ಭಟ್ಟರ ನಿರ್ದೇಶನದಲ್ಲಿ ಶಿವರಾಜ್ ಕುಮಾರ್-ಪ್ರಭುದೇವಾ: ಏನು ನಿರೀಕ್ಷಿಸಬಹುದು?
ಯೋಗರಾಜ ಭಟ್ಟರು ಮೊದಲ ಬಾರಿಗೆ ನಟ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್-ಕಟ್ ಹೇಳಲಿದ್ದಾರೆ. ಮತ್ತೊಂದು ವಿಶೇಷವೆಂದರೆ ಇದೇ ಸಿನಿಮಾದಲ್ಲಿ ಪ್ರಭುದೇವಾ ಸಹ ಇರಲಿದ್ದಾರೆ.
Recommended Video

ಹೌದು, ಯೋಗರಾಜ್ ಭಟ್ ಅವರು ಶಿವರಾಜ್ ಕುಮಾರ್-ಪ್ರಭುದೇವಾ ಒಟ್ಟಿಗೆ ನಟಿಸಲಿರುವ ಸಿನಿಮಾವನ್ನು ನಿರ್ದೇಶಿಸಲಿರುವುದು ಖಾತ್ರಿಯಾಗಿದೆ. ಸಿನಿಮಾದ ಹೆಸರು, ಉಳಿಕೆ ತಾರಾಗಣಗಳಷ್ಟೆ ಈಗ ಅಂತಿಮವಾಗಬೇಕಿದೆ.
ಖ್ಯಾತ ನಿರ್ದೇಶಕ, ಇಬ್ಬರು ಪರಮಖ್ಯಾತ ನಟರೊಂದಿಗೆ ಸೇರಿದಾಗ ಪ್ರೇಕ್ಷಕರಿಗೆ ನಿರೀಕ್ಷೆಗಳು ಮೌಂಟ್ ಎವರೆಸ್ಟ್ ಏರುತ್ತವೆ. ಈ ಬಾರಿಯೂ ಹೀಗೆ ಆಗಿದೆ. ಶಿವಣ್ಣನ ಅಭಿಮಾನಿಗಳು ಈಗಿನಿಂದಲೇ ಸಂಭ್ರಮ ಪ್ರಾರಂಭಿಸಿದ್ದಾರೆ. ಸಿನಿಮಾಕ್ಕಾಗಿ ಎದುರು ನೋಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಳೆಗರೆಯುತ್ತಿದ್ದಾರೆ.

ಭಿನ್ನ ಕತೆ ಹೆಣೆದಿದ್ದಾರೆ ಯೋಗರಾಜ್ ಭಟ್
ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ, ನವಿರು ಪ್ರೇಮಕತೆಗಳಿಗೆ ಹೆಸರುವಾಸಿಯಾಗಿರುವ ಯೋಗರಾಜ ಭಟ್ಟರು, ತಮ್ಮ 'ಕಂಫರ್ಟ್ ಝೋನ್' ನಿಂದ ಹೊರಗೆ ಬಂದು ತುಸು ಭಿನ್ನವಾದ ಕತೆಯೊಂದನ್ನು ಶಿವಣ್ಣ-ಪ್ರಭುದೇವ ಅವರಿಗಾಗಿ ಹೆಣೆದಿದ್ದಾರೆ.

1960 ರಲ್ಲಿ ನಡೆವ ಕತೆ
ಶಿವಣ್ಣ-ಪ್ರಭುದೇವ ನಟಿಸುತ್ತಿರುವ ಈ ಸಿನಿಮಾದ ಕತೆ ನಡೆಯುವುದು 1960 ರಲ್ಲಿ. ನಡುವಯಸ್ಸು ಮೀರಿದ ಶಿವಣ್ಣ-ಪ್ರಭುದೇವ ಅವರನ್ನು ಇಟ್ಟುಕೊಂಡು ಭಟ್ಟರು ಪ್ರೇಮಕತೆಯನ್ನಂತೂ ಹೇಳಲಾರರು. ಹಾಗಾಗಿ ಇದೊಂದು ಆಕ್ಷನ್ ಡ್ರಾಮಾ ಆಗಿರುವ ಸಾಧ್ಯತೆ ದಟ್ಟ.

ಇಬ್ಬರ ಸರಳತೆಗೆ ಭಟ್ಟರ ನಮಸ್ಕಾರ
ಯೋಜರಾಜ್ ಭಟ್ಟರು ಶಿವಣ್ಣ ಹಾಗೂ ಪ್ರಭುದೇವಾ ಅವರಿಗೆ ಕತೆಯನ್ನು ಹೇಳಿದ್ದಾರೆ. ಇಬ್ಬರೂ ಒಪ್ಪಿಕೊಂಡಿದ್ದಾರೆ. ಪ್ರಭುದೇವಾ ಅವರಿಗೆ ಕತೆ ಕೇಳಿಸುವಲ್ಲಿ ಶಿವರಾಜ್ ಕುಮಾರ್, ಯೋಗರಾಜ್ ಭಟ್ಟರಿಗೆ ಸಹಾಯ ಮಾಡಿದ್ದಾರೆ. ಕತೆ ಒಪ್ಪಿಕೊಂಡಿದ್ದಕ್ಕೆ, ಹಾಗೂ ಇಬ್ಬರೂ ನಟರ ಸರಳತೆಗೆ ನಮನಗಳನ್ನು ತಿಳಿಸಿದ್ದಾರೆ ಯೋಗರಾಜ್ ಭಟ್.

18 ವರ್ಷಗಳ ಬಳಿಕ ಕನ್ನಡಕ್ಕೆ ಪ್ರಭುದೇವಾ
ಇನ್ನು ಪ್ರಭುದೇವಾ 18 ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎಚ್2ಒ ಸಿನಿಮಾದ ಬಳಿಕ ಕನ್ನಡದಲ್ಲಿ ಇದೇ ಅವರ ಪೂರ್ಣ ಪ್ರಮಾಣದ ಪಾತ್ರ. ಅವರ ಸಹೋದರ ನಾಗೇಂದ್ರ ಪ್ರಸಾದ್ ನಾಯಕರಾಗಿದ್ದ 'ಮನಸೆಲ್ಲಾ ನೀನೆ' ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ನಿರ್ವಸಿದ್ದರು ಪ್ರಭುದೇವಾ.


Click it and Unblock the Notifications











