ಅಣ್ಣ ಯಾರು? ತಮ್ಮ ಯಾರು? ಕೊನೆಗೂ ಒಂದಾದ್ರು ಯೋಗರಾಜ್ ಭಟ್ರು, ಬೆಳ್ಳುಳ್ಳಿ ಕಬಾಬ್ ಅಡುಗೆ ಭಟ್ರು!
ಸೋಶಿಯಲ್ ಮೀಡಿಯಾ ಜಮಾನದಲ್ಲಿ ಯಾವುದು, ಯಾವಾಗ ಟ್ರೆಂಡ್ ಆಗುತ್ತದೆ ಎನ್ನವುದನ್ನು ಹೇಳುವುದಕ್ಕೆ ಸಾಧ್ಯವಿಲ್ಲ. 'ಕರಿಮಣಿ ಮಾಲೀಕ' ಜೊತೆ 'ಬೆಳ್ಳುಳ್ಳಿ ಕಬಾಬ್ ರಾಹುಲ್ಲಾ' ಸೇರಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಕೊಂಚ ಕ್ರಿಯೇಟಿವ್ ಆಗಿ ಯೋಚಿಸಿದರೆ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಈ ಲೇಟೆಸ್ಟ್ ಟ್ರೆಂಡೇ ಉತ್ತಮ ಉದಾಹರಣೆ.
'ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ'ನನ್ನು ಪಕ್ಕಕ್ಕಿಟ್ಟರೆ 'ರಾಹುಲ್ಲಾ'ನ ಹಾವಳಿ ಕೂಡ ಕಮ್ಮಿ ಏನಿಲ್ಲ. ಬಾಣಿಸಿಗ ಚಂದ್ರು ಅಡುಗೆ ರೆಸೆಪಿ ವಿಡಿಯೋದಲ್ಲಿ ರಾಹುಲ್ಲಾ, ರಾಹುಲ್ಲಾ ಎಂದು ಕರೆದಿದ್ದು ಭಾರೀ ವೈರಲ್ ಆಗುತ್ತಿರುವುದು ಗೊತ್ತೇಯಿದೆ. ದಿಢೀರನೆ ಚಂದ್ರು ಹಾಗೂ ಅವರ ಸಹಾಯಕ ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಇನ್ನು ಟ್ರೋಲ್, ಮೀಮ್ ಪೇಜ್ಗಳಲ್ಲಿ ಚಂದ್ರು ಬೆಳುಳ್ಳಿ ಕಬಾಬ್ ಪರಿಮಳ ಜೋರಾಗಿಯೇ ಪಸರಿಸಿದೆ.

