"ನಾನ್ ಮಾತನಾಡಿದರೆ ಇದಕ್ಕೂ ಜಾತಿ ಕಟ್ತಾರೆ"; ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಾಧ್ಯಮಗಳ ಸಾಕಷ್ಟು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ನಡುವೆ ವೀರಮದಕರಿ ಸಿನಿಮಾ ಮಾಡುವ ಬಗ್ಗೆಯೂ ಪ್ರಶ್ನೆ ಎದುರಾಯಿತು.
ದರ್ಶನ್ ಹಾಗೂ ಸುದೀಪ್ ಈ ಹಿಂದೆ ಮದಕರಿ ನಾಯಕರ ಕುರಿತು ಸಿನಿಮಾ ಮಾಡಲು ಪೈಪೋಟಿ ನಡೆಸಿದ್ದರು. ಒಂದ್ಕಡೆ ರಾಕ್ಲೈನ್ ವೆಂಕಟೇಶ್ ಆ ಚಿತ್ರ ಮಾಡಲು ಪ್ರಯತ್ನಿಸಿದ್ದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಒಂದು ವಾರ ಚಿತ್ರೀಕರಣ ಕೂಡ ನಡೆದು ಬಳಿಕ ಸಿನಿಮಾ ನಿಂತು ಹೋಯಿತು. ಅದಕ್ಕೂ ಮುನ್ನ ಸುದೀಪ್ ಸಹ ಈ ಸಿನಿಮಾ ಮಾಡಲು ಮುಂದಾಗಿದ್ದರು.

ಸುದೀಪ್ ಬಹಳ ವರ್ಷಗಳಿಂದ ಮದಕರಿ ನಾಯಕ ಚಿತ್ರ ಮಾಡುವ ಲೆಕ್ಕಾಚಾರದಲ್ಲಿದ್ದರು. ಅದಕ್ಕಾಗಿ ಕಥೆ ಚಿತ್ರಕಥೆ ಬರೆಸಲು ಆರಂಭಿಸಿದ್ದರು. ಒಂದಷ್ಟು ಸಂಶೋಧನೆ ಸಹ ನಡೆಯುತ್ತಿತ್ತು. ಆದರೆ ಇದ್ದಕ್ಕಿಂದತೆ ದರ್ಶನ್ ಹೀರೊ ಆಗಿ ರಾಕ್ಲೈನ್ ವೆಂಕಟೇಶ್ ಸಿನಿಮಾ ಘೋಷಿಸಿಬಿಟ್ಟರು. ಆಗ ಯಾರು ಸಿನಿಮಾ ಮಾಡ್ತಾರೆ? ಎನ್ನುವ ಕುತೂಹಲ ಮೂಡಿತ್ತು. ಕೊನೆಗೆ ಸುದೀಪ್ ಬಿಟ್ಟುಕೊಟ್ಟಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಸುದೀಪ್ "ನಾನು ವೀರಮದಕರಿನೇ, ಈಗ ನೀವು ಈ ಪ್ರಶ್ನೆ ಕೇಳಿದ್ರಿ. ನಾನು ಉತ್ತರ ಕೊಟ್ಟೆ. ಇದಕ್ಕೂ ಮತ್ತೆ ಜಾತಿ ಕಟ್ತಾರೆ. ನಾನು ಹಾಗೆಲ್ಲಾ ಇಲ್ಲ. ನಾನು ಸಿನಿಮಾದವನು. ಪಾತ್ರ ನಂಬುವವನು. ಮರೆಯಬೇಡಿ ಇದೇ ಸಿನಿಮಾ ನಾನು ಮಾಡಬೇಕು ಅಂದಾಗ ನಮ್ಮ ಸಹೋದರ ಸಮಾನರಾದ ರಾಕ್ಲೈನ್ ವೆಂಕಟೇಶ್ ಇನ್ನೊಬ್ಬ ಸಹ ಕಲಾವಿದ(ದರ್ಶನ್)ನಿಗೆ ಇದು ಬಿಟ್ಟುಕೊಡಬೇಕು ಎಂದರು.

