ರವಿ ಬೆಳಗೆರೆ ನಿಧನಕ್ಕೆ ಯೋಗರಾಜ್ ಭಟ್ ಹಾಗೂ ಇತರರ ಸಂತಾಪ
ಖ್ಯಾತ ಪತ್ರಕರ್ತ, ಕಾದಂಬರಿಕಾರ, ನಟ ರವಿ ಬೆಳಗೆರೆ ಇಂದು ಬೆಳಿಗ್ಗೆ ಹೃದಯಾಘಾತದಿಂದ ಅಸುನೀಗಿದ್ದಾರೆ. ಚಿತ್ರರಂಗದ ಹಲವರೊಂದಿಗೆ ಆಪ್ತ ಸಂಪರ್ಕ ಹೊಂದಿದ್ದ ಅವರ ಸಾವಿಗೆ ಹಲವು ಸಿನಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ಯೋಗರಾಜ್ ಭಟ್ ಅವರು ಇಂದು ಬೆಳಿಗ್ಗೆ ಪ್ರಾರ್ಥನಾ ಶಾಲೆಯ ಬಳಿ ರವಿ ಬೆಳಗೆರೆ ಅಂತಿಮ ದರ್ಶನ ಪಡೆದಿದ್ದಾರೆ. ಆ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಯೋಗರಾಜ್ ಭಟ್, 'ಇದು ರವಿ ಅವರ ಸಾವಲ್ಲ, ಹುಟ್ಟು' ಎಂದಿದ್ದಾರೆ.
ಫೊನಿನಲ್ಲಿ ನಾವಿಬ್ಬರು ಸದಾ ಮಾತನಾಡುತ್ತಿದ್ದೆವು. ಕೆಲವು ದಿನಗಳ ಹಿಂದಷ್ಟೆ ಸಹ ಪರಸ್ಪರ ಚರ್ಚೆ ಮಾಡಿದ್ದೆವು. ಅವರ ಆರೋಗ್ಯದ ಬಗ್ಗೆ ನಮಗೆ ಆತಂಕವಂತೂ ಇದ್ದೇ ಇತ್ತು, ಸಾವು ಬಂದು ಕರೆದಾಗ ಅದೇನಾಗ್ತದೊ ನೋಡೇ ಬಿಡೋಣ ಎಂದು ಹೊರಟು ಹೋಗಿಬಿಟ್ಟರೋ ಏನೊ? ಎಂದರು ಯೋಗರಾಜ್ ಭಟ್.

'ಸಂಗೀತವನ್ನು ಬಹಳಾ ಮೋಹಿಸುತ್ತಿದ್ದ ವ್ಯಕ್ತಿ ಬೆಳಗೆರೆ'
ಕಾವ್ಯಾತ್ಮಕ ಆತ್ಮ ಅವರದ್ದು, ಸಂಗೀತವನ್ನು ಬಹಳವಾಗಿ ಮೋಹಿಸುತ್ತಿದ್ದರು. ಮೊನ್ನೆಯವರೆಗೂ ನಮ್ಮ ಸಿನಿಮಾದ ಹಾಡುಗಳ ಬಗ್ಗೆ ಮಾತನಾಡುತ್ತಿದ್ವಿ. ಒಬ್ಬ ಕನ್ನಡಾಭಿಮಾನಿಯಾಗಿ ಇದು ಅವರ ಸಾವಲ್ಲ, ಹುಟ್ಟು ಎಂದರು ಯೋಗರಾಜ್ ಭಟ್.

ಧೈರ್ಯಕ್ಕೆ ಮತ್ತೊಂದು ಹೆಸರು ರವಿ ಬೆಳಗೆರೆ: ಯೋಗರಾಜ್ ಭಟ್
ಅವರು ಧೈರ್ಯಕ್ಕೆ ಇನ್ನೊಂದು ಹೆಸರಾಗಿದ್ದರು. ಅವರಲ್ಲೊಬ್ಬ ಭಿನ್ನವಾದ ಪತ್ರಕರ್ತನೂ ಇದ್ದ. ರವಿ ಬೆಳಗೆರೆ ಇನ್ನಿಲ್ಲ ಎಂಬುದನ್ನು ಒಪ್ಪಿಕೊಂಡ, ಅವರ ನೆನಪುಗಳು, ಅವರ ಪುಸ್ತಕಗಳೊಡನೆ ಜೀವಿಸುವುದನ್ನು ಕಲಿಯಬೇಕು ಎಂದು ಯೋಗರಾಜ್ ಭಟ್ ಹೇಳಿದ್ದಾರೆ.

ಟಿ.ಎನ್.ಸೀತಾರಾಮ್ ಸಂತಾಪ
ರವಿ ಬೆಳಗೆರೆ ನಿಧನಕ್ಕೆ ಧಾರಾವಾಹಿ ನಿರ್ದೇಶಕ, ನಟ ಟಿ.ಎನ್.ಸೀತಾರಾಮ್ ಅವರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ಯಾರೂ ತೋರದ ಅಕ್ಕರೆ ತೋರಿದ್ದೀರಿ, ಕಷ್ಟ ಬಂದಾಗ ಧೈರ್ಯ ತುಂಬಿದ್ದೀರಿ, ನೀವು ಹೋದದ್ದು ತೀರದ ದುಖಃ ತಂದಿದೆ ಎಂದಿದ್ದಾರೆ.
Recommended Video

ಸಿಎಂ ಯಡಿಯೂರಪ್ಪ ಸಂತಾಪ
ರವಿ ಬೆಳಗೆರೆ ನಿಧನಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ, ಹಲವಾರು ಸಾಹಿತಿಗಳು, ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. ಸಚಿವ ಸುರೇಶ್ ಕುಮಾರ್, ಸುಧಾಕರ್, ಮಾಜಿ ಸಚಿವ ದಿನೇಶ್ ಗುಂಡೂರಾವ್ ಅವರುಗಳು ಸಹ ರವಿ ಬೆಳಗೆರೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.


Click it and Unblock the Notifications











