ಸಾವಲ್ಲ ಇದು ಅಂಬರೀಶ್ ಅಣ್ಣನ ಹುಟ್ಟು ಎಂದ ಯೋಗರಾಜ್ ಭಟ್
ಬಾರದ ಲೋಕಕ್ಕೆ ನಟ ಅಂಬರೀಶ್ ಪಯಣ ಬೆಳೆಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅಂಬರೀಶ್ ನವೆಂಬರ್ 24 ರಂದು ರಾತ್ರಿ 10:15 ಸುಮಾರಿಗೆ ಚಿರನಿದ್ರೆಗೆ ಜಾರಿದರು.
ಅಂಬರೀಶ್ ನಿಧನಕ್ಕೆ ನಿರ್ದೇಶಕ ಯೋಗರಾಜ್ ಭಟ್ ತಮ್ಮದೇ ಶೈಲಿಯಲ್ಲಿ ಸಂತಾಪ ಸೂಚಿಸಿದ್ದಾರೆ. ಅಂಬರೀಶ್ ಜೊತೆಗೆ ಕಳೆದ ಸುಂದರ ಕ್ಷಣಗಳನ್ನು ನೆನೆದು ನಿರ್ದೇಶಕ ಯೋಗರಾಜ್ ಭಟ್ ಬರೆದಿರುವ ಸಾಲುಗಳು ಇವು...
''ತುಂಬಾ ಸಂತಸದ ಜೀವನ ಬಾಳಿದ ದೊಡ್ಡ ವ್ಯಕ್ತಿ ಹೋದಾಗ ಅದನ್ನ ಸಾವು ಅಂತ ಅನ್ನಬಾರದು... ಹುಟ್ಟು ಅನ್ನಬೇಕು... ಸಾವಲ್ಲ ಇದು ಅಂಬರೀಶ್ ಅಣ್ಣನ ಹುಟ್ಟು. ಅವರು ಎಲ್ಲೂ ಹೋಗಿಲ್ಲ, ಹೋಗೋದೂ ಇಲ್ಲ, ಸದಾಕಾಲ ನಮ್ಮೆಲ್ಲರ ಮನದಾಳದಲ್ಲಿ ಜೀವಂತವಾಗಿದ್ದಾರೆ, ಮುಂದೆಯೂ ಜೀವಂತವಾಗಿಯೇ ಇರುತ್ತಾರೆ... ನನ್ನ ಪ್ರಕಾರ ಈಗ ಅವರು ಸಾವಿಗೆ ಬೈಯ್ಯುತ್ತಾ ಕೂತಿದ್ದಾರೆ. "ನನ್ಮಗ್ನೆ ಮಾಡಕ್ ಕೆಲ್ಸ ಇಲ್ಲ ನಿಂಗೆ" ಅಂತ ಸಾವನ್ನು ಮುದ್ದಾಗಿ ಗದರಿಸುವ ತಾಕತ್ತು ಅವರೊಬ್ಬರಿಗೇ ಇರೋದು... ಯಾರನ್ನೂ ಬಿಡದ ಸಾವಿಗೆ ಅಂಬರೀಶಣ್ಣನ ದೋಸ್ತಿ ಮಾಡೋ ಅಸೆ ಯಾಕಾದ್ರೂ ಬಂತೋ''

''ಬೊಂಬೆ ಆಡ್ಸೋನು'' ಡ್ರಾಮ ಟೈಮ್ ಅವರ ಜೊತೆ ಇದ್ದ ನೆನಪು.
ಮೊನ್ನೆ ಅವರಿಗೆ ನಾನು ಮತ್ತು ರಾಕ್ ಲೈನ್ ವೆಂಕಟೇಶ್ ಹೆಡ್ ಮಸಾಜ್ ಮಾಡಿದ ನೆನಪು.
ಅವರ ಕನಸಲ್ಲಿ ನಾನು ಹೋಗಿದ್ದಕ್ಕೆ ಅವರು ಕರೆದು ಬೈದ ನೆನಪು
ಯಶ್ ರಾಧಿಕಾ ಸೀಮಂತದಲ್ಲಿ ಅವರು ಜೋಕ್ ಮಾಡುತ್ತಾ ಕೂತಿದ್ದ ನೆನಪು
ಜೊತೆಗೆ ಅಸಂಖ್ಯ ನೆನಪಿನ ಚಿತ್ರಗಳು..
ನೋ ವೇ.. ಚಾನ್ಸೇ ಇಲ್ಲ.. ಅವ್ರು ಹೋಗಿಲ್ಲ..
ನೆನಪಿನ ಹೂವು ಸರಪಳಿಯಲ್ಲಿ ಎಲ್ಲರನ್ನು ಬಿಗಿಯಾಗಿ ಪ್ರೇಮದಿಂದ ಬಾಚಿ ಬಂಧಿಸಿದ ಧೀಮಂತ ಆತ್ಮಕ್ಕೆ ನಾಡಿನ ನಮನ''
ಅಂದ್ಹಾಗೆ, ಯೋಗರಾಜ್ ಭಟ್ ನಿರ್ದೇಶನದ 'ಡ್ರಾಮಾ' ಚಿತ್ರದಲ್ಲಿ 'ಬೊಂಬೆ ಆಡ್ಸೋನು' ಆಗಿ ಅಂಬರೀಶ್ ಅಭಿನಯಿಸಿದ್ದರು. ನೂರಾರು ಪಾತ್ರಗಳಿಗೆ ಜೀವ ತುಂಬಿದ್ದ ಅಂಬರೀಶ್ ಇಂದು ನೆನಪು ಮಾತ್ರ.


Click it and Unblock the Notifications