"ನಾವು ಚಿತ್ರಕ್ಕಾಗಿ 3 ವರ್ಷ ವ್ಯಯಿಸಿ ಚಿತ್ರಕಥೆ ಮಾಡಿದ್ದೆವು. ಆದರೂ ಆ ಸಿನಿಮಾ ಬಿಟ್ಟುಕೊಟ್ಟೆ. ನಾನೇ ಮಾಡಬೇಕು ಎನ್ನುವ ಸ್ವಾರ್ಥ, ನಮ್ಮದು ಎನ್ನುವುದೆಲ್ಲಾ ಬರಲ್ಲ. ರಾಕ್ಲೈನ್ ನಾನು ಬಹಳ ಆಸೆಪಡುವ ವ್ಯಕ್ತಿ. ಅವರು ಆಸೆಪಟ್ಟಿದ್ದಾರೆ. ಬಿಟ್ಟುಕೊಟ್ಟಿದ್ದೀನಿ. ಆವ್ರು ಮಾಡ್ಲಿಲ್ಲ. ಅದು ಬೇರೆ ವಿಚಾರ. ಸಿನಿಮಾದಲ್ಲಿ ಯಾವುದೇ ಜಾತಿ, ಭೇದಭಾವ ಇಲ್ಲ. ಅದು ಬರೀ ಆನ್ಲೈನ್ ಚರ್ಚೆ ಅಷ್ಟೆ" ಎಂದು ಸುದೀಪ್ ಹೇಳಿದ್ದಾರೆ.
"ನಾವು ಮೇಕಪ್ ಹಾಕುತ್ತಿದ್ದಂತೆ ಒಂದು ಪಾತ್ರ ಆಗಿಬಿಡುತ್ತೇನೆ. ಮತ್ತೆ ಮನೆಗೆ ಹೋದಾಗ ತಂದೆ-ತಾಯಿಗೆ ಮಗ ಆಗಿರಬೇಕು. ಹೆಂಡತಿಗೆ ಗಂಡನಾಗಿ ಮಗಳಿಗೆ ತಂದೆಯಾಗಿರಬೇಕು. ಅಭಿಮಾನಿಗಳಿಗೆ ಸಹೋದರನಾಗಿರಬೇಕು. ಯಾವುದೋ ವೇಷ ಹಾಕಿ ಸಿನಿಮಾದಲ್ಲಿ ನಟಿಸಬೇಕು" ಎಂದಿದ್ದಾರೆ. ಸುದೀಪ್ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ಹಾಗಾಗಿ ಸುದೀಪ್ ಅವರೇ ಈ ಪಾತ್ರ ಮಾಡಬೇಕು ಎಂದು ಕೆಲವರು ಪಟ್ಟು ಹಿಡಿದಿದ್ದರು. ಸ್ವಾಮೀಜಿಗಳು ಈ ಬಗ್ಗೆ ದನಿ ಎತ್ತಿದ್ದರು.
4 ವರ್ಷಗಳ ಹಿಂದೆ 'ರಾಜವೀರಮದಕರಿ ನಾಯಕ' ಸಿನಿಮಾ ಶುರುವಾಗಿತ್ತು. ಬೆಂಗಳೂರಿನಲ್ಲಿ ಮುಹೂರ್ತ ನೆರವೇರಿಸಿ ಕೇರಳದಲ್ಲಿ ಚಿತ್ರೀಕರಣ ನಡೆದಿತ್ತು. ಆದರೆ ನಾಲ್ಕೈದು ದಿನಗಳ ಚಿತ್ರೀಕರಣ ಬಳಿಕ ನಿಲ್ಲಿಸಲಾಗಿತ್ತು. ನಟ ದರ್ಶನ್ ಮಾತನಾಡಿ ಯಾಕೋ ಆ ಪಾತ್ರದ ಮೇಲೆ ಪಟ್ಟು ಸಿಗಲಿಲ್ಲ. ಅಂತಹ ಮಹಾನ್ ನಾಯಕರ ಬಗ್ಗೆ ಏನೇನೊ ಸಿನಿಮಾ ಮಾಡೋಕೆ ಆಗಲ್ಲ. ಹಾಗಾಗಿ ಅದನ್ನು ಪಕ್ಕಕ್ಕೆ ಇಟ್ಟು 'ಕಾಟೇರ' ಚಿತ್ರ ಕೈಗೆತ್ತುಕೊಂಡ್ವಿ ಎಂದಿದ್ದರು.


Click it and Unblock the Notifications











