ಯೋಗರಾಜ್ ಭಟ್ ಜೊತೆ ಶಿವರಾಜ್ ಕುಮಾರ್ ಸಿನಿಮಾ: ಪ್ರಾರಂಭ ಯಾವಾಗ?
ಪುನೀತ್ ಅಗಲಿಕೆಯ ಆಘಾತದಿಂದ ಸಾವರಿಸಿಕೊಳ್ಳುತ್ತಿರುವ ನಟ ಶಿವರಾಜ್ ಕುಮಾರ್ ಮತ್ತೆ ಸಿನಿಮಾ ಚಿತ್ರೀಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ನಟನೆಯ 125ನೇ ಸಿನಿಮಾ 'ವೇದ' ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್ ಜೊತೆಗೆ ಸಾಲು-ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಮೊದಲ ಬಾರಿಗೆ ಯೋಗರಾಜ್ ಭಟ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದು, ಈ ಸಿನಿಮಾ ಸಿನಿ ಪ್ರಿಯರಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿದೆ. ಇದೀಗ 'ವೇದ' ಸಿನಿಮಾದ ಎರಡನೇ ಶೆಡ್ಯೂಲ್ನ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಶಿವಣ್ಣ, ಆ ಸಿನಿಮಾದ ಬಳಿಕ ಯೋಗರಾಜ್ ಭಟ್ ಸಿನಿಮಾದಲ್ಲಿ ನಟಿಸಲಿದ್ದಾರೆ.

ಯೋಗರಾಜ್ ಭಟ್ ಜೊತೆಗಿನ ಸಿನಿಮಾ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ''ಯೋಗರಾಜ್ ಭಟ್ ಅದ್ಭುತವಾದ ಕತೆಯನ್ನು ಬರೆದುಕೊಂಡಿದ್ದಾರೆ. ಕತೆಯಲ್ಲಿರುವ ಭಾವನಾತ್ಮಕ ಅಂಶಗಳು ಕತೆಯ ತೂಕವನ್ನು ಹೆಚ್ಚಿಸಿವೆ. ಪ್ರಭುದೇವ ಸಹ ಸಿನಿಮಾದ ಕತೆಯನ್ನು ಕೇಳಿ ಬಹಳ ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟಿಸಲು ಅವರು ಕಾತರರಾಗಿದ್ದಾರೆ'' ಎಂದಿದ್ದಾರೆ.
ಶಿವರಾಜ್ ಕುಮಾರ್ ನಟನೆಯ 'ಭೈರಾಗಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗ ಹರ್ಷ ನಿರ್ದೇಶಿಸುತ್ತಿರುವ 'ವೇದ' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಬಳಿಕ 'ನೀ ಸಿಗೋವರೆಗೆ' ಹೆಸರಿನ ಪ್ರೇಮಕಥಾ ಸಿನಿಮಾದಲ್ಲಿ ನಟಿಸಲಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸಲಿದ್ದಾರೆ. ಲೋಹಿತ್ ಎಚ್ ನಿರ್ದೇಶನ ಮಾಡುತ್ತಿರುವ 'ಸತ್ಯ ಮಂಗಲ' ಸಿನಿಮಾದಲ್ಲಿ ನಟಿಸಲಿದ್ದಾರೆ. ಇವುಗಳ ಜೊತೆಗೆ ಹೊಸ ನಿರ್ದೇಶಕರೊಬ್ಬರೊಟ್ಟಿಗೆ ರೌಡಿಸಂ ಕತೆಯುಳ್ಳ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದಾರೆ.
ಇನ್ನು ನಿರ್ದೇಶಕ ಯೋಗರಾಜ್ ಭಟ್, 'ಗಾಳಿಪಟ 2' ಸಿನಿಮಾದ ಚಿತ್ರೀಕರಣ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಅದರ ಬಳಿಕ 'ಗರಡಿ' ಹೆಸರಿನ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಈ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕ ನಟರಾಗಿ ನಟಿಸುತ್ತಿದ್ದು, ದರ್ಶನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಕ್ಕೆ ಬಿ.ಸಿ.ಪಾಟೀಲ್ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದೆ. 'ಗರಡಿ' ಸಿನಿಮಾ ಮುಗಿಸಿದ ಬಳಿಕ ಶಿವರಾಜ್ ಕುಮಾರ್ ಜೊತೆಗಿನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಯೋಗರಾಜ್ ಭಟ್.


Click it and Unblock the Notifications











