈತ್ರಾ ಹಳ್ಳಿಕೇರಿ ತಮ್ಮ ಮಾಜಿ ಪತಿ ಬಾಲಾಜಿ ಅವರ ಮೇಲೆ ಹಣದ ಅವ್ಯವಹಾರದ ಆರೋಪ ಮಾಡಿದ್ದರು. ಬ್ಯಾಂಕ್ ಖಾತೆ ದುರ್ಬಳಕೆ ಆರೋಪ ಮಾಡಿ ಚೈತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮೈಸೂರಿನ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಯಲ್ಲಿ ಪತಿ ಮತ್ತು ಮಾವನ ವಿರುದ್ಧ ದೂರು ನೀಡಿದ್ದರು. ಅನುಮತಿ ಇಲ್ಲದೆ ಗೋಲ್ಡ್ ಲೋನ್ ಪಡೆದ ಬಗ್ಗೆ ದೂರು ನೀಡಿದ್ದ ಚೈತ್ರಾ ತಮ್ಮ ಪತಿ ಬಾಲಾಜಿ ತಮ್ಮ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಕೂಡ ಹೇಳಿದ್ದರು. ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದ್ದರು.
ಇನ್ನುಳಿದಂತೆ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡಿರುವ ಚೈತ್ರಾ ಹಳ್ಳಿಕೇರಿ ಅಂತರಪಟ ಧಾರಾವಾಹಿಯಲ್ಲಿ ಉದ್ಯಮಿ ಚಾಂದನಿ ಪಾತ್ರವನ್ನು ನಿರ್ವಹಿಸಿದ್ದರು. ನಾಗಪಂಚಮಿ ಎಂಬ ತೆಲುಗು ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡಿರುವ ಚೈತ್ರಾ ತೆಲುಗಿನ ಮತ್ತೊಂದು ಧಾರಾವಾಹಿ ತ್ರಿನಯನಿ ಮೂಲಕ ಆಂಧ್ರದಲ್ಲಿ ಮನೆ ಮಾತಾಗಿದ್ಧಾರೆ. ಇನ್ನೂ ಶಿಷ್ಯ ಮತ್ತು ಖುಷಿ ಹೊರತು ಪಡಿಸಿದರೆ ಗುನ್ನ, ಪಾರ್ಥ, ಚೈತ್ರಾ ಅಭಿನಯಿಸಿರುವ ಕೆಲ ಪ್ರಮುಖ ಸಿನಿಮಾಗಳು.


Click it and Unblock the Notifications











