ನಿತ್ಯೋತ್ಸವ ಕವಿಗೆ ಭಾವುಕ ಸಾಲುಗಳ ವಿದಾಯ ಹೇಳಿದ ಯೋಗರಾಜ್ ಭಟ್
ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರು ಇಂದು ನಿಧನರಾಗಿದ್ದಾರೆ. ಅವರ ಅಗಲಿಕೆಗೆ ಕವಿಗಳು, ರಾಜಕಾರಣಿಗಳು, ಸಿನಿ ಮಂದಿ ಶೋಕ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ, ತಮ್ಮನ್ನು ತಾವು ಸಾಹಿತ್ಯ ವಿದ್ಯಾರ್ಥಿ ಎಂದು ಕರೆದುಕೊಳ್ಳುವ ಯೋಗರಾಜ್ ಭಟ್ ಅವರು ತಮ್ಮ ನೆಚ್ಚಿನ ಕವಿಗೆ ಕವಿತೆಯ ಮೂಲಕವೇ ವಿದಾಯ ಹೇಳಿದ್ದಾರೆ.
ಬರಹಗಾರರಾಗಿರುವ ಯೋಗರಾಜ್ ಭಟ್ ಅವರು ತಮ್ಮ ಭಾವಕೋಶವನ್ನು ಕಲಕುವ ಪ್ರತಿ ಸಂಗತಿಗೆ ಬರಹದ ಮೂಲಕವೇ ಪ್ರತಿಕ್ರಿಯಿಸುತ್ತಾರೆ. ಈಗಲೂ ತಮ್ಮ ಅಭಿಮಾನದ ಕವಿಯ ಅಗಲಿಕೆಗೆ ಬರಹದ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಯೋಗರಾಜ್ ಭಟ್ಟರು ನಿತ್ಯೋತ್ಸವ ಕವಿಯ ನೆನಪಲ್ಲಿ ಬರೆದಿರುವ ಗೀತೆಯ ಸಾಲುಗಳು ಇಲ್ಲಿವೆ...

ಹೃದಯವಾಗಿದೆ ಖಾಲಿ...
ನಿಧನ ನಗುವನು ಚೆಲ್ಲಿ
ಹೃದಯವಾಗಿದೆ ಖಾಲಿ...
ಮರಳಿ ಕೇಳುವ ಬನ್ನಿ
ಕವಿ ನಿಸಾರರ ಲಾಲಿ...
ವಂದನೆ, ಅಭಿನಂದನೆ...

ಉಸಿರು ನಿಂತರೆ ನೆನಪು ನಿಲ್ಲುವುದೇ?
ಜನಿಸಿ ಬಂದರು ಅವರು ಎಂದು
ತಿಳಿಯಬೇಕಿದೆ ನಾವು ಇಂದು,
ಉಸಿರು ನಿಂತರು ನೆನಪು ನಿಲ್ಲುವುದೇ??

ಹೋಗಿ ಬನ್ನಿ ಕವಿಗಳೇ
ಹೋಗಿ ಬನ್ನಿ ಕವಿಗಳೇ
ತಮಗೆ ಮುಡಿಪಿದು ಗಾಯನ...
ಮರೆಯಲಾರೆವು ಎಂದಿಗು
ತಾವು ಕಲಿಸಿದ ಜೀವನ...

ಕೊರೊನಾ ಹಾಡು ಜನಪ್ರಿಯವಾಗಿದೆ
ಯೋಗರಾಜ್ ಭಟ್ ಅವರು ಇತ್ತೀಚೆಗಷ್ಟೆ ರಚಿಸಿ, ನಿರ್ದೇಶಿಸಿರುವ ಕೊರೊನಾ ಕುರಿತಾದ ಹಾಡು ಭಾರಿ ಜನಪ್ರಿಯವಾಗಿದೆ. ಭಟ್ಟರು ಬರೆದಿರುವ ಹಾಡನ್ನು ಸಿಎಂ ಯಡಿಯೂರಪ್ಪ ಬಿಡುಗಡೆ ಮಾಡಿದ್ದು, ಹಾಡಿನಲ್ಲಿ ಕಮೀಶನರ್ ಭಾಸ್ಕರ್ ರಾವ್ ಸೇರಿ ಹಲವಾರು ಪೊಲೀಸರು ಕಾಣಿಸಿಕೊಂಡಿದ್ದಾರೆ. ಹಾಡಿನ ಸಂಗೀತ ಸಂಯೋಜನೆ ಅರ್ಜುನ್ ಜನ್ಯ ಮಾಡಿದ್ದರೆ, ಹಾಡಿರುವುದು ವಿಜಯಪ್ರಕಾಶ್.


Click it and Unblock the Notifications