ಇದೀಗ ನಿರ್ದೇಶಕ ಯೋಗರಾಜ್ ಭಟ್, ಬೆಳುಳ್ಳಿ ಕಬಾಬ್ ಚಂದ್ರು ಜೊತೆ ಕೈ ಜೋಡಿಸಿದ್ದಾರೆ. ತಮ್ಮ 'ಕರಟಕ ದಮನಕ' ಸಿನಿಮಾ ಪ್ರಚಾರಕ್ಕಾಗಿ ಹೊಸ ಪ್ರಯತ್ನ ಮಾಡುತ್ತಿದ್ದಾರೆ. ಅದರ ಪ್ರೋಮೊ ಸದ್ಯ ರಿಲೀಸ್ ಆಗಿದೆ. ಅಷ್ಟಕ್ಕೂ ಏನಿದು 'ಕರಟಕ ದಮನಕ + ಬೆಳ್ಳುಳ್ಳಿ ಕಬಾಬ್' ಅಣ್ಣತಮ್ಮಂದಿರ ಕಹಾನಿ ಮುಂದೆ ಓದಿ.
ತಮ್ಮ ವಿಭಿನ್ನ ಮಾತಿನ ಶೈಲಿಯಿಂದ ಬಾಣಸಿಗ ಚಂದ್ರು ಗಮನ ಸೆಳೆಯುತ್ತಿದ್ದಾರೆ. ನಾನ್ ವೆಜ್ ಮಾಡುವುದರಲ್ಲಿ ನಿಸ್ಸೀಮರು. ಪುನೀತ್ ರಾಜ್ಕುಮಾರ್ ಕೂಡ ಚಂದ್ರು ಕೈ ರುಚಿ ಮೆಚ್ಚಿದ್ದರು. ಶಿವಾನಂದ ಸರ್ಕಲ್ನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ. ಆಗಾಗ್ಗೆ ಯೂಟ್ಯೂಬ್ ಚಾನಲ್ಗಳಲ್ಲಿ ತಮ್ಮ ನಾನ್ ವೆಜ್ ರೆಸಿಪಿ ಹಂಚಿಕೊಳ್ಳುತ್ತಾರೆ. ಈ ವೇಳೆ ತಮ್ಮ ಸಹಾಯಕ ರಾಹುಲ್ನನ್ನು ಕರೆಯುವುದು ಭಾರೀ ವೈರಲ್ ಆಗಿತ್ತು. ಬಳಿಕ ಬೆಳ್ಳುಳ್ಳಿ ಕಬಾಬ್ ರೆಸಿಪಿ ಕೂಡ ಭಾರೀ ಸದ್ದು ಮಾಡಿತ್ತು.
'ಕರಿಮಣಿ ಮಾಲೀಕ' ರೀಲ್ಸ್ ಜೊತೆಗೆ 'ರಾಹುಲ್ಲಾ' ಸೇರಿಸಿ ಒಂದಷ್ಟು ವಿಡಿಯೋಗಳು ವೈರಲ್ ಆಯಿತು. ವಿಕ್ಕಿ ಪಿಡಿಯಾ ವಿಕಾಸ್ ಮಾಡಿದ ವಿಡಿಯೋಗೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಚಂದ್ರು- ವಿಕಾಸ್ ಒಟ್ಟಿಗೆ ಸೇರಿ ವಿಡಿಯೋ ಮಾಡಿದ್ದು ಆಯಿತು. ಈಗ ಯೋಗರಾಜ್ ಭಟ್ ಜೊತೆ ಚಂದ್ರು ಕೈ ಜೋಡಿಸಿದ್ದಾರೆ.
ಬಾಣಸಿಗ ಚಂದ್ರು ನೋಡಲು ಕೊಂಚ ಸಿನಿಮಾ ನಿರ್ದೇಶಕ ಯೋಗರಾಜ ಭಟ್ರನ್ನು ಹೋಲುತ್ತಾರೆ. ಇದೇ ಕಾರಣಕ್ಕೆ ಕೆಲ ಮೀಮ್ ಪೇಜ್ಗಳಲ್ಲಿ ಇಬ್ಬರ ಫೋಟೊಗಳನ್ನು ಕೊಲಾಜ್ ಮಾಡಿ ಅಣ್ಣ-ತಮ್ಮ ಎಂದು ಬರೆಯಲಾಗುತ್ತಿದೆ. 'ಒಬ್ರು ಸಿನಿಮಾ ಭಟ್ರು, ಇನ್ನೊಬ್ರು ಅಡುಗ ಭಟ್ರು, ಒಬ್ರು ಗಾಳಿಪಟ, ಇನ್ನೊಬ್ರು ಚಟ ಪಟ ಎಂದು ಪೋಸ್ಟ್ ಆಗಿದ್ದ ಮೀಮ್ ಫೋಟೊ ಸಖತ್ ವೈರಲ್ ಆಗಿತ್ತು. ಇದು ನಿರ್ದೇಶಕ ಯೋಗರಾಜ್ ಕಣ್ಣಿಗೂ ಬಿದ್ದಿದೆ. ಕೂಡಲೇ ಅವರಿಗೆ ಹೊಸ ಐಡಿಯಾ ಹೊಳೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಹೇಗಿದ್ರು ನಾವಿಬ್ಬರು ಅಣ್ಣ- ತಮ್ಮ ಎನ್ನುವಂತೆ ಟ್ರೆಂಡ್ ಆಗುತ್ತಿದೆ. ಇದೇ ಟ್ರೆಂಡ್ ಅನ್ನು 'ಕರಟಕ ದಮನಕ' ಸಿನಿಮಾ ಪ್ರಚಾರಕ್ಕೆ ಬಳಸಿಕೊಳ್ಳಬಹುದು ಎಂದು ನಿರ್ಧರಿಸಿದ್ದಾರೆ. ಹಾಗಾಗಿ ಸಿನಿಮಾ ಪ್ರಚಾರಕ್ಕಾಗಿ ಇಬ್ಬರೂ ಸೇರಿ ಒಂದು ನಾನ್ವೆಜ್ ರೆಸಿಪಿ ವಿಡಿಯೋ ಮಾಡಿದ್ದಾರೆ. ಅದರ ಪ್ರೋಮೊವನ್ನು ಯೋಗರಾಜ್ ಭಟ್ ಹಂಚಿಕೊಂಡಿದ್ದಾರೆ.

"ಹಂಗೂ ಹಿಂಗೂ ಹೆಂಗೋ ಇದ್ದೋ, ಹಿಂಗಾಗೋದ್ವಿ ನೋಡೋ ಅಣ್ತಮ್ಮ ಎಂದು ಭಟ್ರು ಹಾಡು ಹಾಡುವುದರೊಂದಿಗೆ ಪ್ರೋಮೊ ಶುರುವಾಗುತ್ತದೆ. ನಾವಿಬ್ಬರು ಅಣ್ಣ ತಮ್ಮ, ತಮ್ಮ ಅಣ್ಣ ಎಂದು ಎಲ್ಲಾ ಕಡೆ ಚರ್ಚೆ ನಡೀತಿದೆ. ನಾವಿಬ್ಬರೂ ಹೇಗೆ ಅಣ್ಣಾ ತಮ್ಮ, ಹೌದಾ ಅಲ್ವಾ? ಎಂದು ಹೇಳ್ತೀವಿ ಕಾಯ್ತಾಇರಿ" ಎಂದಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಚಿತ್ರದಲ್ಲಿ ಶಿವರಾಜ್ಕುಮಾರ್ ಹಾಗೂ ಪ್ರಭುದೇವ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ ಬರಲಿದೆ.


Click it and Unblock the Notifications











